ಶಿಕ್ಷಕರು ನೀಡುವ ಮೌಲ್ಯಯುತ ಮಾತುಗಳನ್ನು ಆಜ್ಞೆಯಂತೆ ಪಾಲಿಸುವ ಮಕ್ಕಳು ಜೀವನದಲ್ಲಿ ಸೋಲದೆ, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಪ್ರಭು ಚವ್ಹಾಣ ಹೇಳಿದರು.
ಔರಾದ್ ತಾಲೂಕು ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಪಟ್ಟಣದ ಗುರುಪ್ಪಾದಪ್ಪಾ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ 2026-27ನೇ ಸಾಲಿನ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಸಮಾಜದಲ್ಲಿ ಶಿಕ್ಷಕರಿಗೆ ತಮ್ಮದೇ ಆದ ಗೌರವ ಮತ್ತು ಘನತೆಯಿದೆ. ತಂದೆ-ತಾಯಿ ಮನೆಯೆಂಬ ಪಾಠಶಾಲೆಯಲ್ಲಿ ಮಕ್ಕಳನ್ನು ಪೋಷಿಸಿದರೆ, ಶಿಕ್ಷಕರು ಹಲವು ವರ್ಷಗಳ ಕಾಲ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರವನ್ನು ನೀಡುತ್ತಾರೆ. ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರು, ಸೈನಿಕರು ಹಾಗೂ ರೈತರ ಸೇವೆ ಅನನ್ಯವಾಗಿದೆ” ಎಂದರು.
“2009ರಿಂದ ನಿರಂತರವಾಗಿ ನನ್ನ ಕ್ಷೇತ್ರದ ಎಲ್ಲ ಶಿಕ್ಷಕರನ್ನು ಪ್ರತಿವರ್ಷ ಗೌರವಿಸುವ ಕಾರ್ಯವನ್ನು ಮಾಡುತ್ತಾ ಬಂದಿದ್ದೇನೆ. ಇದರಿಂದ ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಉತ್ತೇಜನ ದೊರೆತಿದೆ. ಪ್ರತಿಯೊಬ್ಬ ಶಿಕ್ಷಕರು ತಾಲೂಕಿನ ಶೈಕ್ಷಣಿಕ ಫಲಿತಾಂಶ ಸುಧಾರಣೆಗೆ ಶ್ರಮಿಸಬೇಕು. ಮಕ್ಕಳನ್ನು ಮೊಬೈಲ್ ಬಳಕೆಯಿಂದ ದೂರವಿಡುವ ಕುರಿತು ಪಾಲಕರು ಹಾಗೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು” ಎಂದು ಹೇಳಿದರು.
This video cannot be played in your browser. Open the video directly
“ಶಾಸಕ, ಸಚಿವ ಹಾಗೂ ಪ್ರಧಾನಮಂತ್ರಿಯಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಿದವರೂ ಶಿಕ್ಷಕರಿಂದಲೇ ಕಲಿತವರು. ಔರಾದ್ ಪಟ್ಟಣದಲ್ಲಿ ₹50 ಲಕ್ಷ ಅನುದಾನದಲ್ಲಿ ಗುರುಭವನ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ. ಮುಂದಿನ ವರ್ಷದ ಶಿಕ್ಷಕರ ದಿನಾಚರಣೆ ಗುರುಭವನದಲ್ಲಿಯೇ ನಡೆಸಲಾಗುವುದು. ಮರಾಠಿ ಶಾಲೆಗಳ ಶಿಕ್ಷಕರ ನೇಮಕಾತಿ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು” ಎಂದು ಶಾಸಕ ಪ್ರಭು ಚವ್ಹಾಣ ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಮಾತನಾಡಿ, “ಶಿಕ್ಷಕ ವೃತ್ತಿ ಸನ್ಯಾಸಿಗಳಗಿಂತಲೂ ಅತ್ಯಂತ ಪವಿತ್ರವಾದದ್ದು. ಬುದ್ಧಿವಂತಿಕೆ ಹೊಂದಿರುವ ಮಕ್ಕಳಲ್ಲಿ ಹೃದಯವಂತಿಕೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ. ವೃತ್ತಿ ನಿಷ್ಠೆಯಿಂದ ಸಲ್ಲಿಸುವ ಸೇವೆ ಅಜರಾಮರವಾಗಿ ಉಳಿಯುತ್ತದೆ” ಎಂದರು.

“ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದ ಸಾವಿತ್ರಿಬಾಯಿ ಫುಲೆ ಅವರ ಆದರ್ಶಗಳನ್ನು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ಶಿಕ್ಷಕರನ್ನು ಪ್ರತಿವರ್ಷ ಗೌರವಿಸುವ ಶಾಸಕ ಪ್ರಭು ಚವ್ಹಾಣನವರ ಕಾರ್ಯ ಶ್ಲಾಘನೀಯ” ಎಂದರು.
ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಮಾತನಾಡಿ, “ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಮೇಲೆ ಸರ್ಕಾರಗಳು ವಿವಿಧ ಪಠ್ಯೇತರ ಚಟುವಟಿಕೆಗಳ ಜವಾಬ್ದಾರಿ ಹೊರಿಸುತ್ತಿರುವುದರಿಂದ ಬೋಧನಾ ಕಾರ್ಯಕ್ಕೆ ತೊಂದರೆಯಾಗುತ್ತಿದೆ. ಶಿಕ್ಷಕರಿಗೆ ಪಠ್ಯ ಬೋಧನೆಗೆ ಹೆಚ್ಚಿನ ಸಮಯ ನೀಡಿದರೆ ಮಕ್ಕಳ ಕಲಿಕೆಯಲ್ಲಿ ಮತ್ತಷ್ಟು ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ” ಎಂದರು.
“ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೇವಲ 6 ಸಾವಿರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಖಾಲಿ ಇರುವ ಎಲ್ಲ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವಂತೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಸರ್ಕಾರ ಶಿಕ್ಷಣ ಕ್ಷೇತ್ರ ಹಾಗೂ ಶಿಕ್ಷಕರ ಸಮಸ್ಯೆಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಬ್ಯಾನರ್ ಬದಲಾಯಿಸಿ ಶಿಕ್ಷಕರಿಗೆ ಸನ್ಮಾನ
ಶಿಕ್ಷಕರ ದಿನಾಚರಣೆಯ ಬೆಳಿಗ್ಗಿನ ಕಾರ್ಯಕ್ರಮವು ಸರ್ಕಾರದ ಶಿಷ್ಟಾಚಾರ ನಿಯಮದಂತೆ ಶಾಲಾ ಶಿಕ್ಷಣ ಇಲಾಖೆ, ತಾಲೂಕು ಪಂಚಾಯತ್ ಔರಾದ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಹೆಸರು, ಕರ್ನಾಟಕ ಸರ್ಕಾರದ ಚಿಹ್ನೆ ಮತ್ತು ಸರ್ವಪಲ್ಲಿ ರಾಧಾಕೃಷ್ಣನ್, ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಗಳನ್ನು ಒಳಗೊಂಡಿದ್ದ ಬ್ಯಾನರ್ ಅಳವಡಿಸಿದ ವೇದಿಕೆಯಲ್ಲಿ ನಡೆಯಿತು.

ಬೆಳಿಗ್ಗಿನ ಕಾರ್ಯಕ್ರಮ ಮುಕ್ತಾಯಗೊಂಡ ಸರ್ಕಾರಿ ಕಾರ್ಯಕ್ರಮದ ಬ್ಯಾನರ್ ಮೇಲೆಯೇ ‘ಪ್ರಭು ಎಂಟರ್ಪ್ರೈಸೆಸ್ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಸನ್ಮಾನ್ಯ ಶ್ರೀ ಪ್ರಭು ಚವ್ಹಾಣ ಇವರಿಂದ ಸನ್ಮಾನ ಸಮಾರಂಭ’ ಎಂಬ ಶೀರ್ಷಿಕೆ ಹಾಗೂ ಶಾಸಕ ಪ್ರಭು ಚವ್ಹಾಣ ಅವರ ಫೋಟೊ ಇರುವ ಬ್ಯಾನರ್ ಅಂಟಿಸಿದ ಪ್ರಸಂಗ ನಡೆಯಿತು.
ಹೊಸ ಬ್ಯಾನರ್ ಹಾಕಿದ ನಂತರ ಔರಾದ್ ಹಾಗೂ ಕಮಲನಗರ ತಾಲೂಕಿನ ಎಲ್ಲ ಶಿಕ್ಷಕರನ್ನು ಬ್ಯಾಗ್ ಹಾಗೂ ಪ್ರಮಾಣಪತ್ರ ನೀಡಿ ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮ ಮುಂದುವರೆಯಿತು.
ಇದನ್ನೂ ಓದಿ : ಹೆಸರಾಯಿತು ಕಲ್ಯಾಣ ಕರ್ನಾಟಕ; ಬದಲಾಗದ ಜನರ ಬದುಕು!
ಔರಾದ್ ತಹಸೀಲ್ದಾರ್ ಮಹೇಶ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ರವಿ ಸುಕುಮಾರ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ ರಾಠೋಡ, ಇಸಿಓ ಹಾಗೂ ನೋಡಲ್ ಅಧಿಕಾರಿ ಸಂಜಯ ಮೇತ್ರೆ, ದೈಹಿಕ ಶಿಕ್ಷಣ ಪರಿವೀಕ್ಷಕ ಸಿದ್ದಾರೆಡ್ಡಿ ಸೇರಿದಂತೆ ಪ್ರಮುಖರಾದ ಧೊಂಡಿಬಾ ನರೋಟೆ, ಶಿವಾಜಿ ಪಾಟೀಲ ಮುಂಗನಾಳ, ಸಂತೋಷಕುಮಾರ ಪೂಜಾರಿ, ಲಕ್ಷö್ಮಣ ತುರೆ, ನರೇಂದ್ರ, ಪಂಢರಿ ಆಡೆ, ವಿಶ್ವನಾಥ ಬಿರಾದಾರ, ರವೀಂದ್ರರೆಡ್ಡಿ ಮಾಲಿ ಪಾಟೀಲ, ಮೆಹಬೂಬ್ ಪಟೇಲ್, ಪ್ರಭುಲಿಂಗ ತುಗಾವೆ, ರಾಮಶೆಟ್ಟಿ ಕೆಂಚಾ, ಗಜಾನನ್ ಮಳ್ಳಾ, ಗುರುನಾಥ ದೇಶಮುಖ, ವಿಜಯಕುಮಾರ ನುದನೂರೆ, ಮಹಾದೇವ ಚಿಟಗಿರೆ, ಸೂರ್ಯಕಾಂತ ಬಿರಾದಾರ, ಗುರುನಾಥ ರೆಡ್ಡಿ, ಮಹಾದೇವ ಘೂಳೆ, ರಾಜಕುಮಾರ ಡೊಂಗ್ರೆ, ಪ್ರಶಾಂತ ಮಠಪತಿ, ಸಂಜೀವ ಶೆಟಕಾರ, ಕೃಷ್ಣಾ ಪಾಟೀಲ, ಎಂ.ಡಿ.ನಯೀಮ್, ವಿಲಾಸ ಮೇತ್ರೆ, ಬಾಲಾಜಿ ಅಮರವಾಡಿ, ಉಮಾಕಾಂತ ಮಹಾಗಾಂವ, ಬಸವರಾಜ ಶೆಟಕಾರ, ರವಿ ಡೋಳೆ, ಸಂತೋಷ ರೆಡ್ಡಿ ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳ ಶಿಕ್ಷಕರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದಲ್ಲಿ ಮಾಜಿ ರಾಷ್ಟ್ರಪತಿ, ಖ್ಯಾತ ಶಿಕ್ಷಣ ತಜ್ಞ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರದ ಭವ್ಯ ಮೆರವಣಿಗೆಯನ್ನು ಬಸವೇಶ್ವರ ವೃತ್ತದಲ್ಲಿ ಆರಂಭಗೊಂಡು ಬಸ್ ನಿಲ್ದಾಣ, ಎಪಿಎಂಸಿ ವೃತ್ತ, ಡಾ.ಚನ್ನಬಸವ ಪಟ್ಟದೇವರು ವೃತ್ತದ ಮಾರ್ಗವಾಗಿ ಕಾರ್ಯಕ್ರಮದ ಸ್ಥಳಕ್ಕೆ ಬಂದು ಕೊನೆಗೊಂಡಿತು. ಮೆರವಣಿಗೆಯುದ್ದಕ್ಕೂ ಶಿಕ್ಷಕರು ಕನ್ನಡ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು.





