ಪರಿಸರವು ಮನುಷ್ಯನ ಆರೋಗ್ಯ, ಆದಾಯ, ಆರ್ಥಿಕತೆ, ಕೃಷಿ ಸೇರಿ ಒಟ್ಟು ಜೀವನಕ್ರಮ ನಿರ್ಧರಿಸುವ ಮಾಧ್ಯಮವಾಗಿದೆ. ಮಣ್ಣು, ನೀರು, ಪರಿಸರ ಸಂರಕ್ಷಣೆ ಎಲ್ಲರ ಹೊಣೆಯಾಗಿದೆ ಎಂದು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ವಿನಯ್ ಮಾಳಗೆ ಹೇಳಿದರು.
ಬಸವಕಲ್ಯಾಣ ನಗರದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿಕ್ಷಣ ಮತ್ತು ಪರಿಸರದ ಅರಿವು ವಿಶೇಷ ಉಪನ್ಯಾಸ ನೀಡಿದ ಅವರು, “ನಾವಿರುವ ಪರಿಸರದ ಅರಿವು ನಮ್ಮಲ್ಲಿ ಇರದಿದ್ದರೆ ಜಾಗತಿಕ ತಾಪಮಾನ ಅರಿಯಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಪರಿಸರ ಪ್ರಜ್ಞೆ ಬೆಳೆಸಿಕೊಳ್ಳಬೇಕು” ಎಂದರು.
“ಡಿ.ಎಂ.ನಂಜುಂಡಪ್ಪ ವರದಿಯು ಕರ್ನಾಟಕದ ಭೌಗೋಳಿಕ ಸಮಸ್ಯೆಗಳಷ್ಟೇ ಕಂಡುಹಿಡಿದಿಲ್ಲ. ಪರಿಹಾರವೂ ತಿಳಿಸಿದೆ. ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಬೀದರ ನೆಲದಲ್ಲಿ ಕಾಡನ್ನು ರಕ್ಷಿಸುವ ಪ್ರಜ್ಞೆ ಎಲ್ಲರಲ್ಲೂ ಇರಬೇಕು” ಎಂದರು.
“ನಮ್ಮ ಮನೆಯ ಪಕ್ಕದ, ಹೊಲದಲ್ಲಿ ಇರುವ ಒಂದೊಂದು ಗಿಡ ಮರಗಳು ನಮ್ಮ ಪರಿಸರ ಸ್ವಾಸ್ಥ್ಯ ನಿರ್ಧರಿಸುತ್ತವೆ. ಮರ ಗಿಡಗಳ ನಾಶದಿಂದ ಜಾಗತಿಕ ತಾಪಮಾನ ಏರಿಕೆಯಾಗಿದೆ. ನೀರಿನ ಮೂಲ ಕಾಪಾಡಿದಾಗ ಅಂತರ್ಜಲ ಮಟ್ಟ ಹೆಚ್ಚಿಸಲು ಸಾಧ್ಯ” ಎಂದರು.
“ಮಹಿಳೆಯನ್ನು ಹೊರಗಿಟ್ಟು ಯಾವ ಚಳುವಳಿಯೂ ನಡೆಸಲು ಸಾಧ್ಯವಿಲ್ಲ ಎಂದು 12ನೇ ಶತಮಾನದಲ್ಲಿ ಬಸವಣ್ಣನವರು ನಮಗೆ ತಿಳಿಸಿದ್ದಾರೆ. ನೈತಿಕ ಪ್ರಜ್ಞೆ, ಸಾಮಾಜಿಕ ಬದ್ಧತೆ, ವೈಚಾರಿಕ ಚಿಂತನೆ ಗಾಢವಾಗಿ ರೂಪಿಸಿದ ವಚನಕಾರರ ಚಳುವಳಿ ಎಂಥ ಪ್ರಭುತ್ವವೇ ಇರಲಿ ಅದನ್ನು ಗಟ್ಟಿಯಾಗಿ ಪ್ರಶ್ನಿಸುವ ಗುಣ ಕಲಿಸಿದೆ. ಹೀಗಾಗಿ ವಚನ ಚಳುವಳಿ ಎಂದಿಗೂ ಪ್ರಸ್ತುತ” ಎಂದರು.
ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, “ಕಾಡು, ನೆಲ, ನೀರು ಸೇರಿ ಪರಿಸರಕ್ಕೆ ಅಸ್ತಿತ್ವ ಒದಗಿಸಿವೆ. ಪರಿಸರದಲ್ಲಿ ಮನುಷ್ಯನೂ ಸೇರಿದಂತೆ ಇಡೀ ಜೀವ ಸಂಕುಲದ ಸಾವಯವ ಸಂಬಂಧಗಳಿವೆ. ಮನುಷ್ಯನ ಹಪಾಹಪಿತನ, ಆಮಿಷಗಳು ನಿಸರ್ಗದೊಂದಿಗೆ ಕ್ರೂರವಾಗಿ ನಡೆದುಕೊಳ್ಳುವ ರೀತಿಯಿಂದ ಪ್ರಾಕೃತಿಕ ವಿಕೋಪದಂಥ ಪರಿಣಾಮ ಎದುರಾಗಿದೆ” ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಬಸವೇಶ್ವರ ದೇವಸ್ಥಾನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅನಿಲಕುಮಾರ ರಗಟೆ ಅವರು ಮಾತನಾಡಿ, “ನಿಸರ್ಗ ನಮಗೆ ದೊರೆತ ಪಾರಂಪರಿಕ ಬಳುವಳಿ. ಅದನ್ನು ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ” ಎಂದರು.
ಇದನ್ನೂ ಓದಿ : ಬೀದರ್ | ನೂತನ ಅಪರ ಜಿಲ್ಲಾಧಿಕಾರಿಯಾಗಿ ಸುರೇಖಾ ನೇಮಕ
ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಕುರಕೋಟೆ, ಕಾರ್ಯದರ್ಶಿ ಅಶೋಕ ಕುಮಾರ್ ನಾಗರಾಳೆ, ನಿರ್ದೇಶಕ ವೀರಣ್ಣ ಹಲಶೆಟ್ಟೆ, ಪತ್ರಕರ್ತ ಬಾಲಾಜಿ ಕುಂಬಾರ, ಪರಿಸರವಾದಿ ಹರ್ಷವರ್ಧನ ರಾಠೋಡ, ಸಂದೀಪ ಮುಕಿಂದೆ, ಶ್ರೀ ಬಸವೇಶ್ವರ ಪಿಯು ಕಾಲೇಜು ಪ್ರಾಚಾರ್ಯ ಡಾ.ರುದ್ರಮಣಿ ಮಠಪತಿ, ಶ್ರೀ ಬಸವೇಶ್ವರ ಪಿಜಿ ಕಾಲೇಜು ಪ್ರಾಚಾರ್ಯೆ ಡಾ.ಶಾಂತಲಾ ಪಾಟೀಲ, ಐಕ್ಯುಎಸಿ ಸಂಯೋಜಕ ಪವನ್ ಕುಮಾರ ಪಾಟೀಲ, ಪ್ರಿಯಾ ಚೌಹಾಣ್, ನಾಗವೇಣಿ ಬಿರಾದಾರ, ಎಂ.ಡಿ.ಜಬಿ, ವೀರೇಶ ಸ್ವಾಮಿ, ಗಂಗಾಧರ ಸಾಲಿಮಠ, ನಾಗರಾಜ್ ನಾಸೆ, ಐಶ್ವರ್ಯಾ ಖರೋಣೆ, ಡಾ. ಬಸವರಾಜ ಖಂಡಾಳೆ, ವಿವೇಕಾನಂದ ಶಿಂಧೆ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.




