ಔರಾದ ತಾಲೂಕಿನ ಬೋರ್ಗಿ (ಜೆ) ಗ್ರಾಮದ ಸರ್ಕಾರಿ ಶಾಲೆಯ ನಿವೃತ್ತ ಮುಖ್ಯಶಿಕ್ಷಕ ರಾಜಕುಮಾರ ಮುಗಟೆ ಅವರ ವಯೋನಿವೃತ್ತಿ ಸಮಾರಂಭ ಹಾಗೂ ಹಳೆ ವಿದ್ಯಾರ್ಥಿಗಳ ಸ್ನೇಹಕೂಟವನ್ನು ಗ್ರಾಮದ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಅರ್ಥಪೂರ್ಣವಾಗಿ ಮತ್ತು ಅದ್ಧೂರಿಯಾಗಿ ಆಚರಿಸಲಾಯಿತು.
ಮುಖ್ಯಶಿಕ್ಷಕ ರಾಜಕುಮಾರ ಮುಗಟೆ ದಂಪತಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾರೋಟಿನಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು. ಬಾಜಾ-ಭಜಂತ್ರಿ ಹಾಗೂ ಡಿಜೆ ಸಂಗೀತದೊಂದಿಗೆ ಹಳೆ ವಿದ್ಯಾರ್ಥಿಗಳು ಸಂಭ್ರಮದಿಂದ ಕುಣಿದು ಕುಪ್ಪಳಿಸಿ ತಮ್ಮ ಪ್ರೀತಿಯ ಗುರುಗಳಿಗೆ ವಿಶಿಷ್ಟ ಗೌರವ ಸಲ್ಲಿಸಿದರು.
ವಾಣಿಜ್ಯ ಮತ್ತು ತೆರಿಗೆ ಇಲಾಖೆಯ ಅಧಿಕಾರಿ ಖಾಜಾ ಖಲಿಲುಲ್ಲಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಹಳೆ ವಿದ್ಯಾರ್ಥಿಗಳು ಒಗ್ಗೂಡಿ ತಮ್ಮ ಗುರುಗಳಿಗೆ ಗೌರವ ಸಲ್ಲಿಸುತ್ತಿರುವುದು ಶ್ಲಾಘನೀಯ ಕಾರ್ಯ. ಇತ್ತೀಚಿನ ದಿನಗಳಲ್ಲಿ ಶಿಕ್ಷಕರಿಗೆ ಗೌರವ ನೀಡುವ ಸಂಪ್ರದಾಯ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಬೋರ್ಗಿ ಗ್ರಾಮದ ಹಳೆ ವಿದ್ಯಾರ್ಥಿಗಳು ನಡೆಸಿರುವ ಈ ಕಾರ್ಯಕ್ರಮ ಸಮಾಜಕ್ಕೆ ಮಾದರಿಯಾಗಿದೆ” ಎಂದು ಹೇಳಿದರು.
ನಿವೃತ್ತ ಮುಖ್ಯೋಪಾಧ್ಯಾಯ ರಾಜಕುಮಾರ ಮುಗಟೆ ಮಾತನಾಡಿ, “ತಮ್ಮ ಶಿಷ್ಯರು ಒಗ್ಗೂಡಿ ಇಂತಹ ಅಪರೂಪದ ಕಾರ್ಯಕ್ರಮ ಆಯೋಜಿಸಿರುವುದು ತಮ್ಮ ಜೀವನದ ಅತ್ಯಂತ ಸ್ಮರಣೀಯ ಕ್ಷಣವಾಗಿದೆ. ಎಲ್ಲ ವಿದ್ಯಾರ್ಥಿಗಳ ಪ್ರೀತಿ, ಗೌರವಕ್ಕೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸಿದರು.

ಹಳೆ ವಿದ್ಯಾರ್ಥಿ ಸಂಘದ ಉಮಾಕಾಂತ ವಿಳಾಸಪೂರೆ ಮಾತನಾಡಿ, “ಸುಮಾರು 31 ವರ್ಷಗಳ ಕಾಲ ನೂರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾದ ರಾಜಕುಮಾರ ಮುಗಟೆ ಅವರು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಗ್ರಾಮದ ಎಲ್ಲ ಹಳೆ ವಿದ್ಯಾರ್ಥಿಗಳು ಸೇರಿ ಈ ವಯೋ ನಿವೃತ್ತಿ ಸಮಾರಂಭ ಹಾಗೂ ಸ್ನೇಹಕೂಟವನ್ನು ಆಯೋಜಿಸಿದ್ದು, ಅವರ ನಿವೃತ್ತಿ ಜೀವನ ಸುಖ, ಶಾಂತಿ ಮತ್ತು ಆರೋಗ್ಯದಿಂದ ಕೂಡಿರಲಿ” ಎಂದು ಹಾರೈಸಿದರು.
ಶಿಕ್ಷಕ ಪ್ರಕಾಶ್ ದೇಶಮುಖ ವಿಶೇಷ ಉಪನ್ಯಾಸ ನೀಡಿ, “ಭಾರತವು ಗುರುಗಳಿಗೆ ಅತ್ಯುನ್ನತ ಸ್ಥಾನ ನೀಡುವ ದೇಶವಾಗಿದೆ. ಬೋರ್ಗಿ ಗ್ರಾಮದ ಹಳೆ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಸಲ್ಲಿಸಿರುವ ಈ ಗೌರವವು ಭಾರತೀಯ ಸಂಸ್ಕೃತಿ ಮತ್ತು ಗುರು-ಶಿಷ್ಯ ಪರಂಪರೆಯ ಪ್ರತೀಕವಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಆಕರ್ಷಕ ಸಾಂಸ್ಕೃತಿಕ ನೃತ್ಯ ಪ್ರದರ್ಶನ ನೀಡಿದರು. ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರಾದ ಪ್ರಕಾಶ ರಾಜೋಳೆ, ಮಾಸ್ತರ ಮುತ್ತಣ್ಣ, ರಮೇಶ ಉತ್ಕಾರ, ಶಾಹಾಜಾನ ಮೇಡಂ, ಶಿವಕುಮಾರ ಅಲಮಾಜೆ, ಕೃಷ್ಣ ಸರ್ ಹಾಗೂ ಶೇಖರ್ ಸರ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಇದನ್ನೂ ಓದಿ : ಬೀದರ್ | ಹಳ್ಳಕ್ಕೆ ವಿಷಯುಕ್ತ ರಾಸಾಯನಿಕ ತ್ಯಾಜ್ಯ: ಕ್ರಮಕ್ಕೆ ಈಶ್ವರ ಖಂಡ್ರೆ ಸೂಚನೆ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ದಪ್ಪ ಉಜ್ಜಣಗೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಹಳೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಶಿಕ್ಷಕರು, ಶಾಲೆಯ ಪ್ರಸ್ತುತ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.ಬಸಮ್ಮಾ ವಿ. ಬಿರಾದಾರ ಸ್ವಾಗತಿಸಿದರು. ಖಾದರಖಾನ್ ಪಾಟೀಲ ನಿರೂಪಿಸಿದರು.




