ಬೀಯಿಂಗ್ ಹ್ಯೂಮನ್ ಜ್ಯುವೆಲ್ಲರಿ ಶೋರೂಮ್ಗೆ ಸಂಬಂಧಿಸಿದ ವಂಚನೆ ದೂರಿನ ವಿಚಾರಣೆಗೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್, ಅವರ ಸಹೋದರಿ ಅಲ್ವಿರಾ ಖಾನ್ ಅಗ್ನಿಹೋತ್ರಿ ಹಾಗೂ ‘ಸ್ಟೈಲ್ ಅಂಡ್ ಕಂಟೆಂಟ್ ಜ್ಯುವೆಲ್ಲರಿ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯ ನಿರ್ದೇಶಕರಿಗೆ ಚಂಡೀಗಢ ಜಿಲ್ಲಾ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿದೆ. ಪ್ರಕರಣದ ಎಲ್ಲಾ ಆರೋಪಿಗಳು ಅಕ್ಟೋಬರ್ 5 ರಂದು ನ್ಯಾಯಾಲಯದ ಮುಂದೆ ಹಾಜರಾಗಿ ತಮ್ಮ ಸ್ಪಷ್ಟನೆ ಅಥವಾ ಉತ್ತರವನ್ನು ಸಲ್ಲಿಸುವಂತೆ ಕೋರ್ಟ್ ನಿರ್ದೇಶಿಸಿದೆ.
ಚಂಡೀಗಢ ಮೂಲದ ಉದ್ಯಮಿ ಅರುಣ್ ಗುಪ್ತಾ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಬೀಯಿಂಗ್ ಹ್ಯೂಮನ್ ಶೋರೂಮ್ನಲ್ಲಿ ಹೂಡಿಕೆ ಮಾಡಿದರೆ ಉತ್ತಮ ಉದ್ಯಮ ಅಭಿವೃದ್ಧಿ ಹಾಗೂ ಹೆಚ್ಚಿನ ಲಾಭದ ಭರವಸೆ ನೀಡಲಾಗಿತ್ತು, ಆದರೆ ಆ ಭರವಸೆ ಹುಸಿಯಾಗಿ ತಮಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ದೂರಿನ ಪ್ರಕಾರ, ಬೀಯಿಂಗ್ ಹ್ಯೂಮನ್ ಜ್ಯುವೆಲ್ಲರಿ ಬ್ರ್ಯಾಂಡ್ ಮಾರಾಟದ ಅಧಿಕಾರ ಹೊಂದಿದ್ದ ‘ಸ್ಟೈಲ್ ಅಂಡ್ ಕಂಟೆಂಟ್ ಜ್ಯುವೆಲ್ಲರಿ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಅರುಣ್ ಗುಪ್ತಾ, ಸರಿಸುಮಾರು 3 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು. ಅದರಲ್ಲಿ ಶೋರೂಮ್ ನಿರ್ಮಾಣಕ್ಕಾಗಿ ಸುಮಾರು 1 ಕೋಟಿ ರೂಪಾಯಿ ವೆಚ್ಚ ಮಾಡಿದ್ದು, ಒಪ್ಪಂದದಲ್ಲಿದ್ದ ಎಲ್ಲಾ ಷರತ್ತುಗಳನ್ನು ಪಾಲಿಸಿದ್ದಾಗಿ ಅವರು ತಿಳಿಸಿದ್ದಾರೆ.
ಒಪ್ಪಂದದ ಪ್ರಕಾರ ಎಲ್ಲಾ ಹೂಡಿಕೆಗಳನ್ನು ಮಾಡಿದರೂ, ಶೋರೂಮ್ ಪ್ರಾರಂಭವಾದ ನಂತರ ಕಂಪನಿಯು ನೀಡಿದ್ದ ಭರವಸೆಯಂತೆ ಯಾವುದೇ ವ್ಯಾಪಾರ ಬೆಂಬಲವನ್ನು ನೀಡಲಿಲ್ಲ. ಇದರಿಂದ ತಮಗೆ ತೀವ್ರ ಆರ್ಥಿಕ ನಷ್ಟವಾಗಿದೆ ಎಂದು ಉದ್ಯಮಿ ದೂರಿದ್ದಾರೆ. ಅಷ್ಟೇ ಅಲ್ಲದೆ, ಜ್ಯುವೆಲ್ಲರಿ ದಾಸ್ತಾನು ಪೂರೈಸಬೇಕಿದ್ದ ಮುಖ್ಯ ಕೇಂದ್ರವು ಫೆಬ್ರವರಿ 2020 ರಿಂದ ಮುಚ್ಚಲ್ಪಟ್ಟಿದ್ದು, ಇದರಿಂದಾಗಿ ಸರಕುಗಳ ಪೂರೈಕೆ ನಿಂತು ಉದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದೆ. ಕಂಪನಿಗೆ ಸಂಬಂಧಿಸಿದ ಆರು ಜನರು ವ್ಯವಹಾರದ ಪ್ರಚಾರ ಹಾಗೂ ಲಾಭದ ಬಗ್ಗೆ ತಪ್ಪು ಮಾಹಿತಿ ನೀಡಿ ತಮ್ಮನ್ನು ಹೂಡಿಕೆಗೆ ಪ್ರಚೋದಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಆದರೆ ಈ ಆರೋಪಗಳನ್ನು ಕಂಪನಿಯು ಈ ಹಿಂದೆ ಸಾರಾಸಗಟಾಗಿ ತಳ್ಳಿಹಾಕಿತ್ತು. 2018ರಲ್ಲಿ ಚಂಡೀಗಢದ ಉದ್ಯಮಿಯೊಂದಿಗೆ ನಡೆದ ಒಪ್ಪಂದಕ್ಕೂ ನಟ ಸಲ್ಮಾನ್ ಖಾನ್ಗೂ ಯಾವುದೇ ನೇರ ಸಂಬಂಧವಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿತ್ತು. ‘ಬೀಯಿಂಗ್ ಹ್ಯೂಮನ್’ ಬ್ರ್ಯಾಂಡ್ ಲೈಸೆನ್ಸ್ ಅಡಿಯಲ್ಲಿ ಸ್ಟೈಲ್ ಅಂಡ್ ಕಂಟೆಂಟ್ ಜ್ಯುವೆಲ್ಲರಿ ಸಂಸ್ಥೆಯು ಸ್ವತಂತ್ರವಾಗಿ ಈ ಆಭರಣ ವ್ಯವಹಾರವನ್ನು ನಡೆಸುತ್ತಿತ್ತು ಎಂದು ತಿಳಿಸಿತ್ತು.
2015ರಲ್ಲಿ ‘ಸಲ್ಮಾನ್ ಖಾನ್ ಫೌಂಡೇಶನ್’ ತನ್ನ ‘ಬೀಯಿಂಗ್ ಹ್ಯೂಮನ್’ ಬ್ರ್ಯಾಂಡ್ ಅನ್ನು ಆಭರಣ ವಿಭಾಗಕ್ಕಾಗಿ ಈ ಕಂಪನಿಗೆ ಲೈಸೆನ್ಸ್ ನೀಡಿತ್ತು, ಆದರೆ ಆಭರಣ ವ್ಯವಹಾರದ ನಿರ್ವಹಣೆ, ಮಾರುಕಟ್ಟೆ ಮತ್ತು ಮಾರಾಟದ ಸಂಪೂರ್ಣ ಹೊಣೆಗಾರಿಕೆ ಈ ಕಂಪನಿಯದ್ದೇ ಆಗಿತ್ತು ಎಂದು ತಿಳಿಸಲಾಗಿದೆ.
ಈ ವಿಷಯವು ಪ್ರಸ್ತುತ ಚಂಡೀಗಢ ಜಿಲ್ಲಾ ನ್ಯಾಯಾಲಯದ ಮುಖಾಂತರ ವಿಚಾರಣೆಗೆ ಬರಲಿದ್ದು, ಅಕ್ಟೋಬರ್ 5 ರಂದು ನಟ ಸಲ್ಮಾನ್ ಖಾನ್, ಅಲ್ವಿರಾ ಖಾನ್ ಅಗ್ನಿಹೋತ್ರಿ ಮತ್ತು ಕಂಪನಿಯ ನಿರ್ದೇಶಕರು ಕೋರ್ಟ್ಗೆ ಹಾಜರಾಗಿ ತಮ್ಮ ವಿವರಣೆ ನೀಡಬೇಕಾಗಿದೆ.




