ಡಿ.ಕೆ.ಶಿವಕುಮಾರ ಅವರು ಜೂ. 3ರಂದು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನಾಡಿನ ರೈತರ ಸಾಲ ಮನ್ನಾ ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾದ ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಜೂ. 3 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಡಿ.ಕೆ. ಶಿವಕುಮಾರ ಅವರಿಗೆ ಬೀದರ ಜಿಲ್ಲೆಯ ರೈತರ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ. ಪ್ರಮಾನ ವಚನ ಸ್ವೀಕರಿಸಿದ ಮೊದಲನೇ ಆದ್ಯತೆಯಾಗಿ ರೈತರ ಸಂಪೂರ್ಣ ಸಾಲಮನ್ನಾ ಘೋಷಿಸುವ ಮುಖಾಂತರ ರೈತ ನಾಯಕನಾಗಿ ರೂಪಗೊಳ್ಳಬೇಕು” ಎಂದು ತಿಳಿಸಿದರು.
“ಡಿ.ಕೆ.ಶಿವಕುಮಾರ ಅವರ ಸಚಿವ ಸಂಪುಟದಲ್ಲಿ ಸೇರ್ಪಡೆಯಾಗುವ ಎಲ್ಲ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭ್ರಷ್ಟಚಾರ ರಹಿತ ಪಾರದರ್ಶಕ ಆಡಳಿತ ನಡೆಸಬೇಕು. ಬಡವರ, ಕಾರ್ಮಿಕರ, ರೈತರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ವಿನೂತನ ಯೋಜನೆಗಳನ್ನು ಜಾರಿಗೊಳಿಸಬೇಕು” ಎಂದರು.
“ಕಾರ್ಖಾನೆಗಳಿಗೆ ಕಬ್ಬು ಸಾಗಿಸಿದ ರೈತರಿಗೆ ಬಾಕಿ ಹಣ ಉಳಿಸಿಕೊಂಡ ಕಾರ್ಖಾನೆಗಳು ಶೀಘ್ರದಲ್ಲೇ ಹಣ ಪಾವತಿಸಲು ಜಿಲ್ಲಾಡಳಿತ ಕ್ರಮ ವಹಿಸಬೇಕು. ಮುಂಗಾರು ಹಂಗಾಮು ಆರಂಭವಾಗಿದ್ದು ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಎದ್ದು ಕಾಣಿಸುತ್ತಿದೆ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಪಿಕೆಪಿಎಸ್, ಮಾರುಕಟ್ಟೆಯಲ್ಲಿ ಗೊಬ್ಬರ ಕೊರತೆ ಆಗದಂತೆ ಕ್ರಮಕೈಗೊಳ್ಳಬೇಕು. ಅನ್ನದಾತರಿಗೆ ಎಫ್ಐಡಿ ಹಾಗೂ ಇತರೆ ತಾಂತ್ರಿಕ ತೊಂದರೆ ನೀಡದೆ ನೇರವಾಗಿ ಬೀಜ, ಗೊಬ್ಬರ ವಿತರಣೆಗೆ ಅನುವು ಮಾಡಿಕೊಡಬೇಕು” ಎಂದು ಆಗ್ರಹಿಸಿದರು.
“ಕೃಷಿ ಚಟುವಟಿಕೆ ಕೈಗೊಳ್ಳಲು ಬ್ಯಾಂಕ್ ಸಾಲದ ನೀತಿಯಲ್ಲಿ ಸಿವಿಲ್ ಸ್ಕೋರ್ ನೆಪದಲ್ಲಿ ರೈತರಿಗೆ ಸಾಲ ಸಿಗದೇ ಒದ್ದಾಡುತ್ತಿದ್ದಾರೆ. ಸರಳ ರೀತಿಯಲ್ಲಿ ಕೃಷಿ ಆಧಾರಿತ ಸಾಲವಾಗಿರುವುದರಿಂದ ರೈತರಿಗೆ ಸಿವಿಲ್ ಸ್ಕೋರ್ ವ್ಯವಸ್ಥೆಯಿಂದ ಹೊರಗಿಟ್ಟು ಸರಳ ಸಾಲ ವಿತರಿಸಬೇಕು. ಜಿಲ್ಲೆಯ ಜೀವನಾಡಿಯಾಗಿರುವ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಸರ್ಕಾರವು ರೈತರ ಹಾಗೂ ಕಾರ್ಮಿಕರ ಹಿತದೃಷ್ಟಿಯಿಂದ ಯಾವುದಾದರೂ ವ್ಯವಸ್ಥೆಯಿಂದಾಗಿ ಪುನರಾಂಭಿಸಲು ಕ್ರಮಕೈಗೊಳ್ಳಬೇಕು. ಇದಕ್ಕೆ ಜಿಲ್ಲೆಯ ಎಲ್ಲಾ ಸಂಸದ, ಶಾಸಕರು ರೈತರ ಹಿತದೃಷ್ಟಿಯಿಂದ ಪಕ್ಷಭೇದ ಮರೆತು ಕಾರ್ಖಾನೆ ಪುನಾರಂಭಿಸಲು ಕೈಜೋಡಿಸಬೇಕು” ಎಂದರು.
ಇದನ್ನೂ ಓದಿ : ಬೀದರ್ | JEE ಫಲಿತಾಂಶ : ಚನ್ನಬಸವೇಶ್ವರ ಗುರುಕುಲದ 64 ವಿದ್ಯಾರ್ಥಿಗಳು ಐಐಟಿ ಪ್ರವೇಶಕ್ಕೆ ಅರ್ಹತೆ
ಪತ್ರಿಕಾ ಗೋಷ್ಠಿಯಲ್ಲಿ ಪ್ರಮುಖರಾದ ಬಾಬುರಾವ ಹೊನ್ನಾ, ಖಾಸೀಂ ಅಲಿ, ಬಸವರಾಜ ಅಷ್ಟೂರ, ಶಿವರಾಜ ಪಾಟೀಲ ಅತಿವಾಳ, ವೀರಾರೆಡ್ಡಿ ಪಾಟೀಲ್, ಕೋಂಡಿಬಾರಾವ ಪಾಂಡ್ರೆ, ವಿಠಲರೆಡ್ಡಿ ಅಣದೂರು, ಧೂಳಪ್ಪಾ ಸೋರಳ್ಳೆ, ಶಿವರಾಯ ಮುಧಾಳೆ, ಮಲ್ಲಿಕಾರ್ಜುನ ಬಿರಾದಾರ ಸಂಗಮ, ಬಾಬುರಾವ ಭೋಸ್ಥೆ, ವಿಶ್ವನಾಥ ಧರಣೆ, ವಿಜಯಕುಮಾರ ಬಾವಗಿ, ನಜೀರ್ ಅಹ್ಮದ್, ರಾಜಕುಮಾರ ಸ್ವಾಮಿ , ಶಫೀಯೋದ್ದೀನ್ ಸೇರಿದಂತೆ ಇತರರಿದ್ದರು.




