ಸಮಾಜದಲ್ಲಿ ವಿದ್ಯಾವಂತ ಮೋಸಗಾರರು, ದೇಶದ್ರೋಹಿಗಳ ಸಂಖ್ಯೆ ಹೆಚ್ಚುತ್ತಿದ್ದು, ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಸಂಸ್ಥೆ ತಕ್ಕ ಶಿಕ್ಷೆ ನೀಡುತ್ತಿದೆ ಎಂದು ಕರ್ನಾಟಕದ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಅಭಿಪ್ರಾಯಪಟ್ಟರು.
ಬೀದರ ನಗರದ ಪೂಜ್ಯ ಶ್ರೀ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಶುಕ್ರವಾರ ಬೀದರ ಜಿಲ್ಲೆಯ ಎಲ್ಲ ತಾಲೂಕಿನ ಬಾಕಿ ಇರುವ ಪ್ರಕರಣಗಳ ವಿಚಾರಣೆ ಹಾಗೂ ವಿಲೇವಾರಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಇಡೀ ರಾಷ್ಟ್ರದಲ್ಲಿ ಲೋಕಾಯುಕ್ತ ಬಲಿಷ್ಠ ಹಾಗೂ ಸ್ವಾಯತ್ತ ಸಂಸ್ಥೆ ಎಂಬ ಹೆಗ್ಗಳಿಕೆ ಗಳಿಸಿದೆ. ಈ ಹಿಂದೆ ರಾಜ್ಯದ ಮುಖ್ಯಮಂತ್ರಿ, ಸಚಿವರನ್ನು ಜೈಲಿಗೆ ಕಳುಹಿಸಿದ ಸಂಸ್ಥೆಯಾಗಿದೆ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾದಲ್ಲಿ ಲೋಕಾಯುಕ್ತ ಎದುರು ದೂರು ದಾಖಲಸಿದಲ್ಲಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಸಾರ್ವಜನಿಕ ಹಿತಾಸಕ್ತಿ ಇದ್ದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿ ನ್ಯಾಯ ಒದಗಿಸಿದ ಅನೇಕ ಉದಾಹರಣೆಗಳಿವೆ” ಎಂದರು.
“ಭ್ರಷ್ಟಚಾರದಲ್ಲಿ ತೊಡಗಿರುವ ಹಾಗೂ ಆದಾಯ ಮೀರಿ ಆಸ್ತಿಗಳಿಸಿರುವ ಅನೇಕ ಅಧಿಕಾರಿಗಳಿಗೆ ಲೋಕಾಯುಕ್ತ ಸಂಸ್ಥೆಯು ದಾಳಿ ನಡೆಸಿದೆ. ಅಧಿಕಾರಿಗಳು ತಮ್ಮ ಕಾರ್ಯಗಳನ್ನು ಜವಾಬ್ದಾರಿಯುತವಾಗಿ ಮಾಡದಿದ್ದಲ್ಲಿ ತಕ್ಕ ಪಾಠ ಕಲಿಸಿದೆ ಎಂದ ಅವರು, ತಾವು ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ವೇಳೆ ಊರೂರು ಸಂಚರಿಸಿ 1.8 ಕೋಟಿ ಪ್ರಕರಣಗಳನ್ನು ಬಗೆಹರಿಸಲಾಗಿದೆ, ಅಧಿಕಾರಿಗಳು, ಸಾರ್ವಜನಿಕರು ಸರಿಯಾಗಿ ಸ್ಪಂದಿಸಿದರೆ ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ” ಎಂದರು.

“ಸಾರ್ವಜನಿಕರು, ಅಧಿಕಾರಿಗಳು ತಮ್ಮ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ನಿಭಾಯಿಸಬೇಕು. ಸಾರ್ವಜನಿಕರು ದೂರು ದಾಖಲಿಸಿದ ನಂತರ ಭಯ ಪಡದೆ ತಾರ್ಕಿಕ ಅಂತ್ಯದವರೆಗೆ ಸ್ಪಂದಿಸಬೇಕು. ಕೆಲ ದೂರುದಾರರು ಅರ್ಧಕ್ಕೆ ಹಿಂಜರಿಯುತ್ತಾರೆ. ಅನ್ಯಾಯದ ವಿರುದ್ಧ ಸಂಘ-ಸಂಸ್ಥೆಗಳು ಹೋರಾಡಬೇಕು. ಅಧಿಕಾರಿಗಳು ಆತ್ಮವಂಚನೆ ಮಾಡಿಕೊಳ್ಳಬಾರದು” ಎಂದು ಸಲಹೆ ನೀಡಿದರು.
“ಅಧಿಕಾರಿಗಳು ಅಧಿಕಾರ ಬಂದ ನಂತರ ಲಂಚತನಕ್ಕೆ ಪರವಾನಗಿ ಸಿಕ್ಕಂತೆ ವರ್ತಿಸಬಾರದು ಪ್ರಾಮಾಣಿಕ ಅಧಿಕಾರಿಗಳು ಅನೇಕರಿದ್ದಾರೆ. ಆದರೆ ಭ್ರಷ್ಟ ಅಧಿಕಾರಿಗಳು ಹೆಚ್ಚು ಇದ್ದಾರೆ. ಅವರು ಜೀವಂತವಾಗಿದ್ದರೂ ಸತ್ತಂತೆ. ನಾವು ಮಾಡಿದ ಅನ್ನವನ್ನು ನಾವು ತಿನ್ನಬೇಕು. ಇತರರ ಅನ್ನ ಕಸಿದು ತಿಂದರೆ ಶಾಪ ತಟ್ಟುತ್ತದೆ. ಪ್ರಾಮಾಣಿಕ ಅಧಿಕಾರಿಗಳು ಯಾವುದೇ ಕಾರಣಕ್ಕೂ ಹೆದರುವ ಅಗತ್ಯವಿಲ್ಲ. ತಪ್ಪು ಎಸಗಿದವರಿಗೆ ಶಿಕ್ಷೆ ಆಗಲೇಬೇಕು. ಕೋಟ್ಯಾಂತರ ಆಸ್ತಿಪಾಸ್ತಿ ಮಾಡಿದ ಸಾವಿರಾರು ಅಧಿಕಾರಿಗಳ ಜೀವನದ ನೋವನ್ನು ನಾನು ನೋಡಿರುವೆ. ಅವರು ತೀರ ಆಧೋಗತಿಯ ಜೀವನ ಸಾಗಿಸಿದ್ದಾರೆ. ಪಶ್ಚಾತ್ತಾಪ ಪಡುತ್ತಾರೆ. ಮಕ್ಕಳು ಮಾತು ಕೇಳುವುದಿಲ್ಲ. ಅನ್ಯಾಯದ ಹಣ ಗಳಿಸುವುದು ಪಾಪ” ಎಂದರು.
“ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು, ಸಂಸ್ಕಾರಯುತ ಸಮಾಜ ರೂಪುಗೊಂಡರೆ ಭ್ರಷ್ಟಚಾರ ನಿರ್ಮೂಲನೆ ಮಾಡಬಹುದು. ಈ ಸಮಾಜ ಮಹಾತ್ಮ ಗಾಂಧಿ, ಡಾ.ಅಂಬೇಡ್ಕರ್, ಬಸವೇಶ್ವರ, ಸುಭಾಸ್ ಚಂದ್ರ ಬೋಸ್ ಅವರನ್ನು ಎಲ್ಲ ಕಾಲದಲ್ಲಿಯೂ ನೆನಪಿಸಿಕೊಳ್ಳುತ್ತದೆ. ಆದರೆ ಹಣ ಗಳಿಸುವ ವ್ಯಕ್ತಿಗಳನ್ನು ನೆನಪಿಸಿಕೊಳ್ಳುವುದಿಲ್ಲ” ಎಂದರು.
ಇತ್ತೀಚೆಗೆ ಸುಳ್ಳು ಕೇಸ್ ದಾಖಲಿಸುವವರ ಸಂಖ್ಯೆ ಹೆಚ್ಚುತ್ತಿದೆ. 40 ಸಾವಿರ ಸುಳ್ಳು ಪ್ರಕರಣಗಳು ಬಾಕಿ ಇವೆ. ಆದರೆ, ಸುಳ್ಳು ಪ್ರಕರಣ ದಾಖಲಿಸುವವರಿಗೆ 3 ವರ್ಷ ಜೈಲುವಾಸ ಹಾಗೂ ದಂಡ ಇದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಒಟ್ಟು 123 ದೂರುಗಳನ್ನು ಬಗೆಹರಿಸಿದರು. ದೂರು ವಿಚಾರಣೆ ವೇಳೆ ಉಪಲೋಕಾಯುಕ್ತರು ಅನೇಕ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ನಿಗದಿತ ಅವಧಿ ಒಳಗೆ ತಮ್ಮ ಕಾರ್ಯಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.
ಇದನ್ನೂ ಓದಿ : ಬೀದರ್ | ಕರ್ತವ್ಯ ಲೋಪ, ದುರ್ನಡತೆ : ಒಂದೇ ದಿನ ಇಬ್ಬರು ಪಿಡಿಒ ಸಸ್ಪೆಂಡ್
ಈ ಸಂದರ್ಭದಲ್ಲಿ ಬೀದರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಲೋಕಾಯುಕ್ತ ಉಪನಿಭಂದಕರಾದ ಅರವಿಂದ, ನ್ಯಾಯಾಧೀಶ ರಾಘವೇಂದ್ರ ಉಪಾಧ್ಯೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಗೀರಿಶ್ ದಿಲೀಪ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಡಿಎಫ್ಓ ಸುಮೀತಕುಮಾರ ಪಾಟೀಲ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಸಿ.ಸಿದ್ದರಾಜು ಉಪಸ್ಥಿತರಿದ್ದರು.




