ರಿಫಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಉಡುಪಿ ವಲಯದ ಮಾಸಿಕ ಸಭೆಯು ಬುಧವಾರ ಮಣಿಪಾಲ ಇನ್ ಹೋಟೆಲ್ನಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನ್ಯಾಚುರೋಪತಿ ಮತ್ತು ಆಯುರ್ವೇದ ತಜ್ಞ ಡಾ. ಮೊಹಮ್ಮದ್ ರಫೀಕ್ ಮಾತನಾಡಿ, ಇಂದಿನ ಉದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳು ಎದುರಿಸುತ್ತಿರುವ ಪ್ರಮುಖ ಸವಾಲು ಒತ್ತಡ (ಸ್ಟ್ರೆಸ್) ಆಗಿದ್ದು, ಸಂಪತ್ತಿನ ಸೃಷ್ಟಿ ಮತ್ತು ವ್ಯವಹಾರದ ಒತ್ತಡಗಳ ನಡುವೆ ಆರೋಗ್ಯವನ್ನು ನಿರ್ಲಕ್ಷಿಸುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಹೇಳಿದರು.
ತಿಬ್-ಎ-ನಬವಿ (ಪ್ರವಾದಿ ವೈದ್ಯಶಾಸ್ತ್ರ)ಯ ಮಹತ್ವವನ್ನು ವಿವರಿಸಿದ ಅವರು, ಪ್ರವಾದಿ ಮುಹಮ್ಮದ್ ಅವರ ಜೀವನ ಮಾರ್ಗದರ್ಶನವನ್ನು ಅನುಸರಿಸುವ ಮೂಲಕ ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು. ಆರೋಗ್ಯಕರ ಜೀವನಶೈಲಿಗೆ ಸಂಬಂಧಿಸಿದ ಹಲವು ಉಪಯುಕ್ತ ಸಲಹೆಗಳನ್ನು ಅವರು ನೀಡಿದರು.

ವ್ಯವಹಾರಿಕ ಅಧಿವೇಶನದಲ್ಲಿ ಜಲೀಲ್ ಸತ್ತಾರ್ ಹಾಗೂ ತಂಡವು LOXBOT Pvt Ltd ಸಂಸ್ಥೆಯನ್ನು ಪರಿಚಯಿಸಿತು. ಅಪಘಾತಗಳು ಹಾಗೂ ತುರ್ತು ಪರಿಸ್ಥಿತಿಗಳಲ್ಲಿ ಸಾರ್ವಜನಿಕರ ಸುರಕ್ಷತೆ ಮತ್ತು ಜೀವ ರಕ್ಷಣೆಯನ್ನು ಉದ್ದೇಶವಾಗಿಟ್ಟುಕೊಂಡು ಈ ಯೋಜನೆಯನ್ನು ರೂಪಿಸಲಾಗಿದೆ ಎಂದು ತಿಳಿಸಲಾಯಿತು.
ಯುವ ಉದ್ಯಮಿ ಅಬೂಬಕ್ಕರ್ ಸಂಸ್ಥೆಯ ದೃಷ್ಟಿಕೋನ ಹಾಗೂ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ಹೂಡಿಕೆದಾರರನ್ನು ವ್ಯವಹಾರಿಕ ನಿಯಮಾವಳಿಗಳ ಆಧಾರದ ಮೇಲೆ ಸಹಭಾಗಿತ್ವಕ್ಕೆ ಆಹ್ವಾನಿಸಿದರು. ಸಂಸ್ಥೆಯಲ್ಲಿ ರಿಫಾ ಸದಸ್ಯರು ಪಾಲುದಾರರಾಗಿರುವ ಹಿನ್ನೆಲೆಯಲ್ಲಿ ಯೋಜನೆಯ ಪ್ರಾತ್ಯಕ್ಷಿಕೆಗೆ ವೇದಿಕೆ ಒದಗಿಸಲಾಗಿದೆ ಹೊರತು, ಇದು ರಿಫಾದ ಅಧಿಕೃತ ಯೋಜನೆಯಲ್ಲ ಎಂದು ಸ್ಪಷ್ಟಪಡಿಸಿದರು.
ಸಭೆಯ ಅಧ್ಯಕ್ಷತೆಯನ್ನು ಉಡುಪಿ ವಲಯದ ರಿಫಾ ಅಧ್ಯಕ್ಷ ಮೊಹಮ್ಮದ್ ಆಸಿಫ್ ಇಕ್ಬಾಲ್ ವಹಿಸಿದ್ದರು. ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಹೀರ್ ಅಹ್ಮದ್ ರಿಫಾ ಸಂಸ್ಥೆಯ ಪರಿಚಯ ಮಾಡಿಕೊಟ್ಟರು. ಫೈಝ್ ಅಹ್ಮದ್ ಕುರ್ಆನ್ ಪಠಿಸಿದರು. ಶಕೀಲ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ರಿಫಾ ಸದಸ್ಯರು, ಉದ್ಯಮಿಗಳು ಹಾಗೂ ಸ್ಥಳೀಯ ಸಮುದಾಯದ ಗಣ್ಯರು ಉಪಸ್ಥಿತರಿದ್ದರು.






