ಸರ್ಕಾರಿ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳಿಗೆ ಕನಿಷ್ಠ ಕನ್ನಡ ವರ್ಣಮಾಲೆ (‘ಅ, ಆ, ಇ, ಈ’) ಹಾಗೂ ಮೂಲಭೂತ ಗಣಿತ ಲೆಕ್ಕಗಳನ್ನು ಬಿಡಿಸಲು ಬಾರದಿರುವುದನ್ನು ಕಂಡು ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕರ ಸೂಚನೆಯಂತೆ ತಾಲ್ಲೂಕಿನ ಬೋಧನಾ ಲೋಪ ಎಸಗಿದ 180 ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು (BEO) ನೋಟಿಸ್ ಜಾರಿ ಮಾಡಿದ್ದಾರೆ.
‘ನಮ್ಮೂರಿಗೆ ನಮ್ಮ ಶಾಸಕ’ ಕಾರ್ಯಕ್ರಮದಡಿ ಚಿಕ್ಕಬಳ್ಳಾಪುರ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದ ಶಾಸಕ ಪ್ರದೀಪ್ ಈಶ್ವರ್, ಅಲ್ಲಿನ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭದಲ್ಲಿ 7ನೇ ತರಗತಿಯ ವಿದ್ಯಾರ್ಥಿಗಳಿಗೆ “ಕನ್ನಡ ವರ್ಣಮಾಲೆ ಬರೆಯಿರಿ” ಎಂದು ಸೂಚಿಸಿದಾಗ, ಹಲವು ಮಕ್ಕಳು ತಮಗೆ ಬರೆಯಲು ಬರುವುದಿಲ್ಲ ಎಂದು ಉತ್ತರಿಸಿದ್ದಾರೆ. ಅಲ್ಲದೆ ಸರಳ ಸಂಕಲನ-ಕಳೆಯುವಿಕೆಯಂತಹ ಗಣಿತದ ಲೆಕ್ಕಗಳನ್ನು ಮಾಡಲು ಮಕ್ಕಳು ಪರದಾಡಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ | ಚಪ್ಪಲಿ ಎಸೆದವನದ್ದು ಎಷ್ಟು ತಪ್ಪಿದೆಯೋ ಅಷ್ಟೇ ತಪ್ಪು, ಶಾಸಕ ಪ್ರದೀಪ್ ಈಶ್ವರ್ ಅವರದ್ದು : ಡಾ. ವರದರಾಜು
ಈ ಶೈಕ್ಷಣಿಕ ಹಿನ್ನಡೆಯನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರು, 7ನೇ ತರಗತಿಗೆ ತಲುಪಿದರೂ ಕನಿಷ್ಠ ಅಕ್ಷರಜ್ಞಾನವಿಲ್ಲದ ಸ್ಥಿತಿಗೆ ಕಾರಣರಾದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದರು. ಶಾಸಕರ ನಿರ್ದೇಶನದಂತೆ ಶಿಕ್ಷಣ ಸಂಯೋಜಕರು ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿಗಳು (BRP/CRP) ತಾಲ್ಲೂಕಿನ ಶಾಲೆಗಳಲ್ಲಿ ಪರೀಕ್ಷೆ ನಡೆಸಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಮತ್ತು ಅವರಿಗೆ 1ರಿಂದ 6ನೇ ತರಗತಿವರೆಗೆ ಬೋಧನೆ ಮಾಡಿದ ಶಿಕ್ಷಕರ ಪಟ್ಟಿಯನ್ನು ಸಿದ್ಧಪಡಿಸಿದರು. ಅದರಂತೆ 180 ಶಿಕ್ಷಕರಿಗೆ ಬಿಇಒ ಕಚೇರಿಯಿಂದ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.
This video cannot be played in your browser. Open the video directly
ಸರ್ಕಾರದಿಂದ ಉತ್ತಮ ವೇತನ ಮತ್ತು ಸವಲತ್ತು ಪಡೆದರೂ ಬಡ ಮಕ್ಕಳ ಮೂಲಭೂತ ಕಲಿಕೆಗೆ ಸ್ಪಂದಿಸದಿರುವುದು ಖಂಡನೀಯ. ಶಿಕ್ಷಕರು ನೀಡುವ ಸಮಜಾಯಿಷಿ ಸಮಂಜಸವಾಗಿರದಿದ್ದರೆ ಅಂತಹವರನ್ನು ಸೇವೆಯಿಂದ ಅಮಾನತುಗೊಳಿಸಲು ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ಶಾಸಕರು ಎಚ್ಚರಿಸಿದ್ದಾರೆ.
“ಯಾರೇ ವಿರೋಧ ವ್ಯಕ್ತಪಡಿಸಿದರೂ ಬಡ ಮಕ್ಕಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಈ ಕ್ರಮ ಅಗತ್ಯ. ಸರ್ಕಾರಿ ಶಾಲೆಗಳ ಕಲಿಕಾ ಮಟ್ಟ ಹೆಚ್ಚಿಸಲು ನನ್ನ ಹೋರಾಟ ಮುಂದುವರಿಯಲಿದೆ,” ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದ್ದಾರೆ.





