ವಿದ್ಯಾರ್ಥಿಗಳಲ್ಲಿ ಅಡಗಿರುವ ಸಂಗೀತ ಹಾಗೂ ಕಲಾ ಪ್ರತಿಭೆಯನ್ನು ಗುರುತಿಸಿ, ಅವುಗಳನ್ನು ಬೆಳೆಸುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸುಗಮ ಸಂಗೀತ ಕಲಾ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಹೇಳಿದರು.
ಬೀದರ್ ಸಮೀಪದ ಮನ್ನಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 2026–27ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆಯಡಿ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸುಗಮ ಸಂಗೀತ ಕಲಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
“ಸಂಗೀತವು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದ್ದು, ಕಲೆಯ ಮೂಲಕ ವಿದ್ಯಾರ್ಥಿಗಳಲ್ಲಿ ಶಿಸ್ತು, ಆತ್ಮವಿಶ್ವಾಸ ಹಾಗೂ ಸೃಜನಶೀಲತೆ ಬೆಳೆಯುತ್ತದೆ. ತರಬೇತಿಯಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಆಸಕ್ತಿಯಿಂದ ಕಲಿತು ತಮ್ಮ ಪ್ರತಿಭೆಯನ್ನು ಮತ್ತಷ್ಟು ವಿಕಸನಗೊಳಿಸಬೇಕು” ಎಂದು ಕರೆ ನೀಡಿದರು.
ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ವಿಜಯಕುಮಾರ ಸೋನಾರೆ ಮಾತನಾಡಿ, “ಇಂದಿನ ಮಕ್ಕಳು ಅನವಶ್ಯಕವಾಗಿ ಮೊಬೈಲ್ ಬಳಕೆಯಲ್ಲಿ ಸಮಯ ವ್ಯರ್ಥ ಮಾಡದೆ ಶಿಕ್ಷಣ ಮತ್ತು ಪ್ರತಿಭೆ ಬೆಳವಣಿಗೆಯ ಕಡೆ ಹೆಚ್ಚಿನ ಗಮನ ಹರಿಸಬೇಕು” ಎಂದು ಸಲಹೆ ನೀಡಿದರು.
“ಮೊಬೈಲ್ ಅನ್ನು ಅಗತ್ಯವಿದ್ದಾಗ ಮಾತ್ರ ಬಳಸಬೇಕು. ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡ ಗುರಿ ಹಾಗೂ ಕನಸುಗಳನ್ನು ಹೊಂದಿ ನಿರಂತರ ಶ್ರಮಿಸಿದರೆ ಯಶಸ್ಸು ಸಾಧಿಸಬಹುದು. ಸಂಗೀತ ಸೇರಿದಂತೆ ವಿವಿಧ ಕಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು” ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ತರಬೇತಿ ಗುರು ರಮೇಶ ಅವರು ಸುಗಮ ಸಂಗೀತ ತರಬೇತಿ ನೀಡುತ್ತಿದ್ದು, ಈ ತರಬೇತಿ 2026ರ ಆಗಸ್ಟ್ 1ರಿಂದ 2027ರ ಜನವರಿ 30ರವರೆಗೆ ನಡೆಯಲಿದೆ. ತೇಜಶ್ವಿನಿ, ಶ್ರೀನಿಧಿ, ಅಂಕಿತಾ, ಐಶ್ವರ್ಯ, ಪ್ರಿಯಾ, ಗೌತಮಿ, ಅಕ್ಷಿತಾ, ಜೀವಿಕಾ, ವೈಷ್ಣವಿ ಎಸ್., ದೀಕ್ಷಿತಾ, ಸಮಾರಿಯಾ, ಸೃಷ್ಟಿ ಹಾಗೂ ಎಸ್ತರ್ ರಾಣಿ ಸೇರಿದಂತೆ ವಿದ್ಯಾರ್ಥಿನಿಯರು ತರಬೇತಿಯಲ್ಲಿ ಭಾಗವಹಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಸ್ವಾತಂತ್ರ್ಯ ದಿನಾಚರಣೆ ಅದ್ದೂರಿ ಆಚರಣೆಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೂಚನೆ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪಾಲಕರಾದ ಮಹಾಂತಪ್ಪ ದೊಡ್ಡಮನಿ ವಹಿಸಿದ್ದರು. ಗೋಪಾಲ ರಾಠೋಡ್ ಹಾಗೂ ದೇವಿದಾಸ್ ಜೋಶಿ ಮಾತನಾಡಿದರು. ಗಾಯಕ ದಿಲೀಪ ಕಾಡವಾದ ಸೇರಿದಂತೆ ಗಣ್ಯರು ಹಾಗೂ ಶಾಲೆಯ ಶಿಕ್ಷಕರಾದ ಶ್ರೀಕಾಂತ, ಬಸಪ್ಪಾ, ರಜನಿಕಾಂತ, ಸವಿತಾ, ಸಪನಾ, ವಿನೋದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಗೀತಾ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರೆ, ಕ್ಲೆಮೆಂಟಿನಾ ವಂದಿಸಿದರು.




