ಅಕ್ರಮ ಸಿಬ್ಬಂದಿ ನೇಮಕ ಹಾಗೂ ದಾಖಲೆ ತಿದ್ದುಪಡಿ ಆರೋಪಗಳ ಹಿನ್ನೆಲೆ ಹುಮನಾಬಾದ್ ತಾಲೂಕಿನ ಸಿಂಧನಕೇರಾ ಗ್ರಾಮ ಪಂಚಾಯಿತಿಯಲ್ಲಿ ನಿಯೋಜಿತ ಪಿಡಿಒ ರಘುನಾಥ ಅವರನ್ನು ಅಮಾನತು ಮಾಡಲಾಗಿದೆ.
ಬಹುಜನ ಯುವ ಪ್ಯಾಂಥರ್ ಜಿಲ್ಲಾಧ್ಯಕ್ಷ ಜನಾರ್ಧನ ಪುಟ್ಟರಾಜ ದೀನೆ ಅವರು ನೀಡಿದ ದೂರಿನ ಅನ್ವಯ ತನಿಖೆ ನಡೆಸಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ ಅವರು ಜೂ.16ರಂದು ಆದೇಶ ಹೊರಡಿಸಿದ್ದಾರೆ.
ತಾಲೂಕಿನ ದುಬಲಗುಂಡಿ ಗ್ರಾಮ ಪಂಚಾಯತ್ ಪಿಡಿಒ ಆಗಿರುವ ರಘುನಾಥ ಅವರು ಸಿಂಧನಕೇರಾ ಗ್ರಾಮ ಪಂಚಾಯತಿ ಪಿಡಿಒ ಆಗಿ ಪ್ರಭಾರ ವಹಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದರು. ಸಭಾ ನಡವಳಿ ಪುಸ್ತಕದಲ್ಲಿ ನಕಲಿ ಹೆಸರು ಮತ್ತು ಹುದ್ದೆ ಸೃಷ್ಟಿಸಿ, ದಾಖಲೆ ತಿದ್ದುಪಡಿ ಹಾಗೂ ಫೋರ್ಜರಿ ಸಹಿ ಮಾಡಿ ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ಸಲ್ಲಿಸಲಾಗಿದೆ ಎಂದು ಆರೋಪಿಸಿ ಕಳೆದ ಫೆಬ್ರುವರಿಯಲ್ಲಿ ಜಿಪಂ ಸಿಇಒಗೆ ಬಹುಜನ ಯುವ ಪ್ಯಾಂಥರ್ನ ಜಿಲ್ಲಾ ಸಮಿತಿ ವತಿಯಿಂದ ದೂರು ಸಲ್ಲಿಸಲಾಗಿತ್ತು.
ದೂರಿನ ಆಧಾರದ ಮೇಲೆ ಜಿಲ್ಲಾ ಪಂಚಾಯಿತಿ ಯೋಜನಾ ಮತ್ತು ಅಂದಾಜು ಮೌಲ್ಯಮಾಪನ ಅಧಿಕಾರಿಗಳು ಹಾಗೂ ಸಹಾಯಕ ಯೋಜನಾಧಿಕಾರಿಗಳು ಜಂಟಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು.
ಇದನ್ನೂ ಓದಿ : ಬೀದರ್ | ಸೋರುವ ಕೊಠಡಿ, ಶಿಕ್ಷಕರ ಕೊರತೆ : ಆತಂಕದಲ್ಲಿ ಮಕ್ಕಳ ಕಲಿಕೆ!
ವರದಿಯಲ್ಲಿ ಮೇಲಾಧಿಕಾರಿಗಳ ಅನುಮತಿ ಪಡೆಯದೆ ಮನಬಂದಂತೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಉಪಾಯ ಮಾಡಿದ್ದು, ಸಭಾ ನಡವಳಿಗಳನ್ನು ಅನಧಿಕೃತವಾಗಿ ಪಂಚತಂತ್ರ 2.0 ತಂತ್ರಾಂಶಕ್ಕೆ ಅಪ್ಲೋಡ್ ಮಾಡಿರುವುದು ಸೇರಿ ಹಲವು ಅಕ್ರಮ ಕಂಡುಬಂದಿರುವ ಬಗ್ಗೆ ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ.




