ಬನ್ನೇರುಘಟ್ಟ ಜೈವಿಕ ಉದ್ಯಾನದ ಸುವರ್ಣ ಎಂಬ ಹೆಸರಿನ ಹೆಣ್ಣಾನೆಗೆ ಗುರುವಾರ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿದೆ. ಆದರೆ, ಗರ್ಭದಲ್ಲೇ ಮರಿ ಮೃತಪಟ್ಟಿದೆ.
ಆನೆ ಸುವರ್ಣಗೆ ಇದು ಹತ್ತನೇ ಮರಿಯಾಗಿತ್ತು. ಆದರೆ, ಮರಿಯು ತಾಯಿಯ ಗರ್ಭದಲ್ಲೇ ಮೃತಪಟ್ಟಿತ್ತು. ಇದರಿಂದ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ, ಮರಿಯನ್ನು ಹೊರತೆಗೆದಿದ್ದಾರೆ.
“49 ವರ್ಷದ ಆನೆ ಸುವರ್ಣ, ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಒಂಬತ್ತು ಮರಿಗಳಿಗೆ ಜನ್ಮ ನೀಡಿದ್ದು, ಅವು ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿಯೇ ಬೆಳೆದಿವೆ. ಸಾಮಾನ್ಯವಾಗಿ 23-24 ತಿಂಗಳಿಗೆ ಆನೆ ಮರಿ ಹಾಕುತ್ತದೆ. ಪ್ರಸ್ತುತ ಸುವರ್ಣ ಗರ್ಭ ಧರಿಸಿ ಅಂದಾಜು 23 ತಿಂಗಳಿಗೂ ಹೆಚ್ಚು ಅವಧಿಯಾಗಿತ್ತು. ಕಳೆದ ಎರಡು ದಿನಗಳಿಂದ ಆನೆ ಪ್ರಸವ ವೇದನೆ ಅನುಭವಿಸುತ್ತಿತ್ತು. ಮರಿಯ ಕಾಲುಗಳು ಹಿಮ್ಮುಖವಾಗಿದ್ದರಿಂದ ಹೆರಿಗೆಗೆ ತೊಂದರೆಯಾಗಿತ್ತು” ಎಂದು ವೈದ್ಯರು ತಿಳಿಸಿದ್ದಾರೆ.
“ಡಾ.ಕೃಷ್ಣಮೂರ್ತಿ, ಡಾ.ಹೊನ್ನಪ್ಪ, ಡಾ.ವಸಂತ್ಶೆಟ್ಟಿ, ಡಾ.ಉಮಾಶಂಕರ್, ಡಾ.ವಿಜಯಕುಮಾರ್, ಡಾ.ಮಂಜುನಾಥ್ ಅವರ ವೈದ್ಯರ ತಂಡವು ಚರ್ಚೆ ನಡೆಸಿ, ಪ್ರಸವ ವೇದನೆ ಅನುಭವಿಸುತ್ತಿದ್ದ ಆನೆಯನ್ನು ಅರವಳಿಕೆಗೆ ಒಳಪಡಿಸಿ ಶಸ್ತ್ರಚಿಕಿತ್ಸೆ ಮೂಲಕ ಮರಿಯನ್ನು ಹೊರ ತೆಗೆದಿದ್ದಾರೆ. ತಾಯಿ ಆನೆಯನ್ನು ವೈದ್ಯರು ಆರೈಕೆ ಮಾಡುತ್ತಿದ್ದಾರೆ” ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸುನೀಲ್ ಪನ್ವಾರ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೇಲೂರಿನ ಚನ್ನಕೇಶವ ದೇಗುಲದ ಗೋಪುರಕ್ಕೆ ಬಡಿದ ಸಿಡಿಲು; ಪುರಾತತ್ವ ಇಲಾಖೆಗೆ ಮಾಹಿತಿ
“ಸುವರ್ಣ ಆನೆ ಅಪರೂಪದ ಆನೆಯಾಗಿದೆ. ಸಾಮಾನ್ಯವಾಗಿ ಆನೆಗಳು 3-4 ಮರಿಗಳನ್ನು ಹಾಕುತ್ತವೆ. ಆದರೆ ಸುವರ್ಣ 10 ಮರಿಗಳಿಗೆ ಜನ್ಮ ನೀಡಿರುವುದು ದಾಖಲೆಯಾಗಿದೆ” ಎಂದು ಉದ್ಯಾನದ ವೈದ್ಯ ಡಾ.ಉಮಾಶಂಕರ್ ತಿಳಿಸಿದ್ದಾರೆ.
ಬನ್ನೇರುಘಟ್ಟ ಜೈವಿಕ ಉದ್ಯಾನದ ಆನೆ ಸುವರ್ಣ, ವನಿತಾ, ಶಿವ, ಗೋಕುಲ, ವನಶ್ರೀ, ಗಜೇಂದ್ರ, ಶ್ರೀರಾಮ, ಭವಾನಿ, ಸುರೇಶ, ಸುಧಾ ಎಂಬ ಆನೆಗಳಿಗೆ ಜನ್ಮ ನೀಡಿದೆ. ಒಂದು ಆನೆ ಮೈಸೂರು ಮೃಗಾಲಯದಲ್ಲಿದೆ. ವನಿತಾ ಮತ್ತು ಗೋಕುಲ ಮೃತಪಟ್ಟಿವೆ. ಉಳಿದ ಆರು ಮರಿಗಳು ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿವೆ ಎಂದು ತಿಳಿದುಬಂದಿದೆ.