ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಪ್ರಯಾಣಿಕರಿಗೆ ತ್ವರಿತ ಸಂಚಾರ ಸೇವೆ ನೀಡಲು ಪ್ರಾರಂಭಿಸಲಾಗಿರುವ ಬಿಆರ್ಟಿಎಸ್ ಚಿಗರಿ ಬಸ್ಗಳ ಅವಘಡಗಳು ಮುಂದುವರೆದಿವೆ. ಇಂದು ಧಾರವಾಡದ ಜನನಿಬಿಡ ಪ್ರದೇಶದಲ್ಲಿಯೇ ಚಿಗರಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಾದಚಾರಿ ಪಥಕ್ಕೆ ನುಗ್ಗಿದ್ದು, ದೊಡ್ಡ ಅನಾಹುತ ತಪ್ಪಿದೆ.
ಧಾರವಾಡದ ಅಂಜುಮನ್ ಸಂಸ್ಥೆಯ ಬಳಿಯ ಬಿಆರ್ಟಿಎಸ್ ಟರ್ಮಿನಲ್ನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಬಸ್, ಟರ್ಮಿನಲ್ನಿಂದ ಹೊರಬಂದ ಕೂಡಲೇ ಚಾಲಕನ ನಿಯಂತ್ರಣ ತಪ್ಪಿ ಪಾದಚಾರಿ ಪಥಕ್ಕೆ ನುಗ್ಗಿತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಒಂದು ಬೈಕ್ ಹಾಗೂ ರಸ್ತೆಬದಿಯ ಸಂಚಾರಿ ವ್ಯಾಪಾರಿಯ ತಳ್ಳುಗಾಡಿಗೆ ಹಾನಿಯಾಗಿದೆ.
ಜನರು ಹೆಚ್ಚಾಗಿ ಓಡಾಡುವ ಪ್ರದೇಶದಲ್ಲಿಯೇ ಈ ಘಟನೆ ನಡೆದಿದ್ದು, ಒಂದು ವೇಳೆ ಪಾದಚಾರಿಗಳ ಮೇಲೆ ನುಗ್ಗಿದ್ದರೆ ಏನಾಗುತ್ತಿತ್ತು ಎಂದು ಊಹಿಸಿಕೊಂಡ ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ. ಇತ್ತೀಚೆಗೆ ನವಲೂರು ಬಳಿ ಇಬ್ಬರು ಯುವತಿಯರಿಗೆ ಚಿಗರಿ ಬಸ್ ಡಿಕ್ಕಿ ಹೊಡೆದಿತ್ತು. ಇದರಿಂದ ಆಕ್ರೋಶಗೊಂಡ ಜನರು ಕಳೆದ ಬುಧವಾರ ಸತ್ತೂರು ಬಳಿ ಬಸ್ ತಡೆದು ಪ್ರತಿಭಟನೆ ನಡೆಸಿದ್ದರು.
ಆ ಘಟನೆಯ ನೆನಪು ಮಾಸುವ ಮುನ್ನವೇ ಮತ್ತೊಂದು ಬಿಆರ್ಟಿಎಸ್ ಚಿಗರಿ ಬಸ್ ಅವಘಡ ನಡೆದಿರುವುದು ಅವಳಿನಗರದ ಜನರಲ್ಲಿ ಆಕ್ರೋಶ ಮೂಡಿಸಿದೆ. ಘಟನೆ ನಡೆದ ಸ್ಥಳಕ್ಕೆ ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




