2023-24ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳು ಮುಂದಿನ ವಾರದಿಂದ ಪ್ರಾರಂಭವಾಗಲಿವೆ. ಈ ನಡುವೆ, ಮೊಟ್ಟೆ ಬೆಲೆ ಗಗನಕ್ಕೇರುತ್ತಿದೆ. ಹೀಗಾಗಿ, ಶೈಕ್ಷಣಿಕ ವರ್ಷದಲ್ಲಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮಕ್ಕೆ ಸರ್ಕಾರವು ಬಜೆಟ್ ಹಂಚಿಕೆಯಲ್ಲಿ ಅನುದಾನವನ್ನು ಹೆಚ್ಚಿಸಬೇಕೆಂದು ಅಕ್ಷರ ದಾಸೋಹದ ನೌಕರರು ಆಶಿಸುತ್ತಿದ್ದಾರೆ.
ಕಳೆದ ಶೈಕ್ಷಣಿಕ ವರ್ಷದಲ್ಲಿ (2022-23) ರಾಜ್ಯ ಸರ್ಕಾರವು ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ, ಚಿಕ್ಕಿ ಮತ್ತು ಬಾಳೆಹಣ್ಣು ನೀಡಲು ಆರಂಭಿಸಿತು. ಈ ಒಂದು ವರ್ಷದಲ್ಲಿ ಮೊಟ್ಟೆಯ ಬೆಲೆ ಏರಿಕೆ ಕಂಡಿದೆ. ಆದರೂ, ಶಾಲೆಗಳಲ್ಲಿ ಮೊಟ್ಟೆ ನೀಡಲು ನಿಗದಿಯಾಗಿದ್ದ ದರ ಏರಿಕೆಯಾಗಿಲ್ಲ ಎಂದು ತಿಳಿದುಬಂದಿದೆ.
ಕಳೆದ ವರ್ಷ ಜುಲೈನಲ್ಲಿ ಮೊಟ್ಟೆ ನೀಡಲು ಆರಂಭಿಸಿದಾಗ ಸರ್ಕಾರ ಮೊಟ್ಟೆಗೂ ನಿಧಿ ಹಂಚಿಕೆ ಮಾಡಿತ್ತು. ಅದರಂತೆ, ಪ್ರತಿ ಮೊಟ್ಟೆಗೆ 6 ರೂ. ನಿಗದಿಪಡಿಸಲಾಗಿತ್ತು. ಅದರಲ್ಲಿ, ಮೊಟ್ಟೆ ಖರೀದಿಗೆ 5 ರೂ., ಮೊಟ್ಟೆ ಬೇಯಿಸಲು 50 ಪೈಸೆ, ಬೇಯಿಸಿದ ಮೊಟ್ಟೆಯನ್ನು ಸುಲಿಯಲು 30 ಪೈಸೆ, ಸಾಗಾಣಿಕೆ ವೆಚ್ಚ 20 ಪೈಸೆ ಎಂದು ನಿಗದಿ ಮಾಡಲಾಗಿತ್ತು.
ಈ ಮೊತ್ತ ನಿಗದಿಯಾದ ಜುಲೈನಲ್ಲಿ ಮೊಟ್ಟೆ ಬೆಲೆ 4.70 ರೂ. ಇತ್ತು. ಆದರೆ, ಈಗ (ಮೇ 24) ಮೊಟ್ಟೆಯ ಬೆಲೆ ಬೆಂಗಳೂರಿನಲ್ಲಿ ಸಗಟು ಮತ್ತು ಚಿಲ್ಲರೆ ದರಗಳು ಕ್ರಮವಾಗಿ 5.50 ರೂ ಮತ್ತು 6 ರೂ. ಇದೆ. ಅಂತೆಯೇ, ಮಂಗಳೂರಿನಲ್ಲಿ ಕ್ರಮವಾಗಿ 5.60 ಮತ್ತು 5.80 ರೂ. ಇದೆ. ಇನ್ನು ರಾಯಚೂರಿನಲ್ಲಿ 5.70 ರೂ ಮತ್ತು 6 ರೂ. ಇದೆ. ಅಲ್ಲದೆ, ಕಳೆದ ಎರಡು ತಿಂಗಳುಗಳ ಹಿಂದೆ ಮೊಟ್ಟೆ ಬೆಲೆ 6.50 ರೂ. ದಾಟಿತ್ತು. ಹೀಗೆ, ದರಗಳು ಏರಿಳಿತ ಕಾಣುತ್ತಿರುವುದರಿಂದ ಬಜೆಟ್ ಬ್ಯಾಲೆನ್ಸ್ ಮಾಡುವುದು ಕಷ್ಟವಾಗಿದೆ. ಸರ್ಕಾರ ಮೊಟ್ಟೆಗೆ ನಿಗದಿಪಡಿಸಿರುವ ಬಜೆಟ್ ಮೊತ್ತವನ್ನು ಹೆಚ್ಚಿಸಬೇಕು ಎಂದು ಅಕ್ಷರ ದಾಸೋಹದ ಕಾರ್ಯನಿರ್ವಾಹಕ ಅಧಿಕಾರಿಗಳು ಹೇಳುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ?: ‘ಇಂದಿರಾ ಕ್ಯಾಂಟೀನ್’ ಸ್ಥಿತಿಗತಿ ಪರಿಶೀಲಿಸಿ ವರದಿ ನೀಡಲು ಸೂಚನೆ
ಶಾಲೆಗಳಲ್ಲಿ ಬಹುತೇಕ ಮಕ್ಕಳು ಮೊಟ್ಟೆಯನ್ನೇ ತಿನ್ನ ಬಯಸುತ್ತಾರೆ. ಕೆಲವರಷ್ಟೇ ಮೊಟ್ಟೆ ಬದಲಿಗೆ ಚಿಕ್ಕಿಯನ್ನು ಕೇಳುತ್ತಾರೆ. ಮೊಟ್ಟೆಯ ಬೆಲೆ ಏರಿಕೆಯಾಗುತ್ತಿರುವ ಕಾರಣ, ಸರ್ಕಾರ ಮೊಟ್ಟೆಗೆ ನಿಗದಿ ಮಾಡಿರುವ ದರವನ್ನು ಹೆಚ್ಚಿಸಬೇಕು” ಎಂದು ದಕ್ಷಿಣ ಕನ್ನಡದ ಅಕ್ಷರ ದಾಸೋಹ ಅಧಿಕಾರಿ ಉಷಾ ಹೇಳಿದ್ದಾರೆ.
“ಮೊಟ್ಟೆಗೆ ಬಜೆಟ್ ಹಂಚಿಕೆಯನ್ನು ಹೆಚ್ಚಿಸುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು” ಎಂದು ಮಧ್ಯಾಹ್ನದ ಬಿಸಿಯೂಟ ಯೋಜನೆ ನಿರ್ದೇಶಕ ಬಿ.ಎಸ್.ರಘುವೀರ್ ತಿಳಿಸಿದ್ದಾರೆ.