- ಆಯಾ ವಲಯ ಆಯುಕ್ತರಿಗೆ ಇಂದಿರಾ ಕ್ಯಾಂಟೀನ್ ನಿರ್ವಹಣೆಯ ಹೊಣೆ
- ಕ್ಯಾಂಟೀನ್ಗಳ ನಿರ್ವಹಣೆಗೆ ಹೊಸ ಪ್ರಸ್ತಾವನೆ ಸಿದ್ದಪಡಿಸಲು ಸೂಚನೆ
ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ‘ಇಂದಿರಾ ಕ್ಯಾಂಟೀನ್’ ನಾಲ್ಕೈದು ವರ್ಷಗಳ ಬಳಿಕ ಮತ್ತೆ ಮುನ್ನೆಲೆಗೆ ಬಂದಿದ್ದು, ಪ್ರಸ್ತುತ ನಗರದಲ್ಲಿರುವ ಎಲ್ಲ ಕ್ಯಾಂಟೀನ್ಗಳ ಸ್ಥಿತಿಗತಿಯನ್ನು ಪರಿಶೀಲಿಸಿ ಗುರುವಾರದಿಂದ ಎಲ್ಲ ವಲಯ ಆಯುಕ್ತರು, ವಲಯದ ಜಂಟಿ ಆಯುಕ್ತರು, ಅಭಿಯಂತರರು, ಆರೋಗ್ಯಾಧಿಕಾರಿಗಳು ವಲಯವಾರು ವರದಿಯನ್ನು ನೀಡಬೇಕು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚಿಸಿದರು.
ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಸಂಬಂಧಿಸಿದಂತೆ ಬುಧವಾರ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಅಧ್ಯಕ್ಷತೆಯಲ್ಲಿ ಪಾಲಿಕೆಯ ಎಲ್ಲ ವಲಯ ಆಯುಕ್ತರು, ಜಂಟಿ ಆಯುಕ್ತರು, ಆರೋಗ್ಯ ಅಧಿಕಾರಿಗಳ ಜೊತೆ ವರ್ಚುವಲ್ ಸಭೆ ನಡೆಯಿತು.
ಈ ವೇಳೆ ಮಾತನಾಡಿದ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, “ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು ಅಂದಾಜು 175 ಇಂದಿರಾ ಕ್ಯಾಂಟೀನ್ ಇದ್ದು, ಆದರಲ್ಲಿ 163 ಇಂದಿರಾ ಕ್ಯಾಂಟೀನ್ಗಳು ಸದ್ಯ ಚಾಲ್ತಿಯಲ್ಲಿವೆ. ಉಳಿದ 12 ಕ್ಯಾಂಟೀನ್ ಗಳು (6 ಆರ್ ಆರ್ ನಗರ ಹಾಗೂ 3 ದಕ್ಷಿಣ ವಲಯ) ಚಾಲ್ತಿಯಲ್ಲಿಲ್ಲ” ಎಂದು ಮಾಹಿತಿ ನೀಡಿದರು.
“ವಲಯವಾರು ಇಂದಿರಾ ಕ್ಯಾಂಟೀನ್ ನಿರ್ವಹಣೆಯನ್ನು ಸಂಬಂಧಪಟ್ಟ ಆಯಾ ವಲಯ ಆಯುಕ್ತರು ಅಥವಾ ಜಂಟಿ ಆಯುಕ್ತರುಗಳಿಗೆ ನಿರ್ವಹಣೆ ಜವಾಬ್ದಾರಿ ವಹಿಸಲಾಗುವುದು” ಎಂದು ತಿಳಿಸಿದರು.
“ಎಲ್ಲ ವಲಯ ಆಯುಕ್ತರು ವಲಯವಾರು ತಂಡಗಳನ್ನು ರಚಿಸಿ ಘನತ್ಯಾಜ್ಯ ವಿಭಾಗ/ ಪೌರಕಾರ್ಮಿಕರು/ ಇತರೆ ಸಿಬ್ಬಂದಿಗಳ ಮುಖಾಂತರ ಇಂದಿರಾ ಕ್ಯಾಂಟೀನ್ ಸ್ವಚ್ಛತಾ ಕಾರ್ಯ ನಡೆಸಬೇಕು” ಎಂದು ಹೇಳಿದರು.
“ಇಂದಿರಾ ಕ್ಯಾಂಟೀನ್ನಲ್ಲಿ ಆಹಾರ ಗುಣಮಟ್ಟ ಹಾಗೂ ರುಚಿಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಇಂದಿರಾ ಕ್ಯಾಂಟೀನ್, ಬೇಸ್ ಕ್ಯಾಂಟೀನ್ ಸ್ಥಾಪನೆಗೆ ಹಾಗೂ ಆಹಾರ ಪೂರೈಕೆಗೆ ನಾಳೆಯೇ ಇಂದಿರಾ ಕ್ಯಾಂಟೀನ್ ಗಳ ನಿರ್ವಹಣೆಗೆ ಹೊಸ ಪ್ರಸ್ತಾವನೆಯನ್ನು ಸಿದ್ದಪಡಿಸಲು ವಿಶೇಷ ಆಯುಕ್ತ(ಆರೋಗ್ಯ) ತ್ರಿಲೋಕ್ ಚಂದ್ರ ಅವರಿಗೆ ಸೂಚಿಸಲಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಜೂನ್ನಿಂದ್ ಉಬರ್ ಇ ವಿ ಕ್ಯಾಬ್ ಸೇವೆ
“ಹೆಚ್ಚುವರಿಯಾಗಿ ವಾರ್ಡುಗಳ ಅನುಕೂಲಕ್ಕೆ ತಕ್ಕಂತೆ ಇಂದಿರಾ ಕ್ಯಾಂಟೀನ್ ಸ್ಥಾಪಿಸಲು ಹಾಗೂ ಮೊಬೈಲ್ ಕ್ಯಾಂಟೀನ್ ಮರು ಚಾಲನೆಗೆ ವರದಿಯನ್ನು ಎಲ್ಲ ವಲಯ ಆಯುಕ್ತರು ನೀಡಬೇಕು” ಎಂದರು.
ಈ ವರ್ಚುವಲ್ ಸಭೆಯಲ್ಲಿ ಬಿಬಿಎಂಪಿ ಎಲ್ಲ ವಲಯ ಆಯುಕ್ತರು, ವಲಯ ಜಂಟಿ ಆಯುಕ್ತರು, ಮುಖ್ಯ ಆರೋಗ್ಯ ಅಧಿಕಾರಿಗಳು ಹಾಗೂ ಇತರೆ ಸಂಬಂಧಪಟ್ಟ ಅಧಿಕಾರಿಗಳು ಭಾಗವಹಿಸಿದ್ದರು.