ಐತಿಹಾಸಿಕ ಮೆಹಬೂಬ್ ಸುಭಾನಿ ದರ್ಗಾದ ಪ್ರವೇಶ ದ್ವಾರಕ್ಕೆ ಪೊಲೀಸ್ ಅಧಿಕಾರಿಗಳು ಅಡ್ಡಲಾಗಿ ನಿರ್ಮಿಸಿರುವ ತಡೆಗೋಡೆ ತೆರವಿಗೆ ಒತ್ತಾಯಿಸಿ ಸೌಹಾರ್ದ ಸಮಿತಿಯ ಮುಕಂಡರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ರಟಕಲ್ ಗ್ರಾಮ ಪಂಚಾಯತಿ ಎದುರು ಧರಣಿ ಸತ್ಯಾಗ್ರಹ ನಡೆಯುತ್ತಿದೆ. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಶರಣಬಸಪ್ಪ ಮಮ್ಮಶೆಟ್ಟಿ, “ಬಹುತೇಕ ತಲೆಮಾರುಗಳಿಂದ ರಟಕಲ್ ಪೊಲೀಸ್ ಠಾಣೆಯ ಒಳಾಂಗಣದಲ್ಲಿ ಹಜರತ್ ಮೆಹಬೂಬ್ ಸುಭಾನಿ ದರ್ಗಾ ಇದೆ. ಗ್ರಾಮದಲ್ಲಿ ಪೊಲೀಸ್ ಠಾಣೆ ಸ್ಥಾಪನೆಯಾಗುವ ಮೊದಲೇ ಈ ದರ್ಗಾ ಇತ್ತು” ಎಂದು ಹೇಳಿದರು.
“ಗ್ರಾಮದಲ್ಲಿ ಜಾತಿ ಬೇಧ ಮರೆತು ಸರ್ವಧರ್ಮದವರೂ ಈ ದರ್ಗಾಕ್ಕೆ ಬರುತ್ತಾರೆ. ಪ್ರತಿ ಗುರುವಾರ ಮತ್ತು ಅಮವಾಸ್ಯೆ, ಹುಣ್ಣಿಮೆ, ಹಬ್ಬ ಹರಿದಿನಗಳು ಸೇರಿದಂತೆ ಪ್ರತಿದಿನ ಪ್ರಾರ್ಥನೆಗೆ ಗ್ರಾಮದ ಜನರು ದರ್ಗಾಕ್ಕೆ ಬರುತ್ತಾರೆ. ಗ್ರಾಮಸ್ಥರ ವಿರೋಧದ ನಂತರವೂ ರಟಕಲ್ ಠಾಣೆ ಪೊಲೀಸರು ಜನರ ಭಾವನೆಗಳನ್ನು ಲೆಕ್ಕಿಸದೆ ದರ್ಗಾಕ್ಕೆ ಇರುವ ದ್ವಾರದಲ್ಲಿ ತಡೆಗೋಡೆ ನಿರ್ಮಿಸಿದ್ದು, ಸಾರ್ವಜನಿಕರಿಗೆ ಹಾಗೂ ಎಲ್ಲ ಭಕ್ತರಿಗೆ ದರ್ಶನ ಪಡೆಯಲು ಪ್ರವೇಶ ದ್ವಾರ ನಿರ್ಬಂಧಿಸಿ ಸಮಸ್ಯೆ ಮಾಡಿದ್ದಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಅಭಿವೃದ್ಧಿ ಹೆಸರಿನಲ್ಲಿ ಮರಗಳಿಗೆ ಕೊಡಲಿ; ವಿರೋಧ
“ರಟಕಲ್ ಗ್ರಾಮ ಸೌಹಾರ್ದ ಮತ್ತು ಭಾವೈಕ್ಯತೆಯಿಂದ ಕೂಡಿದೆ. ಸೌಹಾರ್ದತೆಗೆ, ಭಾವನೆಗಳಿಗೆ ಧಕ್ಕೆಯಾಗದಂತೆ ದರ್ಗಾ ಪ್ರವೇಶಕ್ಕೆ ಅನುಕೂಲ ಮಾಡಿಕೊಡಬೇಕು. ಪ್ರವೇಶ ದ್ವಾರದಲ್ಲಿ ಕಟ್ಟಿರುವ ತಡೆಗೋಡೆ ತೆರವುಗೊಳ್ಳಿಸಿ, ದರ್ಗಾದ ದರ್ಶನಕ್ಕೆ ಭಕ್ತರಿಗೆ ಸಹಕರಿಸಬೇಕು” ಎಂದು ಮನವಿ ಮಾಡಿದರು.
ರಟಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೌಹಾರ್ದ ಮತ್ತು ಶಾಂತಿ ನೆಲೆಸುವ ನಿಟ್ಟಿನಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸಬೇಕು. ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಸಿಪಿಐ(ಎಂ) ಮುಖಂಡ ಶರಬಸಪ್ಪ ಮಮಶೇಟಿ, ಅಣಕಲ್ ಮುರಗ್ಯಣ ಸೌಕಾರ, ರಸೂಲ್ ಸಾಬ್, ರೇವಣಸಿದ್ದಪ್ಪ, ಶ್ರೀ ಜೇಜಿ ಮುತ್ಯಾ, ಸಿದ್ದಪ್ಪ, ಮಕ್ಬುಲ್ ಸಾಬ ಗೌಂಡಿ, ಈರಣ್ಣ, ಮೊಹ್ಮದ್ ಮಿಯ್ಯಾ ಇಕ್ಬಾಲ್ ಪಟೇಲ್, ಸೌಕತ್ ಅಲಿ ಸೇರಿದಂತೆ ತರರು ಇದ್ದರು.