ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ಶೀಟರ್ ನಿತೀನಕುಮಾರ ಅಲಿಯಾಸ್ ಹಡ್ಡಿ ಪಿಂಟ್ಯಾ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಂಡಿದ್ದು, ಒಂದು ವರ್ಷದ ಅವಧಿಗೆ ಬಳ್ಳಾರಿ ಜಿಲ್ಲೆಯ ಕೌಲಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.
ಕುವೆಂಪು ನಗರದ ನಿವಾಸಿಯಾಗಿರುವ ನಿತೀನಕುಮಾರ ದೇವಿದಾಸ್ ಸೂರ್ಯವಂಶಿ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಜೀವ ಬೆದರಿಕೆ, ಮಾರಣಾಂತಿಕ ಹಲ್ಲೆ, ಸಾರ್ವಜನಿಕ ಶಾಂತಿಭಂಗ ಸೇರಿದಂತೆ ಒಟ್ಟು 13 ಪ್ರಕರಣಗಳು ದಾಖಲಾಗಿವೆ. 2012ರಿಂದ ಈವರೆಗೆ ವಿವಿಧ ಕಾನೂನುಗಳ ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳ ಹಿನ್ನೆಲೆ ಆತನು ರೂಢಿಗತ ಅಪರಾಧಿ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾನೆ.
ಸಾರ್ವಜನಿಕ ಸ್ಥಳಗಳಲ್ಲಿ ಗಲಾಟೆ ನಡೆಸುವುದು, ಅಪಾಯಕಾರಿ ಆಯುಧಗಳನ್ನು ಬಳಸಿಕೊಂಡು ಹಲ್ಲೆ ನಡೆಸುವುದು ಹಾಗೂ ಜನರಲ್ಲಿ ಭಯದ ವಾತಾವರಣ ಸೃಷ್ಟಿಸುವಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪಗಳು ಆತನ ವಿರುದ್ಧ ಇವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಗಡಿಪಾರು ಕ್ರಮ ಕೈಗೊಳ್ಳಲಾಗಿದೆ.
ಸ್ಟೇಷನ್ ಬಜಾರ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಜಿ.ಎಂ. ಪಾಟೀಲ್ ಅವರು ಕರ್ನಾಟಕ ಪೊಲೀಸ್ ಕಾಯ್ದೆ-1963ರ ಕಲಂ 55ರಡಿ ಗಡಿಪಾರು ಕ್ರಮಕ್ಕೆ ಸಂಬಂಧಿಸಿದ ವರದಿಯನ್ನು ಸಲ್ಲಿಸಿದ್ದರು. ಬಳಿಕ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಅವರ ಮಾರ್ಗದರ್ಶನದಲ್ಲಿ ಪ್ರಕರಣದ ಪರಿಶೀಲನೆ ನಡೆಸಲಾಯಿತು.
ಇದನ್ನು ಓದಿದ್ದೀರಾ? ಯಾದಗಿರಿ | ಸಾಲದ ಒತ್ತಡ; ಬೈಲಾಪುರ ತಾಂಡಾದ ವ್ಯಕ್ತಿ ಆತ್ಮಹತ್ಯೆ
ವರದಿ ಹಾಗೂ ದಾಖಲೆಗಳ ಪರಿಶೀಲನೆಯ ನಂತರ ಉಪ ಪೊಲೀಸ್ ಆಯುಕ್ತೆ (ಕಾನೂನು ಮತ್ತು ಸುವ್ಯವಸ್ಥೆ) ಹಾಗೂ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಶಾಲೂ ಐಪಿಎಸ್ ಅವರು, ನಿತೀನಕುಮಾರ ಅಲಿಯಾಸ್ ಹಡ್ಡಿ ಪಿಂಟ್ಯಾನನ್ನು ಒಂದು ವರ್ಷದ ಅವಧಿಗೆ ಬಳ್ಳಾರಿ ಜಿಲ್ಲೆಯ ಕೌಲಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡುವ ಆದೇಶ ಹೊರಡಿಸಿದ್ದಾರೆ.





