- ʼ40 ಪರ್ಸೆಂಟ್ ಕಮಿಷನ್ ಅಂತ್ಯ ಹಾಡುವ ದಿನ ದೂರವಿಲ್ಲʼ
- ʼಬರಲಿದೆ ಕಾಂಗ್ರೆಸ್, ತರಲಿದೆ ಪ್ರಗತಿʼ : ಡಿ ಕೆ ಶಿವಕುಮಾರ್
ʼಬರಲಿದೆ ಕಾಂಗ್ರೆಸ್, ತರಲಿದೆ ಪ್ರಗತಿʼ ಇದು ಕಾಂಗ್ರೆಸ್ ಪಕ್ಷದ ಮೂಲ ಮಂತ್ರ. ರಾಜ್ಯಕ್ಕೆ ಮೇ ತಿಂಗಳಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಈ ಭ್ರಷ್ಟ ಸರ್ಕಾರ ಹೋಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದರು.
ರಾಜ್ಯ ವಿಧಾನಸಭಾ ಚುನಾವನೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
“ಮೇ 10ಕ್ಕೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಬಹಳ ಹಿಂದೆಯೇ ನೀತಿ ಸಂಹಿತೆ ಜಾರಿಗೆ ಬರಬೇಕಿತ್ತು. ಆದರೆ, ಈ ಕೇಂದ್ರ ಮತ್ತು ರಾಜ್ಯ ಸರ್ಕಾರ ಎಷ್ಟು ಸಾಧ್ಯವೋ ಅಷ್ಟು ಅಧಿಕಾರ ದುರುಪಯೋಗ ಮಾಡಿಕೊಂಡಿವೆ. ಈಗಲಾದರೂ ನೀತಿ ಸಂಹಿತೆ ಜಾರಿಗೆ ಬಂತಲ್ಲಾ” ಎಂದರು.
“ಮೇ 10 ಬರೀ ಮತದಾನದ ದಿನವಲ್ಲ. ರಾಜ್ಯದ ಭ್ರಷ್ಟಾಚಾರವನ್ನು ತೊಡೆದು ಹಾಕುವ ದಿನ, 40 ಪರ್ಸೆಂಟ್ ಕಮಿಷನ್ ಅಂತ್ಯ ಹಾಡುವ ದಿನ, ಹೊಸ ನಾಡನ್ನು ಕಟ್ಟವ ದಿನ, ನವ ಕರ್ನಾಟಕಕ್ಕೆ ಒಂದು ಹೊಸ ದಿಕ್ಕನ್ನು ತೋರುವ ದಿನ. ಇಡೀ ದೇಶದ ಜನ ಕರ್ನಾಟಕ ಜನತೆ ಏನು ತೀರ್ಮಾನ ಕೊಡಲಿದ್ದಾರೆ ಎಂದು ಕಾತುರದಿಂದ ಕಾಯುತ್ತಿದ್ದಾರೆ. ಈ ಡಬಲ್ ಎಂಜಿನ್ ಸರ್ಕಾರ ಹೇಗೆ ವಿಫಲವಾಗಿದೆ ಎಂಬುದು ಅಂದು ತಿಳಿಯಲಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕಾಂಗ್ರೆಸ್ ಕಟ್ಟಿಹಾಕಲು ಚುನಾವಣಾ ಕಾರ್ಯಕ್ಕೆ ಐಟಿ ಅಧಿಕಾರಿಗಳ ನೇಮಕ: ಸಿದ್ದರಾಮಯ್ಯ ಆರೋಪ
“ಒಂದೇ ಹಂತದ ಚುನಾವಣೆಯನ್ನು ನಾವು ಸ್ವಾಗತ ಮಾಡುತ್ತೇವೆ. ಚುನಾವಣೆ ಆಯೋಗ ಒಂದಿಷ್ಟು ಹೊಸ ತಿದ್ದುಪಡಿ ತಂದಿದೆ. ಆ ಬಗ್ಗೆ ನಂತರದ ದಿನಗಳಲ್ಲಿ ಮಾತನಾಡುವೆ. ಆಡಳಿತ ಪಕ್ಷಕ್ಕೆ ಯಾರು ತಲೆ ಬಾಗುವುದಿಲ್ಲ ಎಂಬ ಅಚಲ ನಂಬಿಕೆ ನನಗಿದೆ. ರಾಜ್ಯದ ಜನತೆ ಬಿಜೆಪಿಯ ಆಡಳಿತಕ್ಕೆ ಕೊನೆ ಹಾಡಲಿದ್ದಾರೆ” ಎಂದರು.
“ನಾವೇ ಅಧಿಕಾರಕ್ಕೆ ಬರಲಿದ್ದೇವೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರಲ್ಲ ಎಂದು ಪತ್ರಕರ್ತರು ಪ್ರಶ್ನಿಸಿದಾಗ, “ಅವರಿಗೆ ಗೆಲ್ಲುವ ಭರವಸೆ ಇದ್ದಿದ್ದರೆ ಮೋದಿ ಮತ್ತು ಅಮಿತ್ ಶಾ ಯಾಕೆ ವಾರಕ್ಕೊಮ್ಮೆ ಬರುತ್ತಿದ್ದರು? ಸೋಲುವ ಹತಾಶೆ ಬಿಜೆಪಿಯವರ ಮುಖದಲ್ಲೇ ಎದ್ದು ಕಾಣುತ್ತಿದೆ” ಎಂದು ಕುಟುಕಿದರು.
“ಗುಜರಾತ್ ನಲ್ಲಿ ಬಳಸಿದ ಇವಿಎಂ ಮತ್ತು ವಿವಿ ಪ್ಯಾಟ್ ಗಳನ್ನು ರಾಜ್ಯಕ್ಕೆ ತರಬೇಡಿ ಎಂದು ನಾವು ಚುನಾವಣೆ ಆಯೋಗಕ್ಕೆ ಮನವಿ ಸಲ್ಲಿಸಿದ್ದೆವು. ಕಾರಣ ಅವುಗಳಿಗೆ ಪೋಗ್ರಾಮಿಂಗ್ ಮಾಡಿದ್ದಾರೆ ಎನ್ನುವ ಆತಂಕ ಇದೆ. ಹೊಸ ಇವಿಎಂ ಮತ್ತು ವಿವಿ ಪ್ಯಾಟ್ ಗಳನ್ನು ತಂದಿರುವುದಾಗಿ ಚುನಾವಣೆ ಆಯೋಗ ಹೇಳಿದೆ. ಹಾಗೆಯೇ 50 ಜನರಿಂದ ಅವುಗಳನ್ನು ಟ್ರಯಲ್ ಮಾಡುತ್ತಾರೆ ಎಂದು ನಮಗೆ ತಿಳಿಸಿದೆ. ನಾವು ಟ್ರಯಲ್ ಮಾಡಿ, ಆ ಬಗ್ಗೆ ನಂತರ ಮಾತನಾಡುತ್ತೇನೆ” ಎಂದು ಹೇಳಿದರು.