ಆಲಮಟ್ಟಿ ಜಲಾಶಯದ ನೀರಿನ ಮಟ್ಟವನ್ನು ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್ ನೇತೃತ್ವದ ಎರಡನೇ ಕೃಷ್ಣಾ ನ್ಯಾಯಾಧಿಕರಣದ ತೀರ್ಪಿನಂತೆ 524.256 ಮೀಟರ್ಗೆ ಹೆಚ್ಚಿಸಿ, ಗೇಟ್ಗಳನ್ನು ಅಳವಡಿಸಲು ಅಗತ್ಯ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಯಿತು.
ವಿಜಯಪುರ ನಗರದ ಡಾ. ಬಿ ಆರ್ ಅಂಬೇಡ್ಕರ್ ಸಭಾಭವನದಲ್ಲಿ ರೈತಪರ, ದಲಿತಪರ ಹಾಗೂ ಪಕ್ಷಾತೀತವಾಗಿ ಎಲ್ಲ ರಾಜಕೀಯ ಮುಖಂಡರ, ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ, ಮುಂದಿನ ಹೋರಾಟಕ್ಕಾಗಿ ಕೃಷ್ಣ ಕೊಳ್ಳ ಜಲ ರಕ್ಷಣಾ ಹೋರಾಟ ಸಮಿತಿ ರಚಿಸಲಾಯಿತು.
ಸಭೆಯ ನಂತರ ಸಂಸದ ರಮೇಶ ಜಿಗಜಿಣಗಿ ಅವರ ಕಚೇರಿಗೆ ತೆರಳಿ, ಪ್ರಧಾನಮಂತ್ರಿ ಬಳಿ ನಿಯೋಗ ತೆಗೆದುಕೊಂಡು ಹೋಗಲು ಕೇಂದ್ರ ಸಚಿವ ಜೋಶಿಯವರನ್ನು ಭೇಟಿಯಾಗಿ ದಿನಾಂಕ ನಿಗದಿ ಪಡಿಸಲು ಸಮಿತಿ ಮುಖಂಡರು ಮನವಿ ಮಾಡಿಕೊಂಡರು.
ಮನವಿಗೆ ಸ್ಪಂದಿಸಿದ ಸಂಸದ ರಮೇಶ ಜಿಗಜಣಗಿ, “ನೀರಾವರಿ ವಿಷಯದಲ್ಲಿ ಯಾವುದೇ ಪಕ್ಷ ರಾಜಕಾರಣ ಬೇಡ. ಬಾಗಲಕೋಟೆ ಸಂಸದ ಪಿಸಿ ಗದ್ದಿಗೌಡರ ಸೇರದಂತೆ ಇನ್ನುಳಿದ ಸಂಸದರನ್ನು ಕರೆದುಕೊಂಡು ಪ್ರಹಲ್ಲಾದ ಜೋಶಿ ಭೇಟಿ ನಂತರ ದಿನಾಂಕ ನಿಗದಿ ಮಾಡಲಾಗುತ್ತದೆ” ಎಂದು ಹೇಳಿದರು.
ನೀರಾವರಿ ತಜ್ಞ ಡಾ. ರಾಜೇಂದ್ರ ಪೊದ್ದರ ಮಾತನಾಡಿ, “ಅವಳಿ ಜಿಲ್ಲೆಯ ರೈತರ ಜಮೀನುಗಳಿಗೆ ಸಮಗ್ರ ನೀರಾವರಿ ಆಗಲು 524.25ಕ್ಕೆ ನೀರು ನಿಲ್ಲಿಸಬೇಕೆಂದರೆ ಮೊದಲು ಕೇಂದ್ರ ಸರ್ಕಾರ ಅಧಿ ಸೂಚನೆ ಹೊರಡಿಸಬೇಕು. ತದನಂತರ ಮೂರನೇ ಹಂತದ ಯೋಜನೆಗೆ ತಗಲುವ ಹಣವನ್ನು ರಾಜ್ಯ ಸರ್ಕಾರ ಬರಿಸಬೇಕು” ಎಂದರು.
ಮಾಜಿ ಶಾಸಕ ಶ್ರೀಕಾಂತ ಕುಲಕರಣಿ ಮಾತನಾಡಿ, “ಉತ್ತರ ಕರ್ನಾಟಕ 14 ಸಂಸದರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು” ಎಂದಿದ್ದಾರೆ.
ಹೋರಾಟ ಸಮಿತಿಯ ಪ್ರಮುಖ ಅರವಿಂದ ಕುಲಕರಣಿ, ಬಿ ಭಗವಾನ್ ರೆಡ್ಡಿ, ನಿವೃತ್ತ ನ್ಯಾಯಾಧೀಶ ಬಿ ಸಿ ಬಿರಾದಾರ, ಸುರೇಶ್ ಬಿಜಾಪುರ್, ಚೆನ್ನು ಕಟ್ಟಿಮನಿ,ಪಂಚಪ್ಪ ಕಲಬುರಗಿ, ವಿ ಎಸ್ ಪಾಟೀಲ, ಮಲ್ಲಿಕಾರ್ಜುನ ಯಂಡಗೆರಿ, ಭರತ್ ಎಚ್ ಟಿ, ಭೀಮಶಿ ಕೊಕೆರೆ, ಚಾಣಕ್ಯ ಕರಿಯರ್ ಅಕಾಡೆಮಿ ಅಧ್ಯಕ್ಷ ಎಂ ಎನ್ ಬಿರಾದಾರ, ಅಣ್ಣಾರಾಯ ಇಳಗೆರಾ, ಮಲ್ಲಿಕಾರ್ಜುನ ಎಚ್ ಟಿ, ಉಮೇಶ ವಾಲಿಕಾರ, ರಾಮನಗೌಡ ಬಿರಾದಾರ, ಲಕ್ಷ್ಮಣ ಹಂದ್ರಾಳ, ಮಲ್ಲನಗೌಡ ಡೋಮನಾಳ, ಗುರುನಾಥ ಬಗಲಿ, ಭೋಗೇಶ ಸೊಲ್ಲಾಪುರ, ಅಬ್ದುಲ್ ಖಧಿರ್, ಮಲ್ಲಿಕಾರ್ಜುನ ಬಟಗಿ, ಲಲಿತಾ ಬಿಜ್ಜರಗಿ, ನೀಲಾಂಬಿಕೆ ಬಿರಾದಾರ, ಭೀಮರಾಯ ಪೂಜಾರಿ, ಶೆಟ್ಟಪ್ಪ ಲಮಾಣಿ, ಗುರುಲಿಂಗಪ್ಪ ಪಡಸಲಗಿ, ಹೊನಕೆರೆಪ್ಪ ತೆಲಗಿ ಇದ್ದರು.




