ನಮ್ಮನ್ನಾಳುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಾಲ್ಕು ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ಮತ್ತೊಮ್ಮೆ ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುತ್ತಿವೆ. ಇದಕ್ಕೆ ಕಾರ್ಮಿಕ ವರ್ಗ ಬಲಿಯಾಗದೆ ಪ್ರಜ್ಞಾಪೂರ್ವಕವಾಗಿ ಹೋರಾಟಕ್ಕೆ ಇಳಿಯುವ ಮೂಲಕ ಶೊಷಣೆ ರಹಿತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ವೀರೇಶ್ ಎನ್ ಕರೆಕೊಟ್ಟರು.
ವಿಜಯಪುರ ನಗರದಲ್ಲಿ 140ನೇ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಅಂಗವಾಗಿ ಎಐಯುಟಿಯುಸಿ ಕಾರ್ಮಿಕ ಸಂಘಟನೆ ಹಮ್ಮಿಕೊಂಡ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಲಂಡನ್ನ ʼಹೇʼ ಮಾರುಕಟ್ಟೆಯಲ್ಲಿ ಕಾರ್ಮಿಕರ ರಕ್ತದ ಕೋಡಿ ಹರೆಯಿತು. ತರುವಾಯ ನಡೆದ ಜಾಗತಿಕ ಕಾರ್ಮಿಕ ಚಳವಳಿಯ ಪರಿಣಾಮ ಅಂತಾರಾಷ್ಟ್ರೀಯ ಕಾರ್ಮಿಕ ದಿನದ ಆಚರಣೆ ರೂಢಿಗೆ ಬಂದಿದೆ. ಕಾರ್ಮಿಕರು ಸುಧೀರ್ಘ ತ್ಯಾಗ ಬಲಿದಾನದಿಂದ ಪಡೆದುಕೊಂಡ ಕಾರ್ಮಿಕರ ಹಕ್ಕುಗಳನ್ನು ಇಂದಿನ ಸರ್ಕಾರಗಳು, ಬಂಡವಾಳಶಾಹಿಗಳು ಕಸಿದುಕೊಳ್ಳುತ್ತಿದ್ದಾರೆ. ಕಾರ್ಮಿಕರ ಶ್ರಮ ಶಕ್ತಿಯೇ ಬೆಲೆಕಟ್ಟಲಾಗದ ಸಂಪತ್ತು. ಈ ಸಂಪತ್ತನ್ನು ಬಂಡವಾಳದಾರರು ಕಸಿದು ತಮ್ಮ ಆದಾಯವನ್ನು ಸಾವಿರಪಟ್ಟು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದರ ವಿರುದ್ದ ಕಾರ್ಮಿಕರು ಎಚ್ಚೆತ್ತುಕೊಳ್ಳಬೇಕು. ತಮ್ಮ ಹಕ್ಕುಗಳಿಗಾಗಿ, ಶೋಷಣೆ ಇಲ್ಲದ ಸಮಾಜವನ್ನು ನಿರ್ಮಾಣ ಮಾಡುವ ಸಲುವಾಗಿ ಹೋರಾಟಕ್ಕೆ ಮುಂದಾಗಬೇಕು” ಎಂದು ಹೇಳಿದರು.

“ಕಾರ್ಲ್ ಮಾರ್ಕ್ಸ್, ಏಂಗೆಲ್ಸ್, ಲೆನಿನ್ ಮತ್ತು ಸ್ಟಾಲಿನ್ ಇವರೆಲ್ಲರೂ ಜಗತ್ತಿನ ಕಾರ್ಮಿಕ ಚಳವಳಿಯನ್ನು ನಿರ್ದೇಶಿಸಿದರು. ಆದುದರಿಂದಾಗಿಯೇ ಇಂದು ಈ ಮಹಾಶಯರುಗಳು ಇಡೀ ಜಗತ್ತಿನಾದ್ಯಂತ ಗೌರವಕ್ಕೆ, ಕೃತಜ್ಞತೆಗೆ ಪಾತ್ರರಾಗಿದ್ದಾರೆ. ಆಳುವ ಸರ್ಕಾರಗಳು ಬಂಡವಾಳಗಾರರ ಸೇವೆಯಲ್ಲಿ ತೊಡಗಿವೆ ಹಾಗಾಗಿ, ನಿರುದ್ಯೋಗ, ಬಡತನ, ಜಾತಿಪದ್ದತಿ, ಹಣದುಬ್ಬರದಂತಹ ಸಮಸ್ಯೆಗಳು ಬಗೆಹರಿಯದೆ ಮತ್ತಷ್ಟು ಉಲ್ಬಣವಾಗುತ್ತಿವೆ. ಉತ್ತಮ ಆರೋಗ್ಯ, ಶಿಕ್ಷಣ ಜನರಿಗೆ ನಿಲುಕುತ್ತಿಲ್ಲ. ಜಗತ್ತಿಗೆ ಯುದ್ದದ ಕಾರ್ಮೋಡ ಕವಿದಿದೆ. ಇಂತಹ ಸಂದರ್ಭದಲ್ಲಿ ಕಾರ್ಮಿಕ ವರ್ಗ ಧರ್ಮ, ಜಾತಿ, ಭಾಷೆ, ಕೋಮುವಾದಿ ವಿಷಯಗಳಲ್ಲಿ ಒಡೆದುಹೋಗದೆ ಐಕ್ಯಗೊಂಡು ಹೋರಾಟದ ಪಣತೊಟ್ಟು ಸಮಸಮಾಜದ ಕ್ರಾಂತಿಗೆ ಸಿದ್ದತೆ ಮಾಡಿಕೊಳ್ಳಬೇಕು. ಕಾರ್ಮಿಕ ಹೋರಾಟಗಳು ಮಾರ್ಕ್ಸ್, ಸ್ಟಾಲಿನ್, ಲೆನಿನ್, ಏಂಗೆಲ್ಸ್ರ ಜೀವನ ಮತ್ತು ವಿಚಾರಗಳಿಂದ ಪ್ರೇರಿತವಾಗಬೇಕು” ಎಂದರು.
ಇದನ್ನೂ ಓದಿ > ವಿಜಯಪುರ | ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾವಂತ ಮಹಿಳೆಯರ ಪಾತ್ರ ದೊಡ್ಡದು: ಕುಲಪತಿ ಉಜ್ವಲ ಚಕ್ರದೇವ್
“ಜಾಗತೀಕರಣ, ಖಾಸಗೀಕರಣ, ಉದಾರೀಕರಣ ನೀತಿಗಳನ್ನು ಜಾರಿಗೊಳಿಸಿದ ಅಂದಿನ ಕಾಂಗ್ರೆಸ್ ಸರ್ಕಾರಕ್ಕೂ, ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಜಾರಿಗೊಳಿಸುತ್ತಿರುವ ಈಗಿನ ಬಿಜೆಪಿ ಸರ್ಕಾರಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಸರ್ಕಾರಗಳು ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಧಾರೆ ಎರೆಯುವ ಕೆಲಸದಲ್ಲಿ ತೊಡಗಿವೆ. ಇದನ್ನರಿತು ದೇಶದ ದುಡಿಯುವ ವರ್ಗ ಧೀರೋಧಾತ್ತ ಹೋರಾಟಕ್ಕೆ ಮುಂದಾಗಬೇಕು” ಎಂದು ಕರೆಕೊಟ್ಟರು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಉಪಾಧ್ಯಕ್ಷೆ ಕಾಶಿಬಾಯಿ ಜನಗೊಂಡ ವಹಿಸಿದ್ದರು. ಜಿಲ್ಲಾ ಮುಖಂಡರಾದ ಮಹಾದೇವಿ ಧರ್ಮಶೆಟ್ಟಿ ಪ್ರಾಸ್ತವಿಕ ನುಡಿಗಳನ್ನಾಡಿದರು. ಕಾರ್ಮಿಕ ಮುಖಂಡರುಗಳಾದ ಶಶಿಕಲಾ ಮ್ಯಾಗೇರಿ, ಸುನಂದಾ ಕ್ಯಾತಣ್ಣವರ, ಶಿವಾನಂದ, ರಶ್ಮೀಗುತ್ತೇದಾರ ಸೇರಿದಂತೆ ಇತರರು ಇದ್ದರು.




