ದೊಡ್ಡ ಕುಟುಂಬವೊಂದನ್ನು ಹೊಂದಬೇಕೆಂಬ ಆಸೆಯಿಂದ ಐವಿಎಫ್ (ಇನ್-ವಿಟ್ರೋ ಫರ್ಟಿಲೈಸೇಶನ್) ತಂತ್ರಜ್ಞಾನದ ಮೊರೆ ಹೋಗಿದ್ದ ದೆಹಲಿಯ ದಂಪತಿಗಳು ಈಗ ಆಸ್ಪತ್ರೆ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದಾರೆ. ‘ತಾವು ಹೆತ್ತ ಮಕ್ಕಳು ತಮಗೆ ಹುಟ್ಟಿದವರೇ ಅಲ್ಲ. ಆಸ್ಪತ್ರೆಯ ವಂಚನೆಯಿಂದಾಗಿ ಯಾರದ್ದೋ ಮಕ್ಕಳನ್ನು ನಾವು ಹೆತ್ತು, ಬೆಳೆಸುತ್ತಿದ್ದೇವೆ’ ಎಂದು ದಂಪತಿಗಳು ಆರೋಪಿಸಿದ್ದಾರೆ. ದಂಪತಿಗಳ ವಾದ ಆಲಿಸಿರುವ ನ್ಯಾಯಾಲಯವು ಆಸ್ಪತ್ರೆ ವಿರುದ್ಧ ಎಫ್ಐಆರ್ ದಾಖಲಿಸಿ, ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದೆ.
ದೆಹಲಿಯ ನಿವಾಸಿಗಳಾದ ರಾಹುಲ್ ರಾಥೋಡ್ (41) ಮತ್ತು ಮೀನು ರಾಥೋಡ್ (39) ದಂಪತಿಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮತ್ತಷ್ಟು ಮಕ್ಕಳನ್ನು ಹೊಂದಬೇಕೆಂಬ ಆಸೆ ಅವರಿಗಿತ್ತು. ಆದರೆ, ತಮಗೆ ವಯಸ್ಸು 30 ದಾಟಿದ್ದ ಕಾರಣ 2024ರ ಕೊನೆಯಲ್ಲಿ ಅವರು ಐವಿಎಫ್ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದರು. ಪರಿಚಿತ ವೈದ್ಯರೊಬ್ಬರ ಸಲಹೆಯ ಮೇರೆಗೆ ದೆಹಲಿಯ ಗ್ರೇಟರ್ ಕೈಲಾಶ್ನಲ್ಲಿರುವ ‘ಎಸ್ಸಿಐ ಐವಿಎಫ್ ಆಸ್ಪತ್ರೆ’ಯನ್ನು ಸಂಪರ್ಕಿಸಿದ್ದರು.
2025ರ ಮೇ ತಿಂಗಳಲ್ಲಿ ಆಸ್ಪತ್ರೆಯ ವೈದ್ಯಕೀಯ ತಂಡವು ದಂಪತಿಯ ಸ್ವಂತ ಅಂಡಾಣು ಮತ್ತು ವೀರ್ಯಾಣು ಬಳಸಿ 5 ಆರೋಗ್ಯಕರ ಭ್ರೂಣಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿತ್ತು. ಅದರಲ್ಲಿ, 3 ಭ್ರೂಣಗಳನ್ನು ಮೀನು ಅವರ ಗರ್ಭಕೋಶಕ್ಕೆ ವರ್ಗಾಯಿಸಿತ್ತು. ಇದರ ಫಲವಾಗಿ ಈ ವರ್ಷದ ಜನವರಿ 5ರಂದು ಮೀನು ಅವರು ದ್ವಾರಕಾದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಇಬ್ಬರು ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು.
ಮಕ್ಕಳು ಹುಟ್ಟಿದ ಸಂಭ್ರಮದಲ್ಲಿದ್ದ ದಂಪತಿಗೆ ಕೆಲವೇ ದಿನಗಳಲ್ಲಿ ಅನುಮಾನ ಚಿಗುರೊಡೆದಿತ್ತು. ಆ ಇಬ್ಬರೂ ಮಕ್ಕಳಿಗೆ ತಂದೆ ರಾಹುಲ್ ಅಥವಾ ತಾಯಿ ಮೀನು ಅವರ ಕಿಂಚಿತ್ತೂ ಹೋಲಿಕೆ ಇರಲಿಲ್ಲ. ಅನುಮಾನಗೊಂಡ ರಾಹುಲ್ ಆಸ್ಪತ್ರೆಯಲ್ಲೇ ಡಿಎನ್ಎ ಪರೀಕ್ಷೆ ನಡೆಸುವಂತೆ ಕೇಳಿದ್ದಾರೆ. ಆದರೆ, ಆಸ್ಪತ್ರೆ ಸಿಬ್ಬಂದಿ ಡಿಎನ್ಎ ಪರೀಕ್ಷೆಗೆ ನಿರಾಕರಿಸಿದ್ದಾರೆ.
ಬಳಿಕ, ದಂಪತಿಗಳು ಸ್ವತಂತ್ರವಾಗಿ ಎರಡು ಬೇರೆ ಬೇರೆ ಲ್ಯಾಬ್ಗಳಿಗೆ ಮಕ್ಕಳ ರಕ್ತದ ಮಾದರಿಯನ್ನು ಡಿಎನ್ಎ ಪರೀಕ್ಷೆಗೆ ಕಳುಹಿಸಿದ್ದಾರೆ. ಆ ಡಿಎನ್ಎ ವರದಿಯು ದಂಪತಿಗೆ ಮತ್ತಷ್ಟು ಆಘಾತ ನೀಡಿದೆ.
ವರದಿ ಪ್ರಕಾರ, “ಆ ಇಬ್ಬರು ಅವಳಿ ಹೆಣ್ಣು ಮಕ್ಕಳು ರಾಹುಲ್ ಅಥವಾ ಮೀನು ಇಬ್ಬರಿಗೂ ಜೈವಿಕವಾಗಿ (Biologically) ಹುಟ್ಟಿದವರಲ್ಲ. ಮಾತ್ರವಲ್ಲ, ಆಶ್ಚರ್ಯಕರವಾಗಿ, ಆ ಇಬ್ಬರು ಮಕ್ಕಳು ಒಬ್ಬರಿಗೊಬ್ಬರು ಸೋದರಿಯರೂ ಅಲ್ಲ! ಅವರು ಇಬ್ಬರು ಬೇರೆ ಬೇರೆ ಅಪರಿಚಿತ ದಾನಿಗಳ ಭ್ರೂಣಗಳಿಂದ ಜನಿಸಿದ ಮಕ್ಕಳು” ಎಂಬುದು ಕಂಡುಬಂದಿದೆ.
ಬಳಿಕ, ಆಸ್ಪತ್ರೆ ವಿರುದ್ಧ ದಂಪತಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಆದಾಗ್ಯೂ, ದಂಪತಿಗಳ ಆರೋಪವನ್ನು ನಿರಾಕರಿಸಿದ್ದ ಆಸ್ಪತ್ರೆ, “ದಂಪತಿಗಳ ಸ್ವಂತ ಜೀವಕೋಶಗಳು ಭ್ರೂಣ ಸೃಷ್ಟಿಸಲು ಯೋಗ್ಯವಾಗಿರಲಿಲ್ಲ. ಹಾಗಾಗಿ ಅವರ ಒಪ್ಪಿಗೆ ಪಡೆದೇ ಅಪರಿಚಿತ ದಾನಿಗಳ ಭ್ರೂಣ ಬಳಸಲಾಗಿದೆ ಮತ್ತು ಅದಕ್ಕೆ ದಂಪತಿಗಳು ಸಹಿ ಹಾಕಿದ್ದಾರೆ” ಎಂದು ಸಮರ್ಥಿಸಿಕೊಂಡಿದೆ.
ಆಸ್ಪತ್ರೆಯ ವಾದವನ್ನು ತಾಯಿ ಮೀನು ತಿರಸ್ಕರಿಸಿದ್ದಾರೆ. “ನನಗೆ ನಾಲ್ಕು ತಿಂಗಳು ಸತತವಾಗಿ ಇಂಜೆಕ್ಷನ್ಗಳನ್ನು ನೀಡಲಾಗಿತ್ತು. ಆ ಕಂದಮ್ಮಗಳನ್ನು 9 ತಿಂಗಳು ನನ್ನ ಗರ್ಭದಲ್ಲಿ ಹೊತ್ತಿದ್ದೇನೆ. ಆಸ್ಪತ್ರೆ ತೋರಿಸುತ್ತಿರುವ ಒಪ್ಪಿಗೆ ಪತ್ರದ ಸಮಯವನ್ನು ಗಮನಿಸಿದರೆ, ನಾನು ಆಪರೇಷನ್ ಥಿಯೇಟರ್ನಲ್ಲಿ ಅರಿವಳಿಕೆ (ಅನಸ್ತೇಷಿಯಾ) ಪ್ರಭಾವದಿಂದ, ಪ್ರಜ್ಞೆ ತಪ್ಪಿದ್ದಾಗ ನನ್ನ ಸಹಿ ಫೋರ್ಜರಿ ಮಾಡಿ ನಕಲಿ ದಾಖಲೆ ಸೃಷ್ಟಿಸಲಾಗಿದೆ” ಎಂದು ಕಣ್ಣೀರಿಟ್ಟಿದ್ದಾರೆ. ರಾಹುಲ್ ಕೂಡ, “ಭಾರತದ ‘ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನ (ART) ಕಾಯ್ದೆ’ ಪ್ರಕಾರ ಈ ಒಪ್ಪಿಗೆ ಪತ್ರ ನೋಟರಿ ಕೂಡ ಆಗಿಲ್ಲ, ಇದು ಸಂಪೂರ್ಣ ಕಾನೂನು ಬಾಹಿರ” ಎಂದು ವಾದಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ರಾಮಮಂದಿರ ದೇಣಿಗೆ ದುರುಪಯೋಗ: ಬಿಜೆಪಿಯ ಬ್ರಿಜ್ ಭೂಷಣ್ ಆರೋಪಗಳ ಸುತ್ತ
ದಂಪತಿಗಳ ವಾದ ಮತ್ತು ಪ್ರಕರಣದ ಗಂಭೀರತೆ ಅರಿತ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದೇವಂಶಿ ಜನ್ಮೇಜಾ ಮತ್ತು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಮೊಹಮ್ಮದ್ ಎಹ್ತೇಶಾಮ್ ಅವರು, “ಇದು ಕೇವಲ ದಾಖಲೆಗಳ ವಂಚನೆಯಷ್ಟೇ ಅಲ್ಲ. ಇದರ ಹಿಂದೆ ಮಕ್ಕಳ ಕಳ್ಳಸಾಗಣೆ ಮತ್ತು ಅಪಹರಣದ ದೊಡ್ಡ ಸಂಚು ಅಡಗಿರುವ ಸಾಧ್ಯತೆಯಿದೆ. ದಂಪತಿಗಳ ನಿಜವಾದ ಮಕ್ಕಳನ್ನು ಅಪಹರಿಸಿ ಬೇರೆ ಕಡೆ ಸಾಗಿಸಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
“ತಕ್ಷಣವೇ ಎಫ್ಐಆರ್ ದಾಖಲಿಸಬೇಕು. ಡಿಸಿಪಿ ಮಟ್ಟದ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸಬೇಕು. ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿ, ಲ್ಯಾಬ್ ದಾಖಲೆಗಳು ಹಾಗೂ ಭ್ರೂಣ ವರ್ಗಾವಣೆ ಶೀಟ್ಗಳನ್ನು ವಶಪಡಿಸಿಕೊಂಡು ಹದಿನೈದು ದಿನಕ್ಕೊಮ್ಮೆ ತನಿಖಾ ವರದಿ ಸಲ್ಲಿಸಬೇಕು” ಎಂದು ದೆಹಲಿ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.
ಆಸ್ಪತ್ರೆ ವಿರುದ್ಧ ಕಿಡಿಕಾರಿರುವ ರಾಹುಲ್, “ಕೇವಲ ಹಣದ ಆಸೆಗಾಗಿ ಆಸ್ಪತ್ರೆಗಳು ಇಷ್ಟು ನೀಚ ಮಟ್ಟಕ್ಕೆ ಇಳಿಯಬಾರದು, ಮಕ್ಕಳ ವಿಷಯದಲ್ಲಿ ವ್ಯಾಪಾರ ಮಾಡಬೇಡಿ” ಎಂದಿದ್ದಾರೆ.
“ಈ ಮಕ್ಕಳು ತಮ್ಮ ರಕ್ತವಲ್ಲದಿದ್ದರೂ, ಅವರನ್ನು ನಾವು ಹೆತ್ತಿದ್ದೇವೆ. ಅವರ ನಿಜವಾದ ಪೋಷಕರು ಹುಡುಕಿಕೊಂಡು ಬರುವವರೆಗೂ ಇವರಿಬ್ಬರನ್ನೂ ನಾವೇ ಸಾಕುತ್ತೇವೆ. ಅವರನ್ನು ಧೈರ್ಯವಂತರನ್ನಾಗಿ ಬೆಳೆಸುತ್ತೇವೆ” ಎಂದು ರಾಹುಲ್ ಮತ್ತು ಮೀನು ಹೇಳಿದ್ದಾರೆ.



