ಜಾರ್ಖಂಡ್ನಲ್ಲಿ ಜೆಎಂಎಂ ನೇತೃತ್ವದ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್, ಗುರುವಾರ ರಾಂಚಿಯಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಬೆಂಬಲ ಘೋಷಿಸಿದೆ. ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸುವುದು ನಮ್ಮ ಪ್ರಮುಖ ಆದ್ಯತೆ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ. ಈ ಸಂಬಂಧ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಭೇಟಿ ಮಾಡಿ ಪತ್ರ ನೀಡಲಾಗಿದೆ ಎಂದು ಜಾರ್ಖಂಡ್ನ ಉಸ್ತುವಾರಿ ಕೆ. ರಾಜು ಹೇಳಿದ್ದಾರೆ. ಇವೆಲ್ಲವುದರ ನಡುವೆ ಈಗಾಗಲೇ ಕೊಂಚ ಬಿಗಡಾಯಿಸುತ್ತಿರುವ ಜೆಎಂಎಂ-ಕಾಂಗ್ರೆಸ್ ಮೈತ್ರಿಕೂಟದ ನಂಟು ಇನ್ನಷ್ಟೂ ಬಿರುಕು ಕಾಣುತ್ತಾ ಎಂಬ ಪ್ರಶ್ನೆಗಳು ಎದ್ದಿವೆ.
ಜಾರ್ಖಂಡ್ನಲ್ಲಿ ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಐತಿಹಾಸಿಕ ಜೆನ್-ಝೀ ಪ್ರತಿಭಟನೆಗೆ ಬೆಂಬಲ ನೀಡಿದ್ದ ಕಾಂಗ್ರೆಸ್ ತನ್ನ ಮೈತ್ರಿ ಸರ್ಕಾರವಿರುವೆಡೆ ವಿದ್ಯಾರ್ಥಿಗಳ ಪರವಾಗಿ ನಿಲ್ಲದಿದ್ದರೆ ಹೇಗೆ? ಈ ಬೆಳವಣಿಗೆಯು ಕಾಂಗ್ರೆಸ್ ಅನ್ನು ರಾಜಕೀಯವಾಗಿ ಇಕ್ಕಟ್ಟಿಗೆ ಸಿಲುಕಿಸಿತ್ತು. ಆದರೆ ಕೊನೆಗೂ ವಿದ್ಯಾರ್ಥಿಗಳ ಪರವಾಗಿಯೇ ನಿಲ್ಲುವ ನಿರ್ಧಾರಕ್ಕೆ ಬದ್ಧವಾಗಿರುವ ಕಾಂಗ್ರೆಸ್ ರಾಂಚಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಬೆಂಬಲ ಘೋಷಿಸಿದೆ.
ಇದನ್ನೂ ಓದಿ: ಜಾರ್ಖಂಡ್ನಲ್ಲಿ ತೀವ್ರಗೊಂಡ ಯುವ ಪ್ರತಿಭಟನೆ; ಇಕ್ಕಟ್ಟಿನಲ್ಲಿ ಜೆಎಂಎಂ-ಕಾಂಗ್ರೆಸ್!
ಈ ಬಗ್ಗೆ ಜಾರ್ಖಂಡ್ನ ಕಾಂಗ್ರೆಸ್ ಉಸ್ತುವಾರಿ ಕೆ. ರಾಜು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. “ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸಲು ಮತ್ತು ಪರಿಹಾರಗಳನ್ನು ಶಿಫಾರಸು ಮಾಡಲು ಸಚಿವರ ಸಮಿತಿಯನ್ನು ರಚಿಸಿದ್ದಕ್ಕಾಗಿ ಸಿಎಂ ಅವರಿಗೆ ಧನ್ಯವಾದ ಅರ್ಪಿಸಿದ್ದೇವೆ” ಎಂದೂ ತಿಳಿಸಿದ್ದಾರೆ. ಹಾಗೆಯೇ ರಾಂಚಿಯಲ್ಲಿ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗೆ ಕಾಂಗ್ರೆಸ್ ಬೆಂಬಲವಾಗಿ ನಿಂತಿದೆ ಎಂದು ಪ್ರತಿಪಾದಿಸಿದ್ದಾರೆ.
ಕಳೆದ ತಿಂಗಳು ಜಾರ್ಖಂಡ್ ರಾಜ್ಯಸಭೆ ಚುನಾವಣೆ ನಡೆದಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಎಂಎಂ ನಡುವೆ ಕೊಂಚ ಭಿನ್ನಾಭಿಪ್ರಾಯ ಆರಂಭವಾಗಿದೆ. ಜೆಎಂಎಂ ಸ್ಪರ್ಧಿಸಬೇಕು ಎಂದು ಹೇಳಿದ್ದ ಸ್ಥಾನದಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದೇ ಈ ಭಿನ್ನಾಭಿಪ್ರಾಯಕ್ಕೆ ಕಾರಣ. ಉಭಯ ಪಕ್ಷಗಳ ಮೈತ್ರಿ ಗೊಂದಲದಿಂದಾಗಿ ಜೆಎಂಎಂನ ಕೆಲವು ಶಾಸಕರು ಅಡ್ಡಮತದಾನ ಮಾಡಿ ಕಾಂಗ್ರೆಸ್ ಸೋಲು ಕಂಡಿತು. ಸುಲಭವಾಗಿ ಗೆಲ್ಲಬಹುದಾಗಿದ್ದ ಎರಡೂ ಸ್ಥಾನಗಳನ್ನೂ ಕಳೆದುಕೊಂಡಿತು. ಈ ಅಸಮಾಧಾನವು ಇನ್ನೂ ಕಾದಕೆಂಡದಂತಿದೆ. ಇದೀಗ ಕಾಂಗ್ರೆಸ್ ಬಹಿರಂಗವಾಗಿ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿರುವುದು ಮೈತ್ರಿಯಲ್ಲಿ ಇನ್ನಷ್ಟೂ ಬಿರುಕು ತರುತ್ತಾ ಅಥವಾ ಕಾಂಗ್ರೆಸ್ ಮಾತುಕತೆ ಮೂಲಕ ನಿಲುವನ್ನೂ ಸ್ಪಷ್ಟವಾಗಿ ತಿಳಿಸುವಲ್ಲಿ ಸಫಲವಾಗುತ್ತಾ ಕಾದುನೋಡಬೇಕಿದೆ.




