ಅಯೋಧ್ಯೆಯ ರಾಮಮಂದಿರದಲ್ಲಿ ಭಕ್ತರು ನೀಡಿದ ದೇಣಿಗೆ ಮತ್ತು ಕಾಣಿಕೆಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ‘ಎಲ್ಲ ಚಂದಾ ಚೋರರೂ (ಕಳ್ಳರು) ಬಿಜೆಪಿಯಲ್ಲೇ ಇದ್ದಾರೆ’ ಎಂದು ಕಾಂಗ್ರೆಸ್ ಹಿರಿಯ ನಾಯಕ, ರಾಜ್ಯಸಭೆ ಸಂಸದ ಪ್ರಮೋದ್ ತಿವಾರಿ ಆರೋಪಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಮೋದ್ ತಿವಾರಿ, “ಬಿಜೆಪಿಯಲ್ಲಿರುವ ಪ್ರತಿಯೊಬ್ಬರೂ ‘ಚಂದಾ ಚೋರರು’ ಅಲ್ಲದಿರಬಹುದು. ಆದರೆ, ಎಲ್ಲ ‘ಚಂದಾ ಚೋರರು’ ಬಿಜೆಪಿಯಲ್ಲೇ ಇದ್ದಾರೆ” ಎಂದಿದ್ದಾರೆ.
ರಾಮ ಜನ್ಮಭೂಮಿ ಚಳವಳಿಯನ್ನು ಹತ್ತಿರದಿಂದ ಕಂಡಿರುವುದಾಗಿ ತಿಳಿಸಿದ ತಿವಾರಿ, “ಬಿಜೆಪಿ ಎಂದಿಗೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವುದನ್ನು ಬಯಸಿರಲಿಲ್ಲ. ಕೇವಲ ಆ ವಿಷಯವನ್ನು ಜೀವಂತವಾಗಿಡಲು ಬಯಸಿತ್ತು. ಮಂದಿರ ನಿರ್ಮಾಣವು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಆಧಾರದ ಮೇಲೆ ನಡೆದಿದೆಯೇ ಹೊರತು ಬಿಜೆಪಿ ಸರ್ಕಾರದಿಂದ ಅಲ್ಲ” ಎಂದಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅಪೂರ್ಣ ಮಂದಿರದ ಪ್ರಾಣಪ್ರತಿಷ್ಠಾಪನೆ ನೆರವೇರಿಸಿದರು. ಈ ಪ್ರಕ್ರಿಯೆಯಿಂದ ಶಂಕರಾಚಾರ್ಯರನ್ನು ಹೊರಗಿಡಲಾಗಿತ್ತು. ಟ್ರಸ್ಟ್ನ ಎಲ್ಲ ಸದಸ್ಯರನ್ನು ಪ್ರಧಾನಿಯವರ ಇಷ್ಟದಂತೆಯೇ ನೇಮಕ ಮಾಡಲಾಗಿರುವುದರಿಂದ, ಅಲ್ಲಿ ನಡೆದಿರುವ ಅಕ್ರಮ ಮತ್ತು ದೇಣಿಗೆ ಕಳವಿನ ಹೊಣೆಯಿಂದ ಪ್ರಧಾನಿ ಮೋದಿ ಅವರು ನುಣುಚಿಕೊಳ್ಳಲು ಸಾಧ್ಯವಿಲ್ಲ” ಎಂದು ಪ್ರತಿಪಾದಿಸಿದ್ದಾರೆ.
“ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ದೇಣಿಗೆ ಹಣದ ದುರುಪಯೋಗವಾಗಿದೆ. ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ಎಸ್ಐಟಿ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಅವರು ಒತ್ತಾಯಿಸಿದ್ದಾರೆ.



