ಅಯೋಧ್ಯೆಯ ರಾಮಮಂದಿರದಲ್ಲಿ ನಡೆದಿರುವ ದೇಣಿಗೆ ಲೂಟಿ ವಿರುದ್ಧ ಸಂಸತ್ ಆವರಣದಲ್ಲಿ ಕಾಂಗ್ರೆಸ್ ವಿಶಿಷ್ಠ ಪ್ರತಿಭಟನೆ ನಡೆಸಿತ್ತು. ಇದೀಗ, ಆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪಕ್ಷೇತರ ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ವಿರುದ್ಧ ದೆಹಲಿಯ ಜಹಾಂಗೀರ್ಪುರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪಪ್ಪು ಯಾದವ್ ಅವರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಲಾಗಿದೆ.
ಸೂರ್ಯ ಮೈಥಿಲ್ ಎಂಬವರು ಸಲ್ಲಿಸಿರುವ ದೂರಿನಲ್ಲಿ, “ಪಪ್ಪು ಯಾದವ್ ಅವರು ಸಂಸತ್ ಆವರಣದಲ್ಲಿ ನಡೆಸಿದ ಪ್ರತಿಭಟನೆಯ ವೇಳೆ ಧಾರ್ಮಿಕ ಚಿಹ್ನೆಗಳನ್ನು ಅವಮಾನಿಸಿದ್ದಾರೆ. ಪ್ರತಿಭಟನೆಯ ನಾಟಕದಲ್ಲಿ ಅವರು ಕೇಸರಿ ವಸ್ತ್ರ ಧರಿಸಿ, ಭಗವಾನ್ ರಾಮಲಲ್ಲಾ ಅವರ ಚಿತ್ರವನ್ನು ಕಾಲಿನ ಕೆಳಭಾಗದಲ್ಲಿ ಇರಿಸಿದ್ದು ಸನಾತನ ಧರ್ಮದ ಅನುಯಾಯಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ” ಎಂದು ದೂರಿದ್ದಾರೆ.
ಶುಕ್ರವಾರ ಸಂಸತ್ತಿನ ಆವರಣದಲ್ಲಿ ಬೀದಿ ನಾಟಕದ ಮಾದರಿಯಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ, “ಚಂದಾ ಚೋರ್, ಗದ್ದಿ ಛೋಡ್”, “ಜವಾಬ್ ತುಮ್ಕೋ ದೇನಾ ಹೋಗಾ” ಮತ್ತು “ಅಮಿತ್ ಶಾ ಸದನ್ ಮೇ ಆಓ” ಎಂಬ ಘೋಷಣೆಗಳನ್ನು ಕೂಗಲಾಯಿತು. ಪ್ರತಿಭಟನೆಯ ಭಾಗವಾಗಿ ಪಪ್ಪು ಯಾದವ್ ಕೇಸರಿ ವಸ್ತ್ರ ಧರಿಸಿ ದೇವಾಲಯದ ಅರ್ಚಕರ ಪಾತ್ರದಲ್ಲಿ ಕಾಣಿಸಿಕೊಂಡರು. ಅವರ ಕೈಯಲ್ಲಿ ರಾಮನ ಭಾವಚಿತ್ರವೂ ಇತ್ತು. ಕೆಲವು ಸಂಸದರು ಭಕ್ತರ ಪಾತ್ರ ನಿರ್ವಹಿಸಿ ದೇಣಿಗೆಯ ಪೆಟ್ಟಿಗೆಗೆ ಹಣ ಹಾಕುವಂತೆ ಅಭಿನಯಿಸಿದರು. ನಾಟಕದಲ್ಲಿ, ಅರ್ಚಕರ ಪಾತ್ರದಲ್ಲಿದ್ದ ಪಪ್ಪು ಯಾದವ್, ದೇಣಿಗೆ ಪೆಟ್ಟಿಗೆಯಲ್ಲಿ ಹಣ ಹಾಕುವ ಬದಲು ಅದನ್ನು ತಮ್ಮ ಜೇಬಿಗೆ ಹಾಕಿಕೊಳ್ಳುವ ಮೂಲಕ ರಾಮಮಂದಿರ ದೇಣಿಗೆ ದುರುಪಯೋಗವಾಗಿದೆ ಎಂಬ ಆರೋಪವನ್ನು ಸಾಂಕೇತಿಕವಾಗಿ ಪ್ರದರ್ಶಿಸಿದರು.
ಪ್ರತಿಭಟನೆಗೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸಂಸದರಾದ ಡಿಂಪಲ್ ಯಾದವ್, ಅವಧೇಶ್ ಪ್ರಸಾದ್ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಹಲವು ಸಂಸದರು ಬೆಂಬಲ ನೀಡಿದ್ದರು.
ಈ ಪ್ರತಿಭಟನೆ ವಿರುದ್ಧ ಬಿಜೆಪಿ ಸಂಸದರು ಅಸಮಾಧಾನಗೊಂಡಿದ್ದಾರೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು, ಈಗಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಿದ್ಧತೆ ನಡೆಯುತ್ತಿದೆ ಎಂದಿದ್ದಾರೆ. ಅಂತೆಯೇ, ಲೋಕಸಭಾ ಕಾರ್ಯದರ್ಶಿಯೂ ಕಿಡಿಕಾರಿದ್ದಾರೆ. ಸಂಸತ್ ಆವರಣದಲ್ಲಿ ವೇಷಭೂಷಣ ಧರಿಸಿ ಅಥವಾ ನಾಟಕೀಯ ಪ್ರದರ್ಶನಗಳ ಮೂಲಕ ಪ್ರತಿಭಟನೆ ನಡೆಸುವುದನ್ನು ಇನ್ನು ಮುಂದೆ ಅನುಮತಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
ಆದಾಗ್ಯೂ, ವಿಪಕ್ಷಗಳು ಪ್ರತಿಭಟನೆಯನ್ನು ಸಮರ್ಥಿಸಿದ್ದಾರೆ. ಸಮಾಜವಾದಿ ಪಕ್ಷದ ಸಂಸದ ಧರ್ಮೇಂದ್ರ ಯಾದವ್ ಅವರು, “ಅಯೋಧ್ಯೆಯಲ್ಲಿ ಭಕ್ತರು ನೀಡಿದ ದೇಣಿಗೆಗೆ ರಸೀದಿ ನೀಡಿಲ್ಲ, ಈ ಪ್ರಕರಣಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ಅಳಿಸಲಾಗಿದೆ. ಇದೇ ವಿಚಾರವನ್ನು ಸಂಸತ್ತಿನಲ್ಲಿ ಚರ್ಚಿಸಬೇಕು ಎಂಬ ಒತ್ತಾಯವನ್ನು ಸರ್ಕಾರದ ಗಮನಕ್ಕೆ ತರಲು ಈ ಸಾಂಕೇತಿಕ ಪ್ರತಿಭಟನೆ ನಡೆಸಲಾಗಿದೆ” ಎಂದು ಹೇಳಿದ್ದಾರೆ.




