ಆರೋಗ್ಯ ಮತ್ತು ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸುವ ನೆಪದಲ್ಲಿ, ಮಹಿಳೆಯೊಬ್ಬಳ ಮೇಲೆ ಬರೋಬ್ಬರಿ 15 ವರ್ಷಗಳ ಕಾಲ ಲೈಂಗಿಕ ದೌರ್ಜನ್ಯವೆಸಗಿ, ಮೂತ್ರ ಕುಡಿಸಿ, ವಿದ್ಯುತ್ ಶಾಕ್ ನೀಡಿ ಚಿತ್ರಹಿಂಸೆ ನೀಡಿದ್ದ ಆರೋಪದ ಮೇಲೆ ಹರಿಯಾಣ ಮೂಲದ ಸ್ವಯಂಘೋಷಿತ ಗುರುವೊಬ್ಬನನ್ನು ಆತನ ಏಳು ಮಂದಿ ಸಹಚರರೊಂದಿಗೆ ಪುಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಪ್ರಮುಖ ಆರೋಪಿಯನ್ನು ರಾಧಾಮೋಹನ್ ಮಿಶ್ರಾ (59) ಎಂದು ಗುರುತಿಸಲಾಗಿದೆ. ಈತನ ಪುರುಷ ಸಹಾಯಕ ಕನ್ವಾಲ್ ನಯನ್ (58) ಹಾಗೂ ಇತರ ಆರು ಮಂದಿ ಮಹಿಳಾ ಸಹಚರರನ್ನು ವಾಘೋಲಿಯ ಉಬಳೆನಗರದಲ್ಲಿರುವ ಬಂಗಲೆಯಲ್ಲಿ ಬುಧವಾರ ಮುಂಜಾನೆ 2 ಗಂಟೆ ಸುಮಾರಿಗೆ ಪುಣೆ ನಗರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ರಾತ್ರಿ ಸಿಂಹಗಡ ರಸ್ತೆ ನಿವಾಸಿ, ಖಾಸಗಿ ಕಂಪನಿಯ ಉದ್ಯೋಗಿಯಾಗಿರುವ ಸಂತ್ರಸ್ತೆ (41) ನೀಡಿದ ದೂರಿನ ಆಧಾರದ ಮೇಲೆ ಈ ದಾಳಿ ನಡೆಸಲಾಗಿದೆ. ಎಲ್ಲಾ ಆರೋಪಿಗಳನ್ನು ಜೂನ್ 20ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಪುಣೆ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್, ‘ಮೂಲತಃ ಹರಿಯಾಣದವನಾದ ಆರೋಪಿ ಮಿಶ್ರಾ, ಕಳೆದ ಎಂಟು ವರ್ಷಗಳಿಂದ ಪುಣೆಯಲ್ಲಿ ನೆಲೆಸಿದ್ದು, ಉಬಳೆನಗರದ ಬಂಗಲೆಯಲ್ಲಿ ಆಶ್ರಮ ನಡೆಸುತ್ತಿದ್ದನು. ತನ್ನನ್ನು ತಾನು ದೇವರ ಅವತಾರ ಎಂದು ಹೇಳಿಕೊಳ್ಳುತ್ತಿದ್ದ ಈತ, ಸಂತ್ರಸ್ತೆಗೆ ಸುಮಾರು 15 ವರ್ಷಗಳ ಕಾಲ ದೈಹಿಕ, ಲೈಂಗಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದಾನೆ. ಆಕೆಗೆ ತನ್ನ ಮೂತ್ರವನ್ನು ಕುಡಿಯುವಂತೆ ಒತ್ತಾಯಿಸಿದ್ದಲ್ಲದೆ, ವಿದ್ಯುತ್ ಶಾಕ್ ನೀಡಿದ್ದಾನೆ. ಪತಿಗೆ ವಿಚ್ಛೇದನ ನೀಡುವಂತೆ ಬೆದರಿಸಿ, ಆಕೆಯ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡಿದ್ದಾನೆ’ ಎಂದು ವಿವರಿಸಿದ್ದಾರೆ.
ಇದನ್ನು ಓದಿದ್ದೀರಾ? ಇದನ್ನು ಓದಿದ್ದೀರಾ? ಫಿಫಾ 2026: ಆಕರ್ಷಕ ಗೋಲು ಬಾರಿಸಿದರೂ ರೆಫರಿಗಳು ಅದನ್ನು ತಿರಸ್ಕರಿಸುವುದೇಕೆ?
ಸಂತ್ರಸ್ತೆಯ ಕುಟುಂಬಸ್ಥರ ನಂಬಿಕೆಯನ್ನೂ ದುರ್ಬಳಕೆ ಮಾಡಿಕೊಂಡಿದ್ದ ಆರೋಪಿ, ಅವರೆಲ್ಲರನ್ನೂ ಸಂತ್ರಸ್ತೆಯ ವಿರುದ್ಧವೇ ತಿರುಗುವಂತೆ ಮಾಡಿದ್ದನು. ಅಂತಿಮವಾಗಿ ಧೈರ್ಯ ತಂದುಕೊಂಡ ಸಂತ್ರಸ್ತೆ, ಬಂಗಲೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಒಡೆದುಹಾಕಿ ಅಲ್ಲಿಂದ ತಪ್ಪಿಸಿಕೊಂಡು ತನ್ನ ತವರು ಮನೆಗೆ ತಲುಪಿದ್ದಾಳೆ. ಆಕೆ ತನಗಾದ ಅನ್ಯಾಯವನ್ನು ವಿವರಿಸಿದಾಗಲೇ ಆಕೆಯ ಕುಟುಂಬದವರ ಕಣ್ತೆರೆದಿದ್ದು, ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ಖರಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರ ಪ್ರಕಾರ, 2001 ರಿಂದ 2026ರ ನಡುವೆ ಹರಿಯಾಣ ಮತ್ತು ಪುಣೆಯಲ್ಲಿ ಈ ಅಪರಾಧ ಕೃತ್ಯಗಳು ನಡೆದಿವೆ. ಆರೋಪಿಗಳ ವಿರುದ್ಧ ಲೈಂಗಿಕ ದೌರ್ಜನ್ಯ, ಕ್ರಿಮಿನಲ್ ಪಿತೂರಿ ಹಾಗೂ ಮಹಾರಾಷ್ಟ್ರ ನರಬಲಿ ಮತ್ತು ಇತರ ಅಮಾನವೀಯ, ಅಘೋರಿ ಕೃತ್ಯಗಳು ಹಾಗೂ ಮಾಟಮಂತ್ರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆಶ್ರಮದ ಮೇಲೆ ದಾಳಿ ನಡೆಸಿದಾಗ 19 ಹಾರ್ಡ್ ಡಿಸ್ಕ್ಗಳು, 12 ಲ್ಯಾಪ್ಟಾಪ್ಗಳು, 1 ಟ್ಯಾಬ್ಲೆಟ್, 11 ಮೊಬೈಲ್ ಫೋನ್ಗಳು, ಡಿವಿಡಿ, ಸಿಡಿ, 23 ಪೆನ್ ಡ್ರೈವ್ಗಳು, 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 6.5 ಲಕ್ಷ ನಗದು ಹಾಗೂ 10 ಗುಂಡುಗಳನ್ನು (ಬುಲೆಟ್) ವಶಪಡಿಸಿಕೊಳ್ಳಲಾಗಿದೆ. ಯಾವುದೇ ಬಂದೂಕು ಪತ್ತೆಯಾಗಿಲ್ಲ. ಅಲ್ಲದೆ, ಆಶ್ರಮದಲ್ಲಿ ತಪ್ಪಿಸಿಕೊಳ್ಳಲು ಅನುಕೂಲವಾಗುವಂತೆ ಸುರಂಗ ಮಾರ್ಗವೊಂದನ್ನು ನಿರ್ಮಿಸುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ.




