- ವಿಜಯೇಂದ್ರ ಸ್ಪರ್ಧೆ ಕ್ಷೇತ್ರವನ್ನು ಅಂತಿಮಗೊಳಿಸಿದ ಬಿಎಸ್ವೈ
- ವರುಣಾ ಬದಲು ಶಿಕಾರಿಪುರದಿಂದ ಕಣಕ್ಕಿಳಿಯಲು ಸೂಚನೆ
ರಾಜ್ಯ ರಾಜಕಾರಣದ ಕುತೂಹಲ ಕೆರಳಿಸಿದ್ದ ಬಿ ವೈ ವಿಜಯೇಂದ್ರ ಸ್ಪರ್ಧೆ ವಿಚಾರವಾಗಿ ಊಹಾಪೋಹಗಳಿಗೆ ಬಿಜೆಪಿ ಚುನಾವಣಾ ಸಂಸದೀಯ ಸಮಿತಿ ಸದಸ್ಯ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಪುತ್ರ ವಿಜಯೇಂದ್ರ ಮಾಜಿ ಸಿಎಂ ಸಿದ್ದರಾಮಯ್ಯ ಎದುರು ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಆ ಮೂಲಕ ಈ ಬಗ್ಗೆ ಎದ್ದಿದ್ದ ಎಲ್ಲ ಬಗೆಯ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ ಯಡಿಯೂರಪ್ಪ ವಿಜಯೇಂದ್ರನಿಗೆ ಶಿಕಾರಿಪುರದಿಂದಲೇ ಸ್ಪರ್ಧೆ ಮಾಡಲು ಹೇಳಿದ್ದೇನೆ ಎಂದಿದ್ದಾರೆ.
ನನ್ನ ರಾಜಕೀಯ ಕರ್ಮಭೂಮಿ ಶಿಕಾರಿಪುರ. ಇಲ್ಲಿಂದಲೇ ವಿಜಯೇಂದ್ರನ ರಾಜಕೀಯವೂ ಆರಂಭವಾಗಲಿ ಎನ್ನುವುದು ನನ್ನ ಆಶಯ. ಅದರಂತೆ ಆತನಿಗೆ ಇಲ್ಲಿಂದಲೇ ಸ್ಪರ್ಧಿಸಲು ಹೇಳಿರುವುದಾಗಿ ಯಡಿಯೂರಪ್ಪ ತಿಳಿಸಿದರು.
ಜೊತೆಗೆ ಶಿಕಾರಿಪುರದಿಂದಲೇ ವಿಜಯೇಂದ್ರನ ಸ್ಪರ್ಧೆಗೆ ಅವಕಾಶ ನೀಡಬೇಕೆಂದು ವರಿಷ್ಠರನ್ನು ಕೇಳಿಕೊಳ್ಳುತ್ತೇನೆ. ಎಷ್ಟೇ ಒತ್ತಡ ಬಂದರೂ ಅವನ ರಾಜಕೀಯದ ಅದೃಷ್ಟ ಪರೀಕ್ಷೆ ಇಲ್ಲಿಂದಲೇ ಆಗಲಿದೆ ಎಂದು ಯಡಿಯೂರಪ್ಪ ಹೇಳಿದರು.
ಈ ಸುದ್ದಿ ಓದಿದ್ದೀರಾ?:`ಯಾವ ಮೋದಿನೂ ಇಲ್ಲ, ಪಾದಿನೂ ಇಲ್ಲ’ ಬಿಜೆಪಿ ಶಾಸಕನ…
ಇನ್ನು ಬಿಎಸ್ ವೈ ಪ್ರತಿಕ್ರಿಯೆಗೂ ಮುನ್ನ ಮೈಸೂರಿನಲ್ಲಿ ಪತ್ರಕರ್ತರ ಜೊತೆ ಮಾತನಾಡಿದ್ದ ಬಿ ವೈ ವಿಜಯೇಂದ್ರ ನನ್ನ ಸ್ಪರ್ಧೆ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಅವರು ಹೇಳಿದಲ್ಲಿ ನಾನು ಸ್ಪರ್ಧಿಸುವೆ. ಸದ್ಯ ಶಿಕಾರಿಪುರದಿಂದ ಸ್ಪರ್ಧಿಸಲು ತಂದೆಯವರು ನನಗೆ ಸೂಚಿಸಿದ್ದಾರೆ. ನಾನೂ ಈಗಾಗಲೇ ಒಂದು ಸುತ್ತು ಶಿಕಾರಿಪುರ ಕ್ಷೇತ್ರದ ಪ್ರವಾಸ ಮಾಡಿದ್ದೇನೆ ಎಂದು ಹೇಳಿದರು.
ರಾಜ್ಯದ 224 ಕ್ಷೇತ್ರಗಳಲ್ಲೂ ಸ್ಪರ್ಧೆ ಬಗ್ಗೆ ಅಭಿಪ್ರಾಯ ಸಂಗ್ರಹವಾಗುತ್ತಿದೆ. ಚುನಾವಣೆಯಲ್ಲಿ ಯಾವುದೂ ಅಸಾಧ್ಯವಲ್ಲ. ಅಂತಿಮವಾಗಿ ನನ್ನ ಸ್ಪರ್ಧೆ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತೆ ಎಂದು ವಿಜಯೇಂದ್ರ ಹೇಳಿದ್ದರು.
ಮುಂದುವರೆದು ಮಾತನಾಡಿದ ಅವರು ಮೊದಲು ನನಗೆ ಟಿಕೆಟ್ ನೀಡಲಿ ಆನಂತರ ಎರಡು ಅಥವಾ ಒಂದು ಕ್ಷೇತ್ರದಲ್ಲಿ ಕಣಕ್ಕಿಳಿಯುವುದೋ ಎನ್ನುವುದನ್ನು ನಿರ್ಧರಿಸೋಣ ಎಂದಿದ್ದರು.
ಇದಕ್ಕೂ ಮೊದಲು ವಿಜಯೇಂದ್ರ ಸ್ಪರ್ಧಾ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವರುಣಾ ಕ್ಷೇತ್ರವನ್ನೂ ಒಳಗೊಂಡಂತೆ ರಾಜ್ಯದ ಉಳಿದ ಕ್ಷೇತ್ರಗಳಿಗಾಗಿ ಅಭ್ಯರ್ಥಿಗಳ ಆಯ್ಕೆ ಜವಾಬ್ದಾರಿಯೂ ಯಡಿಯೂರಪ್ಪ ಹಾಗೂ ಚುನಾವಣಾ ಸಂಸದೀಯ ಮಂಡಳಿಯದ್ದು ಎಂದು ಹೇಳಿದ್ದರು.