- ಬಿಜೆಪಿಯ ಜೈಲು ಪರ್ವ ಆರಂಭವಾಗಿದೆ
- ಸಿಎಂ ಬೊಮ್ಮಾಯಿ ಸಹ ಜೈಲಿಗೆ ಹೋಗುತ್ತಾರೆ
ಲಂಚ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ತಮ್ಮ ಬಲೆಗೆ ಕೆಡವಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ರಾಜ್ಯ ಸರ್ಕಾರದ ವಿರುದ್ಧ ಲೇವಡಿ ಮಾಡಿದೆ.
ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ನಡುವೆ ಬಿಜೆಪಿಯ ಶಾಸಕ ಲಂಚ ಪ್ರಕರಣದಲ್ಲಿ ಸಿಲುಕಿದ್ದು, ಪಕ್ಷಕ್ಕೆ ಭಾರೀ ಮುಜುಗರ ಉಂಟು ಮಾಡಿದೆ. ಲಂಚ ಪ್ರಕರಣದಲ್ಲಿ ಶಾಸಕರ ನಿರೀಕ್ಷಣಾ ಜಾಮೀನನ್ನು ಸೋಮವಾರ ಕರ್ನಾಟಕ ಹೈಕೋರ್ಟ್ ರದ್ದುಗೊಳಿಸುತ್ತಿದ್ದಂತೆಯೇ ಲೋಕಾಯುಕ್ತರು ವಿರೂಪಾಕ್ಷಪ್ಪರನ್ನು ಬಂಧಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, “ಮಾಡಾಳ್ ವೀರೂಪಾಕ್ಷಪ್ಪರ ಬಂಧನ ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಸಿಕ್ಕಿರುವ ಆಸ್ಕರ್ ಅವಾರ್ಡಿನಂತೆ! 40% ಸರ್ಕಾರದ ಭ್ರಷ್ಟರ ಪ್ರಯತ್ನದ ಹೊರತಾಗಿಯೂ ಈ ಬಂಧನವಾಗಿದ್ದು, ಬಿಜೆಪಿಯ ಭ್ರಷ್ಟಾಚಾರದ ಪಾಪದ ಕೊಡ ತುಂಬಿರುವುದಕ್ಕೆ ಸಾಕ್ಷಿ. ಇಂತಹ ಕಡುಭ್ರಷ್ಟ ಬಿಜೆಪಿಗೆ ಮತ ಕೇಳಲು ಜನರ ಮುಂದೆ ಹೋಗಲು ಯಾವುದೇ ನೈತಿಕ ಹಕ್ಕೂ ಇಲ್ಲ” ಎಂದು ಲೇವಡಿ ಮಾಡಿದೆ.
“ಬಿಜೆಪಿಯ ಹಿಂದಿನ ಅಧಿಕಾರಾವಧಿಯಲ್ಲಿ ಮುಖ್ಯಮಂತ್ರಿ ಸೇರಿ ಸಾಲು ಸಾಲಾಗಿ ಬಿಜೆಪಿಗರು ಪರಪ್ಪನ ಅಗ್ರಹಾರಕ್ಕೆ ಅತಿಥಿಗಳಾಗಿದ್ದರು. ಈಗ ಮಾಡಾಳ್ರಿಂದ ಮತ್ತೆ ಬಿಜೆಪಿಯ ಜೈಲು ಪರ್ವ ಶುರುವಾಗಿದೆ” ಎಂದು ಬಿಜೆಪಿಯ ಕಾಲೆಳೆದಿದೆ.
ಈ ಸುದ್ದಿ ಓದಿದ್ದೀರಾ? ಬಿಎಸ್ವೈ ಮನೆ ಮೇಲೆ ಕಲ್ಲು ತೂರಾಟ; ಕಾಂಗ್ರೆಸ್ ಕೈವಾಡವಿದೆ ಎಂದ ಸಿಎಂ ಬೊಮ್ಮಾಯಿ
“ಕಾಕಂಬಿ ಹಗರಣದ ಪ್ರಾಮಾಣಿಕ ತನಿಖೆ ನಡೆದರೆ ಮಾಡಾಳ್ರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಜೈಲಿನ ಸಂಗಾತಿಯಾಗಿ ಹೋಗಬೇಕಾಗುತ್ತದೆ!” ಎಂದು ಟ್ವೀಟ್ ಮಾಡಿದೆ.
ಮಾಡಾಳ್ ವಿರೂಪಾಕ್ಷಪ್ಪ ಅವರು ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್ಡಿಎಲ್) ಮಾಜಿ ಅಧ್ಯಕ್ಷರಾಗಿದ್ದರು. ಆ ಅವಧಿಯಲ್ಲಿ ಲಂಚ ಪಡೆದ ಪ್ರಕರಣವೊಂದರಲ್ಲಿ ಸಿಲುಕಿದ್ದರು. ಬಳಿಕ ಲೋಕಾಯುಕ್ತರು ವಿರೂಪಾಕ್ಷಪ್ಪ ಪುತ್ರನ ಮನೆ ಮೇಲೆ ದಾಳಿ ನಡೆಸಿ ಕೋಟ್ಯಾಂತರ ರೂಪಾಯಿ ನಗದು ವಶಪಡಿಸಿಕೊಂಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಆದರೆ, ಸೋಮವಾರ ಮಧ್ಯಾಹ್ನ ಹೈಕೋರ್ಟ್ ಜಾಮೀನು ವಜಾಗೊಳಿಸಿದೆ.
ಜಾಮೀನು ರದ್ದತಿ ಹಿನ್ನೆಲೆ ಮಾಡಾಳ್ ವಿರೂಪಾಕ್ಷಪ್ಪ ಪೊಲೀಸರ ಅತಿಥಿಯಾದರೂ. ಬೆನ್ನಲ್ಲೇ ಮಾಡಾಳ್ ಎದೆನೋವಿನ ಕಾರಣ ನೀಡಿ ಹೈಡ್ರಾಮ ಸೃಷ್ಟಿಸಿದ್ದರು. ಸದ್ಯ ಅವರ ಬಂಧನ ಬಿಜೆಪಿಗೆ ಭಾರೀ ಹಿನ್ನಡೆ ಉಂಟು ಮಾಡಿದ್ದು, ವಿಪಕ್ಷಗಳಿಗೆ ಪ್ರಬಲ ಅಸ್ತ್ರ ದೊರೆತಂತಾಗಿದೆ.