- ಸರ್ಕಾರಿ ಸಂಸ್ಥೆಗಳು ಬಿಜೆಪಿ-ಆರ್ಎಸ್ಎಸ್ನ ಹಿಡಿತದಲ್ಲಿವೆ
- ಜನರಿಗೆ ಬೆದರಿಕೆ ಹಾಕಲು ಸಾರ್ವಜನಿಕ ಸಂಸ್ಥೆಗಳ ದುರ್ಬಳಕೆ
ಕಾಂಗ್ರೆಸ್ನ ನಾಯಕ ರಾಹುಲ್ ಗಾಂಧಿ ಸದ್ಯ 10 ದಿನಗಳ ಅಮೆರಿಕಾ ಪ್ರವಾಸದಲ್ಲಿದ್ದಾರೆ. ಬುಧವಾರ ಸ್ಯಾನ್ಫ್ರಾನ್ಸಿಸ್ಕೋದಲ್ಲಿ ನಡೆದ ʼಮೊಹಬ್ಬತ್ ಕಿ ದುಖಾನ್ʼ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿರುವ ಅವರು, ಭಾರತದಲ್ಲಿ ರಾಜಕಾರಣದ ಸ್ಥಿತಿಗತಿ ತೀರಾ ಹದಗೆಟ್ಟಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಕೆಲವು ತಿಂಗಳುಗಳ ಹಿಂದೆ ನಾವು ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಭಾರತ್ ಜೋಡೋ ಯಾತ್ರೆಯನ್ನು ಆರಂಭಿಸಿ, ದಾರಿಯುದ್ದಕ್ಕೂ ನಡೆಯುತ್ತಾ, ಜನಗಳನ್ನು ಗಮನಿಸುತ್ತಾ ಹೋದಾಗ ಇವತ್ತಿನ ರಾಜಕಾರಣ ಕೇವಲ ಸಂವಾದ ಮತ್ತು ಪ್ರಚಾರಗಳಿಗೆ ಸೀಮಿತವಾಗಿಲ್ಲ ಎಂಬುದು ಸ್ಪಷ್ಟವಾಯಿತು. ಜನಪರ ರಾಜಕಾರಣಕ್ಕೆ ಪೂರಕವಾಗಿ ನಡೆದುಕೊಳ್ಳಬೇಕಿದ್ದ ಎಲ್ಲ ಸಂಸ್ಥೆಗಳು ಬಿಜೆಪಿ ಮತ್ತು ಆರ್ಆರ್ಎಸ್ನ ಹಿಡಿತದಲ್ಲಿವೆ. ಸರ್ಕಾರಿ ಸಂಸ್ಥೆಗಳನ್ನು ಬಳಸಿ ಜನರಿಗೆ ಬೆದರಿಕೆ ಹಾಕಲಾಗುತ್ತಿದೆ. ಸಾರ್ವಜನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಂತಹ ಬೆಳವಣಿಗೆಗಳಿಂದಾಗಿ ಭಾರತದಲ್ಲಿ ಸಹಜವಾಗಿ ರಾಜಕಾರಣ ಮಾಡುವುದು ತುಂಬಾ ಕಷ್ಟಕರವಾಗಿದೆ” ಎಂದಿದ್ದಾರೆ.
“ಇಂತಹ ಸವಾಲುಗಳನ್ನು ಎದುರಿಸುವ ಸಲುವಾಗಿಯೇ ನಾವು ʼಭಾರತ್ ಜೋಡೋʼ ಯಾತ್ರೆಯನ್ನು ಹುಮ್ಮಸ್ಸಿನಿಂದ ಶುರು ಮಾಡಿದ್ದೆವು. ಆದರೆ, ಐದಾರು ದಿನಗಳ ಕಾಲ ನಡೆಯುತ್ತಲೇ ಇನ್ನೂ ಸಾವಿರಾರು ಕಿ.ಮೀ ನಡೆಯಬೇಕಲ್ಲ ಎಂಬುದನ್ನು ನೆನೆಸಿಕೊಂಡು ಹೈರಾಣಾದೆ. ಅದೇ ಸಂದರ್ಭದಲ್ಲಿ ಕಾಲಿಗಾಗಿದ್ದ ಹಳೆಯ ಗಾಯದ ನೋವು ಮರುಕಳಿಸತೊಡಗಿತ್ತು. ಯಾತ್ರೆಯನ್ನು ಶುರು ಮಾಡಿ ಆಗಿದೆ, ಯಾವುದೇ ಕಾರಣಕ್ಕೂ ಅದನ್ನು ನಿಲ್ಲಿಸುವ ಹಾಗಿಲ್ಲ. ಇತ್ತ ಕಾಲು ನೋವು ಕೂಡ ಕಡಿಮೆಯಾಗುತ್ತಿಲ್ಲ. ಆದರೂ ನೋವನ್ನು ಸಹಿಸಿಕೊಂಡು ಪ್ರತಿದಿನ 25 ಕಿ.ಮೀ ನಂತ ಮೂರು ವಾರಗಳ ಕಾಲ ಜನರ ಜೊತೆ ನಡೆದೆ. ಅದಾದಮೇಲೆ ಅಚ್ಚರಿ ಎಂಬಂತೆ ಯಾವ ನೋವು, ದಣಿವು ಕೂಡ ನನ್ನಲ್ಲಿರಲಿಲ್ಲ. ಬೆಳಗ್ಗೆಯಿಂದ ಸಂಜೆಯ ವರೆಗೆ ನನ್ನ ಜೊತೆಯಾಗಿ ನಡೆಯುತ್ತಿದ್ದ ಸಹಯಾತ್ರಿಗಳನ್ನು ಕೇಳಿದೆ, ಅವರು ಕೂಡ ದಣಿವಾಗುತ್ತಿಲ್ಲ ಎಂದೇ ಹೇಳುತ್ತಿದ್ದರು. ಆಗ ನಾವು ಮಾತ್ರ ನಡೆಯುತ್ತಿಲ್ಲ ನಮ್ಮೊಂದಿಗೆ ಭಾರತವೇ ನಡೆಯುತ್ತಿದೆ ಎನ್ನಿಸಿತು. ಯಾಕೆಂದರೆ ನಾವು ನಡೆದ ದಾರಿಯುದ್ದಕ್ಕೂ ಜೊತೆಯಾಗುತ್ತಿದ್ದ ಹಳ್ಳಿಗರು, ಶ್ರಮಿಕರು ತೋರುತ್ತಿದ್ದ ಪ್ರೀತಿ ಎಲ್ಲರ ದಣಿವನ್ನು ತಣಿಸಿತ್ತು. ಆ ಯಾತ್ರೆಯಲ್ಲಿ ಜನರು ಒಬ್ಬರಿಗೊಬ್ಬರು ನೆರವಾಗುತ್ತಿರುವುದನ್ನು ಕಂಡೆವು. ಇದೆಲ್ಲವನ್ನು ನೋಡಿದ ಮೇಲೆ ʼದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿ ತೆರೆಯುವʼ ಆಲೋಚನೆ ಹುಟ್ಟಿತು ಎಂದು ತಾವು ʼಮೊಹಬ್ಬತ್ ಕಿ ದುಖಾನ್ʼ ಕಾರ್ಯಕ್ರಮವನ್ನು ಪ್ರಾರಂಭಿಸಿದ ಬಗ್ಗೆ ಮಾತನಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಂಸತ್ ಭವನ ಉದ್ಘಾಟನೆ: ರೈತ ಧ್ವನಿಗೆ ಬೆಚ್ಚಿದ ಸರ್ಕಾರ; ದೆಹಲಿ ಗಡಿಯಲ್ಲಿ ಪೊಲೀಸ್ ಭದ್ರತೆ
ಇದೇ ವೇಳೆ ಗುರುನಾನಕ್, ಬಸವಣ್ಣ, ನಾರಾಯಣ ಗುರು ಮುಂತಾದ ಧಾರ್ಮಿಕ ಗುರುಗಳನ್ನು ನೆನೆದಿರುವ ರಾಹುಲ್, ಈ ಮಹಾನ್ ಚೇತನಗಳು ಶತಮಾನಗಳ ಹಿಂದೆಯೇ ʼಭಾರತವನ್ನು ಜೋಡಿಸುವʼ ಕೆಲಸವನ್ನು ಮಾಡಿದ್ದಾರೆ. ನಾವು ಕೂಡ ಈಗ ಅದನ್ನೇ ಮಾಡುತ್ತಿದ್ದೇವೆ ಎಂದಿದ್ದಾರೆ.