- ಬಿಜೆಪಿ ಕೊಡಿಸಿರುವ ಗುತ್ತಿಗೆ ಆಧಾರದ ಕೆಲಸದ ಅವಧಿ ಮುಗಿದಿದೆ
- ನೂತನ ಸರ್ಕಾರ ಬಂದ ಹಿನ್ನೆಲೆ ಗುತ್ತಿಗೆ ಕೆಲಸಗಳು ರದ್ದಾಗಿವೆ
ಪ್ರವೀಣ್ ನೆಟ್ಟಾರು ಪತ್ನಿ ನೂತನಗೆ ತಮ್ಮ ಸರ್ಕಾರದ ಅವಧಿಯಲ್ಲಿ ಒಂದು ಖಾಯಂ ಉದ್ಯೋಗ ಕೊಡಿಸಲಾಗದ ಸಂಸದ ನಳಿನ್ ಕುಮಾರ್ ಕಟೀಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ. ನನ್ನ ವೈಯಕ್ತಿಕ ನೆಲೆಯಲ್ಲಿ ನೂತನ ಅವರಿಗೆ ಕೆಲಸ ಕೊಡಿಸುತ್ತೇನೆ” ಎಂದು ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ಹೇಳಿದ್ದಾರೆ.
ಈ ಬಗ್ಗೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಪ್ರವೀಣ್ ನೆಟ್ಟಾರು ಅವರು ಬಿಲ್ಲವ ಸಮುದಾಯಕ್ಕೆ ಸೇರಿದವರು. ನೂತನ ಅವರಿಗೆ ಪೂರ್ಣಾವಧಿ ಉದ್ಯೋಗ ಸರ್ಕಾರದಿಂದ ದೊರಕಿಸಿಕೊಡಲು ನಾವು ಶ್ರಮಿಸುತ್ತೇವೆ. ಅವರಿಗೆ ಗುತ್ತಿಗೆ ಆಧಾರದ ಮೇಲೆ ಉದ್ಯೋಗ ನೀಡುವುದು ಬೇಡ” ಎಂದರು.
“ಬಿಜೆಪಿ ತನ್ನ ಅಧಿಕಾರದ ಅವಧಿಯಲ್ಲಿ ನೂತನ ಅವರಿಗೆ ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕ ಕೆಲಸ ನೀಡಿದೆ. ಸಹಜವಾಗಿ ನೂತನ ಸರ್ಕಾರ ಬಂದ ಹಿನ್ನೆಲೆ ಗುತ್ತಿಗೆ ಆಧಾರದ ಮೇಲೆ ನೀಡಿದ ಕೆಲಸಗಳು ರದ್ದಾಗಿವೆ. ಅದರಿಂದ ಅವರೂ ಕೂಡ ಕೆಲಸವನ್ನು ಕಳೆದುಕೊಂಡಿದ್ದಾರೆ” ಎಂದು ಹೇಳಿದರು.
“ನಳಿನ್ ಕುಮಾರ್ ಸಂಸದರಾಗಿದ್ದರೂ ನೂತನ ಕುಮಾರಿಗೆ ಪೂರ್ಣಾವಧಿ ಉದ್ಯೋಗ ತೆಗೆಸಿಕೊಡಲು ಸಾಧ್ಯವಾಗಿಲ್ಲ ಎಂಬ ವಿಚಾರವನ್ನು ಗಮನಿಸಿದಾಗ ಅವರ ಸಾಮರ್ಥ್ಯ ಏನೆಂಬುದು ಗೊತ್ತಾಗುತ್ತದೆ. ಕೇಂದ್ರ ಸರ್ಕಾರದ ಸಂಸ್ಥೆಗಳು ಇವೆ ಅದರಲ್ಲಿ ನಳಿನ್ ಕುಮಾರ್ ಕಟೀಲ್ ಉದ್ಯೋಗ ನೀಡಲಿ” ಎಂದು ಪ್ರತಿಭಾ ಕುಳಾಯಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಪ್ರವೀಣ್ ಪತ್ನಿಗೆ ಮತ್ತೆ ಉದ್ಯೋಗ ಕೊಡುತ್ತೇವೆ: ಸಿಎಂ ಸಿದ್ಧರಾಮಯ್ಯ
“ನೂತನ ಅವರಿಗೆ ಕೆಲಸ ಕೊಡುವುದು ದೊಡ್ಡ ಕೆಲಸವಲ್ಲ. ಆದರೆ, ಬಿಜೆಪಿ ಕೊಡಿಸಿರುವ ಗುತ್ತಿಗೆ ಆಧಾರದ ಕೆಲಸದ ಅವಧಿ ಮುಗಿದಿದೆ. ಇದು ನಿಜಕ್ಕೂ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ನಾಚಿಕೆ ಪಡಬೇಕಾದ ವಿಷಯ” ಎಂದು ತಿಳಿಸಿದರು.
“ಬಿಜೆಪಿ ಸರ್ಕಾರ ಇದ್ದಾಗ ಮುಖ್ಯಮಂತ್ರಿಯವರಿಗೆ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ನೆಟ್ಟಾರ್ ಪತ್ನಿಯನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರಿ ಸ್ವಾಮ್ಯದ ಕಂಪೆನಿಗಳಲ್ಲಿ ಕೆಲಸಕ್ಕೆ ಸೇರಿಸಬಹುದಿತ್ತು ಅಥವಾ ಸರ್ಕಾರದಿಂದ ಶಾಶ್ವತ ಉದ್ಯೋಗ ಕಲ್ಪಿಸಬಹುದಿತ್ತು. ಅದನ್ನು ಬಿಟ್ಟು ತಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಹತ್ಯೆಗೀಡಾದಾಗ ಆತನ ಕುಟುಂಬದ ಸದಸ್ಯರಿಗೆ ತಾತ್ಕಾಲಿಕ ನೆಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನೀಡಲಾಗಿದೆ” ಎಂದರು.