ಭ್ರಷ್ಟ ಅದಾನಿ ಕುರಿತ ನನ್ನ ಮುಂದಿನ ಭಾಷಣಕ್ಕೆ ಹೆದರಿ ನನ್ನನ್ನು ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವದೆಹಲಿಯ ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಮಾತನಾಡಿದ ಅವರು, “ನಾನು ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ನಾನು ಅದಾನಿ ಬಗ್ಗೆ ಒಂದೇ ಒಂದು ಪ್ರಶ್ನೆ ಕೇಳಿದ್ದೆ. ಅದರ ಬಗ್ಗೆ ಸಂಸತ್ನಲ್ಲಿ ನನ್ನ ಮುಂದಿನ ಭಾಷಣದಲ್ಲಿ ಪ್ರಸ್ತಾಪಿಸುವ ಉದ್ದೇಶ ಹೊಂದಿದ್ದೆ. ಅದಕ್ಕೆ ಹೆದರಿದ ಸರ್ಕಾರ ನನ್ನನ್ನ ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿದೆ” ಎಂದು ಆರೋಪಿಸಿದ್ದಾರೆ.
“ನಾನು ಸಂಸತ್ತಿನಲ್ಲಿ ಅದಾನಿಯ ಶೆಲ್ ಕಂಪನಿಯಲ್ಲಿ ಹೂಡಿಕೆ ಮಾಡಿರುವ 20 ಸಾವಿರ ಕೋಟಿ ರೂ. ಯಾರ ಹಣ ಎಂದು ಕೇಳಲು ಬಯಸಿದ್ದೆ. ಇಷ್ಟು ಭಾರಿ ಮೊತ್ತದ ಹಣವನ್ನು ಅದಾನಿ ಕಂಪನಿಯಲ್ಲಿ ಯಾರು ಹೂಡಿಕೆ ಮಾಡಿದ್ದಾರೆ? ಇದರ ಹಿಂದಿರುವ ಸತ್ಯ ದೇಶದ ಜನತೆಗೆ ಗೊತ್ತಾಗಬೇಕಿದೆ. ನಾನು ಪ್ರಶ್ನೆಗಳನ್ನು ಕೇಳುವುದನ್ನು ಮುಂದುವರಿಸುತ್ತೇನೆ ಮತ್ತು ಭಾರತದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತೇನೆ. ಸಂಸತ್ತಿನಲ್ಲಿ ನಾನು ಭಾಷಣ ಮಾಡದಂತೆ ತಡೆಯಲಾಯಿತು. ನಂತರ ನಾನು ಲೋಕಸಭೆ ಸ್ಪೀಕರ್ಗೆ ವಿವರವಾದ ಉತ್ತರವನ್ನು ಬರೆದೆ. ಕೆಲವು ಮಂತ್ರಿಗಳು ನನ್ನ ಬಗ್ಗೆ ಸುಳ್ಳು ಹೇಳಿದರು. ಆದರೆ ನಾನು ಪ್ರಶ್ನೆ ಕೇಳುವುದನ್ನು ನಿಲ್ಲಿಸುವುದಿಲ್ಲ” ಎಂದಿದ್ದಾರೆ.
“ನರೇಂದ್ರ ಮೋದಿ ಮತ್ತು ಅದಾನಿ ನಡುವಿನ ಸಂಬಂಧ ಹೊಸದಲ್ಲ. ಇದು ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಿನಿಂದ ಪ್ರಾರಂಭವಾಯಿತು. ನಾನು ಪ್ರಧಾನಿಯವರಿಗೆ ಇಬ್ಬರು ವಿಮಾನದಲ್ಲಿ ಕುಳಿತಿರುವ ಫೋಟೋವನ್ನು ತೋರಿಸಿದೆ. ಈ ಕಾರಣದಿಂದ ನನ್ನ ಭಾಷಣಕ್ಕೆ ಅಡ್ಡಿಪಡಿಸಲಾಯಿತು” ಎಂದು ರಾಹುಲ್ ಗಾಂಧಿ ಹೇಳಿದರು.
” ನಾನು ಮೊದಲು ಸ್ಪೀಕರ್ಗೆ ಪತ್ರ ಬರೆದು ಸಂಸತ್ತಿನಲ್ಲಿ ಮಾತನಾಡುವ ಅವಕಾಶ ಪಡೆಯುವುದು ನನ್ನ ಹಕ್ಕು ಎಂದು ಕೇಳಿದೆ. ಇದಕ್ಕೆ ನನಗೆ ಉತ್ತರ ಸಿಕ್ಕಿಲ್ಲ. ನಂತರ, ನಾನು ಸ್ಪೀಕರ್ ಅವರ ಕಚೇರಿಗೆ ಹೋಗಿ ನನಗೆ ಏಕೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಕೇಳಿದೆ. ಆದರೂ ನನಗೆ ಅವಕಾಶ ನೀಡಲಿಲ್ಲ” ಎಂದು ರಾಹುಲ್ ಗಾಂಧಿ ಹೇಳಿದರು.
“ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸಲು ನಾನು ಇಲ್ಲಿದ್ದೇನೆ. ನಾನು ಅವರಿಗೆ ಹೆದರುವುದಿಲ್ಲ. ಇದು ನನ್ನ ಇತಿಹಾಸದಲ್ಲಿಲ್ಲ. ಅದಾನಿ ಮತ್ತು ನರೇಂದ್ರ ಮೋದಿ ನಡುವೆ ಏನು ಸಂಬಂಧ ಎಂದು ನಾನು ಕೇಳುವುದನ್ನು ಮುಂದುವರಿಸುತ್ತೇನೆ.ನನ್ನನ್ನು ಏಕೆ ಅನರ್ಹಗೊಳಿಸಲಾಗಿದೆ ಎಂಬುದನ್ನು ದಯವಿಟ್ಟು ಅರ್ಥಮಾಡಿಕೊಳ್ಳಿ. ಅದಾನಿ ಕುರಿತಾದ ಮುಂದಿನ ಭಾಷಣಕ್ಕೆ ಪ್ರಧಾನಿ ಮೋದಿ ಹೆದರಿದ ಕಾರಣ ಅವರು ನನ್ನನ್ನು ಅನರ್ಹಗೊಳಿಸಿದ್ದಾರೆ” ಎಂದು ಕಾಂಗ್ರೆಸ್ ನಾಯಕ ಹೇಳಿದರು
ಯಾವುದೇ ಸಮುದಾಯದ ವಿರುದ್ಧ ಮಾತನಾಡಿಲ್ಲ
ನೀವು ಒಂದು ಸಮುದಾಯವನ್ನು ಅಪಮಾನ ಮಾಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್, ”ನಾನು ಕೇಳಿರುವುದು ಅದಾನಿ ಹಾಗೂ ಮೋದಿ ನಡುವಿನ ಸಂಬಂಧ. ಯಾವುದೇ ಸಮುದಾಯವನ್ನು ನಾನು ಅಪಮಾನ ಮಾಡಿಲ್ಲ.ನನಗೆ ಎಲ್ಲ ಸಮಾಜ ಒಂದೇ. ಭಾರತ್ ಜೋಡೋ ಯಾತ್ರೆಯಲ್ಲಿ ನನ್ನ ಉದ್ದೇಶ ಎಲ್ಲರಿಗೂ ಗೊತ್ತಾಗಿದೆ. ಹಿಂಸಾರಹಿತ, ಶಾಂತಿ ಸುವ್ಯವಸ್ಥೆಯ ನಮ್ಮ ದೇಶಕ್ಕೆ ಅಗತ್ಯವಾಗಿದೆ” ಎಂದು ಹೇಳಿದರು.
“ನನ್ನನ್ನು ಜೀವನಪರ್ಯಂತ ಜೈಲಿಗೆ ಹಾಕಿದರೂ, ಮತ್ತೆ ಸದಸ್ಯತ್ವ ಸ್ಥಾನವನ್ನು ಮರುಕಳಿಸಿದರೂ ನನ್ನ ಹೋರಾಟ ಮುಂದುವರೆಯುತ್ತದೆ. ಭಾರತದ ಜನರ ಪ್ರಜಾಸತ್ತಾತ್ಮಕ ಧ್ವನಿಯನ್ನು ರಕ್ಷಿಸಲು ನನ್ನ ಹೋರಾಟ ಮುಂದುವರೆಯುತ್ತದೆ. ನಾನು ಯಾರಿಗೂ ಹೆದರುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೌತಮ್ ಅದಾನಿ ನಡುವಿನ ಸಂಬಂಧದ ಬಗ್ಗೆ ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸುವುದಿಲ್ಲ. ಅವರು ನನ್ನನ್ನು ಅನರ್ಹಗೊಳಿಸುವ ಮೂಲಕ ಅಥವಾ ಜೈಲಿಗೆ ಹಾಕುವ ಮೂಲಕ ನನ್ನನ್ನು ಹೆದರಿಸಲು ಸಾಧ್ಯವಿಲ್ಲ. ನಾನು ಈ ಹೋರಾಟದಿಂದ ಹಿಂದೆ ಸರಿಯುಲ್ಲ” ಎಂದು ಕಾಂಗ್ರೆಸ್ ನಾಯಕ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಜೈರಾಮ್ ರಮೇಶ್, ಕೆ ಸಿ ವೇಣುಗೋಪಾಲ್ ಸೇರಿದಂತೆ ಪ್ರಮುಖ ನಾಯಕರು ಹಾಜರಿದ್ದರು.