- ಪೊಲೀಸರು ಎಫ್ಐಆರ್ ದಾಖಲಿಸುತ್ತಿಲ್ಲ ಎಂದು ಆರೋಪಿಸಿರುವ ದರ್ಶನ್ ತಂದೆ
- ಫೆ.12ರಂದು ಐಐಟಿ ಬಾಂಬೆಯ ಕ್ಯಾಂಪಸ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ವಿದ್ಯಾರ್ಥಿ
ಬಾಂಬೆ ಐಐಟಿ ದಲಿತ ವಿದ್ಯಾರ್ಥಿ ದರ್ಶನ್ ಸೋಲಂಕಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿಕೊಳ್ಳಲು ಪೊಲೀಸರು ಕಿರುಕುಳ ನೀಡುತ್ತಿದ್ದಾರೆಂದು ದರ್ಶನ್ ಅವರ ತಂದೆ ಆರೋಪಿಸಿದ್ದಾರೆ.
ಪೊಲೀಸರ ಕಿರುಕುಳದ ಬಗ್ಗೆ ದರ್ಶನ್ ಸೋಲಂಕಿ ಅವರ ತಂದೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಮುಂಬೈ ಪೊಲೀಸ್ ಆಯುಕ್ತ ವಿವೇಕ್ ಫನ್ಸಾಲ್ಕರ್ ಅವರಿಗೆ ಪತ್ರ ಬರೆದಿದ್ದಾರೆ.
ಕಳೆದ ಎರಡು ವಾರಗಳಿಂದ ಎಫ್ಐಆರ್ ದಾಖಲಿಸಿಕೊಳ್ಳಲು ಪೊಲೀಸರು ಹಾಗೂ ವಿಶೇಷ ತನಿಖಾ ದಳ ನಿರಾಕರಿಸುತ್ತಿದ್ದು, ಅಧಿಕಾರಿಗಳ ವರ್ತನೆ ಬಗ್ಗೆ ನಮ್ಮ ಕುಟುಂಬಕ್ಕೆ ಆಘಾತ ಹಾಗೂ ನಿರಾಶೆಯನ್ನು ತಂದಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
“ನಮ್ಮ ಮಗನ ಸಾವಿನ ಹಿಂದೆ ಪಿತೂರಿಯಿದೆ. ಪ್ರಕರಣ ಸಂಬಂಧ ಮಾರ್ಚ್ 16 ರಂದು ನಾನು ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲು ಕುಟುಂಬದೊಂದಿಗೆ ಅಹಮದಾಬಾದ್ನಿಂದ ಪೊವೈ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದೆ. ಪ್ರಕರಣದ ತನಿಖೆಗಾಗಿ ಎಸ್ಐಟಿ ರಚನೆ ಮಾಡಲಾಗಿರುವುದರಿಂದ ಎಫ್ಐಆರ್ ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನಿರಾಕರಿಸುತ್ತಿದ್ದಾರೆ” ಎಂದು ಪತ್ರದಲ್ಲಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ| ಶ್ರೀರಾಮ ‘ಅಸ್ಪೃಶ್ಯ’ರ ಮೈಮೇಲೆ ಹಚ್ಚೆಯಾದ- ಸ್ಥಾವರ ಇಳಿದು ಜಂಗಮನಾದ
“ತಾನು ಭೇಟಿ ನೀಡಿದ ಸಮಯದಲ್ಲಿ ಡಿಸಿಪಿ ಕೂಡ ಉಪಸ್ಥಿತರಿದ್ದರು. ಅವರನ್ನು ಮನವಿ ಮಾಡಿಕೊಂಡರೂ ಅವರು ಕೂಡ ಸಹಾಯ ಮಾಡಲಿಲ್ಲ.ಪೊಲೀಸರು ನಿರಾಕರಿಸಿದ ಹಿನ್ನಲೆ ಅದೇ ದಿನ ಎಸ್ಐಟಿಯನ್ನೂ ಸಂಪರ್ಕಿಸಿದ್ದೆವು. ಆದರೆ, ಅವರಿಂದಲೂ ಯಾವುದೇ ಸಹಕಾರ ದೊರಕಲಿಲ್ಲ. ಪೊಲೀಸರ ವರ್ತನೆಯಿಂದ ನಮ್ಮ ಕುಟುಂಬ ಸಂಪೂರ್ಣ ಆಘಾತ ಹಾಗೂ ನಿರಾಶೆಗೊಂಡಿದೆ. ಹೀಗಾಗಿ ನಮಗೆ ಬೇರೆ ದಾರಿಯಿಲ್ಲದೆ ನಿಮಗೆ ಪತ್ರ ಬರೆಯುತ್ತಿದ್ದೇವೆ. ಪೊಲೀಸರು ಹಾಗೂ ಅಧಿಕಾರಿಗಳ ವರ್ತನೆ ನಮಗೆ ನ್ಯಾಯ ದೊರೆಯುವ ವಿಶ್ವಾಸ ಹೋಗುವಂತೆ ಮಾಡುತ್ತಿದೆ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಜಾತಿ ತಾರತಮ್ಯ ಕೋನವನ್ನು ಬದಿಗೊತ್ತಿ, ಬೇರೆಯ ರೀತಿಯಲ್ಲಿ ತನಿಖೆ ನಡೆಸಲು ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಆತಂಕ ಶುರುವಾಗಿದೆ. ದಯವಿಟ್ಟು ಈ ವಿಚಾರವನ್ನು ಪರಿಶೀಲಿಸಿ ಮತ್ತು ನಮ್ಮ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿ. ತನಿಖೆಯನ್ನು ಸ್ವತಂತ್ರವಾಗಿ,ನ್ಯಾಯಯುತವಾಗಿ, ಯಾವುದೇ ಅಕ್ರಮವಿಲ್ಲದೆ ನಡೆಸಲಾಗುತ್ತಿದೆ ಎಂಬುದನ್ನು ಖಚಿತಪಡಿಸಿ. ಈ ವಿಷಯದಲ್ಲಿ ತುರ್ತಾಗಿ ಕಾರ್ಯನಿರ್ವಹಿಸಿ ನಮ್ಮ ಮಗನಿಗೆ ನ್ಯಾಯ ಒದಗಿಸಿ” ಎಂದು ಮನವಿ ಮಾಡಿಕೊಂಡಿದ್ದಾರೆ.
ಅಹಮದಾಬಾದ್ನ ದಲಿತ ವಿದ್ಯಾರ್ಥಿ ದರ್ಶನ್ ಸೋಲಂಕಿ ಅವರು ಬಾಂಬೆ ಐಐಟಿಯಲ್ಲಿ ಕೆಮಿಕಲ್ಇಂಜಿನಿಯರಿಂಗ್ ವಿಭಾಗದಲ್ಲಿ ಮೊದಲ ವರ್ಷದ ಬಿ.ಟೆಕ್ ವಿದ್ಯಾರ್ಥಿಯಾಗಿದ್ದರು. ಫೆ.12ರಂದು ಐಐಟಿ ಬಾಂಬೆಯ ಪೊವೈ ಕ್ಯಾಂಪಸ್ನಲ್ಲಿರುವ ಹಾಸ್ಟೆಲ್ನ 7ನೇ ಮಹಡಿಯಿಂದ ಜಿಗಿದು ಮೃತಪಟ್ಟಿದ್ದರು.
ದರ್ಶನ್ ದಲಿತ ಸಮುದಾಯಕ್ಕೆ ಸೇರಿದ ಕಾರಣ ಆತ ಜಾತಿ ತಾರತಮ್ಯ ಎದುರಿಸುತ್ತಿದ್ದ ಎಂದು ಆತನ ಕುಟುಂಬ ಹಾಗೂ ಐಐಟಿ ಬಾಂಬೆಯ ದಲಿತ್ ಸ್ಟಡಿ ಸರ್ಕಲ್ ಆರೋಪಿಸಿದೆ.
ಈ ನಡುವೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಸೋಲಂಕಿ ಬರೆದಿದ್ದ ಡೆತ್ ನೋಟ್ ವಶಪಡಿಸಿಕೊಂಡಿದ್ದು, ಪತ್ರದಲ್ಲಿ ಮೃತ ವಿದ್ಯಾರ್ಥಿ ದರ್ಶನ್, ಹಾಸ್ಟೆಲ್ನಲ್ಲಿ ತನ್ನ ಜೊತೆಗಿದ್ದ ವಿದ್ಯಾರ್ಥಿಯೊಬ್ಬನ ಹೆಸರನ್ನು ಬರೆದಿದ್ದಾನೆಂದು ತಿಳಿದುಬಂದಿದೆ.