ಮಗುವಿನ ಪಿತೃತ್ವ ಪರೀಕ್ಷೆಯ ಫಲಿತಾಂಶಗಳನ್ನು ದಾಖಲಿಸುವ ಅರ್ಜಿಯನ್ನು ತಿರಸ್ಕರಿಸಿದ ರಾಜಸ್ಥಾನ ಹೈಕೋರ್ಟ್, ಡಿಎನ್ಎ ಪರೀಕ್ಷೆಯು ಮಗುವಿನ ಹಕ್ಕುಗಳ ಮೇಲೆ ಆಕ್ರಮಣ ಮಾಡುತ್ತದೆ ಎಂದು ಹೇಳಿ ಕೌಟುಂಬಿಕ ನ್ಯಾಯಾಲಯ ಅನುಮತಿಸಿದ್ದ ಪಿತೃತ್ವ ಪರೀಕ್ಷೆಯ ಅರ್ಜಿಯನ್ನು ವಜಾಗೊಳಿಸಿದೆ.
“ಡಿಎನ್ಎ ಪಿತೃತ್ವ ಪರೀಕ್ಷೆಯನ್ನು ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ನಡೆಸಬೇಕಾಗುತ್ತದೆ. ಆದ್ದರಿಂದ, ವ್ಯಭಿಚಾರದ ನೆಪವಿಟ್ಟುಕೊಂಡು ವಿಚ್ಛೇದನ ಪಡೆಯಲು ಮಗುವನ್ನು ಅಸ್ತ್ರವಾಗಿ ಬಳಸಲಾಗುವುದಿಲ್ಲ” ಎಂದು ನ್ಯಾಯಮೂರ್ತಿ ಡಾ. ಪುಷ್ಪೇಂದ್ರ ಸಿಂಗ್ ಭಾಟಿ ತಿಳಿಸಿದ್ದಾರೆ.
“ಪುರುಷನು ತನ್ನ ಹೆಂಡತಿಯೊಂದಿಗೆ ದೈಹಿಕ ಸಂಪರ್ಕ ನಡೆಸಿಲ್ಲ ಎಂದು ಮೊದಲು ಸಾಬೀತುಪಡಿಸುವುದು ಅವಶ್ಯಕ. ಇದರ ನಂತರವಷ್ಟೇ, ಭಾರತೀಯ ಸಾಕ್ಷ್ಯ ಕಾಯಿದೆ, 1872 ರ ಸೆಕ್ಷನ್ 112 ರ ವ್ಯಾಪ್ತಿಯಿಂದ ಡಿಎನ್ಎ ಪರೀಕ್ಷೆಗೆ ಅನುಮತಿಸಬಹುದು” ಎಂದು ನ್ಯಾಯಾಲಯ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಮಣಿಪುರ ಹಿಂಸಾಚಾರ: ರಾಜ್ಯದಲ್ಲಿ ಇಂಟರ್ನೆಟ್ ನಿಷೇಧ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ
“ಮಗುವಿನ ಮಾನಸಿಕ ಮತ್ತು ದೈಹಿಕ ಆರೋಗ್ಯ ಮತ್ತು ಅದರ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಅಂಶಗಳನ್ನು ನ್ಯಾಯಾಲಯವು ಅತ್ಯುನ್ನತವಾಗಿ ಪರಿಗಣಿಸುತ್ತದೆ. ವೈವಾಹಿಕ ಘರ್ಷಣೆಗಳ ಸಂದರ್ಭದಿಂದ ಮಗುವನ್ನು ಬಲಿಪಶು ಮಾಡುವ ಅಥವಾ ಅವನ ಸಾಂವಿಧಾನಿಕ ಘನತೆಯ ಹಕ್ಕನ್ನು ನಿರಾಕರಿಸಬಾರದು. ವಿಚ್ಛೇದನದ ಮೊಕದ್ದಮೆಯಲ್ಲಿ ಮಗುವನ್ನು ಅಸ್ತ್ರವಾಗಿ ಬಳಸಬಾರದು. ಅದು ಮಗುವಿನ ಅಸ್ತಿತ್ವ ಹಾಗೂ ಮನಸ್ಸಿನ ಮೇಲೆ ಶಾಶ್ವತ ಪರಿಣಾಮ ಬೀರುತ್ತದೆ” ಎಂದು ನ್ಯಾಯಾಧೀಶರು ತಿಳಿಸಿದರು.
“1955ರ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13ರ ಅಡಿಯಲ್ಲಿ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದು, ಇದರಲ್ಲಿ ಯಾವುದೇ ವ್ಯಭಿಚಾರದ ಆರೋಪವಿಲ್ಲ ಎಂದು ನ್ಯಾಯಾಲಯವು ಗಮನಿಸಿದೆ. ಯಾವುದೇ ವ್ಯಭಿಚಾರದ ಆಧಾರವನ್ನು ತೆಗೆದುಕೊಳ್ಳದೆ ವ್ಯಕ್ತಿಯು 2019 ರಲ್ಲಿ ಪತ್ನಿಯ ವಿರುದ್ಧ ವಿಚ್ಛೇದನ ಅರ್ಜಿಯನ್ನು ಸಲ್ಲಿಸಿದ್ದಾರೆ. ಅಲ್ಲದೆ ಮಗುವಿನ ಜನನದ ಸಮಯದಲ್ಲಿ ಪತಿ ಮತ್ತು ಪತ್ನಿ ಒಟ್ಟಿಗೆ ವಾಸಿಸುತ್ತಿದ್ದರು. ಹೀಗಾಗಿ, ಪತಿ ಸಹಬಾಳ್ವೆಗೆ ಪ್ರವೇಶವನ್ನು ಹೊಂದಿದ್ದರು ಎಂದು ಪ್ರಕರಣದ ದಾಖಲೆಯು ಸ್ಪಷ್ಟವಾಗಿ ಬಹಿರಂಗಪಡಿಸುತ್ತದೆ. ಆದರೆ ಪತಿ ಕೇವಲ ಹೆಂಡತಿಯನ್ನು ಉಲ್ಲೇಖಿಸಿ ಮಗುವಿನ ತಂದೆಯಲ್ಲ ಎಂದು ಹೇಳುತ್ತಿದ್ದಾರೆ” ಎಂದು ನ್ಯಾಯಾಲಯ ತಿಳಿಸಿದೆ.
ಉದಯಪುರದ ಮೂಲದ ದಂಪತಿ ವಿವಾಹವು 2010 ರಲ್ಲಿ ನಡೆದಿದ್ದು, 2018 ರಲ್ಲಿ ಮಗು ಜನಿಸಿದೆ. ಪತ್ನಿ 2019 ರಲ್ಲಿ ಗಂಡನ ಮನೆಯನ್ನು ತೊರೆದಿದ್ದಾರೆ.