- 10 ದಿನಗಳ ಅಮೆರಿಕಾ ಪ್ರವಾಸದಲ್ಲಿರುವ ರಾಹುಲ್ ಗಾಂಧಿ
- ಭಾರತೀಯ ಮೂಲದ ವಿದ್ಯಾರ್ಥಿಗಳ ಜೊತೆ ಸಂವಾದ
ಅಮೆರಿಕಾ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ಮುಂದುವರೆಸಿದ್ದು, ತಮ್ಮನ್ನು ಲೋಕಸಭೆಯ ಸದಸ್ಯ ಸ್ಥಾನದಿಂದ ವಜಾಗೊಳಿಸಿದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಬುಧವಾರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಅನಿವಾಸಿ ಭಾರತೀಯರು ಮತ್ತು ʼಸ್ಟಾನ್ ಫೋರ್ಡ್ʼ ವಿಶ್ಯವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ಮೂಲದ ವಿದ್ಯಾರ್ಥಿಗಳ ಜೊತೆಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಹುಲ್, ತಮ್ಮ ಲೋಕಸಭೆ ಸದಸ್ಯತ್ವ ಅನರ್ಹಗೊಂಡ ಬಗ್ಗೆ ಮಾತನಾಡಿದ್ದು, “ನಾನು ರಾಜಕೀಯಕ್ಕೆ ಕಾಲಿಟ್ಟಾಗ ಈ ರೀತಿಯ ಸಂದರ್ಭಗಳು ಎದುರಾಗುತ್ತವೆ ಎಂಬ ಕಲ್ಪನೆಯೂ ಇರಲಿಲ್ಲ. ಆದರೆ, ಅವರು (ಮೋದಿ ನೇತೃತ್ವದ ಕೇಂದ್ರ ಸರ್ಕಾರ) ನನ್ನನ್ನು ವಜಾಗೊಳಿಸಿದ್ದರಿಂದ ಹೆಚ್ಚಿನ ಅವಕಾಶಗಳು ನನ್ನ ಪಾಲಾಗಿವೆ. ರಾಜಕೀಯ ನಡೆಯುವುದು ಇದೇ ರೀತಿಯಲ್ಲಿ” ಎಂದಿದ್ದಾರೆ.
“ಆರು ತಿಂಗಳ ಹಿಂದೆಯೇ ಈ ಎಲ್ಲ ನಾಟಕಗಳು ಶುರುವಾಗಿದ್ದವು. ಆ ಸಂದರ್ಭದಲ್ಲಿ ವಿರೋಧ ಪಕ್ಷದಲ್ಲಿದ್ದ ನಾವೆಲ್ಲರೂ ಸಂಕಷ್ಟದಲ್ಲಿದ್ದೆವು. ಆಡಳಿತಾರೂಢ ಪಕ್ಷದ ಬಳಿ ಹಣದ ಪ್ರಾಬಲ್ಯವಿದೆ. ಸಾರ್ವಜನಿಕ ಸಂಸ್ಥೆಗಳ ಮೇಲೆ ಅವರು ಸಾಧಿಸಿದ್ದ ಹಿಡಿತದಿಂದಾಗಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಲು ಹೆಣಗಾಡುತ್ತಿದ್ದೆವು” ಎಂದು ಮೋದಿ ಸರ್ಕಾರದ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಭಾರತದಲ್ಲಿ ಒಂದು ಗುಂಪಿನ ಜನ ತಮಗೆ ಎಲ್ಲ ಗೊತ್ತಿದೆ ಎಂಬಂತೆ ವರ್ತಿಸುತ್ತಿದ್ದಾರೆ. ದೇವರಿಗಿಂತಲೂ ಹೆಚ್ಚಿಗೆ ತಿಳಿದುಕೊಂಡವರಂತೆ ನಡೆದುಕೊಳ್ಳುತ್ತಾರೆ. ದೇವರಿಗೇ ಬುದ್ಧಿ ಹೇಳುವ ಜನರೂ ನಮ್ಮಲ್ಲಿದ್ದಾರೆ. ಪ್ರಧಾನಿ ಮೋದಿ ಅವರು ಕೂಡ ಅದೇ ಮಾದರಿಯ ವ್ಯಕ್ತಿ” ಎಂದು ವ್ಯಂಗ್ಯವಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಲೋಕಸಭೆಗೆ `ಕೈ’ ಅಭ್ಯರ್ಥಿಗಳಾಗುತ್ತಾರಾ ರಮ್ಯಾ, ಗೀತಾ ಶಿವರಾಜಕುಮಾರ್?
2019ರ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ “ಎಲ್ಲ ಕಳ್ಳರಿಗೂ ಮೋದಿ ಎಂಬ ಉಪನಾಮ ಏಕಿದೆ” ಎಂದು ರಾಹುಲ್ ಲೇವಡಿ ಮಾಡಿದ್ದರು. ಈ ಹೇಳಿಕೆಯನ್ನು ಖಂಡಿಸಿ ಗುಜರಾತ್ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಮಾನಹಾನಿ ಮೊಕದ್ದಮೆ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡಸಿದ್ದ ನ್ಯಾಯಾಲಯ ರಾಹುಲ್ ಅವರಿಗೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿತ್ತು. ಅದಾದ ಬಳಿಕ ಜಾಮೀನು ಕೂಡ ಮಂಜೂರು ಮಾಡಿತ್ತು. ಇದಾದ ಬೆನ್ನಲ್ಲೇ ಕೇಂದ್ರ ಸರ್ಕಾರ ರಾಹುಲ್ ಅವರನ್ನು ಲೋಕಸಭಾ ಸದಸ್ಯ ಸ್ಥಾನದಿಂದ ವಜಾಗೊಳಿಸಿತ್ತು.