- ಒಂದು ಸಲ ಅವಕಾಶ ನೀಡುವಂತೆ ಬೆಂಬಲ ಕೋರಿದ ಅಭ್ಯರ್ಥಿ
- ಸಭೆಯಲ್ಲಿ ಭಾಗಿಯಾದ ಸರ್ವೋದಯ ಕರ್ನಾಟಕ ಪಕ್ಷದ ಪ್ರಮುಖರು
ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ ತಾತ ಒಳ್ಳೆಯವನೆಂದು ಮೊಮ್ಮಕ್ಕಳಿಗೆ ವೋಟ್ ಹಾಕುವುದು, ಗಂಡ ಒಳ್ಳೆಯವನೆಂದು ಹೆಂಡತಿಗೆ ವೋಟ್ ಹಾಕುವುದು, ನನ್ನ ಜಾತಿಯವನೆಂದು ಮತ ಹಾಕುವುದು ಮೊದಲು ಬದಲಾಗಬೇಕು ಎಂದು ಸರ್ವೋದಯ ಕರ್ನಾಟಕ ಪಕ್ಷ ಅಭ್ಯರ್ಥಿ ಮಧುಚಂದನ್ ಪ್ರತಿಪಾದಿಸಿದರು.
ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಎಸ್ ಸಿ ಮಧುಚಂದನ್ ಹುಲಿವಾನದ ಆರ್ಗ್ಯಾನಿಕ್ ಫಾರ್ಮ್ ನಲ್ಲಿ ಮಂಡ್ಯ ಜಿಲ್ಲೆ ಕೆರಗೋಡು ಹೋಬಳಿ ವ್ಯಾಪ್ತಿಯ ಬೂತ್ ಕಮಿಟಿ ಪ್ರಮುಖರ ಸಭೆ ನಡೆಸಿ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
“ಯಾವ ವ್ಯಕ್ತಿಗೆ ರೈತರ, ಕೂಲಿ ಕಾರ್ಮಿಕರ, ವಿದ್ಯಾವಂತ ಪದವೀಧರರ, ಹಾಲು ಉತ್ಪಾದಕರ ಸಮಸ್ಯೆಗಳು ತಳಮಟ್ಟದಿಂದ ಅರಿವಿರುತ್ತದೆಯೋ ಅಂಥವರನ್ನು ಗುರುತಿಸಿ ಮತ ಹಾಕಬೇಕು. ನಾನು ಮಧ್ಯಮ ವರ್ಗದ ಜನರ ಬವಣೆಗಳನ್ನು ಅರಿತಿದ್ದೇನೆ. ಹಾಗಾಗಿ ಈ ಬಾರಿ ಮಂಡ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ನನಗೆ ನೀವೆಲ್ಲರೂ ಬೆಂಬಲ ಅತ್ಯಗತ್ಯೆ” ಎಂದು ಮನವಿ ಮಾಡಿದರು.
ರೈತಮುಖಂಡರಾದ ಉಪ್ಪರಕನಹಳ್ಳಿ ಕೆಂಪಮ್ಮ ಮಾತನಾಡಿ, “ರೈತ ತನ್ನ ಹೊಲಗದ್ದೆಗಳಿಗೆ ನೀರು ಹಾಯಿಸಲು ಸರಿಯಾದ ಪ್ರಮಾಣದಲ್ಲಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ವಿದ್ಯಾವಂತರಿಗೆ ಕೆಲಸ ಸಿಗುತ್ತಿಲ್ಲ, ವ್ಯವಸಾಯ ಮಾಡಿಕೊಂಡಿರುವ ಗಂಡು ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ. ಕೃಷಿ ಪರಿಕರಗಳ ಬೆಲೆ ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ ಆದರೆ, ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಮಾತ್ರ ಸಿಗುತ್ತಿಲ್ಲ. ಇನ್ನಾದರೂ ಹಣ ಹೆಂಡಕ್ಕೆ ತಮ್ಮ ಮತ ಮಾರಿಕೊಳ್ಳದೆ ಉತ್ತಮ ವ್ಯಕ್ತಿಯನ್ನು ಗೆಲ್ಲಿಸಲು ಕೆಲಸ ಮಾಡೋಣ” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? : ತಲಕಾಡಿನಲ್ಲಿ ಪ್ರವಾಸಿಗರಿಂದ ದುಪ್ಪಟ್ಟು ಹಣ ವಸೂಲಿ; ಇಲ್ಲದ ಮೂಲ ಸೌಕರ್ಯಗಳು
ಸರ್ವೋದಯ ಕರ್ನಾಟಕ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕೆರೆ ಪ್ರಸನ್ನ ಗೌಡ ಮಾತನಾಡಿ, “ಚುನಾವಣೆಗಳು ಬಂತೆಂದರೆ ಕುರುಡು ಕಾಂಚಾಣ ತನ್ನ ರುದ್ರ ನರ್ತನವನ್ನು ಮಾಡುತ್ತದೆ. ಕೆಟ್ಟ ಕಾಂಚಣಾದಾಸಗೆ ಬಲಿಯಾಗಿ ನಮ್ಮ ಭವಿಷ್ಯ ಯುವ ಪೀಳಿಗೆಯನ್ನು ಅಂಧಕಾರಕ್ಕೆ ತಳ್ಳುವ ಕೆಲಸ ಮಾಡದಿರೋಣ. ಉತ್ತಮರನ್ನು ಸಮಾಜದ ಸಮಸ್ಯೆಗಳ ಬಗ್ಗೆ ಅರಿವಿರುವ ಹೋರಾಟದ ಹಿನ್ನೆಲೆ ಹೊಂದಿರುವ ಮಧುಚಂದ್ರನ್ ಅವರನ್ನು ಮಂಡ್ಯ ವಿಧಾನಸಭಾ ಕ್ಷೇತ್ರದ ಜನತೆ ಈ ಬಾರಿ ವಿಧಾನಸಭೆಗೆ ಕಳಿಸಿ ಕೊಡಬೇಕು” ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಖಜಾಂಚಿ ತಗ್ಗಳ್ಳಿ ಪ್ರಸನ್ನ, ಮುಖಂಡರಾದ ಹುಲಿವಾನ ಜಗದೀಶ್, ರವಿ, ಕೆ ಗೌಡಗೆರೆ ಗ್ರಾಮದ ರಂಗ ಶೆಟ್ರು, ಮಂಜುನಾಥ್, ಮಾರಗೌಡನಹಳ್ಳಿ ನಿಂಗೇಗೌಡ್ರು, ಕಾಂತರಾಜು ಮರ್ಲಿಂಗದೊಡ್ಡಿ ಲಕ್ಷ್ಮಿ ನಾರಾಯಣ ಸೇರಿದಂತೆ ಹಲವರು ಹಾಜರಿದ್ದರು.