ದೇಶದಲ್ಲಿ ವೈದ್ಯಕೀಯ ಶಿಕ್ಷಣ ಪ್ರವೇಶಾತಿಗಾಗಿ ನಡೆಯುವ ‘ನೀಟ್’ ಪರೀಕ್ಷೆ ಸಾಮಾನ್ಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲ. ಇದು ಹದಿಹರೆಯದ ವಿದ್ಯಾರ್ಥಿಗಳ ಪಾಲಿಗೆ ವರ್ಷಗಟ್ಟಲೆಯ ಕಠಿಣ ಪರಿಶ್ರಮದ ಫಲ. ತಮ್ಮ ಕುಟುಂಬದ ಆರ್ಥಿಕ ತ್ಯಾಗ ಮತ್ತು ಅವರ ಭವಿಷ್ಯದ ಕನಸು. ಇಂತಹ ಅತ್ಯುನ್ನತ ಮಟ್ಟದ ಪರೀಕ್ಷೆಯೊಂದರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು, ಸರ್ಕಾರ ಮರುಪರೀಕ್ಷೆಯನ್ನು ಹೇರಿರುವುದು, ವಿದ್ಯಾರ್ಥಿಗಳ ಮಾನಸಿಕ ಆಘಾತವನ್ನು ಹೆಚ್ಚಿಸಿದೆ. ಇದರ ಫಲವೇ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ ಪ್ರಕರಣಗಳು.
ನೀಟ್ ಪರೀಕ್ಷೆಯ ಸುತ್ತಲಿರುವ ಗೊಂದಲಗಳು ಕೇವಲ ಶೈಕ್ಷಣಿಕ ಕೇಂದ್ರದ ಮೋದಿ ಸರ್ಕಾರ ದೋಷವನ್ನು ಮಾತ್ರವಲ್ಲ, ದೇಶದ ಯುವಜನತೆಯ ತೀವ್ರ ಮಾನಸಿಕ ಬಿಕ್ಕಟ್ಟನ್ನೂ ಹೊರಹಾಕಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕೇವಲ 37 ದಿನಗಳ ಅವಧಿಯಲ್ಲಿ ದೇಶಾದ್ಯಂತ ಸುಮಾರು 12 ವಿದ್ಯಾರ್ಥಿಗಳು ತೀವ್ರ ಒತ್ತಡ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂತಹ ಪ್ರಮುಖ ಪರೀಕ್ಷೆಗಳನ್ನು ಸರಿಯಾಗಿ ನಿರ್ವಹಿಸಲಾಗದ ಮೋದಿ ಸರ್ಕಾರದ ದುಷ್ಕಾರ್ಯಗಳಿಗೆ ವಿದ್ಯಾರ್ಥಿಗಳು ತಮ್ಮ ಜೀವವನ್ನೇ ಬೆಲೆಯಾಗಿ ನೀಡುತ್ತಿದ್ದಾರೆ. ವಿದ್ಯಾರ್ಥಿಗಳು ‘ಸೈಕಲಾಜಿಕಲ್ ಬರ್ನ್ಔಟ್’ಗೆ ಒಳಗಾಗುತ್ತಿದ್ದಾರೆ.
ಇದನ್ನೂ ಓದಿ: ಪ್ರತಿ 40 ಸೆಕೆಂಡಿಗೆ 1 ಆತ್ಮಹತ್ಯೆ; ಜವಾಬ್ದಾರಿ ಮರೆತದ್ದು ಯಾರು?
ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯಮಟ್ಟದ ಹಲವು ಸಂಶೋಧನಾ ವರದಿಗಳು ಹೇಳುವಂತೆ ಒಂದು ಕಠಿಣ ಪರೀಕ್ಷೆ ಮುಗಿದ ತಕ್ಷಣ ವಿದ್ಯಾರ್ಥಿಗಳ ದೇಹ ಮತ್ತು ಮನಸ್ಸು ನಿರಾಳತೆಯ ಸ್ಥಿತಿಗೆ ಮರಳುತ್ತವೆ. ಆದರೆ ಪರೀಕ್ಷೆ ರದ್ದಾಗಿ ಮತ್ತೆ ಮರುಪರೀಕ್ಷೆ ಬರೆಯಬೇಕಾದಾಗ ಉಂಟಾಗುವ “ಸೈಕಲಾಜಿಕಲ್ ಲಿಂಬೊ” (Psychological Limbo) ಅಂದರೆ ಮಾನಸಿಕ ಅನಿಶ್ಚಿತತೆಯ ಸ್ಥಿತಿ ವಿದ್ಯಾರ್ಥಿಗಳನ್ನು ಮಿತಿಮೀರಿ ಕಾಡುತ್ತದೆ.
‘ದ ಲ್ಯಾನ್ಸೆಟ್’ (The Lancet) ಮತ್ತು ಹೆಲ್ತ್ ಜರ್ನಲ್ ಸಂಶೋಧನಾ ವರದಿಗಳ ಪ್ರಕಾರ, ಮಾನವನ ಮನಸ್ಸು ಸೋಲನ್ನು ಒಪ್ಪಿಕೊಳ್ಳಬಹುದು. ಆದರೆ ಸುದೀರ್ಘವಾದ ‘ಅನಿಶ್ಚಿತತೆ’ಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ಪರೀಕ್ಷೆಗೆ ನಾವು ಸಿದ್ಧವಾಗಬೇಕಾದರೆ ನಮ್ಮ ದೇಹದಲ್ಲಿ ‘ಅಡ್ರಿನಾಲಿನ್’ ಮತ್ತು ‘ಕಾರ್ಟಿಸೋಲ್’ನಂತಹ ಒತ್ತಡದ ಹಾರ್ಮೋನ್ಗಳು ಸ್ರವಿಸುತ್ತದೆ. ಈ ಹಾರ್ಮೋನ್ಗಳು ಪರೀಕ್ಷೆ ಮುಗಿದ ಮೇಲೂ ದೀರ್ಘಕಾಲದವರೆಗೆ ಹಾಗೆಯೇ ನಮ್ಮ ದೇಹದಲ್ಲಿರುತ್ತದೆ. ಅದು “ಸೈಕಲಾಜಿಕಲ್ ಬರ್ನ್ಔಟ್” (Psychological Burnout) ಅಥವಾ ಸಂಪೂರ್ಣ ಮಾನಸಿಕ ಬಳಲಿಕೆಗೆ ಕಾರಣವಾಗುತ್ತದೆ.
‘ಸೈಕಲಾಜಿಕಲ್ ಬರ್ನ್ಔಟ್’ಗೆ ತಳ್ಳುವ ಮರುಪರೀಕ್ಷೆ
ಪರೀಕ್ಷೆಗಳ ರದ್ಧತಿ ಮತ್ತು ಪದೇ ಪದೇ ನಡೆಯುವ ಮರುಪರೀಕ್ಷೆಗಳು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ತೀವ್ರವಾದ ನಕಾರಾತ್ಮಕ ಪರಿಣಾಮ ಬೀರುತ್ತವೆ. ಇದನ್ನು ಮನಃಶಾಸ್ತ್ರದಲ್ಲಿ ‘ಸೈಕಲಾಜಿಕಲ್ ಬರ್ನ್ಔಟ್’ ಅಥವಾ ಮಾನಸಿಕ ಬಳಲಿಕೆ ಎಂದು ಕರೆಯಲಾಗುತ್ತದೆ. ಯೆರ್ಕ್ಸ್-ಡಾಡ್ಸನ್ ಕಾನೂನು (Yerkes-Dodson Law) ಎಂಬ ಮನಶ್ಶಾಸ್ತ್ರೀಯ ಸಿದ್ಧಾಂತ, ಹಲವು ಸಂಶೋಧನೆಗಳ ಪ್ರಕಾರ ‘ಬರ್ನ್ಔಟ್’ ಎಂಬುದು ಕೇವಲ ದೇಹಕ್ಕೆ ಕಾಡುವ ಸಾಮಾನ್ಯ ಆಯಾಸವಲ್ಲ. ಇದು ಮೂರು ಮುಖ್ಯ ಲಕ್ಷಣಗಳನ್ನು ಹೊಂದಿರುತ್ತದೆ.
ಮೊದಲನೆಯದಾಗಿ ಭಾವನಾತ್ಮಕ ಬಳಲಿಕೆ (Emotional Exhaustion) ಅಂದರೆ ನಮ್ಮ ದೇಹದಲ್ಲಿರುವ ಎಲ್ಲ ಶಕ್ತಿ ಸಂಪೂರ್ಣವಾಗಿ ಖಾಲಿಯಾದಂತೆ ಭಾಸವಾಗುವುದು. ಎರಡನೆಯದಾಗಿ ನಕಾರಾತ್ಮಕತೆ ಅಥವಾ ಸಿನಿಸಿಸಂ (Cynicism/ Depersonalization). ಅಂದರೆ ಓದು ಮತ್ತು ಭವಿಷ್ಯದ ಬಗ್ಗೆ ಅಸಡ್ಡೆ ಅಥವಾ ನಕಾರಾತ್ಮಕ ಭಾವನೆ ಮೂಡುವುದು. ಮೂರನೆಯದಾಗಿ ನಾವು ಏನೇ ಮಾಡಿದರೂ ಏನನ್ನೂ ಸಾಧಿಸಿಲ್ಲ ಎಂಬ ಭಾವನೆ. ವಿದ್ಯಾರ್ಥಿಗಳಲ್ಲಿ ಎಷ್ಟೇ ಓದಿದರೂ ನಾನೂ ಯಶಸ್ವಿಯಾಗಲಾರೆ ಎಂಬ ಅಪನಂಬಿಕೆ ಸೃಷ್ಟಿಯಾಗುವುದು.
ಇದನ್ನೂ ಓದಿ: ಮತ್ತೋರ್ವ ವಿದ್ಯಾರ್ಥಿನಿ ಆತ್ಮಹತ್ಯೆ: ನೀಟ್ ಅಕ್ರಮಕ್ಕೆ ಇನ್ನೆಷ್ಟು ಬಲಿ?
ವಿದ್ಯಾರ್ಥಿಗಳಲ್ಲಿ ‘ಸೈಕಲಾಜಿಕಲ್ ಬರ್ನ್ಔಟ್’ ಮತ್ತು ತೀವ್ರ ಒತ್ತಡವು ಅವರು ಆತ್ಮಹತ್ಯೆಯಂತಹ ತೀವ್ರ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಕಾರಣವಾಗುತ್ತಿದೆ ಎಂಬುದನ್ನು ಜಾಗತಿಕವಾಗಿ ಮತ್ತು ಭಾರತದಲ್ಲಿ ಹಲವು ಪ್ರಮುಖ ಸಂಶೋಧನೆಗಳಿಂದ ದೃಢಪಟ್ಟಿದೆ.
ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ – ಎನ್ಸಿಆರ್ಬಿಯ ‘ಭಾರತದಲ್ಲಿ ಆಕಸ್ಮಿಕ ಸಾವು & ಆತ್ಮಹತ್ಯೆ’ (ADSI) ವರದಿಗಳ ಪ್ರಕಾರ, ದೇಶದಲ್ಲಿ ಪ್ರತಿ ವರ್ಷ 12 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಪರೀಕ್ಷೆಗಳಲ್ಲಿ ಅನುತ್ತೀರ್ಣ ಅಥವಾ ಕಡಿಮೆ ಅಂಕ ಅಥವಾ ನಿರೀಕ್ಷಿಸಿದಷ್ಟು ಅಂಕ ಸಿಗದಿರುವುದು ಮತ್ತು ಶೈಕ್ಷಣಿಕ ಒತ್ತಡ. ನಿರಂತರ ಓದಿನ ಒತ್ತಡ ಮತ್ತು ಭವಿಷ್ಯದ ಬಗೆಗಿನ ಆತಂಕ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಕುಗ್ಗಿಸುತ್ತಿದೆ.
ವಿಶ್ವದ ಅತ್ಯಂತ ಪ್ರತಿಷ್ಠಿತ ವೈದ್ಯಕೀಯ ಜರ್ನಲ್ ಆದ ‘ದಿ ಲ್ಯಾನ್ಸೆಟ್’ ಭಾರತದಲ್ಲಿನ ಯುವಕರ ಆತ್ಮಹತ್ಯೆಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿದೆ. ಇದರ ಪ್ರಕಾರ ದೇಶದಲ್ಲಿ 15ರಿಂದ 29 ವರ್ಷದೊಳಗಿನ ಯುವಕರು ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ‘ಸೈಕಲಾಜಿಕಲ್ ಬರ್ನ್ಔಟ್’
ಕೋಟಾದಂತಹ ಕೋಚಿಂಗ್ ಹಬ್ಗಳಲ್ಲಿ ಇರುವ ಕಠಿಣ ವೇಳಾಪಟ್ಟಿ, ನಿದ್ದೆಯ ಕೊರತೆ, ಮತ್ತು ಹೆತ್ತವರ ಅತಿಯಾದ ನಿರೀಕ್ಷೆಗಳು ವಿದ್ಯಾರ್ಥಿಗಳಲ್ಲಿ ‘ಕ್ರಾನಿಕ್ ಬರ್ನ್ಔಟ್’ (ದೀರ್ಘಕಾಲದ ಮಾನಸಿಕ ಬಳಲಿಕೆ) ಸೃಷ್ಟಿಸುತ್ತವೆ. ಇದು ಕ್ರಮೇಣ ತೀವ್ರ ಖಿನ್ನತೆಗೆ ತಿರುಗಿ, ಆತ್ಮಹತ್ಯೆಯ ಆಲೋಚನೆಗಳಿಗೆ ಕಾರಣವಾಗುತ್ತದೆ. ಈಗಾಗಲೇ ಒತ್ತಡದಲ್ಲಿರುವ ಈ ಮಕ್ಕಳಿಗೆ ವ್ಯವಸ್ಥೆಯ ವೈಫಲ್ಯಗಳೂ ಇನ್ನಷ್ಟು ನಿರಾಶೆ ಹುಟ್ಟಿಸಿರುವುದು ಸ್ಫುಟ.
ಸದ್ಯ ವಿದ್ಯಾರ್ಥಿಗಳ ಆತ್ಮಹತ್ಯೆ ಮತ್ತು ಭವಿಷ್ಯದ ಆಟವಾಡುತ್ತಿರುವ ವ್ಯವಸ್ಥೆಯ ವಿರುದ್ಧ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ವಿದ್ಯಾರ್ಥಿ ಸಂಘಟನೆಗಳು ಮತ್ತು ಪೋಷಕರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರಧಾನ್ ರಾಜೀನಾಮೆ ನೀಡುವವರೆಗೂ ಅಹೋರಾತ್ರಿ ಧರಣಿ ನಡೆಸುವುದಾಗಿ ಘೋಷಿಸಿದೆ.
ಮನಃಶಾಸ್ತ್ರ ಮತ್ತು ಸಾಮಾಜಿಕ ಸಂಶೋಧನೆಗಳ ಪ್ರಕಾರ, ಇಂತಹ ಸಾಮೂಹಿಕ ಆಕ್ರೋಶವು ವಿದ್ಯಾರ್ಥಿಗಳ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ತೀವ್ರ ಒತ್ತಡದಲ್ಲಿರುವ ವಿದ್ಯಾರ್ಥಿಗೆ “ಈ ಹೋರಾಟದಲ್ಲಿ ನಾನು ಒಬ್ಬಂಟಿಯಲ್ಲ, ಇಡೀ ಸಮಾಜ ಮತ್ತು ದೇಶವೇ ನನ್ನ ಪರವಾಗಿ ನಿಂತಿದೆ” ಎಂಬ ಭರವಸೆ ಮೂಡುತ್ತದೆ. ಇದರಿಂದಾಗಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಜತೆಗೆ ಪೋಷಕರಿಗೂ ಪರಿಸ್ಥಿತಿಯ ಗಂಭೀರತೆಯನ್ನು ಮನವರಿಕೆ ಮಾಡಿಕೊಡುತ್ತವೆ. ಸಾರ್ವಜನಿಕ ವಲಯದಿಂದ ತೀವ್ರ ಒತ್ತಡ ಬಂದಾಗ ಮಾತ್ರ ಪರೀಕ್ಷಾ ಮಂಡಳಿಗಳು ಮತ್ತು ಸರ್ಕಾರಗಳು ತಮ್ಮ ತಪ್ಪುಗಳನ್ನು ಒಪ್ಪಿಕೊಂಡು, ಭವಿಷ್ಯದಲ್ಲಿ ಇಂತಹ ಗಂಭೀರ ಲೋಪಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಹಾಗೂ ಪಾರದರ್ಶಕವಾದ ಸುಧಾರಣೆಗಳನ್ನು ತರಲು ಸಾಧ್ಯವಾಗುತ್ತದೆ.
ಆದರೆ ನಮ್ಮ ಸರ್ಕಾರ ಮಾಡುತ್ತಿರುವುದೇನು ಎಂಬ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಳ್ಳುವುದು ಒಳಿತು! ಶಿಕ್ಷಣ ವ್ಯವಸ್ಥೆಯಲ್ಲಿ ಇಷ್ಟೊಂದು ಅವಾಂತರ ನಡೆದರೂ ಶಿಕ್ಷಣ ಸಚಿವರು ಹೊಣೆಗಾರಿಕೆ ಹೊತ್ತು ರಾಜೀನಾಮೆ ನೀಡದಿರುವುದು, ಪ್ರಧಾನಿ ಮೋದಿ ಮೌನ ಮುರಿಯದಿರುವುದೇ ನಮ್ಮ ದೇಶ ಎತ್ತ ಸಾಗುತ್ತಿದೆ ಎಂಬುದಕ್ಕೆ ದೃಷ್ಟಾಂತ!

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.



