ಪಕ್ಷದಲ್ಲಿನ ಆಂತರಿಕ ಅಸಮಾಧಾನ ಇಂತಹ ಚುನಾವಣೆ ವೇಳೆ ಹೊರಬರುತ್ತದೆ. ಅಡ್ಡ ಮತದಾನ ಬಗ್ಗೆ ತಿಳಿದೂ ಅಭ್ಯರ್ಥಿ ನಿಲ್ಲಿಸಿದ್ದ ಕುಮಾರಸ್ವಾಮಿ ಅವರು ನನಗೆ ಎಲ್ಲವೂ ತಿಳಿದಿತ್ತು. ಕಳ್ಳರನ್ನು ಹಿಡಿಯಬೇಕಿತ್ತು ಎನ್ನುತ್ತಾರೆ. ಅಸಮಾಧಾನಗೊಂಡವರನ್ನು ಹಿಡಿದು ಏನು ಮಾಡಲು ಸಾಧ್ಯ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಕಸಬ ಹೋಬಳಿ ಚಿಕ್ಕೋನಹಳ್ಳಿ ಕಾಲೋನಿ, ನಿಟ್ಟೂರು ಹೋಬಳಿ ಮುಸ್ ಕೊಂಡ್ಲಿ, ಯಲ್ಲಾಪುರ ಕಾಲೋನಿ, ಬೊಮ್ಮರಸನಹಳ್ಳಿ ಕಾಲೋನಿ, ಬಡವನಪಾಳ್ಯ ಕಾಲೋನಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಒಟ್ಟು 3 ಕೋಟಿ ರೂಗಳ ಸಿಸಿ ರಸ್ತೆ ಹಾಗೂ ಕೊಂಡ್ಲಿ ಗ್ರಾಮದಲ್ಲಿ 17.43 ಕೋಟಿ ರೂಗಳ ಶ್ರೀಮತಿ ಇಂದಿರಾಗಾಂಧಿ ವಸತಿಶಾಲೆಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಅಡ್ಡಮತದಾನ ಕಾಂಗ್ರೆಸ್ ಪಕ್ಷದಲ್ಲಿ ನಡೆದಿಲ್ಲ. ಉಚ್ಚಾಟಿತ ಶಾಸಕರು ನೇರ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದಾರೆ. ಉಳಿದವರನ್ನು ಮೈತ್ರಿ ಪಕ್ಷಗಳು ಹುಡುಕಲಿ ಎಂದು ಛೇಡಿಸಿದರು.
ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಗೆ ಕುಮಾರಸ್ವಾಮಿ ಅವರೇ ಮಂಜೂರು ಮಾಡಿದ್ದು, ಆ ಸಮಯದಲ್ಲಿ ಈ ಯೋಜನೆ ಬಗ್ಗೆ ಬೇಡವೆಂದು ವಿರೋಧ ಮಾಡಿದ್ದೆ. ಈ ವಿಚಾರದಲ್ಲಿ ಬೇಸರ ಮೂಡಿತ್ತು. ಅಲ್ಲಿಂದ ಇಲ್ಲಿಗೆ ಬಂದರೂ ಮತ್ತೇ ಅದೇ ಪೈಪ್ ಲೈನ್ ವಿಚಾರ ಮುನ್ನಲೆಗೆ ಬಂದು ಕಸಿವಿಸಯಾಗಿದೆ. ಬೇಸರ ಕೂಡಾ ಬಂದಿದೆ. ಯೋಜನೆಗೆ ಈಗಲೂ ನನ್ನದು ವಿರೋಧವಿದೆ ಎಂದ ಅವರು ಹೇಮಾವತಿ ಪೈಪ್ ಲೈನ್ ವಿಚಾರ ಹಾಗೂ ಬಿಡದಿ ಟೌನ್ ಶಿಪ್ ಯೋಜನೆ ಎರಡೂ ಕುಮಾರಸ್ವಾಮಿ ಅವರ ಯೋಜನೆಯಾಗಿದೆ ಎಂದು ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದರು.
ಗ್ಯಾರಂಟಿ ಯೋಜನೆಯಲ್ಲಿ ಬದಲಾವಣೆ ಇಲ್ಲ. ಅರ್ಹರನ್ನು ಗುರುತಿಸುವ ಕೆಲಸ ನಡೆದಿದೆ. ಅನ್ಯ ರಾಜ್ಯದವರು, ಅನರ್ಹರು, ಸಾವನ್ನಪ್ಪಿದವರು ಹೀಗೆ ಅನೇಕ ರೀತಿ ಹಣ ಪೋಲಾಗುವುದನ್ನು ತಡೆಗಟ್ಟಲಾಗುತ್ತದೆ. ಒಂದು ದೊಡ್ಡ ಯೋಜನೆ ಅನುಷ್ಠಾನದಲ್ಲಿ ಸಣ್ಣ ಲೋಪಗಳು ಕಾಣುವುದು ಸಹಜ. ಅದರಂತೆ ಶಕ್ತಿ ಯೋಜನೆಯು ಸರ್ಕಾರಿ ಅಧಿಕಾರಿಗಳು ಸೇರಿದಂತೆ ಎಲ್ಲಾ ತೆರಿಗೆ ಪಾವತಿದಾರರಿಗೂ ಸಿಗುತ್ತಿದೆ. ಈ ಬಗ್ಗೆ ಸಹ ಪರಿಶೀಲನೆ ಮಾಡಲಾಗುತ್ತಿದೆ ಎಂದರು.
ಎಸ್ಸಿ ಎಸ್ಟಿ ಕಾಲೋನಿಗಳಿಗೆ ಕಾಂಕ್ರಿಟ್ ರಸ್ತೆ ಬಹುತೇಕ ಪೂರ್ಣ ಗೊಂಡಿದೆ. ಗಣಿಬಾಧಿತ ಪ್ರದೇಶದ ವಿಶೇಷ ಅನುದಾನ ನ್ಯಾಯಾಲಯ ಮೆಟ್ಟಿಲೇರಿ 16.5 ಕೋಟಿ ರೂ ಬಿಡುಗಡೆಯಾಗಿರಲಿಲ್ಲ. ಮರಳಿ ಈಗ ಹಣ ಬಂದ ಹಿನ್ನಲೆ ಕೊಂಡ್ಲಿ ಮತ್ತು ದೊಡ್ಡಗುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಅಭಿವೃದ್ದಿ ಕಾಮಗಾರಿ ನಡೆದಿದೆ. 200 ಕೋಟಿ ರೂಗಳ ಯೋಜನೆ ಸರ್ಕಾರದ ಮುಂದಿದೆ. ಶೀಘ್ರ ಬಿಡುಗಡೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಶಿರಾ ನೆಲ್ಲಿಗೆರೆ ರಸ್ತೆ ದುರಸ್ತಿಗೆ 35 ಕೋಟಿ ಪ್ರಸ್ತಾವನೆ ಸಲ್ಲಿಸಿತ್ತು. ಈಗ 25 ಕೋಟಿ ರೂ ಮಂಜೂರು ಆಗಿದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಪಂ ಮಾಜಿ ಸದಸ್ಯ ಜಗದೀಶ್, ಮುಖಂಡರಾದ ರಾಜು, ಶಿವಣ್ಣ, ಗಣೇಶ್, ಪಿಡಿಓ ರಂಗನಾಥ್, ಕಂದಾಯ ನಿರೀಕ್ಷಕ ಮೋಹನ್, ಇಂದಿರಾ ಗಾಂಧಿ ವಸತಿ ಶಾಲೆಯ ಪ್ರಾಚಾರ್ಯರಾದ ಭಾಗ್ಯಲಕ್ಷ್ಮಿ, ಅಧ್ಯಾಪಕರಾದ ಚೇತನ್, ರಂಗನಾಥ್, ದೇವರಾಜ್, ದಿವ್ಯಾ, ಮನು, ಗುತ್ತಿಗೆದಾರರಾದ ಕೊಂಡ್ಲಿ ಜಗದೀಶ್, ಶ್ರೀನಿವಾಸ್ ಗೌಡ ಇತರರು ಇದ್ದರು.




