ಬಿಹಾರದ ಪರೀಕ್ಷಾ ಅಭ್ಯರ್ಥಿಗಳು ಕೇವಲ ಪರೀಕ್ಷೆ ಬರೆಯುತ್ತಿಲ್ಲ; ಬದಲಾಗಿ ಅವರು ತಮ್ಮ ಕನಸುಗಳಿಗಾಗಿ, ಕುಟುಂಬದ ಭವಿಷ್ಯಕ್ಕಾಗಿ ದೈನಂದಿನ ಹೋರಾಟ ನಡೆಸುತ್ತಿದ್ದಾರೆ. ಸಾರಿಗೆ, ವಸತಿ ಮತ್ತು ಸ್ಥಳೀಯ ಕೇಂದ್ರಗಳ ಕೊರತೆಯು ಅವರ ಸಂಕಷ್ಟವನ್ನು ದುಪ್ಪಟ್ಟು ಮಾಡುತ್ತಿದೆ. ಇದು ಕೇವಲ ಸಾರಿಗೆ ಸಮಸ್ಯೆಯಲ್ಲ, ಯುವ ಶಕ್ತಿಗೆ ಮಾಡಿರುವ ಅನ್ಯಾಯ. ಸರ್ಕಾರ, ಅಧಿಕಾರಿಗಳು ಮತ್ತು ಸಮಾಜವು ಒಟ್ಟಾಗಿ ಕೆಲಸ ಮಾಡಿ ಈ ವ್ಯವಸ್ಥೆಯನ್ನು ವಿದ್ಯಾರ್ಥಿ-ಕೇಂದ್ರಿತವಾಗಿ ಬದಲಾಯಿಸಬೇಕು.
ಬಿಹಾರವನ್ನು ಭಾರತದಲ್ಲಿ ʼಸ್ಪರ್ಧಾತ್ಮಕ ಪರೀಕ್ಷೆಗಳ ತೊಟ್ಟಿಲುʼ ಅಥವಾ ʼಸ್ಪರ್ಧೆಯ ರಾಜ್ಯʼವೆಂದು ಕರೆಯಲಾಗುತ್ತದೆ. UPSC, SSC, ಬ್ಯಾಂಕಿಂಗ್ ಮತ್ತು ರಾಜ್ಯ ಮಟ್ಟದ ಪರೀಕ್ಷೆಗಳಿಗೆ(BPSC) ಬಿಹಾರದ ವಿದ್ಯಾರ್ಥಿಗಳು ವರ್ಷಾನುಗಟ್ಟಲೆ ಶ್ರಮಪಟ್ಟು ಪರೀಕ್ಷೆಗೆ ತಯಾರಿ ನಡೆಸುತ್ತಾರೆ. ಉದ್ಯೋಗ ಎಂದರೆ ಅದು ಸರ್ಕಾರಿ ಸೇವೆಯಾಗಿರಬೇಕು ಎಂಬುದು ಅಲ್ಲಿನ ಜನರ ನಂಬಿಕೆಯಂತೆ. ಹಾಗಾಗಿ ದೇಶಕ್ಕೆ ಅತಿಹೆಚ್ಚು IAS ಮತ್ತು IPS ಅಧಿಕಾರಿಗಳನ್ನು ನೀಡುವ ರಾಜ್ಯಗಳಲ್ಲಿ ಬಿಹಾರವೂ ಮುಂಚೂಣಿಯಲ್ಲಿದೆ. ಪ್ರತಿ ವರ್ಷ ನೂರಾರು ಬಿಹಾರಿಗಳು ದೇಶದ ಅತ್ಯುನ್ನತ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿ ಪಡೆಯುತ್ತಾರೆ.
ಅಂತೆಯೇ ಜೂನ್ ತಿಂಗಳ ಮೂರನೇ ವಾರದಲ್ಲಿ ಲಕ್ಷಾಂತರ ಮಂದಿ ಬಿಹಾರಿ ಯುವಜನರು ಪೊಲೀಸ್ ಕಾನ್ಸ್ಟೆಬಲ್, ಪ್ರೊಹಿಬಿಷನ್ ಡಿಪಾರ್ಟ್ಮೆಂಟ್ ನೇಮಕಾತಿ ಪರೀಕ್ಷೆಗಳನ್ನು ಬರೆಯುವುದರಲ್ಲಿ ಉತ್ಸುಕರಾಗಿದ್ದರು. ಆದರೆ ಪರೀಕ್ಷೆ ಬರೆಯುವ ದಿನದಂದು ಅವರ ಮುಂದಿರುವ ಸವಾಲುಗಳು ಅಪಾರವಾಗಿದ್ದು, ಸಾರಿಗೆ ವ್ಯವಸ್ಥೆಯ ಕೊರತೆ, ವಸತಿ ಸೌಲಭ್ಯಗಳ ಕೊರತೆ ಮತ್ತು ಇತರ ರಾಜ್ಯಗಳಲ್ಲಿ ಅಥವಾ ದೂರದ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ನಿಗದಿಪಡಿಸುವುದು ಅಭ್ಯರ್ಥಿಗಳನ್ನು ದೈಹಿಕ, ಮಾನಸಿಕ ಮತ್ತು ಆರ್ಥಿಕವಾಗಿ ಹೈರಾಣಾಗಿಸಿದೆ. ಜತೆಗೆ ಪರೀಕ್ಷೆಗೂ ಮುನ್ನ ಅಭ್ಯರ್ಥಿಗಳು ಮತ್ತು ಪೊಲೀಸರ ನಡುವೆ ಭಾರೀ ತಿಕ್ಕಾಟ ಉಂಟಾಗಿ, ಪರೀಕ್ಷೆಗೆ ಹೊರಟಿದ್ದ ಅಭ್ಯರ್ಥಿಗಳು ರೈಲು ಸಂಚಾರ ವ್ಯವಸ್ಥೆ ಉತ್ತಮವಾಗಿಲ್ಲವೆಂದು ಆರೋಪಿಸಿ, ಪಾಟಲೀಪುತ್ರ ರೈಲು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ್ದ ಘಟನೆಗಳು ಸಮಸ್ಯೆಯ ತೀವ್ರತೆಯನ್ನು ಬಯಲು ಮಾಡಿದ್ದವು.
ಸಾರಿಗೆ ವ್ಯವಸ್ಥೆಯ ವೈಫಲ್ಯ: ರೈಲುಗಳಲ್ಲಿ ತುಂಬಿ ಹೋಗುವುದು ಮತ್ತು ಪ್ರತಿಭಟನೆಗಳು
ಪರೀಕ್ಷಾ ದಿನಗಳಲ್ಲಿ ಬಿಹಾರದ ರೈಲ್ವೆ ಸ್ಟೇಷನ್ಗಳಲ್ಲಿ ಅಭ್ಯರ್ಥಿಗಳ ದಟ್ಟಣೆ ಅಪಾರವಾಗಿರುತ್ತದೆ. 2026ರ ಜೂನ್ನಲ್ಲಿ ಬಿಹಾರ ಪ್ರೊಹಿಬಿಷನ್ ಪೊಲೀಸ್ ನೇಮಕಾತಿ ಪರೀಕ್ಷೆಗೆ ಹೋಗುತ್ತಿದ್ದ ಸಾವಿರಾರು ಅಭ್ಯರ್ಥಿಗಳು ಪಾಟಲಿಪುತ್ರ ರೈಲ್ವೆ ಸ್ಟೇಷನ್ನಲ್ಲಿ ತುಂಬಿಕೊಂಡಿದ್ದರು. ವಿಶೇಷ ರೈಲುಗಳ ಕೊರತೆ, ತಡವಾಗಿ ಬರುವುದು ಮತ್ತು ಜನಸಂದಣಿಯಿಂದಾಗಿ ಅಭ್ಯರ್ಥಿಗಳು ರೈಲು ಹಳಿಗಳ ಮೇಲೆ ಕುಳಿತು ಇತರೆ ರೈಲುಗಳನ್ನು ತಡೆದು, ಕಲ್ಲು ಎಸೆದು ರೈಲು ಬೋಗಿಗಳನ್ನು ಹಾನಿಗೊಳಿಸಿದರು ಎಂಬ ಆರೋಪಗಳು ಕೇಳಿಬಂದವು. ಈ ಇನ್ನೆಲೆಯಲ್ಲಿ ಪೊಲೀಸರು ಲಾಠಿ ಚಾರ್ಜ್ ಮತ್ತು ಟಿಯರ್ ಗ್ಯಾಸ್ ಬಳಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾಗಿದ್ದರು.
ಇದು ಮೊದಲ ಬಾರಿಯಲ್ಲ. ಪ್ರತಿ ಪರೀಕ್ಷೆಗೂ ಇದೇ ರೀತಿಯ ಸಮಸ್ಯೆ ಉಂಟಾಗುತ್ತದೆ. ಗ್ರಾಮೀಣ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳು ಬಸ್ ಅಥವಾ ರೈಲುಗಳಲ್ಲಿ ದೀರ್ಘ ಪ್ರಯಾಣ ಮಾಡುತ್ತಾರೆ. ರೈಲುಗಳು ಭರ್ತಿಯಾಗುವುದರಿಂದ ಸೀಟುಗಳ ಅಡಿಯಲ್ಲಿ, ಓಡಾಡುವ ಸ್ಥಳದಲ್ಲಿ ಮಲಗುವುದು, ಬಾಗಿಲುಗಳಿಗೆ ತೂಗು ಹಾಕಿಕೊಳ್ಳುವುದು, ಆಹಾರ-ನೀರಿನ ಕೊರತೆಯಂತಹ ದೃಶ್ಯಗಳು ಕಂಡುಬಂದವು. ಪರೀಕ್ಷೆಗೆ ಮುಂಚಿತವಾಗಿಯೇ ಆಯಾಸವಾಗಿ, ವಿದ್ಯಾರ್ಥಿಗಳ ಏಕಾಗ್ರತೆ ಕುಸಿದಿರುತ್ತದೆ. NEET ರೀ-ಎಕ್ಸಾಮ್ಗೆ ಉಚಿತ ಬಸ್ ಸೌಲಭ್ಯ ಘೋಷಿಸುವ ಸರ್ಕಾರ ಇತರ ಪರೀಕ್ಷೆಗಳಲ್ಲಿ ಇಂತಹ ವ್ಯವಸ್ಥೆಗಳನ್ನು ಒದಗಿಸುವುದರಲ್ಲಿ ವಿಫಲವಾಗಿದೆ.
ವಸತಿ ಸೌಲಭ್ಯಗಳ ಕೊರತೆ: ಹಾಸ್ಟೆಲ್ಗಳು, ಹೋಟೆಲ್ಗಳು ಮತ್ತು ನೆಲದ ಮೇಲೆ ನಿದ್ರೆ
ಪರೀಕ್ಷಾ ಕೇಂದ್ರಗಳಿಗೆ ಒಂದು ದಿನ ಮುಂಚಿತವಾಗಿ ತಲುಪುವ ಅಭ್ಯರ್ಥಿಗಳಿಗೆ ವಸತಿ ಸೌಲಭ್ಯ ಬಹುದೊಡ್ಡ ಸಮಸ್ಯೆಯಾಗಿ ಹೊರಹೊಮ್ಮಿತು. ಪಟ್ನಾ, ಮುಜಫ್ಫರ್ಪುರ, ಭಾಗಲ್ಪುರ ಮುಂತಾದ ನಗರಗಳಲ್ಲಿ ಹಾಸ್ಟೆಲ್ಗಳು ಮತ್ತು ಪೇಯಿಂಗ್ ಗೆಸ್ಟ್ಗಳು ತುಂಬಿ ಹೋಗುತ್ತವೆ. ರೂಮ್ ಬೆಲೆಗಳು ಗಗನಕ್ಕೇರುತ್ತವೆ, ಒಂದು ರಾತ್ರಿಗೆ ₹500-1500ದರೆಗೆ ಹೆಚ್ಚಾಗುತ್ತದೆ. ಇದರಿಂದಾಗಿ ಬಡ ಮತ್ತು ಗ್ರಾಮೀಣ ಕುಟುಂಬಗಳ ವಿದ್ಯಾರ್ಥಿಗಳು ರೈಲ್ವೆ ಸ್ಟೇಷನ್ಗಳಲ್ಲಿ, ಪಾರ್ಕ್ಗಳಲ್ಲಿ ಅಥವಾ ಸ್ನೇಹಿತರ ಮನೆಗಳಲ್ಲಿ ತಂಗುವುದು ಅನಿವಾರ್ಯವಾಗುತ್ತದೆ. ಪರೀಕ್ಷಾರ್ಥಿಗಳಿಗೆ ರಾತ್ರಿ ವೇಳೆ ನಿದ್ರೆಯ ಕೊರತೆಯಾಗುತ್ತದೆ, ಆಹಾರ ಸರಿಹೊಂದುವುದಿಲ್ಲ, ಹವಾಮಾನ ಬದಲಾವಣೆಯಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಇಂತಹ ಘಟನೆಗಳಿಂದ ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನ ಕುಸಿಯುತ್ತದೆ.
ಮಹಿಳಾ ಅಭ್ಯರ್ಥಿಗಳ ಸುರಕ್ಷತೆ ಇನ್ನೊಂದು ದೊಡ್ಡ ಚಿಂತೆಯಾಗಿರುತ್ತದೆ. ದೂರದ ಸ್ಥಳಗಳಲ್ಲಿ ಸುರಕ್ಷಿತ ವಸತಿ ದೊರಕುವುದು ಅಪರೂಪವಾಗಿರುತ್ತದೆ. ಹಾಗಾಗಿ ಹೆಣ್ಣುಮಕ್ಕಳನ್ನು ಸ್ಪರ್ಧಾ ಪರೀಕ್ಷೆಗಳಿಗೆ ಕಳುಹಿಸುವ ಪೋಷಕರು ಆತಂಕದಲ್ಲಿರುತ್ತಾರೆ.
ದೂರದ ಮತ್ತು ಇತರ ರಾಜ್ಯಗಳ ಪರೀಕ್ಷಾ ಕೇಂದ್ರಗಳ ಹಂಚಿಕೆ
NTA, BPSC ಮತ್ತು ಇತರ ಮಂಡಳಿಗಳು ಅಭ್ಯರ್ಥಿಗಳಿಗೆ ಸ್ಥಳೀಯ ಕೇಂದ್ರಗಳನ್ನು ನೀಡದೆ 300-700 ಕಿ.ಮೀ. ದೂರದ ಜಿಲ್ಲೆಗಳಿಗೆ, ಇತರ ರಾಜ್ಯಗಳಲ್ಲಿ ಕೇಂದ್ರಗಳನ್ನು ಹಂಚಿಕೆ ಮಾಡುತ್ತವೆ. ಇದರಿಂದಾಗಿ ಪ್ರಯಾಣ ವೆಚ್ಚ, ಸಮಯ ಮತ್ತು ಆಯಾಸ ಹೆಚ್ಚಾಗುತ್ತದೆ. ಉದಾಹರಣೆಗೆ, ಮುಜಫ್ಫರ್ಪುರದ ಅಭ್ಯರ್ಥಿಗಳು ಕಟಿಹಾರ್ ಅಥವಾ ಪಾಟ್ನಾ, ಇಲ್ಲವೇ ದೂರದ ಸ್ಥಳಗಳಿಗೆ ಹೋಗಬೇಕಾಗುತ್ತದೆ. ಇದು ಅಭ್ಯರ್ಥಿಗಳಿಗೆ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತದೆ. ಟಿಕೆಟ್, ಆಹಾರ, ವಸತಿ ಸೇರಿದಂತೆ ಒಟ್ಟು ₹5,000-15,000ಕ್ಕೂ ಅಧಿಕ ಖರ್ಚು ಉಂಟಾಗುತ್ತದೆ ಎಂಬುದು ಪರೀಕ್ಷಾ ಅಭ್ಯರ್ಥಿಗಳ ಅಳಲಾಗಿದೆ.
ಪರೀಕ್ಷೆಗೆ ಬಂದಿದ್ದ ಅಭ್ಯರ್ಥಿಗಳು ಮಾಧ್ಯಮಗಳ ಜೊತೆ ಮಾತನಾಡಿದ್ದು, “ಅರಾರಿಯಾ ಮತ್ತು ಕಟಿಹಾರ್ಗೆ ಒಂದೇ ರೈಲು ವ್ಯವಸ್ಥೆ ಮಾಡಲಾಗಿತ್ತು. ಮೊದಲ ಶಿಫ್ಟ್ಗೆ ನಿಗದಿಯಾಗಿದ್ದ ಅಭ್ಯರ್ಥಿಗಳು ರೈಲು ಹತ್ತಲು ಬಂದಿದ್ದರು. ಆದರೆ, ಆಗಲೇ ರೈಲು ಕಿಕ್ಕಿರಿದು ತುಂಬಿತ್ತು. ಪರೀಕ್ಷಾರ್ಥಿಗಳು ರೈಲು ಹತ್ತಲು ಪ್ರಯತ್ನಿಸಿದಾಗ ಸ್ಥಳ ಇರಲಿಲ್ಲ. ಪರಿಣಾಮವಾಗಿ, ಅಭ್ಯರ್ಥಿಗಳು ಉದ್ರಿಕ್ತಗೊಂಡು, ರೈಲು ನಿಲ್ಲಿಸಿ ಪ್ರತಿಭಟಿಸಿದರು” ಎಂದರು.
“10,000 ರಿಂದ 15,000 ಮಂದಿ ಅಭ್ಯರ್ಥಿಗಳು ನಿಲ್ದಾಣದಲ್ಲಿದ್ದರು. ರೈಲು ಆಗಲೇ ಭರ್ತಿಯಾಗಿತ್ತು. ದಾನಾಪುರ ಮತ್ತು ಪಾಟಲಿಪುತ್ರ ನಿಲ್ದಾಣಗಳಲ್ಲಿ ನಿಂತಿದ್ದ ವಿದ್ಯಾರ್ಥಿಗಳು ಹತ್ತಲು ಅವಕಾಶ ಇರಲಿಲ್ಲ. ಹೀಗಾಗಿ, ಪ್ರತಿಭಟನೆ ಆರಂಭಿಸಿದೆವು. ಗದ್ದಲದ ನಡುವೆ ಕಲ್ಲು ತೂರಾಟ ನಡೆಯಿತು. ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು. ನಾವು ಪರೀಕ್ಷೆಗಳನ್ನು ತಪ್ಪಿಸಿಕೊಂಡೆವು” ಎಂದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಪರೀಕ್ಷಾರ್ಥಿ ಕನ್ಹಯ್ಯಾ ಎಂಬುವವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು.
“ಪ್ರತಿ ಜಿಲ್ಲೆಯಲ್ಲಿ ಸಾಕಷ್ಟು CBT ಕೇಂದ್ರಗಳನ್ನು ತೆರೆದು ಮೂಲಸೌಕರ್ಯ ಒದಗಿಸಬೇಕು. ವಿಶೇಷ ರೈಲು/ಬಸ್ಗಳು, ಉಚಿತ ಅಥವಾ ಸಬ್ಸಿಡಿ ಸೌಲಭ್ಯಗಳು ಹಾಗೂ ಪ್ರಯಾಣ ಯೋಜನೆ ವ್ಯವಸ್ಥೆಯನ್ನುಂಟುಮಾಡಬೇಕು. ಸರ್ಕಾರಿ ಶಾಲೆಗಳು, ಕಾಲೇಜುಗಳಲ್ಲಿ ತಾತ್ಕಾಲಿಕ ವಸತಿ ಸೌಲಭ್ಯ, ಕಡಿಮೆ ದರದಲ್ಲಿ ಹೋಟೆಲ್ಗಳು ದೊರೆಕಿಸಬೇಕು. Aadhaar ಆಧಾರಿತ, ಸ್ಥಳೀಯ ಆದ್ಯತೆ, ಆಯ್ಕೆಗಳು ಪಾರದರ್ಶಕವಾಗಿರಬೇಕು” ಎಂದು ಆಗ್ರಹಿಸಿದರು.
ಕೇಂದ್ರ ಆಯ್ಕೆ ಮಂಡಳಿ ನಡೆಸುವ ಈ ಲಿಖಿತ ಪರೀಕ್ಷೆಯು ರಾಜ್ಯದ 38 ಜಿಲ್ಲೆಗಳಲ್ಲಿ ಆರಂಭವಾಗಿತ್ತು. ಒಟ್ಟು 4,210 ಹುದ್ದೆಗಳಿಗೆ ಒಂದು ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. 1,685 ಪ್ರೊಬೇಷನಲ್ ಕಾನ್ಸ್ಟೆಬಲ್, 2,417 ಜೈಲ್ ವಾರ್ಡರ್, 108 ಮೊಬೈಲ್ ಸ್ಕ್ವಾಡ್ ಕಾನ್ಸ್ಟೆಬಲ್ ಹುದ್ದೆಗಳಿವೆ. ಲಿಖಿತ ಪರೀಕ್ಷೆಯು ಎರಡು ಗಂಟೆಗಳ ಅವಧಿಯದ್ದಾಗಿದ್ದು, ಎರಡು ಪಾಳಿಗಳಲ್ಲಿ ನಡೆಸಲಾಗುತ್ತಿತ್ತು. ಮೊದಲ ಪಾಳಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12ರವರೆಗೆ ಇದ್ದರೆ, ಎರಡನೇ ಪಾಳಿ ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಇತ್ತು. ಆದರೆ ಪರೀಕ್ಷಾರ್ಥಿಗಳಿಗೆ ಸಮರ್ಪಕವಾದ ಸಾರಿಗೆ ಸೌಲಭ್ಯಗಳಿಲ್ಲದೆ ಅವಾಂತರಗಳು ಸೃಷ್ಠಿಯಾದವು.
Patna, Bihar
— Nehr_who? (@Nher_who) June 14, 2026
These are students trying to board train to reach exam centres
Just look at the condition,people are risking their lives in a stampede-like situation
This is what happens when you vote for 10,000 & religion instead of infrastructure & Employment pic.twitter.com/kGjDKDqFwC
ನಗರದ ವಿದ್ಯಾರ್ಥಿಗಳಿಗೆ ಸ್ವಲ್ಪ ಸುಲಭ, ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳು ಹೆಚ್ಚು ನಷ್ಟ ಅನುಭವಿಸುತ್ತಾರೆ. ದೀರ್ಘ ಪ್ರಯಾಣ, ಆಯಾಸ, ಅಸ್ವಸ್ಥತೆಯಿಂದ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಕುಸಿಯುತ್ತದೆ. ಇದಕ್ಕೆ ಮೂಲಸೌಕರ್ಯದ ಕೊರತೆ, ಲಕ್ಷಾಂತರ ಮಂದಿ ಅಭ್ಯರ್ಥಿಗಳು, ಸಾರಿಗೆ ಯೋಜನೆಯ ವೈಫಲ್ಯ, ರಾಜಕೀಯ ನಿರ್ಲಕ್ಷ್ಯಗಳು ಮುಖ್ಯ ಕಾರಣಗಳಾಗಿವೆ. ಸರ್ಕಾರವು ಉಚಿತ ಬಸ್, ಕೆಲವು ವಿಶೇಷ ರೈಲುಗಳು ಘೋಷಿಸುತ್ತದೆಯಾದರೂ, ಯಾವುದೇ ವ್ಯವಸ್ಥೆಗಳನ್ನು ಮಾಡುವುದಿಲ್ಲ. ಪ್ರತಿಭಟನೆಗಳು ನಡೆದಾಗ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಅಷ್ಟರಲ್ಲಿ ಪರಿಸ್ಥಿತಿಗಳು ಕೈಮೀರಿರುತ್ತವೆ.
ಕುಟುಂಬಗಳು ಸಾಲ ಮಾಡಿ, ಆಸ್ತಿ ಮಾರಿ ಮಕ್ಕಳನ್ನು ಸ್ಪರ್ಧಾ ಪರೀಕ್ಷೆಗಳಿಗೆ ತಯಾರಿ ಮಾಡಿರುತ್ತಾರೆ. ಇಂಥದರಲ್ಲಿ ಪರೀಕ್ಷೆ ರದ್ದು ಅಥವಾ ಪುನರ್ ಪರೀಕ್ಷೆ ಬರೆಯಬೇಕಾದ ದುಃಸ್ಥಿತಿ ಉಂಟಾದರೆ ಪೋಷಕರಿಗೆ ಹೆಚ್ಚುವರಿ ಖರ್ಚಿನ ಜೊರೆ ಬೀಳುತ್ತದೆ. ಅಲ್ಲದೆ, ವರ್ಷಗಳ ಸಿದ್ಧತೆ ನಡೆಸಿದ ವಿದ್ಯಾರ್ಥಿಗಳ ಶ್ರಮ ವ್ಯರ್ಥವಾಗುವ ಭಯ, ಅನಿಶ್ಚಿತತೆ, ಕುಟುಂಬದ ಒತ್ತಡಗಳಿಂದ ಆತ್ಮಹತ್ಯೆಗೆ ಶರಣಾಗುವಂತಹ ಪ್ರಕರಣಗಳು ಹೆಚ್ಚಾಗಿವೆ.
ಇದನ್ನೂ ಓದಿದ್ದೀರಾ? 37 ದಿನಗಳಲ್ಲಿ 12 ಬಲಿ: ವಿದ್ಯಾರ್ಥಿಗಳನ್ನು ‘ಸೈಕಲಾಜಿಕಲ್ ಬರ್ನ್ಔಟ್’ಗೆ ತಳ್ಳುವ ನೀಟ್ ಮರುಪರೀಕ್ಷೆ ಒತ್ತಡ!
ಬಿಹಾರದ ಪರೀಕ್ಷಾ ಅಭ್ಯರ್ಥಿಗಳು ಕೇವಲ ಪರೀಕ್ಷೆ ಬರೆಯುತ್ತಿಲ್ಲ; ಬದಲಾಗಿ ಅವರು ತಮ್ಮ ಕನಸುಗಳಿಗಾಗಿ, ಕುಟುಂಬದ ಭವಿಷ್ಯಕ್ಕಾಗಿ ದೈನಂದಿನ ಹೋರಾಟ ನಡೆಸುತ್ತಿದ್ದಾರೆ. ಸಾರಿಗೆ, ವಸತಿ ಮತ್ತು ಸ್ಥಳೀಯ ಕೇಂದ್ರಗಳ ಕೊರತೆಯು ಅವರ ಸಂಕಷ್ಟವನ್ನು ದುಪ್ಪಟ್ಟು ಮಾಡುತ್ತಿದೆ. ಇದು ಕೇವಲ ಸಾರಿಗೆ ಸಮಸ್ಯೆಯಲ್ಲ, ಯುವ ಶಕ್ತಿಗೆ ಮಾಡಿರುವ ಅನ್ಯಾಯ. ಸರ್ಕಾರ, ಅಧಿಕಾರಿಗಳು ಮತ್ತು ಸಮಾಜವು ಒಟ್ಟಾಗಿ ಕೆಲಸ ಮಾಡಿ ಈ ವ್ಯವಸ್ಥೆಯನ್ನು ವಿದ್ಯಾರ್ಥಿ-ಕೇಂದ್ರಿತವಾಗಿ ಬದಲಾಯಿಸಬೇಕು.




