ಕಳೆದ ಒಂದು ವರ್ಷದ ಹಿಂದೆ ಮಾನ್ಸೂನ್ ಮಳೆಗೆ ರಾಜಧಾನಿ ತೇಲುತ್ತಿತ್ತು. ಈ ವರ್ಷ ಮುಂಗಾರು ಮಳೆ ದಾಖಲೆಯ ಪ್ರಮಾಣದ ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಬರಲಿರುವ ಮಳೆಗೆ ಬೇಕಾದ ಸಿದ್ಧತೆಗಳನ್ನು ಬಿಬಿಎಂಪಿ ಮಾಡಿಕೊಂಡಿದೆಯೇ?
ಕಳೆದ ವರ್ಷ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ನಗರದ ಜನರು ಅಕ್ಷರಶಃ ನಲುಗಿ ಹೋಗಿದ್ದರು. ನಗರದ ರೈನ್ ಬೋ ಡ್ರೈವ್, ಸಾಯಿ ಲೇಔಟ್, ಮಹದೇವಪುರ, ಸರ್ಜಾಪುರ ರಸ್ತೆ, ದಿವ್ಯಶ್ರೀ 77, ಯಮಲೂರು ಸೇರಿದಂತೆ ಹಲವೆಡೆ ನೂರಾರು ಮನೆ, ವಿಲ್ಲಾಗಳಿಗೆ ಮಳೆಯ ನೀರು ನುಗ್ಗಿ ಅಪಾರ ಹಾನಿ, ನಷ್ಟವನ್ನುಂಟು ಮಾಡಿತ್ತು. ಇದೀಗ ಮತ್ತೆ ರಾಜ್ಯಕ್ಕೆ ಮುಂಗಾರು ಮಳೆಯ ಆಗಮನವಾಗಿದ್ದು, ಈ ವರ್ಷ ಕಳೆದ ಬಾರಿಗಿಂತ ಅಧಿಕ ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಳೆಗೆ ಬೇಕಾದ ಸಿದ್ಧತೆಯನ್ನು ಮಾಡಿಕೊಂಡಿದೆಯೇ?
ಕೇರಳಕ್ಕೆ ಮಾನ್ಸೂನ್ ಮಾರುತಗಳು ತಡವಾಗಿ ಬಂದಿದ್ದು, ಮುಂಗಾರು ಮಳೆ ಆರ್ಭಟ ಜೋರಾಗಿರಲಿದೆ. ಬೆಂಗಳೂರಿನಲ್ಲಿ ಇನ್ನೆರಡು ದಿನಗಳಲ್ಲಿ ಮುಂಗಾರು ಮಳೆ ಆರಂಭವಾಗಲಿದ್ದು, ಈ ವರ್ಷ ದಾಖಲೆಯ ಪ್ರಮಾಣದ ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಜನವರಿಯಿಂದ ಡಿಸೆಂಬರ್ವರೆಗೂ 108 ಸೆಂ.ಮೀ ನಷ್ಟು ಮಳೆಯಾಗುವುದು ವಾಡಿಕೆ. ಆದರೆ, ಕಳೆದ ವರ್ಷ ಬರೋಬ್ಬರಿ 195 ಸೆಂ.ಮೀ ಮಳೆಯಾಗಿತ್ತು. ಈ ಹಿನ್ನೆಲೆ, ಹಲವು ಮನೆಗಳಿಗೆ ಮಳೆಯ ನೀರು ನುಗ್ಗಿತ್ತು. ಈ ಬಾರಿ ಕಳೆದ ನಾಲ್ಕು ತಿಂಗಳಿನಲ್ಲಿ 65 ಸೆಂ.ಮೀ ಮಳೆಯಾಗಿದೆ. ಇನ್ನೂ ಈ ವರ್ಷ ಕಳೆಯುವಷ್ಟರಲ್ಲಿ ಕಳೆದ ಬಾರಿಯ ಮಳೆಯ ಪ್ರಮಾಣವನ್ನು ದಾಟುವ ನಿರೀಕ್ಷೆಯಿದೆ.
ಕಳೆದ ವರ್ಷ ಸುರಿದ ಮಳೆಗೆ ಇಡೀ ರಾಜಧಾನಿ ನಲುಗಿ ಹೋಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಗರದ ಸಮಸ್ಯೆ ತಾಂಡವವಾಡುತ್ತಿತ್ತು. ಹಲವಾರು ಬಡಾವಣೆಗಳು ಮಳೆನೀರಿನಿಂದ ತುಂಬಿದ್ದವು. ಮನುಷ್ಯನೂ ಜೀವಿಸಲೂ ಕಷ್ಟ ಎಂಬ ವಾತಾವರಣ ನಿರ್ಮಾಣವಾಗಿತ್ತು. ದಿವ್ಯಶ್ರೀ 77 ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿತ್ತು. ಕೋಟ್ಯಂತರ ರೂಪಾಯಿ ಕಾರಿನಲ್ಲಿ ಓಡಾಡಿದವರು ಟ್ರ್ಯಾಕ್ಟರ್ ಹತ್ತಿ ಅನಾಹುತದಿಂದ ತಪ್ಪಿಸಿಕೊಂಡು ಹೊರಬಂದು ಹೋಟೆಲ್ನಲ್ಲಿ ತಂಗಿದ್ದರು. ಬಡವರು ನಿರಾಶ್ರಿತ ಕೇಂದ್ರಗಳಲ್ಲಿ ತಂಗಿದ್ದರು. ಮಳೆಯಿಂದ ಹಾನಿಗೊಳಗಾದವರಿಗೆ ಪರಿಹಾರ ನೀಡಲಾಗಿತ್ತು.
ಪ್ರವಾಹದ ಬಳಿಕ ಈ ಬಗ್ಗೆ ಪರಿಶೀಲನೆ ನಡೆಸಿದ ಅಧಿಕಾರಿಗಳು ಇದಕ್ಕೆ ರಾಜಕಾಲುವೆ, ಕೆರೆಗಳ ಒತ್ತುವರಿ ಕಾರಣ ಎಂದು ಹೇಳಿದ್ದರು. ಅದರಂತೆಯೇ ಕೆಲವು ತಿಂಗಳು ಒತ್ತುವರಿ ಮಾಡಿಕೊಂಡ ಪ್ರದೇಶಗಳನ್ನು ತೆರವು ಮಾಡಲು ಬಿಬಿಎಂಪಿ ಅಧಿಕಾರಿಗಳು ಬುಲ್ಡೋಜರ್ ಜತೆಗೆ ಸ್ಥಳದಲ್ಲಿ ಠಿಕಾಣಿ ಹೂಡಿದ್ದರು. ಆದರೆ, ಇದು ಕೂಡ ಹೆಚ್ಚು ದಿನ ನಡೆಯಲಿಲ್ಲ.
ಮಳೆಯ ಅವಘಡ, ಅನಾಹುತವಾಗಿ ಒಂದು ವರ್ಷವೇ ಕಳೆದು ಹೋಗಿದೆ. ಮತ್ತೆ ಮುಂಗಾರು ಮಳೆಯ ಆಗಮನವೂ ಆಗಿದೆ. ಕಳೆದ ವರ್ಷ ಆದ ಅನಾಹುತದಿಂದ ಬಿಬಿಎಂಪಿ ಸಿದ್ಧಗೊಂಡಿದೆಯೇ, ಬರಲಿರುವ ಮಳೆಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆಯೇ?
ಕೆರೆಗಳಲ್ಲಿ ಹಾಗೆಯೇ ಬಿದ್ದ ಪ್ಲಾಸ್ಟಿಕ್ / ಹೂಳು
ಮುಂಗಾರು ಮಳೆಗೆ ಬೆಂಗಳೂರಿನಲ್ಲಿರುವ ಬಹುತೇಕ ಕೆರೆಗಳು ತುಂಬಲಿವೆ. ಆದರೆ, ಬಿಬಿಎಂಪಿ ಮಾತ್ರ ಮಳೆಗೆ ನಗರದಲ್ಲಿರುವ 200ಕ್ಕೂ ಹೆಚ್ಚು ಕೆರೆಗಳನ್ನು ಸಿದ್ಧಗೊಳಿಸಿಲ್ಲ. ಹಲವು ಕೆರೆಗಲ್ಲಿ ಹೂಳು ತೆಗೆಯುವ ಕಾರ್ಯ ಕೈಗೊಂಡಿಲ್ಲ. ಮಳೆ ನೀರಿನ ಚರಂಡಿಯನ್ನು ಸಮರ್ಪಕವಾಗಿ ನೀರು ಹರಿದು ಹೋಗಲು ಯಾವುದೇ ವ್ಯವಸ್ಥೆ ಮಾಡಿಲ್ಲ. ಕೆಲವು ಕೆರೆಗಳ ಹೂಳು ತೆಗೆದು ದಂಡೆಯ ಮೇಲೆ ಪ್ಲಾಸ್ಟಿಕ್ ಸೇರಿದಂತೆ ಇನ್ನೀತರ ಕಸವನ್ನು ಹಾಕಿದ್ದಾರೆ.
ಹಲವು ಕೆರಗಳ ಪುನರುಜ್ಜೀವನ ಕಾರ್ಯವನ್ನು ಬಿಬಿಎಂಪಿ ಕೈಗೊಂಡಿಲ್ಲ. ಒಟ್ಟಾರೆಯಾಗಿ ಮುಂಗಾರು ಮಳೆಗೆ ನಗರದಲ್ಲಿರುವ ಕೆರೆಗಳು ಸಿದ್ಧವಾಗಿಲ್ಲ ಎಂದೆನ್ನಬಹುದು.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಕೆರೆ ಹೋರಾಟಗಾರ ರಾಘವೇಂದ್ರ ಬಿ ಪಾಚ್ಚಾಪುರ, “ಇನ್ನೆರಡು ದಿನಗಳಲ್ಲಿ ಮುಂಗಾರು ಮಳೆ ಆರಂಭವಾಗಲಿದೆ. ಆದರೆ, ಈ ಬಾರಿಯೂ ಕಳೆದ ಬಾರಿಯಂತೆ ಮಳೆನೀರನ್ನು ತಡೆದುಕೊಳ್ಳಲು ಕೆರೆಗಳನ್ನು ರಕ್ಷಿಸಿಲ್ಲ. ಹಲವು ಕೆರೆಗಳ ಹೂಳು ತೆಗೆಯುವ ಕಾರ್ಯ ನಡೆದಿಲ್ಲ. ಕೆರೆಗಳಲ್ಲಿ ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ಕಸ ಕಡ್ಡಿಗಳು ತುಂಬಿವೆ. ಇವುಗಳನ್ನು ಯಾರೂ ತೆಗೆಯುತ್ತಿಲ್ಲ. ನಗರದ ದಕ್ಷಿಣ ಭಾಗದ ಪ್ರಮುಖ ಕೆರೆಯಾದ ಚುಂಚಘಟ್ಟ ಕೆರೆಯ ದಂಡೆಯ ಮೇಲೆ ಕಸದ ರಾಶಿ ಬಿದ್ದಿದೆ. ಯಾರೂ ಅದನ್ನು ತೆರುವು ಮಾಡಿಲ್ಲ. ಮಳೆ ಬಂದಾಗ ಎಲ್ಲ ಕಸ ಹರಿದು ಕೆರೆಗೆ ತಲುಪುತ್ತದೆ. ಪ್ರಾಣಿ ಪಕ್ಷಿಗಳು ಸಾವಿನ ಅಂಚಿನಲ್ಲಿವೆ. ಈಗಾಗಲೇ ನಗರದ ಹಲವು ಕೆರೆಗಳಲ್ಲಿ ಮೀನುಗಳ ಮಾರಣಹೋಮ ನಡೆಯುತ್ತಿದೆ” ಎಂದರು.
ಈ ದಿನ.ಕಾಮ್ ಜತೆಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಎಂಜಿನಿಯರ್ (ಕೆರೆ) ವಿಜಯಕುಮಾರ್ ಹರಿದಾಸ್, “ಐದು ವರ್ಷಕ್ಕೊಮ್ಮೆ ಕೆರೆಯ ಹೂಳು ತೆಗೆಯುವ ಕಾರ್ಯ ಮಾಡಲಾಗುತ್ತದೆ. ಚುಂಚಘಟ್ಟ ಕೆರೆಗೆ ಸಂಬಂಧಿಸಿದಂತೆ ಕೆರೆಯ ದಂಡೆಯ ಮೇಲೆ ಕಸ ಹಾಕಿರುವ ಬಗ್ಗೆ ಗಮನಕ್ಕೆ ಬಂದಿಲ್ಲ. ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ರಾಜಕಾಲುವೆ ಒತ್ತುವರಿ
ಬೆಂಗಳೂರಿನಲ್ಲಿ ಬಹುತೇಕ ರಾಜಕಾಲುವೆಗಳು ಒತ್ತುವರಿಯಾಗಿದ್ದು, ಒತ್ತುವರಿ ಪ್ರದೇಶದಲ್ಲಿ ವಸತಿ ಮತ್ತು ವಾಣಿಜ್ಯ ಕಟ್ಟಡಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ.
2016ರಿಂದಲೂ ರಾಜಕಾಲುವೆ ಒತ್ತುವರಿ ತೆರವು ಮಾಡುವ ವಿಷಯ ಪ್ರಸ್ತಾಪವಿದ್ದರೂ ಕೂಡ ಇನ್ನೂ ಈ ಕಾರ್ಯ ಪ್ರಗತಿಯಲ್ಲಿಯೇ ಇದೆ. ಒಟ್ಟು 2626 ಕಡೆ ರಾಜಕಾಲುವೆ ಜಾಗ ಕಬಳಿಕೆಯಾಗಿದ್ದು, ಈವರೆಗೆ ತೆರವುಗೊಳಿಸಿರುವುದು 1890 ಕಡೆ ಮಾತ್ರ. ಇನ್ನೂ 736 ಕಡೆ ಒತ್ತುವರಿಗಳ ತೆರವಿಗೆ ಬಾಕಿ ಇದೆ.
ಅಧಿಕಾರಿಗಳು ಹೇಳುವ ಪ್ರಕಾರ, ದಿನಕಳೆದಂತೆ ಇನ್ನೂ ಹೆಚ್ಚಿನ ರಾಜಕಾಲುವೆ ಒತ್ತುವರಿ ಪ್ರಕರಣಗಳು ಪತ್ತೆಯಾಗುತ್ತಿದ್ದು, ಪ್ರಸ್ತುತ 784 ಒತ್ತುವರಿ ತೆರುವು ಬಾಕಿ ಇದೆ ಎಂದು. ಇನ್ನೂ ಕೆಲವು ಜನ ಒತ್ತುವರಿ ತೆರುವು ಮಾಡಲು ನಿಷೇಧಿಸಿದ್ದೂ, ಕೋರ್ಟ್ನಿಂದ ಸ್ಟೇ ಆರ್ಡ್ರ್ ತಂದಿದ್ದಾರೆ.
ಕಳೆದ ತಿಂಗಳು ಸುರಿದ ಮಳೆಗೆ ನಗರದ ಮಹಾಲಕ್ಷ್ಮಿ ಲೇಔಟ್ ಸುತ್ತಮುತ್ತ ಇರುವ ಮನೆಗಳು ಮಳೆಯ ನೀರಿಗೆ ಸಂಪೂರ್ಣ ಜಲಾವೃತವಾಗಿದ್ದವು. ರಾಜಕಾಲುವೆಗೆ ಗೋಡೆ ಇಲ್ಲದಿರುವುದರಿಂದ ಈ ಅನಾಹುತ ಸಂಭವಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ನಗರದ ಹಲವೆಡೆ ರಾಜಕಾಲುವೆಗೆ ಗೋಡೆ ನಿರ್ಮಾಣ ಮಾಡುವ ಕಾರ್ಯ ಇನ್ನೂ ಪ್ರಗತಿಯಲ್ಲಿದ್ದು, ಸದ್ಯ ಮಳೆಗಾಲಕ್ಕೆ ಈ ಕೆಲಸವೂ ಕೂಡ ಸಿದ್ಧವಾಗಿಲ್ಲ.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಇಂಜಿನಿಯರ್ (ಘನತ್ಯಾಜ್ಯ ನಿರ್ವಹಣೆ) ಬಸವರಾಜ ಕಬಾಡೆ, “ಆಯಾ ವ್ಯಾಪ್ತಿಯ ತಹಶೀಲ್ದಾರ್ಗಳು ಸೆಕ್ಷನ್ 104ರ ಅಡಿಯಲ್ಲಿ ಆದೇಶಗಳನ್ನು ಜಾರಿಗೊಳಿಸಿದ ನಂತರ ತೆರವು ಕಾರ್ಯ ಪ್ರಾರಂಭವಾಗುತ್ತದೆ. ಒತ್ತುವರಿ ತೆರವು ಜವಾಬ್ದಾರಿಯು ಆಯಾ ವಲಯಗಳದ್ದಾಗಿದೆ. ಇನ್ನೂ 607 ಕಡೆಗಳಲ್ಲಿ ಒತ್ತುವರಿ ತೆರವು ಬಾಕಿ ಇದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನೀರಿನ ಸಮಸ್ಯೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಲೋಕಾಯುಕ್ತ
ಮನ್ಸೂನ್ ಮಳೆ ಆರಂಭ
“ಕೇರಳಕ್ಕೆ ಮಾನ್ಸೂನ್ ಮಾರುತಗಳು ಪ್ರವೇಶಿಸಿದ್ದು, ಇನ್ನು ಎರಡು ದಿನಗಳಲ್ಲಿ ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಲಿದೆ. ವಾಡಿಕೆ ಪ್ರಕಾರ ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಮುಂಗಾರು ಅಬ್ಬರ ಜೋರಾಗಿರುತ್ತದೆ. ಆದರೆ, ವಾಡಿಕೆಗಿಂತ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ. ಕಳೆದ ನಾಲ್ಕು ತಿಂಗಳಿನಲ್ಲಿ 65 ಸೆಂ.ಮೀ ಮಳೆಯಾಗಿದೆ” ಎಂದು ಹವಾಮಾನ ಇಲಾಖೆ ತಿಳಿಸಿದೆ.