- ರಸ್ತೆ ಕಾಮಗಾರಿಗಳು ಏಪ್ರಿಲ್ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆ: ಬಿಬಿಎಂಪಿ
- ಕಾಮಗಾರಿಗಳು ಮುಂದುವರೆದಂತೆ, ಅಂದವನ್ನು ಕಳೆದುಕೊಳ್ಳುತ್ತಿರುವ ನಗರ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಳೆದ ಎರಡು-ಮೂರು ತಿಂಗಳಿನಿಂದ ಚರಂಡಿಗಳಲ್ಲಿನ ಹೂಳು ತೆಗೆಯುವ ಕಾರ್ಯವನ್ನು ಭರದಿಂದ ಆರಂಭಿಸಿತ್ತು. ಆದರೆ, ತೆಗೆದ ಹೂಳನ್ನು ತೆರವು ಮಾಡದೇ ರಸ್ತೆ ಬದಿಗಳಲ್ಲಿ ಹಾಗೆಯೇ ಬಿಟ್ಟಿದೆ. ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.
ಹೂಳು ರಸ್ತೆಬದಿಗಳಲ್ಲಿ ಹಾಗೆಯೇ ಉಳಿದಿರುವುದರಿಂದ ವಾಹನ ಸವಾರರು ಮತ್ತು ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಅಕ್ಕಪಕ್ಕದ ಮನೆಯವರು ಮತ್ತು ರಸ್ತೆಬದಿ ಅಂಗಡಿಯವರು ಧೂಳಿನಿಂದ ಮನೆ ವಸ್ತುಗಳೆಲ್ಲ ಗಲೀಜಾಗುತ್ತಿವೆ ಎಂದು ಪರದಾಡುವಂತಾಗಿದೆ.
ಹೊರವರ್ತುಲ ರಸ್ತೆ, ಕಸವನಹಳ್ಳಿ ರಸ್ತೆ, ಸರ್ಜಾಪುರ ರಸ್ತೆ, ದೇವೇಗೌಡ ರಸ್ತೆ, ದಿನ್ನೂರು ಮುಖ್ಯರಸ್ತೆ, ಆರ್ಟಿ ನಗರ ಮುಖ್ಯರಸ್ತೆ, ರಾಚೇನಹಳ್ಳಿ ರಸ್ತೆ, ಇಂದಿರಾನಗರ, ವಿದ್ಯಾರಣ್ಯಪುರ, ಹೊಸ ತಿಪ್ಪಸಂದ್ರ, ಎಚ್ಬಿಆರ್ ಲೇಔಟ್, ಥಣಿಸಂದ್ರ ರಸ್ತೆ, 12ನೇ ಮುಖ್ಯರಸ್ತೆಯಲ್ಲಿನ ಸರ್ವಿಸ್ ರಸ್ತೆಗಳಲ್ಲಿ ಚರಂಡಿಯಿಂದ ಹೂಳು ಹೊರತೆಗೆಯಲಾಗಿದೆ. ಆದರೆ, ಹೂಳನ್ನು ರಸ್ತೆಯಿಂದ ಇನ್ನೂ ತೆರವು ಮಾಡಿಲ್ಲ.
ಒಟ್ಟು ₹4,000 ಕೋಟಿ ವೆಚ್ಚದ ಬಿಬಿಎಂಪಿಯ ಮಹತ್ವಾಕಾಂಕ್ಷೆಯ ಬೃಹತ್ ಯೋಜನೆಯ ಭಾಗವಾಗಿ ರಸ್ತೆ ಬದಿಯ ಚರಂಡಿಗಳನ್ನು ಸ್ವಚ್ಛಗೊಳಿಸಿ ನಗರವನ್ನು ಅಂದವಾಗಿಡುವ ಉದ್ದೇಶವನ್ನು ಹೊಂದಿದೆ. ಈ ಯೋಜನೆಗಳು ನಗರದಾದ್ಯಂತ 2,500 ಕಿಲೋಮೀಟರ್ಗಳಷ್ಟು ವಿಸ್ತಾರವಾದ ರಸ್ತೆ ಡಾಂಬರೀಕರಣ ಮತ್ತು ಫುಟ್ಪಾತ್ ಸುಧಾರಣೆಗಳನ್ನು ಒಳಗೊಂಡಿವೆ. ಸಮಗ್ರ ಕಾರ್ಯವು ಮುಂದುವರೆದಂತೆ, ಇಡೀ ನಗರ ಸಮಸ್ಯೆಗೆ ಸಿಲುಕಿಕೊಂಡಿದೆ.
ರಸ್ತೆಗೆ ಸಂಬಂಧಿಸಿದ ಕಾಮಗಾರಿಗಳು ಏಪ್ರಿಲ್ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಕಾಮಗಾರಿ ಮುಗಿದ ನಂತರ ಎಲ್ಲವೂ ಸರಿಯಾಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಂಚನೆ ಪ್ರಕರಣ | ಇಂಡಿಯನ್ಮನಿ ಫ್ರೀಡಂ ಆ್ಯಪ್ ಸಿಇಒ ಸಿಎಸ್ ಸುಧೀರ್ ವಿಚಾರಣೆ
“ನನಗೆ ಧೂಳಿನಿಂದ ಅಲರ್ಜಿ ಇದೆ. ಆದರೆ, ಮಾಲಿನ್ಯವನ್ನು ಹೊರಹಾಕದೆ ಹೇಗೆ ಕೆಲಸ ಪೂರ್ಣಗೊಳಿಸಬೇಕು ಎಂದು ಬಿಬಿಎಂಪಿಗೆ ತಿಳಿದಿಲ್ಲ. ನಿರ್ಮಾಣ ಹಂತದಲ್ಲಿರುವ ರಸ್ತೆಗಳಲ್ಲಿ ವಾಹನಗಳು ಸಂಚರಿಸಲು ಅನುವು ಮಾಡಿಕೊಟ್ಟಿದೆ. ಇದರಿಂದ ಮಾಲಿನ್ಯ ಹೆಚ್ಚುತ್ತಿದೆ. ಬಿಬಿಎಂಪಿಯು ತರಳಬಾಳು ರಸ್ತೆಯನ್ನು ವೈಟ್ ಟಾಪಿಂಗ್ ಮಾಡುತ್ತಿದೆ. ಪ್ರಗತಿ ನಿಧಾನವಾಗಿದೆ” ಎಂದು ಆರ್ಟಿ ನಗರದ ನಿವಾಸಿಯೊಬ್ಬರು ಹೇಳಿದರು.
“ಚರಂಡಿಯಿಂದ ಹೂಳು ತೆಗೆದು ಲಾರಿ ಅಥವಾ ಟ್ರ್ಯಾಕ್ಟರ್ಗೆ ಲೋಡ್ ಮಾಡುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ. ಹೂಳು ಒಣಗಬೇಕು ಎಂಬ ಕಾರಣಕ್ಕೆ ಕೆಲ ಗುತ್ತಿಗೆದಾರರು ಆದೇಶ ಪಾಲಿಸುತ್ತಿಲ್ಲ. ಹಗಲಿನಲ್ಲಿ ಹೂಳು ತೆಗೆಯುವುದರಿಂದ ಪ್ರಾಯೋಗಿಕ ತೊಂದರೆಗಳಿದ್ದು, ರಾತ್ರಿ ವೇಳೆ ಮಾತ್ರ ಹೂಳು ಸಾಗಣೆಗೆ ಅವಕಾಶ ಕಲ್ಪಿಸಲಾಗಿದೆ” ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಿಎಸ್ ಪ್ರಹ್ಲಾದ್ ಹೇಳಿದರು.