- ಮೀನುಗಳ ಸಾವಿಗೆ ಒಳಚರಂಡಿ ನೀರು ಕಾರಣ
- ನೀರಿನ ಗುಣಮಟ್ಟದ ಬಗ್ಗೆ ಕಾಳಜಿ ವಹಿಸದ ಬಿಬಿಎಂಪಿ
ಇತ್ತಿಚೆಗೆ ಸುರಿದ ಮಳೆಯಿಂದ ಸೀತಾರಾಮಪಾಳ್ಯ ಕೆರೆಗೆ ವಿಷಕಾರಿ ಕೊಳಚೆ ನೀರು ನುಗ್ಗಿದ್ದು, ಕರೆಯಲ್ಲಿದ್ದ ಮೀನುಗಳು ಸಾವನ್ನಪ್ಪಿರುವ ಘಟನೆ ಶನಿವಾರ ವರದಿಯಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ವರ್ಷದಲ್ಲಿ ಕೆರೆಗಳಲ್ಲಿ ಮೀನುಗಳು ಸಾವನ್ನಪ್ಪಿರುವ ನಾಲ್ಕನೇ ಘಟನೆ ಇದಾಗಿದೆ.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಕೆರೆ ಹೋರಾಟಗಾರ ರಾಘವೇಂದ್ರ ಪಾಶ್ಚಾಪೂರ, “ಇದುವರೆಗೆ ಕೊತ್ತನೂರು ಕೆರೆಯಲ್ಲಿ ಎರಡು ಬಾರಿ ಮತ್ತು ಇಬ್ಲೂರು ಕೆರೆಯಲ್ಲಿ ಒಮ್ಮೆ ಮೀನುಗಳ ಮಾರಣಹೋಮ ನಡೆದಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್ಎಸ್ಬಿ) ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಚರಂಡಿಗಳು ಮತ್ತು ಕೆರೆಗಳನ್ನು ನಿರ್ವಹಣೆ ಮಾಡದೇ ಇರುವುದರಿಂದ ಇಂತಹ ಘಟನೆಗಳು ಮರುಕಳಿಸುತ್ತಿವೆ” ಎಂದು ಆರೋಪಿಸಿದರು.
”ಕೊಳಚೆ ನೀರು ಕೆರೆಗಳಿಗೆ ಹರಿಯುವುದನ್ನು ತಡೆಯಲು ಕೆರೆಗಳ ಬಾಯಿಯ ಬಳಿ ಡೈವರ್ಶನ್ ಚಾನಲ್ಗಳನ್ನು ನಿರ್ಮಿಸಲು ಬಿಬಿಎಂಪಿ ಬಜೆಟ್ನಲ್ಲಿ ಅನುದಾನ ಮೀಸಲಿಟ್ಟಿದೆ. ಆದರೆ, ಒಳಹರಿವುಗಳಿಗೆ ಯಾವುದೇ ನಿರ್ವಹಣೆ ಇಲ್ಲ. ತ್ಯಾಜ್ಯ ನೀರು ಕೂಡ ಕೆರೆಗಳಿಗೆ ಸೇರುತ್ತದೆ” ಎಂದರು.
“ಬಿಬಿಎಂಪಿ ಅಧಿಕಾರಿಗಳು ನೀರಿನ ಗುಣಮಟ್ಟದ ಬಗ್ಗೆ ಕಾಳಜಿ ವಹಿಸದಿದ್ದರೂ, ಬಿಡಬ್ಲ್ಯೂಎಸ್ಎಸ್ಬಿ ಕೂಡ ನೀರನ್ನು ಶುದ್ಧವಾಗಿಡಲು ಖಾತ್ರಿಪಡಿಸುವುದಿಲ್ಲ” ಎಂದು ಅವರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಅಮುಲ್-ನಂದಿನಿ ಬಗ್ಗೆ ಹೊಸ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿ; ಆಪ್ ಸಲಹೆ
ಬಿಬಿಎಂಪಿಯ ಮಹದೇವಪುರ ವಲಯದ ಕಾರ್ಯಪಾಲಕ ಎಂಜಿನಿಯರ್ (ಕೆರೆಗಳು) ಭೂಪ್ರದಾ ಮಾತನಾಡಿ, “ಈ ಕೆರೆಯಲ್ಲಿ ಯಾವುದೇ ತಿರುವು ಚರಂಡಿಗಳಿಲ್ಲ. ಈ ಕೆರೆಯನ್ನು 2020ರಲ್ಲಿ ಬಿಬಿಎಂಪಿಗೆ ಹಸ್ತಾಂತರಿಸಲಾಯಿತು. ಇದನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಸಿಎಸ್ಆರ್ ಕಾರ್ಯಕ್ರಮದ ಅಡಿಯಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ಆದರೆ, ಕೆರೆಯ ಅಭಿವೃದ್ಧಿ ಕೆಲಸಗಳನ್ನು ಆದ್ಯತೆಯಾಗಿ ತೆಗೆದುಕೊಂಡು ಕಾಮಗಾರಿ ಆರಂಭಿಸಿಲ್ಲ” ಎಂದು ಅವರು ಹೇಳಿದರು.