- ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ನೀತಿ ಸಂಹಿತೆ ಜಾರಿಯಲ್ಲಿದೆ
- ವಿಧಾನಸಭೆ ಚುನಾವಣೆಗೆ ಮೇ 10ರಂದು ಮತದಾನ ನಡೆಯಲಿದೆ
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ನೀತಿ ಸಂಹಿತೆ ಜಾರಿಯಲ್ಲಿದೆ. ಆದರೂ, ವಾಹನ ಹಾಗೂ ಆಟೋಗಳ ಮೇಲೆ ರಾಜಕೀಯ ನಾಯಕರ ಭಾವಚಿತ್ರ ಮತ್ತು ಪಕ್ಷಗಳ ಚಿಹ್ನೆ ಇರುವ ವಾಹನಗಳ ಮೇಲೆ ಆರ್ಟಿಐ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದು, ರಾಜಕೀಯ ಪ್ರೇರಿತ ಭಾವಚಿತ್ರ ಅಥವಾ ಚಿಹ್ನೆ ಇದ್ದರೆ ₹5 ಸಾವಿರ ದಂಡ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಚುನಾವಣೆ ದಿನಾಂಕ ಘೋಷಣೆಯಾದಾಗಿನಿಂದ ಪೊಲೀಸ್ ಅಧಿಕಾರಿಗಳು ಮತ್ತು ಚುನಾವಣಾ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ. ಹಾಗೆಯೇ, ಚುನಾವಣಾ ಆಯೋಗದ ಸೂಚನೆಯಂತೆ ಮೆಜೆಸ್ಟಿಕ್ ಬಳಿ ಇರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದ ಬಳಿ ಆರ್ಟಿಓ ಅಧಿಕಾರಿಗಳು ಮಂಗಳವಾರ ಕಾರ್ಯಾಚರಣೆ ನಡೆಸಿದರು.
ಆರ್ಟಿಓ ಜಂಟಿ ಆಯುಕ್ತ ಹಾಲಸ್ವಾಮಿ, ರಾಜಾಜಿನಗರ ಆರ್ಟಿಓ ಅಧಿಕಾರಿ ಶ್ರೀನಿವಾಸ್ ಪ್ರಸಾದ್ ನೇತೃತ್ವದಲ್ಲಿ ಪರಿಶೀಲನೆ ನಡೆಯಿತು.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ರಾಜಕೀಯ ಪಕ್ಷಗಳು ಹಾಗೂ ಚುನಾವಣಾ ಅಭ್ಯರ್ಥಿಗಳು ಯಾವುದೇ ವ್ಯಕ್ತಿಯ ಜಮೀನು, ಕಟ್ಟಡದಲ್ಲಿ ಅನುಮತಿಯಿಲ್ಲದೆ ಪಕ್ಷದ ಧ್ವಜಗಳು, ಬ್ಯಾನರ್ಗಳು, ಸೂಚನೆಗಳು ಮತ್ತು ಘೋಷಣೆಗಳನ್ನು ಬರೆಯಲು ಅನುಮತಿ ಇರುವುದಿಲ್ಲ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮತದಾನ ಪ್ರಮಾಣ ಶೇ. 75ಕ್ಕೆ ಏರಿಸುವ ಗುರಿ ಹೊಂದಲಾಗಿದೆ: ಜಿಲ್ಲಾ ಚುನಾವಣಾಧಿಕಾರಿ
ಪಕ್ಷದ ಚಿಹ್ನೆ, ಧ್ವಜ ಹಾಗೂ ಅಭ್ಯರ್ಥಿಗಳ ಭಾವಚಿತ್ರ, ಹೆಸರನ್ನು ವಾಹನದ ಮೇಲೆ ಹಾಕುವಂತಿಲ್ಲ. ಒಂದು ವೇಳೆ ವಾಹನದ ಮೇಲೆ ಹೆಸರನ್ನು ಹಾಕಬೇಕಾದರೆ, ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳಿಂದ ವಾಹನಗಳ ಸಂಖ್ಯೆ ನೀಡಿ ಪರವಾನಿಗೆ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.
ಯಾವುದೇ ಪರವಾನಿಗೆ ಇಲ್ಲದೇ ವಾಹನಗಳ ಮೇಲೆ ಅಭ್ಯರ್ಥಿಗಳ ಫೋಟೋ ಹಾಕಿದ್ದರೆ, ಅದು ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಅಪರಾಧವಾಗುತ್ತದೆ. ಆ ವಾಹನವನ್ನು ಪೊಲೀಸರು ಅಥವಾ ಚುನಾವಣಾಧಿಕಾರಿಗಳು ಸೀಜ್ ಮಾಡುವ ಅಧಿಕಾರ ಹೊಂದಿರುತ್ತಾರೆ. ದಂಡವನ್ನು ವಿಧಿಸಬಹುದು.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ 10ರಂದು ಮತದಾನ ನಡೆಯಲಿದೆ. ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.