ಜನರ ಪುನರ್ವಸತಿ ಮತ್ತು ಯೋಗಕ್ಷೇಮದಲ್ಲಿ ದಾದಿಯರು ಪ್ರಮುಖ ಪಾತ್ರ ವಹಿಸಿದ್ದಾರೆ. ಎಲೆಮರೆ ಕಾಯಿಯಂತೆ ಕಾರ್ಯ ನಿರ್ವಹಿಸುವ ದಾದಿಯರ ಸೇವೆ ಗೌರವಿಸಲು ಪ್ರಪಂಚದಾದ್ಯಂತ ಮೇ 12ರಂದು ಅಂತಾರಾಷ್ಟ್ರೀಯ ದಾದಿಯರ ದಿನ ಆಚರಿಸಲಾಗುತ್ತದೆ.
ಪ್ರತಿವರ್ಷ ವಿಶಿಷ್ಟ ಧ್ಯೇಯದೊಂದಿಗೆ ಆರಂಭವಾಗುವ ದಾದಿಯರ ದಿನ. ಈ ಬಾರಿ ‘ನಮ್ಮ ದಾದಿಯರು, ನಮ್ಮ ಭವಿಷ್ಯ’ ಎಂಬ ದ್ಯೇಯದೊಂದಿಗೆ ಆರಂಭವಾಗಿದೆ. ಸಾರ್ವಜನಿಕರು ಮತ್ತು ಆರೋಗ್ಯ ರಕ್ಷಣಾ ವ್ಯವಸ್ಥೆಯ ನಡುವಿನ ಮೊದಲ ಕೊಂಡಿಯಾಗಿರುವ ಈ ದಾದಿಯರಿಗೆ ಗೌರವ ಸಲ್ಲಿಸಲಾಗುತ್ತಿದೆ. ದೇಶದ ಪ್ರತಿಯೊಬ್ಬ ನಾಗರಿಕನ ಆರೋಗ್ಯಕ್ಕಾಗಿ ಹಗಲಿರುಳು ಎನ್ನದೆ ಶ್ರದ್ಧೆಯಿಂದ ದುಡಿಯುತ್ತಿರುವ ದಾದಿಯರಿಗಾಗಿ ಈ ದಿನವನ್ನು ಸಂಭ್ರಮಿಸಲಾಗುತ್ತಿದೆ.
2019ರಲ್ಲಿ ಇಡೀ ಜಗತ್ತಿಗೆ ಕೊರೊನಾ ಎಂಬ ಮಹಾಮಾರಿ ಅಂಟಿದಾಗ ಎಲ್ಲರೂ ಭಯಭೀತರಾಗಿ ಮನೆಯಲ್ಲಿ ಕುಳಿತಿದ್ದರು. ಆ ಕಠಿಣವಾದ ಸಮಯದಲ್ಲಿಯೂ ಕೂಡಾ ದೃತಿಗೆಡದೇ ಜನರಿಗೆ ಸೇವೆ ಸಲ್ಲಿಸಿದ ದಾದಿಯರ ಮಾನವೀಯ ಸೇವೆ ಅನನ್ಯ. ದಾದಿಯರ ಪಾರದರ್ಶಕ ಸೇವೆಯಿಂದಲೇ ಒಂದು ಕೋಟಿಗಿಂತೂ ಹೆಚ್ಚು ಕೋವಿಡ್ ಲಸಿಕೆ ನೀಡಲು ಸಾಧ್ಯವಾಯಿತು. ಕೊರೊನಾ ಸಮಯದ ಅವರ ಸೇವೆಯು ದಾದಿಯರ ದಿನಕ್ಕೆ ಮತ್ತೊಂದು ಮೆರಗು ತಂದುಕೊಟ್ಟಿದೆ. ಈಗ ಕೇವಲ ಆಸ್ಪತ್ರೆಗಳು ಮಾತ್ರವಲ್ಲ, ಇಡೀ ಸಮಾಜ ಅವರ ದಿನವನ್ನು ಆಚರಿಸುತ್ತಿದೆ.
ದಾದಿಯರ ದಿನ
ಎಲೆಮರೆ ಕಾಯಿಯಂತೆ ಕಾರ್ಯ ನಿರ್ವಹಿಸುವ ದಾದಿಯರ ಸೇವೆ ಗೌರವಿಸಲು ಪ್ರಪಂಚದಾದ್ಯಂತ ಮೇ 12ರಂದು ಅಂತಾರಾಷ್ಟ್ರೀಯ ದಾದಿಯರ ದಿನ ಆಚರಿಸಲಾಗುತ್ತದೆ. ಜನರ ಪುನರ್ವಸತಿ ಮತ್ತು ಯೋಗಕ್ಷೇಮದಲ್ಲಿ ದಾದಿಯರು ಪ್ರಮುಖ ಪಾತ್ರ ವಹಿಸಿದ್ದಾರೆ.
1854ರಲ್ಲಿ ರಷ್ಯಾ ಮತ್ತು ಬ್ರಿಟನ್ ನಡುವೆ ನಡೆದ ಕ್ರಿಮಿಯನ್ ಯುದ್ಧದ ಸಮಯದಲ್ಲಿ ಗಾಯಗೊಂಡ ಸೈನಿಕರನ್ನು ರಾತ್ರಿಯ ಸಮಯದಲ್ಲಿ ಹಾಸಿಗೆಗಳ ನಡುವೆ ಕೈಯಲ್ಲಿ ದೀಪ ಹಿಡಿದುಕೊಂಡು ರೋಗಿಗಳನ್ನು ಆರೈಕೆ ಮಾಡಿದ್ದ ಫ್ಲಾರೆನ್ಸ್ ನೈಟಿಂಗೆಲ್ ಅವರು ಜಗತ್ತಿನಾದ್ಯಂತ ಗೌರವ ಪಡೆದಿದ್ದರು. ವೃತ್ತಿ ಘನತೆಯನ್ನು ಎತ್ತಿ ಹಿಡಿದ ಅನುಭವಿ ದಾದಿ ಅವರು.
‘ದಿ ಲೇಡಿ ವಿತ್ ದಿ ಲ್ಯಾಂಪ್’ ಎಂದು ಕರೆಯಲ್ಪಡುವ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದಂದು ಅವರ ಸ್ಮರಣಾರ್ಥವಾಗಿ ದಾದಿಯರ ದಿನ ಎಂದು ಆಚರಿಸುತ್ತಾರೆ. ಈ ದಿನವನ್ನು ಮೊದಲ ಬಾರಿಗೆ 1965 ರಲ್ಲಿ ಆಚರಿಸಲಾಯಿತು.
ಮನ್ನಣೆಯಿಂದ ವಂಚಿತರಾದ ದಾದಿಯರು
ಆರೋಗ್ಯ ರಕ್ಷಣೆಯ ಭವಿಷ್ಯವನ್ನು ರೂಪಿಸುವಲ್ಲಿ ದಾದಿಯರ ದಣಿವರಿಯದ ಕೆಲಸ ಪ್ರಮುಖವಾಗಿದೆ. ಆಸ್ಪತ್ರೆಗಳಲ್ಲಿ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿದ್ದಾರೆ. ರೋಗಿಗಳಿಗೆ 24 ಗಂಟೆ ಗುಣಮಟ್ಟದ ಆರೋಗ್ಯ ಆರೈಕೆ ನೀಡುವ ದಾದಿಯರ ಸೇವೆಗಳು ಅವರ ಸಹಾನುಭೂತಿಯನ್ನು ತೋರಿಸುತ್ತದೆ.
ದಿನದ 24 ಗಂಟೆಯೂ ಒಂದಿಲ್ಲೊಂದು ರೀತಿಯಲ್ಲಿ ತಮ್ಮ ಸೇವೆಯಲ್ಲಿ ಕಠಿಣ ಸವಾಲುಗಳನ್ನು ಎದುರಿಸುವ ದಾದಿಯರು ರೋಗಿಗಳ ಚಿಕಿತ್ಸೆಯ ವಿಚಾರದಲ್ಲಿ ವೈದ್ಯರಿಗೆ ಸಿಗುವಷ್ಟು ಮನ್ನಣೆ ಇವರಿಗೆ ಲಭಿಸಿಲ್ಲ.
ನಮ್ಮ ದಾದಿಯರು, ನಮ್ಮ ಭವಿಷ್ಯ
ಪ್ರತಿ ವರ್ಷ ಹೊಸ ಧ್ಯೇಯದೊಂದಿಗೆ ಆರಂಭವಾಗುವ ಈ ದಾದಿಯರ ದಿನ ಈ ವರ್ಷ ‘ನಮ್ಮ ದಾದಿಯರು, ನಮ್ಮ ಭವಿಷ್ಯ’ ಎಂಬ ಧ್ಯೇಯದೊಂದಿಗೆ ಆರಂಭವಾಗಿದೆ.
ಜಾಗತಿಕ ಆರೋಗ್ಯ ಸವಾಲುಗಳನ್ನು ಎದುರಿಸಲು ಮತ್ತು ಎಲ್ಲರಿಗೂ ಜಾಗತಿಕ ಆರೋಗ್ಯವನ್ನು ಸುಧಾರಿಸಲು ಭವಿಷ್ಯದಲ್ಲಿ ಶುಶ್ರೂಷೆಗಾಗಿ ದಾದಿಯರ ಕೊಡುಗೆಯನ್ನು ವಿವರಿಸುವ ಜಾಗತಿಕ ಅಭಿಯಾನವಾಗಿದೆ.
ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ನರ್ಸ್ (ICN) ಅಂತಾರಾಷ್ಟ್ರೀಯ ದಾದಿಯರ ದಿನದ ಕಿಟ್ ಅನ್ನು ಸಿದ್ಧಪಡಿಸಿ, ವಿತರಿಸುತ್ತದೆ. ಈ ಕಿಟ್ ಶೈಕ್ಷಣಿಕ ಮತ್ತು ಸಾರ್ವಜನಿಕ ಮಾಹಿತಿ ಸಾಮಗ್ರಿಗಳನ್ನು ಒಳಗೊಂಡಿರುತ್ತದೆ.
ನರ್ಸ್ಗಳು ಅನುಭವಿಸುವ ಕಷ್ಟಗಳು ಒಂದೆರಡಲ್ಲ. ಅವರ ಸಂಕಷ್ಟ ಸಮಾಜಕ್ಕೆ ಅರ್ಥವೂ ಆಗುವುದಿಲ್ಲ. ಹುಟ್ಟಿನಿಂದ ಬದುಕಿನ ಯಾನ ಮುಗಿಸುವವರೆಗಿನ ನಾನಾ ಹಂತಗಳಲ್ಲಿ ದಾದಿಯರು ಸೇವೆ ಸಲ್ಲಿಸುತ್ತಾರೆ.
ವಿದೇಶಗಳಲ್ಲಿ ದಾದಿಯರಿಗೆ ಹೆಚ್ಚಿನ ಬೇಡಿಕೆಯಿದೆ. ಅವರಿಗೆ ಹಲವಾರು ಸವಲತ್ತುಗಳನ್ನು ನೀಡಲಾಗುತ್ತದೆ. ಭಾರತದಿಂದಲೇ ಅತಿ ಹೆಚ್ಚು ಮಂದಿ ವಿದೇಶಕ್ಕೆ ತೆರಳುತ್ತಾರೆ. ಆದರೆ, ಭಾರತದಲ್ಲಿ ಪ್ರಸ್ತುತವಾಗಿ ದಾದಿಯರ ಕೊರತೆ ಇದ್ದು, ಈ ಕೋರ್ಸ್ಗೆ ಬೇಡಿಕೆ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ 350 ಜನರಿಗೆ ಒಬ್ಬ ಶುಶ್ರೂಷಕರು ಇರಬೇಕು. ಆದರೆ, ಭಾರತದಲ್ಲಿ ಪ್ರಸ್ತುತ 600 ಜನರಿಗೆ ಒಬ್ಬರು ದಾದಿಯರಿದ್ದಾರೆ.
ಈ ದಿನ.ಕಾಮ್ ಜತೆಗೆ ದಾದಿಯರು, ನರ್ಸ್ ಕೋರ್ಸ್ ವ್ಯಾಸಂಗ ಮಾಡುತ್ತಿರುವವರು ಹಾಗೂ ಬಿಎಸ್ಸಿ ನರ್ಸಿಂಗ್ ಕಲಿತು ನರ್ಸ್ ಕೆಲಸಕ್ಕಾಗಿ ಕಾಯುತ್ತಿರುವವರು ಸೇರಿದಂತೆ ಹಲವರು ಮಾತನಾಡಿದ್ದಾರೆ.
“ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡಲು ಈ ದಾದಿ ಕೆಲಸ ತುಂಬಾ ಸಹಕಾರಿಯಾಗಿದೆ. ನೈಟಿಂಗೆಲ್ ಅವರು ಜನರಿಗೆ ನೀಡಿರುವ ನಿಸ್ವಾರ್ಥ್ ಸೇವೆ ತುಂಬಾ ಪ್ರಚೋದನೆ ನೀಡುತ್ತದೆ. ಅದೇ ದಾರಿಯಲ್ಲಿ ನಾವು ಸಾಗಬೇಕು ಎಂಬ ಹೆಬ್ಬಯಕೆ ಇದೆ. ದೇಶ ವಿದೇಶಗಳಲ್ಲಿ ಈ ದಾದಿಯರ ಕೆಲಸಕ್ಕೆ ಹೆಚ್ಚಿನ ಮನ್ನಣೆ ಇದೆ” ಎಂದು ಈ ದಿನ.ಕಾಮ್ಗೆ ನರ್ಸ್ ಸಂಗಮೇಶ್ ತಿಳಿಸಿದರು.
ರಾಮನಗರದಲ್ಲಿ ದಾದಿಯಾಗಿ ಕಾರ್ಯನಿರ್ವಹಿಸುವ ಸೌಮ್ಯ ಅವರು ಈ ದಿನ.ಕಾಮ್ ಜತೆಗೆ ಮಾತನಾಡಿ, “ಕಳೆದ 8 ವರ್ಷಗಳಿಂದ ನಾನು ದಾದಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಎಸ್ಎಸ್ಎಲ್ಸಿಯಲ್ಲಿ ನಾನು ನರ್ಸ್ ಆಗಬೇಕೆಂಬ ಕನಸು ಕಂಡಿದ್ದೆ, ಅದೇ ರೀತಿ ಇಂದು ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಇದು ಒಂದು ರೀತಿಯಲ್ಲಿ ಸಮಾಜ ಸೇವೆ, ಜನರಿಗೆ ಸೇವೆ ನೀಡಬೇಕೆಂಬ ನನ್ನ ಆಸೆ ಈಡೇರಿದೆ” ಎಂದು ಹೇಳಿದರು.
“ಎನ್ಎಚ್ಎಮ್ ಹೆಲ್ತ್ ಡಿಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡುವ ಎಲ್ಲರಿಗೂ ವೇತನ ಕಡಿಮೆ ಇದೆ. ಹಲವು ವರ್ಷಗಳ ಅನುಭವ ಇದ್ದರೂ ಕೂಡಾ ಅವರಿಗೆ ಕೇವಲ ₹13000 ವೇತನ ನೀಡುತ್ತಾರೆ. ರಜೆ ನೀಡುವುದರಲ್ಲಿಯೂ ಸಮಸ್ಯೆಗಳು ಇದೆ. ಹೊರಗಡೆ ಚಿಕಿತ್ಸೆ ನೀಡಲು ಹೋದಾಗಲೂ ದಾದಿಯರೂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ” ಎಂದು ರಾಮನಗರದ ಮಾನಸಿಕ ಆರೋಗ್ಯ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಪದ್ಮರೇಖಾ ಈ ದಿನ.ಕಾಮ್ಗೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ನಮ್ಮ ಕ್ಲಿನಿಕ್ | ಬಡವರ ಕಲ್ಯಾಣಕ್ಕೋ ಅಥವಾ ಚುನಾವಣೆಗೋ? ಬಿಜೆಪಿಯೇ ಉತ್ತರಿಸಬೇಕಿದೆ
ಬಾಗಲಕೋಟೆಯಲ್ಲಿ ಬಿಎಸ್ಸಿ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿರುವ ಶಾಲಿನಿ ಈ ದಿನ.ಕಾಮ್ ಜತೆಗೆ ಮಾತನಾಡಿ, “ನನಗೆ ಈ ಫೀಲ್ಡ್ ಅಲ್ಲಿ ಕಾರ್ಯನಿರ್ವಹಿಸಬೇಕೆಂಬ ಆಸೆ ಇದೆ. ಅದರಂತೆ ಈಗ ಕಲಿಯುತ್ತಿರುವೆ. ನಮ್ಮ ಮನೆಯಲ್ಲಿ ಯಾರು ನರ್ಸ್ ಆಗಿ ಕಾರ್ಯನಿರ್ವಹಿಸಿಲ್ಲ. ಹಾಗಾಗಿ, ನಾನೊಬ್ಬಳಾದರೂ ನರ್ಸ್ ಆಗಿ ಕಾರ್ಯ ನಿರ್ವಹಿಸಿ ಸಮಾಜ ಸೇವೆ ಮಾಡಬೇಕೆಂಬ ಆಸೆ ಇದೆ” ಎಂದರು.