'ಕೆರೆಗಳ ನಗರಿ' ಇದೀಗ ನಗರೀಕರಣದ ಬೇಗುದಿಗೆ ಸಿಲುಕಿ ಬೆಂದುಹೋಗಿದೆ. ಕೆಂಪೇಗೌಡರು ಕಟ್ಟಿಸಿದ್ದ ಕೆರೆಗಳು ಅವನತಿ ಅಂಚಿನಲ್ಲಿವೆ. ಪ್ರಾಣಿಗಳು ಕುಡಿಯಲು ಯೋಗ್ಯವಲ್ಲದ ನೀರಿನ ಕೆರೆಗಳು ನಮ್ಮ ಬಳಿ ಉಳಿದಿವೆ.
ಕೆಂಪೇಗೌಡರು ಕಟ್ಟಿದ ಬೆಂದಕಾಳೂರು (ಬೆಂಗಳೂರು) ‘ಕೆರೆಗಳ ನಗರಿ’ ಎಂದೇ ಹೆಸರುವಾಸಿಯಾಗಿತ್ತು. ಇದೀಗ ನಗರೀಕರಣದ ಬೇಗುದಿಗೆ ಸಿಲುಕಿ ಕೆರೆಗಳು ಬೆಂದುಹೋಗಿವೆ. ಸಾವಿರಾರು ಲೆಕ್ಕದಲ್ಲಿದ್ದ ಕೆರೆಗಳು ಇದೀಗ ನೂರು-ಹತ್ತರ ಲೆಕ್ಕಕ್ಕೆ ಕುಸಿದಿವೆ. ನಗರದಲ್ಲಿರುವ ದೊಡ್ಡ ಕೆರೆಗಳ ಸಂಪೂರ್ಣ ಅವನತಿಗೆ ಸರ್ಕಾರವೇ ಪ್ರಮುಖ ಕಾರಣ. 16ನೇ ಶತಮಾನದಲ್ಲಿ ನಿರ್ಮಾಣವಾಗಿದ್ದ ವಿಶಾಲವಾದ ಸಂಪಂಗಿ ಕೆರೆ, ಈಗ ಚಿತ್ರದಲ್ಲಷ್ಟೇ ಕಾಣ ಸಿಗುತ್ತದೆ. ಆ ಕೆರೆಯ ಮೇಲೆ ದೈತ್ಯಾಕಾರದ ಕಂಠೀರವ ಕ್ರೀಡಾಂಗಣ ತಲೆಯೆತ್ತಿ ಮೆರೆಯುತ್ತಿದೆ.
ಬದುಕಲು ಜಲಮೂಲ ಅವಶ್ಯ ಎಂಬುದನ್ನೇ ಮರೆತು, ಆಧುನೀಕರಣದ ಹೆಸರಿನಲ್ಲಿ ಕಾಂಕ್ರಿಟೀಕರಣ ಬೆನ್ನತ್ತಿರುವ ಸರ್ಕಾರ, ಜಲ ಮೂಲಗಳನ್ನೇ ನಾಶ ಮಾಡುತ್ತಿದೆ. ಕೆರೆಗಳ ಮೇಲೆ ಬೃಹಾದಾಕಾರದ ಕಟ್ಟಡಗಳನ್ನು ನಿರ್ಮಿಸಿದೆ.
ಬೆಂಗಳೂರಿನ ಒಂದು ಕೆರೆಯಿಂದ ಮತ್ತೊಂದು ಕೆರೆ ಸಂಪರ್ಕಕೊಂಡಿಗಳೊಂದಿಗೆ, ಸಾವಿರಾರು ಕೆರೆಗಳನ್ನು ಕೆಂಪೇಗೌಡರು ನಿರ್ಮಿಸಿದ್ದರು. ನಂದಿ ಬೆಟ್ಟದ ತಪ್ಪಲಿನಿಂದ ಹರಿದುಬರುತ್ತಿದ್ದ ನೀರು ಎಲ್ಲ ಕೆರೆಗಳನ್ನು ತುಂಬಿಸುತ್ತಿತ್ತು. ಆದರೆ, ಬೆಂಗಳೂರು ಬೆಳೆದಂತೆ ಕೆರೆಗಳು, ಕೆರೆಗಳ ನಡುವಿನ ಕೊಂಡಿಗಳು ಕಳಚಿವೆ. ಇದೀಗ, ನಗರದಲ್ಲಿ 2 ಕೋಟಿಗೂ ಹೆಚ್ಚು ಜನಸಂಖ್ಯೆ ಇದ್ದರೂ ಕೆರೆಗಳ ಸಂಖ್ಯೆ ಮಾತ್ರ ಬೆರಳಣಿಕೆಯಷ್ಟಿದೆ.
ನಗರೀಕರಣದ ಬೇಗುದಿಗೆ ಸಿಲುಕಿದ ಕೆರೆಗಳ ಪೈಕಿ ಸಂಪಂಗಿ ಕೆರೆಯೂ ಒಂದು. ಈ ಕೆರೆಯ ಮೇಲೆ 1946ರಲ್ಲಿ ಕ್ರೀಡಾಂಗಣವನ್ನು ನಿರ್ಮಿಸಲಾಯಿತು. ಮೈಸೂರು ಸಂಸ್ಥಾನದ ರಾಜ ಜಯಚಾಮರಾಜ ಒಡೆಯರ್ ಕ್ರೀಡಾಂಗಣವನ್ನು ಉದ್ಘಾಟಿಸಿದರು. ಈ ಕ್ರೀಡಾಂಗಣಕ್ಕೆ ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್ ಅವರ ಹೆಸರನ್ನು ಮರುನಾಮಕರಣ ಮಾಡಲಾಗಿದೆ. ಹಾಗೇಯೇ, ಇದಕ್ಕೆ ‘ಸಂಪಂಗಿ ಕ್ರೀಡಾಂಗಣ’ ಎಂದು ಕರೆಯುವುದುಂಟು.
ಸಂಪಂಗಿ ಕೆರೆಯ ಹಿನ್ನಲೆ
ಕೇವಲ ಒಂದು ಶತಮಾನದ ಹಿಂದೆ, ನಗರದ ಅತಿದೊಡ್ಡ ಮತ್ತು ಪ್ರಮುಖ ಸರೋವರಗಳಲ್ಲಿ ಒಂದಾದ ಸಂಪಂಗಿ ಕೆರೆ 35 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿತ್ತು. ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಕೆಂಪೇಗೌಡರು ಈ ಕೆರೆಯನ್ನು ನಿರ್ಮಿಸಿದ್ದರು.
ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ, ಬೆಂಗಳೂರನ್ನು ಎರಡು ನ್ಯಾಯವ್ಯಾಪ್ತಿಯ ಪ್ರದೇಶಗಳಾಗಿ ವಿಂಗಡಿಸಲಾಗಿತ್ತು. ಬ್ರಿಟಿಷ್ರ ಆಳ್ವಿಕೆಯಲ್ಲಿ ಒಳಪಟ್ಟಿದ್ದ ದಂಡು ಪ್ರದೇಶ (ಕಂಟೋನ್ಮೆಂಟ್) ಮತ್ತು ಮೈಸೂರು ರಾಜರಿಂದ ಆಳಲ್ಪಟ್ಟ ಸ್ಥಳೀಯ ನಗರ ಅಥವಾ ಪೇಟೆ ಎಂದು ವಿಭಾಗಿಸಲಾಗಿತ್ತು. ಸಂಪಂಗಿ ಕೆರೆಯೂ ಈ ಎರಡು ಪ್ರದೇಶಗಳ ಕೇಂದ್ರ ಸ್ಥಾನವನ್ನೂ ಹೊಂದಿತ್ತು. ಈ ಎರಡೂ ವಲಯಗಳಿಗೆ ಪ್ರಮುಖ ನೀರಿನ ಮೂಲವಾಗಿತ್ತು.
ಮೀನುಗಾರರು, ಇಟ್ಟಿಗೆ ತಯಾರಕರು, ತೋಟಗಾರಿಕಾ ತಜ್ಞರು, ಕೃಷಿಕರು ಸೇರಿದಂತೆ ನಾನಾ ಸಮುದಾಯಗಳನ್ನು ಬೆಂಬಲಿಸಿದ ಭವ್ಯವಾದ ಕೆರೆಯು ಕ್ರೀಡಾಂಗಣವಾಗಿ ರೂಪಾಂತರಗೊಂಡಿರುವುದು ದುರದೃಷ್ಟಕರವಾಗಿದೆ.
1870ರ ಮೊದಲು ಕೆರೆಯ ಸುತ್ತಮುತ್ತ ರಾಗಿ ಮತ್ತು ಭತ್ತದ ಗದ್ದೆಗಳಿದ್ದವು. ಉತ್ತರ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಉದ್ಯಾನಗಳಿದ್ದವು. ಸಂಪಂಗಿ ಕೆರೆಯೂ ಯಾವಾಗಲೂ ತುಂಬಿರುತ್ತಿತ್ತು. ಕೆರೆಯ ಸುತ್ತಲೂ ಇರುವ ಕಲ್ಯಾಣಿಗಳು ತುಂಬಿರುತ್ತಿದ್ದವು.
ದಂಡು ಪ್ರದೇಶ ಮತ್ತು ನಗರ ಪೇಟೆಯ ಜನರಿಗೆ ಈ ಕೆರೆ ನೀರು ಅತ್ಯಅವಶ್ಯಕವಾಗಿತ್ತು. ಈ ಕೆರೆ ಧಾರ್ಮಿಕ ಮಹತ್ವವನ್ನು ಪಡೆದಿತ್ತು. ವಹ್ನಿಕುಲ ಕ್ಷತ್ರಿಯ ಸಮುದಾಯದವರು ತಮ್ಮ ಪ್ರಸಿದ್ಧ 9 ದಿನಗಳ ಕರಗ ಉತ್ಸವಕ್ಕೆ ಈ ಕೆರೆಯನ್ನು ಬಳಸುತ್ತಿದ್ದರು.
1896ರ ನಂತರ ಹೆಸರಘಟ್ಟ ಜಲಾಶಯವು ದಂಡು ಪ್ರದೇಶಕ್ಕೆ ನೀರು ಸರಬರಾಜು ಮಾಡಲು ಪ್ರಾರಂಭಿಸಿತು. ಹಾಗಾಗಿ, ಕೆರೆಯ ಅವಲಂಬನೆ ಕಡಿಮೆಯಾಗ ಹೋಯಿತು. 1930ರ ಮಧ್ಯದವರೆಗೆ ಈ ಕೆರೆಯ ನೀರನ್ನು ಕುಡಿಯಲು, ಗೃಹಬಳಕೆಗೆ, ತೋಟಗಾರಿಕೆ, ಮೀನುಗಾರಿಕೆ, ಇಟ್ಟಿಗೆ ತಯಾರಿಕೆ, ಲಾಂಡರಿಂಗ್ ಹಾಗೂ ಪಶುಪಾಲನೆಗೆ ಬಳಸಲಾಗುತ್ತಿತ್ತು. ದಿನಗಳು ಕಳೆದಂತೆಲ್ಲ, 1937ರಲ್ಲಿ ಕೆರೆಯೂ ಬರಿದಾಯಿತು. ಕ್ರಮೇಣ ಈ ಪ್ರದೇಶವೂ ಆಟದ ಮೈದಾನವಾಗಿ ಪರಿವರ್ತನೆಯಾಗತೊಡಗಿತು.
ಬ್ರಿಟಿಷರು ಕೆರೆಯ ಸೌಂದರ್ಯವನ್ನು ಕಾಪಾಡಿಕೊಳ್ಳಲು ಹಾಗೂ ಆ ಪ್ರದೇಶದಲ್ಲಿ ಪೋಲೋ ಆಟವಾಡಲು ಆಸಕ್ತಿ ಹೊಂದಿದ್ದರು. ಹಾಗಾಗಿ, ಕೆರೆಯ ಒಂದು ಭಾಗವನ್ನು ಬರಿದಾಗಿಸಿ, ಅದನ್ನು ಮೈದಾನವಾಗಿ ಬಳಸುತ್ತಿದ್ದರು.
ಕೆರೆಯ ಸೌಂದರ್ಯವನ್ನು ಕಾಪಾಡಿಕೊಳ್ಳಲು, ಸ್ಥಳೀಯ ಜೀವನೋಪಾಯಗಳಾದ ಇಟ್ಟಿಗೆ ತಯಾರಿಕೆಯನ್ನು ನಿಷೇಧಿಸಲಾಯಿತು. ಇದು ಕೆರೆಯ ಸುತ್ತಲೂ ಕಲುಷಿತವಾದ ಹೊಂಡಗಳನ್ನು ಸೃಷ್ಟಿಸಿತ್ತು. ಸ್ಥಳೀಯ ಸಮುದಾಯಗಳ ಮೀನುಗಾರರು ಮತ್ತು ಸಾರ್ವಜನಿಕರಿಗೆ ಕೆರೆಯ ನೀರು ಬಳಕೆಯನ್ನು ನಿಷೇಧಿಸಲಾಯಿತು. ಆ ಸ್ಥಳಕ್ಕೆ ಜನರ ಪ್ರವೇಶವನ್ನು ನಿರ್ಬಂಧಿಸಲಾಯಿತು. ಇದರಿಂದ ಕೆರೆಯನ್ನೇ ಅವಲಂಬಿಸಿದ್ದ ಸಮುದಾಯಗಳು ವಲಸೆ ಹೋದವು.
ಇಪ್ಪತ್ತನೇ ಶತಮಾನದ ಆರಂಭದಲ್ಲಿ ಬರಿದಾದ ಕೆರೆಯ ಜಾಗವನ್ನು ಪೋಲೋ ಆಡಲು ಬಳಸಲಾಯಿತು. ಬ್ರಿಟಿಷ್ ಪೋಲೋ ಆಟಗಾರರು ಕೆರೆಯ ತಳದಲ್ಲಿ ಪೋಲೋ ಆಡಲು ಕೆರೆಯನ್ನು ಬರಿದಾಗಿಸಲು ವಸಾಹತುಶಾಹಿ ಸರ್ಕಾರವನ್ನು ಕೇಳಿದ್ದರು. ಈ ಸಮಯದಲ್ಲಿ ಬ್ರಿಟಿಷ್ ರಾಜಕೀಯವಾಗಿ ಪ್ರಬಲವಾಗಿತ್ತು. ಇದನ್ನು ತಡೆಯುವಂತೆ 49 ತೋಟಗಾರಿಕಾ ತಜ್ಞರು (ವಹ್ನಿಕುಲ ಕ್ಷತ್ರಿಯರು) ಮೈಸೂರು ಅರಸರಿಗೆ ಮನವಿ ಸಲ್ಲಿಸಿದರೂ, ರಾಜರು ತೋಟಗಾರಿಕಾ ತಜ್ಞರ ಪರವಾಗಿ ಪತ್ರ ಬರೆದಿದ್ದರು. ಆದರೂ, ಕೆರೆಯನ್ನು ಬರಿದಾಗಿಸಿ ಪೋಲೋ ಆಡುತ್ತಿದ್ದರು. 1937ರ ಅಂತ್ಯದಲ್ಲಿ 35 ಎಕರೆ ವಿಸ್ತೀರ್ಣದ ಕೆರೆ ಸಣ್ಣ ತೊಟ್ಟಿಯಾಗಿ ಮಾರ್ಪಟ್ಟಿತ್ತು.
ಕಂಠೀರವ ಕ್ರೀಡಾಂಗಣವನ್ನು 1946ರ ಹೊತ್ತಿಗೆ ಕೆರೆಯ ತಳದಲ್ಲಿ ನಿರ್ಮಿಸಲಾಯಿತು. 1995ರಲ್ಲಿ ಬೆಂಗಳೂರು ರಾಷ್ಟ್ರೀಯ ಕ್ರೀಡಾಕೂಟವನ್ನು ಆಯೋಜಿಸಿದಾಗ ಕಂಠೀರವ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಲಾಯಿತು. ಕೆರೆಯ ತಳದಲ್ಲಿ ಕ್ರೀಡಾಂಗಣದ ನಿರ್ಮಾಣವನ್ನು ಆ ಸಮಯದಲ್ಲಿ ಅನೇಕ ಪರಿಸರವಾದಿಗಳು ವಿರೋಧಿಸಿದರು. ಆದರೆ, 1996ರಲ್ಲಿ ಹೈಕೋರ್ಟ್ ಪರಿಸರವಾದಿಗಳ ಪರವಾಗಿ ತೀರ್ಪು ನೀಡದಿರುವುದು ಬೇಸರದ ಸಂಗತಿಯಾಗಿದೆ.
ವಿಶ್ವವಿಖ್ಯಾತ ಕರಗ ಉತ್ಸವಕ್ಕೆ ಕೆರೆಯೂ ಅಗತ್ಯವಿದ್ದ ಕಾರಣ ಕೆರೆಯನ್ನು ಸಂಪೂರ್ಣವಾಗಿ ಮುಚ್ಚಿಲ್ಲ. ವರ್ಷಕ್ಕೊಮ್ಮೆ ಕರಗದ ಸಂದರ್ಭದಲ್ಲಿ ಕೆರೆ ಸಂಭ್ರಮದ ತಾಣವಾಗಿರುತ್ತದೆ. ಈ ವೇಳೆ, ಸಾವಿರಾರು ಮಂದಿ ಚಿಕ್ಕದಾದ ಸಂಪಂಗಿ ತೊಟ್ಟಿಗೆ(ಕೆರೆ) ಭೇಟಿ ನೀಡುತ್ತಾರೆ. 1949ರ ಹೊತ್ತಿಗೆ ಕೆರೆಯೂ ಒಳಾಂಗಣ ಕ್ರೀಡಾಂಗಣವಾಗಿ ರೂಪಾಂತರಗೊಂಡಿತು. ಕೆರೆಯ ಸುತ್ತಮುತ್ತ ಇದ್ದ ಹೊಲ-ಗದ್ದೆಗಳು ಬಡಾವಣೆಗಳಿಗೆ ದಾರಿ ಮಾಡಿಕೊಟ್ಟಿವೆ.
ಮಳೆಗೆ ಪ್ರವಾಹ
ಸಂಪಂಗಿ ಕೆರೆಯ ಮೇಲೆ ನಿರ್ಮಾಣವಾದ ಈ ಕಂಠೀರವ ಒಳಾಂಗಣ ಕ್ರೀಡಾಂಗಣವೂ ಜೋರು ಮಳೆಗೆ ಹಲವು ಬಾರಿ ನಲುಗಿ ಹೋಗಿದೆ. ಕ್ರೀಡಾಂಗಣದ ಒಳಗೆ ನೀರು ನುಗ್ಗಿ ಕೊಳಚೆ ನೀರು ತುಂಬಿ ಕೊಚ್ಚೆಗುಂಡಿಯಾಗಿ ಮಾರ್ಷಟ್ಟಿದೆ.
2014, 2016ರಲ್ಲಿ ಉಂಟಾದ ಭಾರೀ ಮಳೆಗೆ ಈ ಕ್ರೀಡಾಂಗಣ ಸಂಪೂರ್ಣ ಜಲಾವೃತವಾಗಿತ್ತು. ಎರಡು ಮತ್ತು ನಾಲ್ಕು ಅಡಿ ಕ್ರೀಡಾಂಗಣದ ಸುತ್ತ ನೀರು ತುಂಬಿತ್ತು.
ನಗರೀಕರಣದ ಬೆನ್ನತ್ತಿರುವ ಸರ್ಕಾರಕ್ಕೆ ಜನರ ಮೂಲಭೂತ ಸೌಲಭ್ಯಗಳ ಬಗ್ಗೆ ಅರಿವು ಇಲ್ಲದಂತಾಗಿದೆ.
Nice article, Ty
Informative 👌
Nice article and very informative for yoger genaration
ಒಂದಲ್ಲ ಒಂದು ಕಾರಣಕ್ಕೆ ಬೆಂಗಳೂರಿನ ಅನೇಕ ಕೆರೆ, ಕುಂಟೆಗಳು ಅಭಿವೃದ್ಧಿಯ ಹೆಸರಿನಲ್ಲಿ ನಾಮಾವಶೇಷ ವಾಗಿವೆ.
ಇವತ್ತಿಗೆ ನಾವು ಚುನಾಯಿಸಿದವರೂ ಇದಕ್ಕಿಂತ ಭಿನ್ನವಾಗಿಲ್ಲ.
ಮುಂದಿನ ಪೀಳಿಗೆಗೆ ಬಹುಷಃ ಕೆರೆಗಳ ಹೆಸರಷ್ಟೆ ಉಳಿಸುತ್ತೇವೆ.
Very Informative..ಬೆಂದಕಾಳೂರು To ಬೆಂಗಳೂರು, ಕೆರೆಗಳ ಊರು ಕಟ್ಟಡಗಳ ಊರು ಪರಿವರ್ತನೆ ಸಾಕು..
Abba namma Bengaluru hegittu ,egaloio bere oorugalige nodalu hasiru jasti iruvudu ille
Ee parivartane nodi. Sankata agtide adhunikate prakrutiya sreemantikeyannu halu madide
Munde enu gati
Rajajinagzradalliruva DHOBHIGHAT Saha ondu kaladalli Eddaluru kereyagittu ega 5 ne block chord rasteyagide_ munduvaredu Basaveshvaranagarada AMBEDKAR KREEDANGANA vu Saha agrahara Dasarahalli ya kereyagittu ege nimma area dalliance keregalannu Patti madi prakatisi
Nice talk sir
Whatever be the resentment and protests, all erstwhile water bodies must be reinstated.
ಅಭಿವೃದ್ಧಿಯ ಹೆಸರಿನಲ್ಲಿ ನಾವು ಪ್ರಕೃತಿಯನ್ನು ನಿರಂತರವಾಗಿ ನಾಶ ಪಡಿಸುತ್ತಿದ್ದೇವೆ. ಹೀಗೆಯೇ ಮುಂದುವರೆದರೆ ಒಂದು ದಿನ ನೀರಿಲ್ಲದೆ ನಾವೆಲ್ಲರೂ ಸಾಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಜನಸಂಖ್ಯೆಯು ಕೂಡ ದಿನೇ ದಿನೇ ಏರಿಕೆಯಾಗುತ್ತಿದೆ. ಸರ್ಕಾರಗಳು ಎಲ್ಲಾ ಕಡೆ ಅಭಿವೃದ್ಧಿ ಮಾಡುತ್ತಿದ್ದರೆ ಭೂಮಿಯಲ್ಲೆಲ್ಲಾ ಬರಿ ಮನೆಗಳು ತುಂಬಿಕೊಂಡು ವ್ಯವಸಾಯ ಮಾಡಲು ಜಮೀನುಗಳು ಇರುವುದಿಲ್ಲ ನೀರು ಆಹಾರವಿಲ್ಲದೆ ನಾವು ಸಾಯಬೇಕಾಗುತ್ತದೆ. ಈಗಲೇ ಈ ರೀತಿ ಆಗಿದೆ ಇನ್ನು ಐವತ್ತು ವರ್ಷಗಳು ಹೋದರೆ ಮುಂದೆ ಹೇಗಾಗುತ್ತದೋ ದೇವನೇ ಬಲ್ಲ.