ಗಾಂಧೀಜಿ ಮತ್ತು ಅಂಬೇಡ್ಕರ್ ಅವರನ್ನು ಒಂದೇ ದೃಷ್ಟಿಕೋನದಲ್ಲಿ ನೋಡುವ ಅಗತ್ಯವಿದೆ. ಮಹಾತ್ಮ ಗಾಂಧೀಜಿ ಅವರು ಶಾಂತಿಯ ತತ್ವ ದೇಶಕ್ಕೆ ಕೊಡುಗೆಯಾಗಿಸಿ ಹೋಗಿದ್ದಾರೆ. ಅವರ ಕನಸಿನ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆ ಭಾರತಕ್ಕೆ ಅಮೂಲ್ಯ ದೃಷ್ಟಿಕೋನವನ್ನು ನೀಡಿದೆ ಎಂದು ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಧ್ಯಾಪಕ ಡಾ. ಪ್ರಹ್ಲಾದಪ್ಪ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಶಿವಮೊಗ್ಗದಲ್ಲಿ ಆಂತರಿಕ ಗುಣಮಟ್ಟ ಕೋಶ ಮತ್ತು ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ‘ಮಹಾತ್ಮ ಗಾಂಧೀಜಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ತಾತ್ವಿಕ ನಿಲುವುಗಳು’ ಎಂಬ ವಿಷಯದ ಕುರಿತು ವಿಚಾರ ಸಂಕೀರ್ಣದಲ್ಲಿ ಅವರು ಮಾತನಾಡಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯಕ್ಕಾಗಿ, ಮಹಿಳೆಯರು ಮತ್ತು ಶೋಷಿತರಿಗೆ ರಕ್ಷಣಾತ್ಮಕ ಕಾನೂನುಗಳನ್ನು ರಚಿಸಿಕೊಟ್ಟ ಧೀಮಂತ ನಾಯಕ. ಈ ಇಬ್ಬರು ಮಹಾನ್ ನಾಯಕರನ್ನು ಒಂದೇ ದೃಷ್ಟಿಕೋನದಲ್ಲಿ ನೋಡಲು ಯುವಜನತೆಗೆ ಅರಿಕೆ ಮಾಡಿಸುವುದು ಅತ್ಯವಶ್ಯ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ರಂಗನಾಥ್ ಕರಾಡ್ ವಹಿಸಿದ್ದರು. ಪ್ರಾಸ್ತಾವಿಕ ನುಡಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಜಗದೀಶ್ ಬಿದರಕೊಪ್ಪ ಅವರು ಮಾಡಿದರು. ಕಾರ್ಯಕ್ರಮದಲ್ಲಿ ಆಂತರಿಕ ಗುಣಮಟ್ಟ ಕೋಶದ ಸಂಚಾಲಕರಾದ ಡಾ. ನವೀನ್ ವಿ. ಮತ್ತು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವರದರಾಜ ಉಪಸ್ಥಿತರಿದ್ದರು.





