ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತ ಎಣಿಕೆಗೆ (ಮೇ 4) ಇನ್ನು ಕೆಲವೇ ದಿನಗಳು ಬಾಕಿ ಇರುವಾಗ, ಅಂಚೆ ಮತಪತ್ರಗಳನ್ನು (ಪೋಸ್ಟಲ್ ಬ್ಯಾಲೆಟ್) ಅನಧಿಕೃತವಾಗಿ ವಿಂಗಡಣೆ ಮಾಡಲಾಗುತ್ತಿದೆ ಎಂದು ಆಡಳಿತಾರೂಢ ಟಿಎಂಸಿ ಗಂಭೀರ ಆರೋಪ ಮಾಡಿದೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ (ಇಸಿಐ) ಪಕ್ಷವು ಅಧಿಕೃತ ದೂರು ನೀಡಿದ್ದು, ಭದ್ರತಾ ಕೊಠಡಿಯಲ್ಲಿ (ಸ್ಟ್ರಾಂಗ್ ರೂಂ) ಅಕ್ರಮ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದೆ.
ಕೊಲ್ಕತ್ತಾದ ಖುದಿರಾಮ್ ಅನುಶೀಲನ್ ಕೇಂದ್ರದ ಭದ್ರತಾ ಕೊಠಡಿಯ ಹೊರಗೆ ಮೊಕ್ಕಾಂ ಹೂಡಿರುವ ಟಿಎಂಸಿ ಕಾರ್ಯಕರ್ತರು ಈ ಆರೋಪ ಮಾಡಿದ್ದಾರೆ. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಎಂಟು ಟ್ರಂಕ್ಗಳಲ್ಲಿ ಅಂಚೆ ಮತಪತ್ರಗಳನ್ನು ತಂದು, ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇಲ್ಲದ ಕೊಠಡಿಯೊಳಗೆ ಕೊಂಡೊಯ್ಯಲಾಗಿದೆ ಎಂದು ಅವರು ದೂರಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಚುನಾವಣಾಧಿಕಾರಿಯ (ರಿಟರ್ನಿಂಗ್ ಆಫೀಸರ್) ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಟಿಎಂಸಿ ಒತ್ತಾಯಿಸಿದೆ. ಅಲ್ಲದೆ, ತಾನು ಭದ್ರತಾ ಕೊಠಡಿ ಪ್ರವೇಶಿಸದಂತೆ ಭದ್ರತಾ ಸಿಬ್ಬಂದಿ ತಡೆಯೊಡ್ಡಿದ್ದರು ಎಂದು ಟಿಎಂಸಿ ನಾಯಕಿ ಶಶಿ ಪಂಜಾ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ತಮಿಳುನಾಡಿನ ಮೊದಲ ಲಿಂಗತ್ವ ಅಲ್ಪಸಂಖ್ಯಾತ ಕ್ರಿಕೆಟ್ ಅಂಪೈರ್ ರಿತಿಕಾ ಶ್ರೀ – ಸವಾಲು ಮೆಟ್ಟಿ ನಿಂತ ಸಾಧಕಿ
ಮತ್ತೊಂದೆಡೆ, ಶನಿವಾರ ಮಧ್ಯಾಹ್ನ 1 ಗಂಟೆಯ ವೇಳೆಗೆ ರಾಜ್ಯದಲ್ಲಿ ಶೇಕಡಾ 55.57ರಷ್ಟು ಮತದಾನ ದಾಖಲಾಗಿದೆ. ಚುನಾವಣಾ ಅಕ್ರಮಗಳ ಬಗ್ಗೆ ವರದಿಯಾದ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗದ ಆದೇಶದಂತೆ ದಕ್ಷಿಣ 24 ಪರಗಣ ಜಿಲ್ಲೆಯ 15 ಮತಗಟ್ಟೆಗಳಲ್ಲಿ ಶನಿವಾರ ಮರುಮತದಾನ ನಡೆಯಿತು. ಏಪ್ರಿಲ್ 29ರಂದು ನಡೆದಿದ್ದ ಎರಡನೇ ಹಂತದ ಚುನಾವಣೆಯಲ್ಲಿ ಮಗ್ರಹತ್ ಪಶ್ಚಿಮ್ನ 11 ಹಾಗೂ ಡೈಮಂಡ್ ಹಾರ್ಬರ್ನ 4 ಮತಗಟ್ಟೆಗಳಲ್ಲಿ ಇವಿಎಂ ತಿರುಚುವಿಕೆ ಹಾಗೂ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿಬಂದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.
ಡೈಮಂಡ್ ಹಾರ್ಬರ್ನ ಮತಗಟ್ಟೆಯೊಂದರಲ್ಲಿ ಇವಿಎಂ ದೋಷದಿಂದಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮತದಾನ ಸ್ಥಗಿತಗೊಂಡು ಮತದಾರರು ಪರದಾಡುವಂತಾಯಿತು. ಬಿಗಿ ಭದ್ರತೆಗಾಗಿ ಸಿಆರ್ಪಿಎಫ್ ಮತ್ತು ತ್ವರಿತ ಕಾರ್ಯಪಡೆ (RAF) ಯೋಧರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಇದರ ನಡುವೆಯೂ, ಫಾಲ್ಟಾ ಪ್ರದೇಶದಲ್ಲಿ ಟಿಎಂಸಿ ಕಾರ್ಯಕರ್ತರು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯರು ಸೇರಿದಂತೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.




