ಐಟಿ-ಬಿಟಿಯಲ್ಲಿ ಜೀವನ ಕಟ್ಟಿಕೊಂಡಿದ್ದ ನನಗೆ, ತಂದೆಯವರ ನಂತರ ಅವರ ಹಾದಿಯಲ್ಲಿ ಸಾಗಬೇಕು ಅಂತ ಜನರ ಒತ್ತಡ ಬಂತು. ಹಾಗಾಗಿ ಜನಸೇವೆಗೆ ನಿಂತಿದ್ದೇನೆ. ಐದು ವರ್ಷದ ಹಿಂದೆ ರಾಜಕೀಯ ಜೀವನ ಆರಂಭವಾಯ್ತು. ಕಳೆದ ಚುನಾವಣೆಯಲ್ಲಿ ಸೋತಿದ್ದ ನಾನು, ಮತ್ತೆ ರೈತರ ಹಿತಾಸಕ್ತಿ ಕಾಯುವ ಸಲುವಾಗಿ ಮೇಲುಕೋಟೆ ಕ್ಷೇತ್ರದ ಅಭ್ಯರ್ಥಿಯಾಗಿ ಮತ್ತೆ ಸ್ಪರ್ಧಿಸಿದ್ದೇನೆ” ಎಂದು ಮಾಜಿ ಶಾಸಕ ದಿ. ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಚುನಾವಣಾ ಪೂರ್ವದಲ್ಲಿ ಹಾಲಿನ ದರ ಹೆಚ್ಚಳ, ಕಬ್ಬಿಗೆ ಬೆಂಬಲ ಬೆಲೆ, ಎಲ್ಲ ಬೆಳೆಗಳಿಗೆ ಎಂಎಸ್ಪಿ ಖಾತ್ರಿಗಾಗಿ ಹೋರಾಟ 109 ದಿನಗಳ ಕಾಲ ಮಾಡಿದ್ದೇವೆ. ಆದರೂ, ನಮ್ಮ ಹೋರಾಟಕ್ಕೆ ವ್ಯವಸ್ಥೆ ಸ್ಪಂದಿಸಲಿಲ್ಲ. ಹಾಗಾಗಿ ಚುನಾವಣಾ ನಂತರ ಸತತ ಹೋರಾಟ ಮಾಡಬೇಕು. ರೈತರ ಬೆಳೆಗಳಿಗೆ ಸೂಕ್ತ ಬೆಲೆ ದೊರಕಿಸಿಕೊಡಬೇಕು. ಅದಕ್ಕಾಗಿ ದುಡಿಯುತ್ತೇನೆ” ಎಂದು ಹೇಳಿದರು.
“ರೈತರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮತ್ತು ಆಸ್ಪತ್ರೆಗೆ ವೆಚ್ಚಕ್ಕಾಗಿ ಅಧಿಕ ಮೊತ್ತದ ಸಾಲ ಮಾಡುತ್ತಿದ್ದಾರೆ. ರೈತರ ಆದಾಯ ಅಧಿಕ ಆಗುತ್ತಿಲ್ಲ, ಖರ್ಚು ಕೂಡ ಕಡಿಮೆ ಆಗುತ್ತಿಲ್ಲ. ರೈತರ ಸಾಲ ಮನ್ನಾ ಮಾಡಿದರಷ್ಟೇ ಸಾಲದಿಂದ ಹೊರಬರಲು ಸಾಧ್ಯವಿಲ್ಲ. ಬೆಳೆಗಳಿಗೆ ಸರಿಯಾದ ಬೆಲೆ ನಿಗದಿ ಮಾಡಬೇಕು. ರೈತರು ಮತ್ತು ಜನರ ಪರ ನಿಲ್ಲಲು ಚುನಾವಣೆ ಮತ್ತು ಗೆಲುವೇ ಮಾನದಂಡವಲ್ಲ. ಹಾಗಾಗಿ ನಿರಂತರವಾಗಿ ರೈತ ಸಮುದಾಯದ ಜೊತೆ ನಿಲ್ಲುತ್ತೇನೆ” ಎಂದರು.
“ಸರ್ಕಾರದ ಯಾವುದೇ ಕಚೇರಿಯಲ್ಲಿ ಲಂಚವಿಲ್ಲದ ಕಡತಗಳು ಮುಂದಕ್ಕೆ ಹೋಗುತ್ತಿಲ್ಲ. ಆ ಸಂಬಂಧ ಏನು ಕಾನೂನು ಅವಕಾಶ ಇವೆ ಎಂಬುದನ್ನು ಜನಸಮಾನ್ಯರಿಗೆ ತಿಳಿಸಿ ಪಾರದರ್ಶಕವಾಗಿ ವ್ಯವಸ್ಥೆ ನಡೆಯುವಂತೆ ಮಾಡುವುದು ನಮ್ಮ ಉದ್ದೇಶಗಳಲ್ಲೊಂದು” ಎಂದು ವಿವರಿಸಿದರು.
ಈ ಸುದ್ದಿ ಓದಿದ್ದೀರಾ?: ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳದ ಭರವಸೆ ನೀಡಿದ ಪ್ರಿಯಾಂಕಾ ಗಾಂಧಿ
“ತಂದೆಯ ಮೇಲಿನ ಅಭಿಮಾನಕ್ಕಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮರ್ ಅವರು ಕಾಂಗ್ರೆಸ್ ಅಭ್ಯರ್ಥಿ ಹಾಕದೆ, ನನಗೆ ಅಧಿಕೃತವಾಗಿ ಬೆಂಬಲ ಕೊಟ್ಟಿದ್ದಾರೆ. ಬಿಜೆಪಿ ಪ್ರಬಲ ತನ್ನ ಅಭ್ಯರ್ಥಿಯನ್ನು ಹಾಕಿದೆ. ಹಾಗಾಗಿ ಅವರ ಬೆಂಬಲ ಇಲ್ಲ. ಸುಮಲತಾ ಅವರಿಗಾಗಿ ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡಿದ್ದೆವು. ಆ ಕಾರಣಕ್ಕಾಗಿ ಅವರು ವೈಯಕ್ತಿಕವಾಗಿ ಬೆಂಬಲ ಕೊಟ್ಟಿದ್ದಾರಷ್ಟೇ” ಎಂದರು
“ಎಂಎಸ್ಪಿ, ಸಣ್ಣ ಕೈಗಾರಿಕೆಗಳ ಸ್ಥಾಪನೆ, ವಸತಿ ರಹಿತ ಹಳ್ಳಿ, ಜನರಿಗೆ ಸೂರು ಸೌಲಭ್ಯ, ಗ್ರಾಮಗಳಿಗೆ ಮೂಲಭೂತ ಸೌಕರ್ಯ, ಸ್ಥಳೀಯವಾಗಿ ಉದ್ಯೋಗ ಸೃಷ್ಟಿ, ಆರೋಗ್ಯ ಸೌಲಭ್ಯಗಳನ್ನು ಸಮರ್ಪಕವಾಗಿ ದೊರೆಯುವಂತೆ ಮಾಡಬೇಕು ಎಂಬುದು ನಮ್ಮ ಉದ್ದೇಶ” ಎಂದು ಹೇಳಿದರು.