ಹಾಸನ ಕ್ಷೇತ್ರ | ದಾಸ ಒಕ್ಕಲಿಗರ ನಡುವಿನ ಕಾದಾಟವಾದರೂ, ಮುಸ್ಲಿಂ ಮತದಾರರೆ ನಿರ್ಣಾಯಕ

Date:

ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಅಂತ ಏನಾದರೂ ಇದ್ದರೆ ಪ್ರೀತಂ ಮತ್ತು ಸ್ವರೂಪ್ ನಡುವೆ ಮಾತ್ರ. ದಿವಂಗತ ಪ್ರಕಾಶರ ಒಳ್ಳೆಯತನವೇನಾದರೂ ಉಪಯೋಗಕ್ಕೆ ಬಂದರೆ, ಮುಸ್ಲಿಮರು ಸಾರಾಸಗಟು ಜೆಡಿಎಸ್ ಕಡೆ ವಾಲಿದರೆ- ಸ್ವರೂಪ್ ಗೆಲುವು ಗ್ಯಾರಂಟಿ.

ಹಾಸನ ವಿಧಾನಸಭಾ ಕ್ಷೇತ್ರ ಮೊದಲಿನಿಂದಲೂ ಕಾಂಗ್ರೆಸ್-ಜೆಡಿಎಸ್ ಭದ್ರಕೋಟೆ. ಈ ಕೋಟೆಯಲ್ಲಿ ಒಕ್ಕಲಿಗರ ಉಪಜಾತಿಯಾದ ದಾಸಒಕ್ಕಲಿಗರ ಒಲವು-ನಿಲುವುಗಳೇ ಇಲ್ಲಿ ಮುಖ್ಯ. 2018ರ ಚುನಾವಣೆಯಲ್ಲಿ ಗೆದ್ದು ಶಾಸಕನಾಗಿರುವ ಬಿಜೆಪಿಯ ಪ್ರೀತಂ ಗೌಡ ಕೂಡ ಇದೇ ಒಳಪಂಗಡಕ್ಕೆ ಸೇರಿದವರು. ಕಾಂಗ್ರೆಸ್ಸಿನ ಹಿರಿಯ ನಾಯಕ ಕೆ.ಎಚ್. ಹನುಮೇಗೌಡರು, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ 1999ರಲ್ಲಿ ಶಾಸಕರಾಗಿದ್ದರು. ಅದಾಗಿ 19 ವರ್ಷಗಳ ನಂತರ, 2018ರಲ್ಲಿ ಹಾಸನ ಕ್ಷೇತ್ರದಲ್ಲಿ ಬಿಜೆಪಿಗೆ ಜಯ ಸಿಕ್ಕಿದೆ. ಈ ಬಾರಿಯ ಚುನಾವಣೆಯಲ್ಲೂ ಮತ್ತೊಮ್ಮೆ ಗೆದ್ದು, ಗೌಡರ ಜಿಲ್ಲೆಯಲ್ಲಿ ಕಮಲ ಅರಳಿಸುವ, ಆ ಮೂಲಕ ಜಿಲ್ಲೆಯಾದ್ಯಂತ ವಿಸ್ತರಿಸುವ ಯೋಚನೆ ಬಿಜೆಪಿ ವರಿಷ್ಠರದು.

ಹಾಲಿ ಶಾಸಕ ಪ್ರೀತಂ ಗೌಡ ಉತ್ಸಾಹಿ ಯುವಕ. ಜನರ ಸಮಸ್ಯೆಗಳಿಗೆ ಕಿವಿಯಾಗುವ ಗುಣವಿದೆ. ಅಭಿವೃದ್ಧಿ ಕೆಲಸಗಳೂ ಕಾಣುತ್ತವೆ. ಹಾಗಾಗಿ ಅವರನ್ನು ಕ್ಷೇತ್ರದ ಜನ `ಕೆಲಸಗಾರ’ ಎನ್ನುತ್ತಾರೆ. ಜೆಡಿಎಸ್ ಅದನ್ನು `ಕಾಮಗಾರಿ ಕೆಲಸಗಾರ’ ಎಂದು ಜರೆಯುತ್ತದೆ. ಮುಂದುವರೆದು, `ನಾವು ಗುತ್ತಿಗೆದಾರರನ್ನಾದರೂ ಬೆಳೆಸುತ್ತೇವೆ, ಇವರು ಶಾಸಕರೂ ಅವರೆ, ಗುತ್ತಿಗೆದಾರರೂ ಅವರೆ. 40% ಕಮಿಷನ್ ಬಂದದ್ದೇ ಹಾಸನದಿಂದ’ ಎನ್ನುತ್ತಾರೆ.

ಇದನ್ನು ಓದಿದ್ದೀರಾ?: ಶ್ರವಣಬೆಳಗೊಳ ಕ್ಷೇತ್ರ | ಗೌಡರ ಗದ್ದಲದಲ್ಲಿ `ದೊಡ್ಡ’ಗೌಡರಿಗೇ ಗೆಲುವು

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅದೇ ಪ್ರೀತಂ ಗೌಡ, ದೇವೇಗೌಡರ ಕುಟುಂಬದ ಬಗ್ಗೆ ತೀರಾ ಹಗುರವಾಗಿ ಮಾತನಾಡಿದ್ದು, ಅವು ಅಹಂಕಾರದ ಮಾತುಗಳು ಎಂದು ಕ್ಷೇತ್ರದಾದ್ಯಂತ ಪ್ರಚಾರ ಪಡೆದು, ಎಚ್.ಡಿ. ರೇವಣ್ಣ ಅಖಾಡಕ್ಕಿಳಿಯುವಂತೆ ಮಾಡಿತ್ತು. ಭವಾನಿ ರೇವಣ್ಣ ಅಭ್ಯರ್ಥಿಯಾಗಿ ಪ್ರೀತಂ ಮಣಿಸಲು ಮುಂದಾಗಿದ್ದರು. ಒಂದೇ ಒಂದು ಮಾತು ಇಷ್ಟೆಲ್ಲ ರಾದ್ಧಾಂತವಾಗಿದ್ದನ್ನು ಕಂಡ ಪ್ರೀತಂ ಗೌಡ, `ಯಾರ ಬಗ್ಗೆಯೂ ಹಗುರವಾಗಿ ಮಾತನಾಡುವುದಿಲ್ಲ’ವೆಂದು ಶಪಥ ಮಾಡಿದ್ದೂ ಆಯಿತು. ಆದರೆ ಪ್ರೀತಂ-ಭವಾನಿ ನಡುವಿನ ಕಿಚ್ಚು ಹಚ್ಚುವ ಮಾತುಗಳು ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಆ ಮಾತುಗಳು ಕ್ಷೇತ್ರದಾದ್ಯಂತ ಬೇರೆಯದೇ ಆದ ತಿರುವು ಪಡೆದು ಯಾರಿಗೆ ಲಾಭ, ಯಾರಿಗೆ ನಷ್ಟ ತರುತ್ತವೋ ಕಾದು ನೋಡಬೇಕು.  

ಪ್ರೀತಂ ಗೌಡ ಬಿಜೆಪಿ ಅಭ್ಯರ್ಥಿಯಾಗಿ ಮತ್ತೊಮ್ಮೆ ಜನರ ಮುಂದೆ ನಿಂತಿದ್ದಾರೆ. ಅವರ ಎದುರಾಳಿಯಾಗಿ ಹೆಚ್ಚೂಕಡಿಮೆ ಅವರದೇ ವಯಸ್ಸಿನ ಮಾಜಿ ಶಾಸಕ ಎಚ್.ಎಚ್. ಪ್ರಕಾಶ್ ಅವರ ಪುತ್ರ ಎಚ್.ಪಿ ಸ್ವರೂಪ್, ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ಗಳ ಆರ್ಭಟ, ಅಟ್ಟಹಾಸ, ಹಣಬಲ-ಜಾತಿಬಲಗಳ ಮುಂದೆ ಕೊಂಚ ಕಳೆಗುಂದಿದಂತೆ ಕಾಣುವ ಕಾಂಗ್ರೆಸ್, ಬನವಾಸೆ ರಂಗಸ್ವಾಮಿ ಅವರನ್ನು ಅಭ್ಯರ್ಥಿಯನ್ನಾಗಿದೆ. ಪ್ರೀತಂ, ಸ್ವರೂಪ್ ಮತ್ತು ರಂಗಸ್ವಾಮಿ- ಮೂವರೂ ದಾಸಒಕ್ಕಲಿಗ ಪಂಗಡಕ್ಕೆ ಸೇರಿದವರು. ಈಗ ಜಿದ್ದಾಜಿದ್ದಿನ ಪೈಪೋಟಿ ಇರುವುದು ಪ್ರೀತಂ- ಸ್ವರೂಪ್ ನಡುವೆಯೇ. ಕಾಂಗ್ರಸ್ಸಿನ ಬನವಾಸೆ ರಂಗಸ್ವಾಮಿ, ಇಬ್ಬರ ಜಗಳದಲ್ಲಿ ತಮಗೊಂದು ಚಾನ್ಸ್ ಸಿಗಬಹುದಾ ಎಂಬ ಲೆಕ್ಕಾಚಾರದಲ್ಲಿದ್ದಾರೆ.

ಹಾಗೆ ನೋಡಿದರೆ, ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗರೇ ಬಹುಸಂಖ್ಯಾತರು. ಅದರಲ್ಲೂ ಒಕ್ಕಲಿಗರಲ್ಲಿಯೇ ಉಪಪಂಗಡವಾದ ದಾಸ ಒಕ್ಕಲಿಗರು ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿಯವರೆಗೆ ಗೆದ್ದ ಶಾಸಕರು ಕೂಡ ಹೆಚ್ಚಿನವರು ಆ ಒಳಪಂಗಡದವರೇ ಆಗಿದ್ದಾರೆ. ಇವುಗಳ ನಡುವೆಯೇ, 1967ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಜೈನ ಧರ್ಮಕ್ಕೆ ಸೇರಿದ ಜ್ವಾಲನಯ್ಯನವರು ಗೆದ್ದಿದ್ದು ಈ ಕ್ಷೇತ್ರದ ವಿಶೇಷಗಳಲ್ಲೊಂದು. ಹಾಗೆಯೇ 1983 ಮತ್ತು 1985ರಲ್ಲಿ ಜನತಾಪಕ್ಷದಿಂದ ಬಿ.ವಿ. ಕರೀಗೌಡರು ಗೆಲ್ಲುವ ಮೂಲಕ, ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಅಭ್ಯರ್ಥಿಯೂ ಜಯ ಗಳಿಸಬಹುದು ಎಂಬುದನ್ನು ಸಾಬೀತುಪಡಿಸಿದರು. ಅದು ಮುಂದೆ ಜನತಾದಳಕ್ಕೆ, ಜಾತ್ಯತೀತ ಜನತಾದಳಕ್ಕೆ ಅನುಕೂಲಕರ ವೇದಿಕೆಯನ್ನು ನಿರ್ಮಿಸಿಕೊಟ್ಟಿತು.

1985ರ ನಂತರದ ಚುನಾವಣೆಗಳು ಕಾಂಗ್ರೆಸ್ ಮತ್ತು ಜನತಾದಳ, ಜೆಡಿಎಸ್ ಗಳ ನಡುವಿನ ನೇರ ಹಣಾಹಣಿಯಾದರೂ, ಇವುಗಳ ನಡುವೆಯೇ 1999ರಲ್ಲಿ ಹಾಗೂ 2018ರಲ್ಲಿ ಬಿಜೆಪಿ ಗೆದ್ದು ಬೀಗಿದ್ದೂ ಇದೆ.  ನಾಲ್ಕು ಬಾರಿ ಗೆದ್ದು, ಐದನೆ ಬಾರಿಗೆ ಗೆಲ್ಲುವ ನಿರೀಕ್ಷೆಯಲ್ಲಿದ್ದ ಎಚ್.ಎಸ್.ಪ್ರಕಾಶ್ 2018ರ ಚುನಾವಣೆಯಲ್ಲಿ ಜೆಡಿಎಸ್ ನಿಂದ ಮತ್ತೆ ಅಭ್ಯರ್ಥಿಯಾಗಿದ್ದರು. ಆದರೆ ಎಚ್.ಡಿ.ರೇವಣ್ಣನವರ ಅವಕೃಪೆಗೆ ಒಳಗಾಗಿ, 13 ಸಾವಿರ ಮತಗಳ ಅಂತರದಿಂದ ಬಿಜೆಪಿಯ ಪ್ರೀತಂಗೌಡರಿಂದ ಪರಾಭವಗೊಳ್ಳಬೇಕಾಯಿತು. ಸೋತ ನಂತರ ಅಕಾಲಿಕ ನಿಧನ ಹೊಂದಿದರು. ಜೆಡಿಎಸ್ ನ ಭದ್ರಕೋಟೆ ಎನಿಸಿಕೊಂಡಿದ್ದ ಹಾಸನ ಬಿಜೆಪಿಯ ತೆಕ್ಕೆಗೆ ಹೋಗಲು ಪರೋಕ್ಷವಾಗಿ ರೇವಣ್ಣರೇ ಕಾರಣ ಎನ್ನುವುದನ್ನು ಹಾಸನದ ಮತದಾರರೇ ಮಾತಾಡಿಕೊಳ್ಳುತ್ತಾರೆ.

ಈ ಬಾರಿಯ ಚುನಾವಣೆಯಲ್ಲಿ ಅದೇ ಸಜ್ಜನ ಪ್ರಕಾಶರ ಪುತ್ರ ಸ್ವರೂಪ್ ಜೆಡಿಎಸ್‌ ಹುರಿಯಾಳು ಆಗಿದ್ದಾರೆ. ದೇವೇಗೌಡರಾದಿಯಾಗಿ, ಮನೆಮಕ್ಕಳೆಲ್ಲ ಸ್ವರೂಪ್ ಬೆನ್ನಿಗೆ ನಿಂತು ಓಡಾಡುತ್ತಿದ್ದಾರೆ. ಅದರಲ್ಲೂ ಭವಾನಿ ರೇವಣ್ಣರಂತೂ `ಸ್ವರೂಪ್ ನನ್ನ ಮಗ, ಅವನ ಗೆಲುವನ್ನು ದೊಡ್ಡಗೌಡರ ಬರ್ತಡೇಗೆ ಉಡುಗೊರೆಯಾಗಿ ಕೊಡಲಿದ್ದೇವೆ’ ಎಂದು ಹೇಳಿಕೊಂಡು ತಿರುಗುತ್ತಿರುವುದು ಸ್ವರೂಪ್ ಗೆ ಆನೆ ಬಲವೋ ಅಥವಾ ಆನೆ ತುಳಿತವೋ, ಫಲಿತಾಂಶವೇ ಹೇಳಬೇಕು. ಆದರೆ, ಕ್ಷೇತ್ರದಲ್ಲಿ 30ರಿಂದ 40ಸಾವಿರದಷ್ಟಿರುವ ಮುಸ್ಲಿಂ ಮತದಾರರು `ಈ ಬಾರಿ ಸ್ವರೂಪ್’ ಎಂದು ಬಹಿರಂಗವಾಗಿಯೇ ಬೀದಿಗಿಳಿದು ಪ್ರಚಾರ ಕೈಗೊಂಡಿರುವುದು, ಬಿಜೆಪಿಗೆ ನಡುಕ ಹುಟ್ಟಿಸಿರುವುದಂತೂ ದಿಟ.

ಮುಸ್ಲಿಮರ ವಿಷಯದಲ್ಲಿ ಆಳುವ ಬಿಜೆಪಿ ಸರ್ಕಾರ ತೀರಾ ಕ್ಷುಲ್ಲಕವಾಗಿ ವರ್ತಿಸಿತು. ಅದು ಬಿಜೆಪಿಗೆ ಈ ಚುನಾವಣೆಯಲ್ಲಿ ದುಬಾರಿಯಾಗಲಿದೆ. ಕಾಂಗ್ರೆಸ್ಸಿನಿಂದ ಕಣದಲ್ಲಿರುವ ಬನವಾಸೆ ರಂಗಸ್ವಾಮಿ, ಇದ್ದುದರಲ್ಲಿ ಸಂಭಾವಿತ ಎಂಬ ಹೆಸರಿದೆ. ಆದರೆ ಕಾಂಗ್ರೆಸ್ ಪಕ್ಷ, ಯಾರಿಗೂ ಈ ಕ್ಷೇತ್ರದ ಅಭ್ಯರ್ಥಿ ಎಂದು ಹೆಸರಿಸದೆ ಇದ್ದದ್ದು, ಕಡೇ ಕ್ಷಣದಲ್ಲಿ ಮೂವರಲ್ಲಿ ಒಬ್ಬರಿಗೆ ಟಿಕೆಟ್ ಕೊಟ್ಟಿದ್ದು ಇಲ್ಲಿ ತೊಡಕಾಗಿದೆ. ಅವರೆಲ್ಲರೂ ಒಟ್ಟಾಗಿ ದುಡಿದರೂ ಗೆಲುವು ಕಷ್ಟಕರ ಎಂಬಂತಾಗಿದೆ. ಹಾಗಾಗಿ ಇಲ್ಲಿ ಸ್ಪರ್ಧೆ ಅಂತ ಏನಾದರೂ ಇದ್ದರೆ ಪ್ರೀತಂ ಮತ್ತು ಸ್ವರೂಪ್ ನಡುವೆ ಮಾತ್ರ. ದಿವಂಗತ ಪ್ರಕಾಶರ ಒಳ್ಳೆಯತನವೇನಾದರೂ ಉಪಯೋಗಕ್ಕೆ ಬಂದರೆ, ಮುಸ್ಲಿಮರು ಸಾರಾಸಗಟು ಜೆಡಿಎಸ್ ಕಡೆ ವಾಲಿದರೆ- ಸ್ವರೂಪ್ ಗೆಲುವು ಗ್ಯಾರಂಟಿ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ ಭಾಷಣ | ರಾಮಮಂದಿರದ ಉಲ್ಲೇಖ, ಸಿಖ್ಖರ ಓಲೈಕೆ; ನೀತಿ ಸಂಹಿತೆ ಉಲ್ಲಂಘನೆಯಲ್ಲ ಎಂದ ಚು. ಆಯೋಗ

ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ರ್‍ಯಾಲಿಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ...

ನೇಹಾ ಕೊಲೆ ಪ್ರಕರಣ | ಮತಾಂತರ ಆಯಾಮದಿಂದಲೇ ತನಿಖೆಯಾಗಬೇಕು: ಪ್ರಲ್ಹಾದ್‌ ಜೋಶಿ ಆಗ್ರಹ

"ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಕೊಲೆಯಾಗಿರುವ ನೇಹಾ ಹಿರೇಮಠ ಅವರನ್ನು ಮತಾಂತರ ಮಾಡಲು ಕೊಲೆ...

ಮುಸ್ಲಿಂ ಮೀಸಲಾತಿ ಕುರಿತ ಮೋದಿ ಹೇಳಿಕೆ ಅವರ ಸೋಲಿನ ಭೀತಿ, ಹತಾಶೆಯ ಪ್ರತೀಕ: ಸಿ ಎಂ ಸಿದ್ದರಾಮಯ್ಯ ತಿರುಗೇಟು

"ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್...

ಪಂಜಾಬ್‌| ಜೈಲಿನಲ್ಲಿರುವ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ಲೋಕಸಭೆ ಚುನಾವಣೆಗೆ ಸ್ಪರ್ಧೆ

ಪ್ರಸ್ತುತ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಅಸ್ಸಾಂನ ಜೈಲಿನಲ್ಲಿರುವ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್,...