- ಕೆಲವು ಷರತ್ತುಗಳೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ: ಇಂದೂಧರ ಹೊನ್ನಾಪುರ
- ದಲಿತ ಸಂಘಟನೆಗಳ ತೀರ್ಮಾನ ಸ್ವಾಗತಿಸುತ್ತೇವೆ ಎಂದ ಡಿಕೆಶಿ, ಸಿದ್ದರಾಮಯ್ಯ
ದಲಿತ ಸಂಘರ್ಷ ಸಮಿತಿ ಐಕ್ಯ ಹೋರಾಟ ಸಮಿತಿ ನಾಯಕರು ಕೆಲವು ಷರತ್ತುಗಳ ಮೇಲೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲ ಸೂಚಿಸಿದ್ದಾರೆ.
ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಂಬಲ ಸೂಚಿಸಿ ಮಾತನಾಡಿದ ಇಂದೂಧರ ಹೊನ್ನಾಪುರ, “ನಾವು ಆರಂಭದಿಂದಲೂ ಜನಪರ ಹಾಗೂ ಜಾತ್ಯತೀತ ಬದುಕು ಕಟ್ಟಿಕೊಡಲು ಹೋರಾಟ ಮಾಡಿಕೊಂಡು ಬಂದಿದ್ದೇವೆ. ಕಳೆದ 9 ವರ್ಷಗಳಿಂದ ದೇಶದಲ್ಲಾಗುತ್ತಿರುವ ಬೆಳವಣಿಗೆ ಗಮನಿಸಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ರಕ್ಷಣೆಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ತೀರ್ಮಾನಿಸಿ ನಾವು ಕೆಲವು ಷರತ್ತುಗಳೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದೇವೆ” ಎಂದರು.
“ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾಗಿವೆ. ದಲಿತರ ಹಕ್ಕುಗಳನ್ನು ಕಸಿಯಲಾಗುತ್ತಿದೆ. ಮಕ್ಕಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿವೇತನ ನಿಲ್ಲಿಸಿದ್ದಾರೆ. ಸಂವಿಧಾನ ಬದಲಿಸುತ್ತೇವೆ ಎಂಬ ಬಹಿರಂಗ ಹೇಳಿಕೆ ನೀಡಿದ್ದಾರೆ. ಹೀಗಾಗಿ ದೇಶದಲ್ಲಿ ಕೆಳ ಸಮುದಾಯದವರು, ಮಹಿಳೆಯರು, ಕಾರ್ಮಿಕರು ಬದುಕಲು, ಸಂವಿಧಾನದ ಬಹುತ್ವವನ್ನು ಪುನರ್ ಸ್ಥಾಪಿಸಬೇಕು. ಮತಾಂತರ ನಿಷೇಧ, ಗೋ ಹತ್ಯೆ ನಿಷೇಧ, ರೈತವಿರೋಧಿ ಹಾಗೂ ಜನವಿರೋಧಿ ಕಾಯ್ದೆಗಳನ್ನು ರದ್ದು ಮಾಡಬೇಕು. ಇದಕ್ಕಾಗಿ 2023 ಚುನಾವಣೆಯಲ್ಲಿ ನಾವು 224 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದೇವೆ” ಎಂದು ಇಂದೂಧರ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿಯಲ್ಲಿ ಲಿಂಗಾಯತರಿಗೆ ಸುಣ್ಣ ಆರೆಸ್ಸೆಸ್ಸಿಗರಿಗೆ ಬೆಣ್ಣೆ : ಕಾಂಗ್ರೆಸ್
ಸಂವಿಧಾನ ಉಳಿವಿಗಾಗಿ ಬೆಂಬಲ: ಡಿ ಕೆ ಶಿವಕುಮಾರ್
ದೇಶದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆ, ದಲಿತ ಸಮುದಾಯಗಳ ಹಕ್ಕು ರಕ್ಷಣೆ ಹಾಗೂ ದಲಿತರ ಮೇಲಿನ ದೌರ್ಜನ್ಯಗಳನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಈ ಚುನಾವಣೆಗೆ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಘೋಷಿಸಿದೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಈ ಸಂಘಟನೆಯಲ್ಲಿ 20 ಕ್ಕೂ ಹೆಚ್ಚು ವಿವಿಧ ದಲಿತ ಸಂಘಟನೆಗಳಿದ್ದು, ಇವರು ಎಲ್ಲ ಸಂಘಟನೆಗಳ ಜತೆ ಸೇರಿ ಇಡೀ ರಾಜ್ಯದುದ್ದಗಲದಲ್ಲಿ ಚರ್ಚೆ ಮಾಡಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವ ತೀರ್ಮಾನ ಮಾಡಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನ ಉಳಿಸಬೇಕು. ಈ ವಿಚಾರವಾಗಿ ಯಾವ ಪಕ್ಷ ಕಾರ್ಯ ನಿರ್ವಹಿಸಲಿದೆ ಆ ಪಕ್ಷದ ಜತೆ ನಿಲ್ಲಲು ತೀರ್ಮಾನ ಮಾಡಿದ್ದಾರೆ. ಈ ಸಂಘಟನೆಯಲ್ಲಿ ಕೇವಲ ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಮಾತ್ರವಲ್ಲ, ಎಲ್ಲ ವರ್ಗದ ಜನರು ಹೋರಾಟ ಮಾಡಿಕೊಂಡು ಬಂದಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಎಲ್ಲ ನಾಯಕರ ಪರವಾಗಿ ಪಕ್ಷಕ್ಕೆ ಸ್ವಾಗತಿಸುತ್ತೇನೆ ಎಂದರು.
ಉತ್ತಮ ತೀರ್ಮಾನ: ಸಿದ್ದರಾಮಯ್ಯ
ದಲಿತ ಸಂಘರ್ಷ ಸಮಿತಿ ಐಕ್ಯ ಹೋರಾಟ ಸಮಿತಿ ನಾಯಕರು ಇಂದು ಕೆಲವು ಷರತ್ತುಗಳ ಮೇಲೆ ಮುಂದಿನ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಲು ಮುಂದಾಗಿದ್ದಾರೆ. ಅವರು ಉತ್ತಮ ತೀರ್ಮಾನ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಬಿಜೆಪಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವಿರೋಧಿ ಪಕ್ಷ. ಇಂತಹ ಸಂದರ್ಭದಲ್ಲಿ ದಲಿತ ಸಂಘಟನೆಗಳು ಒಕ್ಕೂಟವು ಹೋರಾಟ ಮಾಡಿಕೊಂಡು ಬಂದಿದ್ದಾರೆ. ಇಂದು ಅವರು ತಮ್ಮ ಷರತ್ತುಗಳನ್ನು ನಮ್ಮ ಮುಂದೆ ಇಟ್ಟಿದ್ದು, ಕಾಂಗ್ರೆಸ್ ಪಕ್ಷ ಸಂವಿಧಾನದ ತತ್ವ, ಸಿದ್ಧಾಂತ, ನಿಯಮಾವಳಿಗೆ ಕಾಂಗ್ರೆಸ್ ಬದ್ಧವಾಗಿದ್ದು, ಯಾವುದೇ ಕಾರಣಕ್ಕೂ ಸಂವಿಧಾನ ವಿಚಾರದಲ್ಲಿ ರಾಜಿ ಇಲ್ಲ. ಸಂವಿಧಾನ ರಕ್ಷಣೆ, ಅದರ ಧ್ಯೇಯೋದ್ದೇಶ ಈಡೇರಿಸುವುದು ಕಾಂಗ್ರೆಸ್ ಸಿದ್ಧಾಂತ. ಈ ಸಂಘಟನೆಗಳು ಕಾಂಗ್ರೆಸ್ ಪಕ್ಷ ಬೆಂಬಲಿಸುವ ತೀರ್ಮಾನವನ್ನು ನಾನು ಸ್ವಾಗತಿಸುತ್ತೇನೆ ಎಂದರು.