ಪೂರ್ಣಚಂದ್ರ ತೇಜಸ್ವಿ ಅವರ ಕಿರುಕಥೆ ಆಧಾರಿತ ಚಿತ್ರ
ನಿರೀಕ್ಷೆಗೂ ಮೀರಿ ಯಶಸ್ಸು ಕಂಡ ʼಡೇರ್ಡೆವಿಲ್ ಮುಸ್ತಾಫಾʼ
ಕನ್ನಡದ ಖ್ಯಾತ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ಕಿರುಕಥೆಯನ್ನು ಆಧರಿಸಿ ತೆರೆಗೆ ಬಂದಿರುವ ʼಡೇರ್ಡೆವಿಲ್ ಮುಸ್ತಾಫಾʼ ಸಿನಿಮಾ ಎರಡನೇ ವಾರವೂ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಕ್ರಿಯೆ ವ್ಯಕ್ತವಾದ ಬೆನ್ನಲ್ಲೇ ಸಿನಿಮಾವನ್ನು ಸಾಗರದಾಚೆಗೆ ಬಿಡುಗಡೆ ಮಾಡುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ.
ʼಡೇರ್ಡೆವಿಲ್ ಮುಸ್ತಾಫಾʼ ಸಿನಿಮಾ ಬೆಂಗಳೂರು, ಮೈಸೂರು, ತುಮಕೂರು, ಧಾರವಾಡ, ಗುಲ್ಬರ್ಗ, ಉಡುಪಿ, ಕುಂದಾಪುರ ಸೇರಿದಂತೆ ರಾಜ್ಯದ ಹಲವೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿದ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು, ವಿಶೇಷವಾಗಿ ತೇಜಸ್ವಿ ಅವರ ಅಭಿಮಾನಿಗಳು ಈ ಚಿತ್ರವನ್ನು ಸಾಗರದಾಚೆಗೂ ಬಿಡುಗಡೆ ಮಾಡಬೇಕು ಎಂದು ಬೇಡಿಕೆ ಇಟ್ಟ ಹಿನ್ನೆಲೆ ಅಮೆರಿಕಾ, ಕೆನಡಾ, ಜರ್ಮನಿ, ಸ್ವೀಡನ್, ನೆದರ್ಲ್ಯಾಂಡ್ಸ್ ದೇಶಗಳ ಪ್ರಮುಖ ನಗರಗಳಲ್ಲಿ ʼಡೇರ್ಡೆವಿಲ್ ಮುಸ್ತಾಫಾʼ ಸಿನಿಮಾ ಮೇ 26ರಿಂದ ಪ್ರದರ್ಶನ ಕಾಣುತ್ತಿದೆ.
ಮುಸ್ತಾಫಾ ಮತ್ತು ರಾಮಾನುಜ ಅಯ್ಯಂಗಾರಿ ಪಟಾಲಂನ ನಡುವಿನ ಇರಿಸುಮುರಿಸಿನ ಕಥೆಯಲ್ಲಿ ಹಿರಿಯ ನಟ ಮಂಡ್ಯ ರಮೇಶ್ ಅಬಚೂರು ಕಾಲೇಜಿನ ಪ್ರಾಂಶುಪಾಲರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾಗಭೂಷಣ್, ಪೂರ್ಣಚಂದ್ರ ಮೈಸೂರು, ಸುಂದರ್ ವೀಣಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಯುವ ಪ್ರತಿಭೆ ಶಿಶಿರ್ ಬೈಕಾಡಿ ಮುಸ್ತಫಾನ ಪಾತ್ರದಲ್ಲಿ ಗಮನ ಸೆಳೆಯುತ್ತಿದ್ದು, ಆದಿತ್ಯ ಅಶ್ರೀ, ಅಭಯ್, ಸುಪ್ರೀತ್ ಭಾರದ್ವಾಜ್, ಆಶಿತ್, ಶ್ರೀವತ್ಸ, ಪ್ರೇರಣಾ, ಎಂ.ಎಸ್. ಉಮೇಶ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ಸಿನಿಮಾ | ʼಪೂಚಂತೇʼಯ ಪ್ರಸ್ತುತತೆ ಸಾರುವ ʼಡೇರ್ಡೆವಿಲ್ ಮುಸ್ತಾಫಾʼ
ನವನೀತ್ ಶ್ಯಾಮ್ ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದು, ತೇಜಸ್ವಿ ಅವರ ಅಭಿಮಾನಿಗಳಿಂದಲೇ ತಯಾರಾಗಿರುವ ಚಿತ್ರಕ್ಕೆ ನಟ, ಸಾಹಿತ್ಯಾಸಕ್ತ ಡಾಲಿ ಧನಂಜಯ್ ಬೆಂಬಲವಾಗಿ ನಿಂತಿದ್ದಾರೆ. ತಮ್ಮ ಒಡೆತನದ ಡಾಲಿ ಪಿಕ್ಚರ್ಸ್ ಮೂಲಕ ಈ ಚಿತ್ರವನ್ನು ಪ್ರಸ್ತುತಪಡಿಸಿದ್ದಾರೆ.