ಕರಾವಳಿ ಮತ್ತು ಮಲೆನಾಡು ಪ್ರವಾಸೋದ್ಯಮ ಪ್ರಚಾರ ರಾಯಭಾರಿಯಾಗಿ ನಟ ರಿಷಬ್ ಶೆಟ್ಟಿ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿರುವುದು ಭಾರೀ ಟೀಕೆಗೆ ಗುರಿಯಾಗಿದೆ. ರಿಷಬ್ ಶೆಟ್ಟಿ ಅವರು ಬಹಿರಂಗವಾಗಿಯೇ ಕಾಂಗ್ರೆಸ್ ನಾಯಕರನ್ನು ಟೀಕಿಸಿರುವಾಗ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಇಂತಹ ನಿರ್ಧಾರ ತೆಗೆದುಕೊಂಡಿರುವುದು ನಗೆಪಾಟಲಿಗೆ ಈಡಾಗಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಕರಾವಳಿ ಪ್ರವಾಸೋದ್ಯಮ ಸಭೆ ನಡೆಸಲಾಯಿತು. ಸಭೆಯಲ್ಲಿ ಕೆಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಸರ್ಕಾರ ನಿರ್ಧಾರ ಹೊರಬಿದ್ದ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಪ್ರತಿಕ್ರಿಯೆ ನೀಡಿದ್ದಾರೆ.
ಪತ್ರಕರ್ತ ನವೀನ್ ಸೂರಿಂಜೆ ಅವರು ಫೇಸ್ಬುಕ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, “ನಟ ರಿಷಬ್ ಶೆಟ್ಟಿ ಎಂಬವರು ಸಂಘಪರಿವಾರದ ವ್ಯಕ್ತಿ. ಹಿಂದುತ್ವದ ರಾಯಭಾರಿಯನ್ನು ಕರಾವಳಿಯ ಪ್ರವಾಸೋದ್ಯಮ ರಾಯಭಾರಿ ಎಂದು ನೇಮಿಸುವುದು ಅಪಾಯಕಾರಿ. ಅದಕ್ಕಿಂತ ನೇರವಾಗಿ ಕಲ್ಲಡ್ಕ ಭಟ್ಟರನ್ನೇ ಕರಾವಳಿ ಪ್ರವಾಸೋದ್ಯಮದ ರಾಯಭಾರಿಯನ್ನಾಗಿಸೋದು ಒಳ್ಳೆಯದು” ಎಂದು ಟೀಕಿಸಿದ್ದಾರೆ.
ಮುಂದುವರಿದು, “ರಿಷಬ್ ಶೆಟ್ಟಿಯ ಹಿಂದುತ್ವದ ಸಾಂಸ್ಕೃತಿಕ ರಾಜಕಾರಣ, ದಲಿತ ವಿರೋಧಿ ಸಾಂಸ್ಕೃತಿಕ ರಾಜಕಾರಣ ಕಾಂಗ್ರೆಸ್ಸಿಗರಿಗೆ ಸುಲಭದಲ್ಲಿ ಅರ್ಥವಾಗಲ್ಲ. ಆದರೆ, ತಮ್ಮ ಪಕ್ಷದ ನಾಯಕನನ್ನು ಅವಹೇಳನ ಮಾಡಿದ ಬಗ್ಗೆಯಾದರೂ ಅವರ ಮನಸ್ಸಿನೊಳಗೊಂದು ಕಹಿ ಇರಬೇಕಿತ್ತು (ಕಹಿ ಅಂದರೆ ದ್ವೇಷ ಅಂತ ಅರ್ಥ ಅಲ್ಲ. ತುಳುವಿನಲ್ಲಿ ಕಯಿಪೆ ಅಂತಾರೆ. ಒಂಥರಾ ಸ್ವಾಭಿಮಾನದ ಕೋಪ). ನರೇಂದ್ರ ಮೋದಿಯವರನ್ನು ಅದ್ಭುತ ನಾಯಕ ಎನ್ನುವ ರಿಷಬ್ ಶೆಟ್ಟಿ, ರಾಹುಲ್ ಗಾಂಧಿಯ ಬಗ್ಗೆ ನೋ ಕಮೆಂಟ್ಸ್ ಎಂದು ‘ನೀಚ ನಗು’ ವ್ಯಕ್ತಪಡಿಸುತ್ತಾರೆ (ನೀಚ ನಗು ಎಂದರೆ ಇನ್ನೊಬ್ಬರನ್ನು ತುಚ್ಚೀಕರಿಸುವ ನಗು). ಕಾಂಗ್ರೆಸ್ಸಿಗರಲ್ಲಿ ಸ್ವಾಭಿಮಾನ ಇದ್ದಿದ್ದರೆ ನಟ ರಿಷಬ್ ಶೆಟ್ಟಿಯನ್ನು ಹತ್ತಿರಕ್ಕೂ ಸೇರಿಸಿಕೊಳ್ಳುತ್ತಿರಲಿಲ್ಲ” ಎಂದು ಕುಟುಕಿದ್ದಾರೆ.
ಬರೆಹಗಾರ ಶಶಿಧರ್ ಹೆಮ್ಮಾಡಿ ಅವರು, “ಮೋದಿ ಭಕ್ತ, ಕಾಂಗ್ರೆಸ್ ವಿರೋಧಿ, ಕೋಮುವಾದಿಗಳ ಡಾರ್ಲಿಂಗ್, ತುಳುನಾಡಿನ ದೈವಗಳನ್ನು ತನ್ನ ಮನಸ್ಸಿಗೆ ಬಂದಂತೆ ಚಿತ್ರಿಸಿ ದುಡ್ಡು ಮಾಡಿದ ರಿಷಬ್ ಶೆಟ್ಟಿಯನ್ನು ಡಿಕೆಶಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಕರಾವಳಿಯ ಪ್ರವಾಸೋದ್ಯಮಕ್ಕೆ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿದೆ. ಇದು ಸಿದ್ದರಾಮಯ್ಯನ ಕಾಂಗ್ರೆಸ್ ಸರ್ಕಾರಕ್ಕೂ ಡಿಕೆಶಿ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೂ ಇರುವ ಸೈದ್ಧಾಂತಿಕ ಭಿನ್ನತೆ. ನನ್ನ ಕರಾವಳಿಗೆ ಈತ ಪ್ರವಾಸೋದ್ಯಮದ ರಾಯಭಾರಿ. ಇದು ಕಾಂಗ್ರೆಸ್ ಸರ್ಕಾರದ ಭಾರೀ ದುರಂತ” ಎಂದು ಬೇಸರ ಹೊರಹಾಕಿದ್ದಾರೆ.
ಬರೆಹಗಾರ ಎಸ್.ಎ.ರಹಿಮಾನ್ ಮಿತ್ತೂರು, “ಕರಾವಳಿಯ ಪ್ರವಾಸೋದ್ಯಮ ರಾಯಭಾರಿಯಾಗಿ ನೇಮಿಸಲು ಕಾಂಗ್ರೆಸ್ ಸರಕಾರಕ್ಕೆ ಕರಾವಳಿಯಲ್ಲಿ ಕಾಂಗ್ರೆಸ್ಸಿಗರ ಕೊರತೆ ಎದುರಾಗಿರಬೇಕು. ಬಹಿರಂಗವಾಗಿ ಸಂಘ ಪರಿವಾರವನ್ನು ಬೆಂಬಲಿಸುವ ಅಪ್ಪಟ ಸಂಘಿ ರಿಷಬ್ ಶೆಟ್ಟಿಯನ್ನು ಕರಾವಳಿಯ ಪ್ರವಾಸೋದ್ಯಮ ರಾಯಭಾರಿಯಾಗಿ ನೇಮಿಸುವಷ್ಟು ಈ ಸರಕಾರ ಬರಗೆಟ್ಟು ಹೋಗಿದೆ ಎಂದರೆ ನಂಬಲಾಗುತ್ತಿಲ್ಲ. ಇದನ್ನೆಲ್ಲ ನೋಡುವಾಗ ಕರ್ನಾಟಕ ಸರಕಾರವು ಸಂಘ ಪರಿವಾರದ ಆಣತಿಯಂತೆ ನಡೆಯುತ್ತಿದೆ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. ಇಂತಹವರನ್ನೆಲ್ಲ ನೇಮಿಸಿ ಇನ್ನು ಇವರು ಕರಾವಳಿಯಲ್ಲಿ ಪಕ್ಷವನ್ನು ಬಲಪಡಿಸುವುದಂತೆ” ಎಂದು ವ್ಯಂಗ್ಯವಾಡಿದ್ದಾರೆ.
ಹೋರಾಟಗಾರ ದೀಪುಗೌಡ್ರು, “ರಾಜ್ಯ ಸರ್ಕಾರ ರಿಷಬ್ ಶೆಟ್ಟಿಯನ್ನು ಕರಾವಳಿ ಪ್ರವಾಸೋದ್ಯಮದ ರಾಯಭಾರಿಯನ್ನಾಗಿ ಆಯ್ಕೆ ಮಾಡಿದೆ. ಆ ಮೂಲಕ ರಾಹುಲ್ ಗಾಂಧಿ ಹುಟ್ಟು ಹಬ್ಬಕ್ಕೆ ಉತ್ತಮ ಉಡುಗೊರೆಯನ್ನೇ ನೀಡಿದೆ” ಎಂದು ಕುಟುಕಿದ್ದಾರೆ.
ಈ ಲೇಖನ ಓದಿದ್ದೀರಾ?: ಟೆಲಿಗ್ರಾಂ – ಅಪರಾಧಿಗಳ ‘ಡಾರ್ಕ್ ವೆಬ್’ ಎಂದು ಕೇಂದ್ರ ಸರ್ಕಾರ ಹಣೆಪಟ್ಟಿ ಕಟ್ಟುತ್ತಿದೆ ಯಾಕೆ?.
ರಾಜಕೀಯ ವಿಮರ್ಶಕ ಜಯಚಂದ್ರ ಅವರು, “ರಾಹುಲ್ ಗಾಂಧಿ ಅವರು ಮನಸಾರೆ ಇಚ್ಛಿಸಿ ಆಯ್ಕೆ ಮಾಡಿದ ರಾಜ್ಯ ಸರ್ಕಾರ ರಿಷಬ್ ಶೆಟ್ಟಿಯನ್ನು ಕರಾವಳಿ ಪ್ರವಾಸೋದ್ಯಮದ ರಾಯಭಾರಿಯನ್ನಾಗಿ ಆಯ್ಕೆ ಮಾಡಿದೆ. ಆ ಮೂಲಕ ರಾಹುಲ್ ಗಾಂಧಿ ಹುಟ್ಟು ಹಬ್ಬಕ್ಕೆ ಉತ್ತಮ ಉಡುಗೊರೆಯನ್ನೇ ನೀಡಿದೆ” ಎಂದಿದ್ದಾರೆ.
‘ಅಹಿಂದ’ ಬೆಂಬಲಿಗ ಹೃದಯ್ ಗೌಡ ಪ್ರತಿಕ್ರಿಯಿಸಿ, “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆಯೋ ಅಥವಾ ಬಿಜೆಪಿ ಮನಸ್ಥಿತಿ ಸರ್ಕಾರ ಇದೆಯೋ? ಕರಾವಳಿ ಮತ್ತು ಮಲೆನಾಡು ಪ್ರವಾಸೋದ್ಯಮದ ರಾಯಭಾರಿಯಾಗಿ ರಿಷಬ್ ಶೆಟ್ಟಿಯವರನ್ನು ನೇಮಕ ಮಾಡಿರುವುದರ ಹಿಂದೆ ಸರ್ಕಾರದ ಮಾನದಂಡ ಏನು? ಒಂದು ಸಂದರ್ಶನದಲ್ಲಿ ನರೇಂದ್ರ ಮೋದಿ ಬಗ್ಗೆ ಕೇಳಿದಾಗ ಅದ್ಭುತ ನಾಯಕ ಎಂದು ಹೊಗಳಿದ ರಿಷಬ್ ಶೆಟ್ಟಿ, ರಾಹುಲ್ ಗಾಂಧಿ ಬಗ್ಗೆ ಕೇಳಿದಾಗ ನೋ ಕಮೆಂಟ್ಸ್ ಎಂದು ಉತ್ತರಿಸಿದ್ದರು. ಕಾಂಗ್ರೆಸ್ ಪಕ್ಷದ ದೊಡ್ಡ ನಾಯಕನ ಬಗ್ಗೆ ತಿಳಿದಿಲ್ಲ ಎನ್ನುವ ವ್ಯಕ್ತಿಯನ್ನು ಕಾಂಗ್ರೆಸ್ ಸರ್ಕಾರವೇ ರಾಯಭಾರಿಯನ್ನಾಗಿ ಆಯ್ಕೆ ಮಾಡಿರುವುದು ಎಷ್ಟು ಸರಿ? ಇದು ವ್ಯಕ್ತಿಯ ವಿರುದ್ಧದ ಟೀಕೆಯಲ್ಲ. ಆದರೆ ಕಾಂಗ್ರೆಸ್ ಸಿದ್ಧಾಂತ, ಪಕ್ಷದ ನಿಲುವು ಮತ್ತು ಕಾರ್ಯಕರ್ತರ ಭಾವನೆಗಳಿಗೆ ಬೆಲೆ ಇದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ನಿಂತು ದುಡಿಯುವ ಸಾವಿರಾರು ಕಾರ್ಯಕರ್ತರಿದ್ದಾಗ ಇಂತಹ ವಿವಾದಗಳಿಗೆ ಕಾರಣವಾಗುವ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಎಷ್ಟು ಸರಿ?” ಎಂದು ಪ್ರಶ್ನಿಸಿದ್ದಾರೆ.



