ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಔಪಚಾರೀಕರಣ(PMFME) ಯೋಜನೆಯಡಿ ಹೊಸ ಆಹಾರ ತಯಾರಿಕೆ ಮತ್ತು ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಆಸಕ್ತ ಉದ್ಯಮಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಬಾಗಲಕೋಟೆ ಜಿಲ್ಲೆಯ ಉದ್ಯಮಿಗಳು ಅರ್ಜಿ ಸಲ್ಲಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, “ಈ ಯೋಜನೆಯಡಿ ಬ್ಯಾಂಕ್ ಮೂಲಕ ಯೋಜನಾ ವೆಚ್ಚದ ಶೇ.90ರಷ್ಟು ಸಾಲ ಸೌಲಭ್ಯ ದೊರೆಯಲಿದ್ದು, ಫಲಾನುಭವಿಯು ಶೇ.10ರಷ್ಟು ಸ್ವಂತ ವಂತಿಗೆ ಭರಿಸಬೇಕಾಗುತ್ತದೆ. ಯೋಜನೆಗೆ ಅನುಮೋದನೆಯಾದ ನಂತರ ಘಟಕಗಳಿಗೆ ಕೇಂದ್ರ ಸರ್ಕಾರದಿಂದ ಶೇ.35ರಷ್ಟು ಮತ್ತು ರಾಜ್ಯ ಸರ್ಕಾರದಿಂದ ಶೇ.15ರಷ್ಟು ಸೇರಿ ಒಟ್ಟು ಶೇ.50ರಷ್ಟು ಸಹಾಯಧನ ಪಡೆಯುವ ಅವಕಾಶವಿದೆ” ಎಂದು ಮಾಹಿತಿ ನೀಡಿದ್ದಾರೆ.
“ತೋಟಗಾರಿಕೆ ಆಧಾರಿತ ಉದ್ಯಮಗಳು, ಸಹಕಾರಿ ಸಂಸ್ಥೆಗಳು, ರೈತ ಉತ್ಪಾದಕರ ಸಂಘಗಳು(ಎಫ್ಪಿಒ), ಸ್ವಸಹಾಯ ಸಂಘಗಳು(ಎಸ್ಎಚ್ಜಿ), ಖಾಸಗಿ ಲಿಮಿಟೆಡ್ ಕಂಪನಿಗಳು ಸೇರಿದಂತೆ ಅರ್ಹ ಘಟಕಗಳು ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಅರಿಶಿನ ಪುಡಿ, ಮಸಾಲೆ ಪದಾರ್ಥಗಳ ಸಂಸ್ಕರಣೆ, ಚಿಪ್ಸ್ ತಯಾರಿಕೆ, ಅಣಬೆ ಮೌಲ್ಯವರ್ಧನೆ, ಗಿಡಮೂಲಿಕೆ ಹಾಗೂ ಹರ್ಬಲ್ ಉತ್ಪನ್ನಗಳ ತಯಾರಿಕೆ, ಜೇನು ಸಂಸ್ಕರಣೆ, ಕೋಲ್ಡ್ ಸ್ಟೋರೇಜ್, ಉಪ್ಪಿನಕಾಯಿ, ಹಣ್ಣಿನ ಜ್ಯೂಸ್, ವಿವಿಧ ಸೊಪ್ಪಿನ ಪುಡಿಗಳು, ವ್ಯಾಕ್ಯೂಮ್ ಫ್ರೈಡ್ ಚಿಪ್ಸ್, ಸಾಸ್, ಕೆಚಪ್ ಹಾಗೂ ತೆಂಗಿನ ಉಪ ಉತ್ಪನ್ನಗಳ ತಯಾರಿಕಾ ಘಟಕಗಳಿಗೆ ಯೋಜನೆಯಡಿ ಸಹಾಯಧನ ಲಭ್ಯವಿರುತ್ತದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿದ್ದೀರಾ? ಗದಗ | ಯುವಜನತೆ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು: ಎಸ್ ವ್ಹಿ ಸಂಕನೂರ
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ಸುಜಾತಾ(7847841435), ಪೂಜಾರಿ (9741403143), ಶಂಕರಗೌಡ (9886711550), ಭಪ್ರಿ (9845256456), ರಂಗಪ್ಪ ಹಂದಿಗುಂದಿ (8147921582), ಇನಾಯತ್ ಲಾನಧಾಪ್ (8884112284), ಸುಧೀರ ಕುಲಕರ್ಣಿ (8130097949), ಸಂದೀಪಕುಮಾರ (9964082001), ಮೊಯಿನ್ ಜಮಖಂಡಿ (9481878610) ಹಾಗೂ ವಿಜಯಲಕ್ಷ್ಮೀ ಪಾಟೀಲ (8618099490) ಅವರನ್ನು ಸಂಪರ್ಕಿಸಬಹುದಾಗಿದೆ.




